ಯಲಬುರ್ಗಾ: ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿರುವ ಬಹುತೇಕ ಶಾಲೆಗಳು ಸೌಕರ್ಯ ಕೊರತೆ ಎದುರಿಸುತ್ತಿವೆ. ಕನಿಷ್ಟ ಸೌಲಭ್ಯಗಳು ಇಲ್ಲದೇ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಪರದಾಡುತ್ತಿದ್ದಾರೆ.
ಆವರಣ ಗೋಡೆ, ಆಟದ ಮೈದಾನ ಇಲ್ಲದಿರುವ ಶಾಲೆಗಳೇ ಹೆಚ್ಚಿವೆ. ಶೌಚಾಲಯಗಳು ಹೆಸರಿಗೆ ಮಾತ್ರ ನಿರ್ಮಿಸದಂತಿವೆ. ಆದರೆ ಬಳಕೆಯಾಗುತ್ತಿಲ್ಲ. ಕೆಲವೆಡೆ ನೀರಿನ ಸಮಸ್ಯೆಯಿಂದ ಬಂದ್ ಮಾಡಲಾಗಿದೆ. ಹಲವೆಡೆ ಬಾಲಕರು ಬಯಲಿಗೆ ತೆರಳುತ್ತಿರುವುದು ತಪ್ಪಿಲ್ಲ.
ತಾಲೂಕಿನಲ್ಲಿ 192 ಸರಕಾರಿ ಹಿರಿಯ ಪ್ರಾಥಮಿಕ, 45 ಸರಕಾರಿ ಪ್ರೌಢಶಾಲೆ ಸೇರಿ ಒಟ್ಟು 237 ಶಾಲೆಗಳಿವೆ. ಈ ಪೈಕಿ 50 ಶಾಲೆ ಕಟ್ಟಡಗಳು ಶಿಥಿಲಗೊಂಡಿದ್ದು, ಅಪಾಯದ ಸ್ಥಿತಿ ತಲುಪಿವೆ. ವಿದ್ಯಾರ್ಥಿಗಳ ದೈಹಿಕ ಆರೋಗ್ಯಕ್ಕೆ ಆಟೋಟ ಬೇಕು, ಆದರೆ ಹಲವು ಶಾಲೆಗಳಲ್ಲಿ ಮೈದಾನವೇ ಇಲ್ಲ. ಈಗ ಹೊಸದಾಗಿ ನಿರ್ಮಿಸುತ್ತಿರುವ ಪ್ರೌಢಶಾಲೆಗಳಲ್ಲಿ ಮಾತ್ರ ಆಟದ ಮೈದಾನಕ್ಕೆ ಜಾಗ ಮೀಸಲಿಡಲಾಗುತ್ತಿದೆ. ಆದರೆ, ಪ್ರಾಥಮಿಕ ಶಾಲೆಗಳಲ್ಲಿ ಮಾತ್ರ ಆಟದ ಮೈದಾನ ಕೊರತೆ ಇದೆ. ಕಾಂಪೌಂಡ್ ಇಲ್ಲದ ಕಾರಣ ಹಂದಿ, ನಾಯಿ, ಬಿಡಾಡಿ ದನಗಳು ಶಾಲೆಯೊಳಗೆ ನುಗ್ಗುವುದು ಸಾಮಾನ್ಯವಾಗಿದೆ. ಹಲವು ಗ್ರಾಮಗಳಲ್ಲಿ ಆಟದ ಮೈದಾನವೇ ಇಲ್ಲ. ಖಾಸಗಿ ಬಯಲು ಜಾಗದಲ್ಲಿ ವಿದ್ಯಾರ್ಥಿಗಳು ಆಟವಾಡುತ್ತಿರುವುದು ಕಂಡು ಬಂದಿದೆ. ಆಟದ ಮೈದಾನದ ಬಗ್ಗೆ ಮೇಲಾಧಿ ಕಾರಿಗಳ ಗಮನಕ್ಕೆ ತಂದಿದ್ದೇವೆ. ಯಾವುದೇ ಪ್ರಯೋಜವಾಗಿಲ್ಲ ಎನ್ನುವುದು ಶಿ ಕ್ಷಕರ ಅಳಲಾಗಿದೆ.
ಮೂಲೆ ಸೇರಿದ ನೀರು ಶುದ್ಧೀಕರಣ ಯಂತ್ರ: ಶಾಲೆಗಳಿಗೆ ತಾಪಂ, ಜಿಪಂ ಯೋಜನೆಯಡಿ ನೀರು ಶುದ್ಧೀಕರಣ ಯಂತ್ರ ನೀಡಲಾಗಿದೆ. ಬಹಳಷ್ಟು ಶಾಲೆಗಳಲ್ಲಿ ಇವು ಬಳಕೆಯಾಗುತ್ತಿಲ್ಲ ಎಂಬ ಆರೋಪಗಳಿವೆ. ಕೆಲವೆಡೆ ಈ ಯಂತ್ರಗಳು ಮೂಲೆ ಸೇರಿವೆ. ವಿದ್ಯಾರ್ಥಿಗಳು ಮನೆಯಿಂದ ಬಾಟಲಿಯಲ್ಲಿ ನೀರು ತೆಗೆದುಕೊಂಡು ಹೋಗುತ್ತಿದ್ದಾರೆ.
Related Articles
ಶಿಕ್ಷಕರ ಕೊರತೆ: ತಾಲೂಕಿನ ಶಾಲೆಗಳಲ್ಲಿ ವಾಸ್ತವವಾಗಿ 1150 ಖಾಯಂ ಶಿಕ್ಷಕರು ಇರಬೇಕು. ಆದರೆ 940 ಖಾಯಂ ಶಿಕ್ಷಕರಿದ್ದು, 210ಕ್ಕೂ ಹೆಚ್ಚು ಅತಿಥಿ ಶಿಕ್ಷಕರೇ ಮಕ್ಕಳಿಗೆ ಬೋಧನೆ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಜಿ. ವೀರಾಪುರ, ಸಂಗನಾಳ, ಬಂಡಿಹಾಳ, ಚಿಕ್ಕಮನ್ನಾಪುರ, ಗಾಣಧಾಳ, ಗುನ್ನಾಳ, ನಿಲೋಗಲ್, ಬಳೂಟಗಿ ಬಂಡಿಹಾಳ, ಮಾರನಾಳ ಸೇರಿ ಇತರೆ ಶಾಲೆಗಳು ಕಾಂಪೌಂಡ್ ಸೇರಿದಂತೆ ಶೌಚಾಲಯ ಹಾಗೂ ಇತರೆ ಸೌಲಭ್ಯಗಳಿಂದ ವಂಚಿತವಾಗಿವೆ.
ಏಕೋಪಾಧ್ಯಾಯ ಶಾಲೆ: ಹಿರೇವಂಕಲಕುಂಟಾ ಭಾಗದ ಬಹುತೇಕ ಶಾಲೆಗಳಲ್ಲಿ ಸುಮಾರು 200ರಿಂದ 600ಕ್ಕೂ ಹೆಚ್ಚು ಮಕ್ಕಳು ಕಲಿಯುತ್ತಿದ್ದಾರೆ. ಆದರೇ ಖಾಯಂ ಶಿಕ್ಷಕರು ಇಲ್ಲದೇ ಏಕೋಪಾಧ್ಯಾಯ ಶಾಲೆಗಳು ಹೆಚ್ಚಾಗಿ ಕಾರ್ಯನಿರ್ವಹಣೆ ಮಾಡುತ್ತಿವೆ. ಮಕ್ಕಳ ಗುಣಾತ್ಮಕ ಶಿಕ್ಷಣದ ದೃಷ್ಟಿಯಿಂದ ಶಿಕ್ಷಕರನ್ನು ನಿಯೋಜನೆ ಮಾಡಬೇಕು ಎಂಬುದು ಆಗ್ರಹವಾಗಿದೆ.
ಶಿಕ್ಷಕರ ಕೊರತೆ ಇದೆ. ಪ್ರಮುಖವಾಗಿ ಇಂಗ್ಲೀಷ್ ಶಿಕ್ಷಕರಿಲ್ಲ. ಈ ಕುರಿತು ಶಿಕ್ಷಣ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಖಾಲಿ ಇರುವ ಶಿಕ್ಷಕರ ಹುದ್ದೆಗಳು ಭರ್ತಿಯಾಗಬೇಕು. ಕೋವಿಡ್ನಿಂದ ಮಕ್ಕಳಿಗೆ ಸರಿಯಾದ ಶಿಕ್ಷಣ ನೀಡಿಲ್ಲ, ಈ ಬಗ್ಗೆ ಅಧಿಕಾರಿಗಳು ಗಮನಹರಿಸಿ ಶಾಲೆಗೆ ಶಿಕ್ಷಕರನ್ನು ನೇಮಿಸಬೇಕು. –ಹನುಮಪ್ಪ ಗುರಿಕಾರ್, ಲಿಂಗನಬಂಡಿ ಶಾಲೆ ಎಸ್ಡಿಎಂಸಿ ಅಧ್ಯಕ್ಷ
ಗ್ರಾಪಂ ವತಿಯಿಂದ ನರೇಗಾ ಯೋಜನೆಯಡಿ ಕಾಂಪೌಂಡ್, ಮಳೆನೀರು ಕೊಯ್ಲು, ನೀರಿನ ತೊಟ್ಟಿ, ಭೋಜನಾಲಯಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ತಾಲೂಕಿನ ಶಾಲೆಗಳ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಯೋಜನೆಯಡಿ ತಾಲೂಕಿನಲ್ಲಿ 200ಕ್ಕೂ ಹೆಚ್ಚು ಕಟ್ಟಡಗಳ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದ್ದು, ಕಟ್ಟಡಗಳು ಪ್ರಗತಿಯಲ್ಲಿವೆ. –ಮೌನೇಶ ಬಡಿಗೇರ, ಕ್ಷೇತ್ರ ಶಿಕ್ಷಣಾಧಿಕಾರಿ
ತಾಲೂಕಿನಲ್ಲಿ ಶಾಲೆಗಳ ಅಭಿವೃದ್ಧಿಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಸರಕಾರಿ ಶಾಲೆಗಳ ಅಭಿವೃದ್ಧಿ ಬಗ್ಗೆ ಕೈಚೆಲ್ಲಿ ಕುಳಿತಿರುವುದು ನಿಜಕ್ಕೂ ವಿಪಯಾರ್ಸದ ಸಂಗತಿ. ಸರಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಿ ಎಂದು ಹೇಳುವ ಸರಕಾರ, ಶಾಲೆಗಳ ಆವ್ಯವಸ್ಥೆ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದು ಸಯಲ್ಲ. ಕಾಂಪೌಂಡ್, ಕೊಠಡಿ ಕೊರತೆ, ಶಿಕ್ಷಕರ ಕೊರತೆ ಹೀಗೆ ಹತ್ತು ಹಲವಾರು ಸಮಸ್ಯೆಗಳಿವೆ. ತಾಲೂಕಿನಲ್ಲಿ ಶೈಕ್ಷಣಿಕ ಕ್ಷೇತ್ರ ಹಿಂದುಳಿದಿದೆ. –ಹುಲಗಪ್ಪ ಬಂಡಿವಡ್ಡರ, ಗ್ರಾಪಂ ಮಾಜಿ ಸದಸ್ಯ
-ಮಲ್ಲಪ್ಪ ಮಾಟರಂಗಿ