Advertisement

ಮಳೆ ಬಂದರೂ ನಾಗರಕೆರೆಗೆ ಬಾರದ ಜೀವಕಳೆ

12:16 PM Oct 12, 2021 | Team Udayavani |

ದೊಡ್ಡಬಳ್ಳಾಪುರ: ಈ ಕೆರೆಯ ವಿಸ್ತೀರ್ಣ ಹೆಚ್ಚಿದ್ದರೂ ಪ್ರಯೋಜನಕ್ಕೆ ಬರುತ್ತಿಲ್ಲ, ಅಭಿವೃದ್ಧಿಗೆ ಹಣ ಬಿಡುಗಡೆಯಾದರೂ ಅನುಕೂಲವಾಗಿಲ್ಲ, ಮಳೆ ನೀರು ರಾಜಕಾಲುವೆಗಳ ಮೂಲಕ ಹರಿದು ಬಂದರೂ ಸಮರ್ಪಕವಾಗಿ ಕೆರೆಯನ್ನು ತಲುಪುತ್ತಿಲ್ಲ, ಎಲ್ಲೆಂದರಲ್ಲಿ ತ್ಯಾಜ್ಯ, ಗಿಡ ಗಂಟಿಗಳು. ನಿತ್ಯ ಕೆರೆಗೆ ಸೇರುವ ಚರಂಡಿ ನೀರು. ಇದು, ದೊಡ್ಡಬಳ್ಳಾಪುರದ ಜೀವನಾಡಿ ನಾಗರಕೆರೆಯ ದುಸ್ಥಿತಿ. ತಾಲೂಕಿನಲ್ಲಿ ಒಂದು ವಾರದಿಂದ ಉತ್ತಮ ಮಳೆಯಾಗುತ್ತಿದ್ದು ಹಲವು ಗ್ರಾಮಗಳಲ್ಲಿ ಕೆರೆ-ಕುಂಟೆಗಳು ತುಂಬಿ ಕೋಡಿ ಬಿದ್ದಿವೆ.  ಆದರೆ, ನಾಗರಕೆರೆಯ ಸ್ಥಿತಿ ಕಂಡು ಪರಿಸರ ಪ್ರೇಮಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

Advertisement

ನಾಗರಕೆರೆ ಅಭಿವೃದ್ಧಿ: ಅಭಿವೃದ್ಧಿ ನೆಪದಲ್ಲಿ ಕೋಟ್ಯಂತರ ರೂ. ಖರ್ಚು ಮಾಡಿದರೂ ನಾಗರಕೆರೆ ಮಾತ್ರ ಅಭಿವೃದ್ಧಿ ಕಾಣದೆ ಕಸದ ತೊಟ್ಟಿಯಾಗಿದೆ. ದೊಡ್ಡಬಳ್ಳಾಪುರದಲ್ಲಿ ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿದಿದೆ. ಇತ್ತೀಚಿನ ಕೆಲವು ವರ್ಷಗಳವರೆಗೂ ತುಂಬಿ ಹರಿಯುತ್ತಿದ್ದ ಅರ್ಕಾವತಿ ನದಿ ಉತ್ತಮ ಮಳೆಯಾದರೂ ಮಲಿನತೆ ಪಕ್ಷಿಗಳ ನೆಲೆಗೂ ತೊಂದರೆಯಾಗುತ್ತಿದೆ.

ಕೆರೆ, ಕಟ್ಟೆಗಳಿಗೆ ಕಲುಷಿತ ನೀರು, ಕಟ್ಟಡ ಹಾಗೂ ಇತರೆ ತ್ಯಾಜ್ಯ ವಸ್ತು ಮಿಶ್ರಣವಾಗದಂತೆ ತಡೆಗಟ್ಟಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಹೈಕೋರ್ಟ್‌ ರಾಜ್ಯ ಸರ್ಕಾರಕ್ಕೆ ಆದೇಶ ನೀಡಿದ್ದರೂ ನಾಗರಕೆರೆಗೆ ಮಾತ್ರ ಇದ್ಯಾವುದೂ ಅನ್ವಯಿಸುತ್ತಿಲ್ಲ.

ಇದನ್ನೂ ಓದಿ;- ಬೆಳ್ತಂಗಡಿ: ಬಂದಾರು ಗ್ರಾಮದ ಬಟ್ಲಡ್ಕ ಎಂಬಲ್ಲಿ ಅಕ್ರಮ ಮರಳು ಅಡ್ಡೆಗೆ ದಾಳಿ

 ಕೆರೆ ಪುನಶ್ಚೇತನ: ಪ್ರಸ್ತುತ 1 ಕೋಟಿ ರೂ. ವೆಚ್ಚದಲ್ಲಿ ವಾಕಿಂಗ್‌ ಪಾಥ್‌ ಹಾಗೂ ಕೆರೆಗೆ ಬೇಲಿ ಹಾಕಲಾಗಿದ್ದು ಅದೂ ನಿರ್ವಹಣೇ ಇಲ್ಲದೇ ಸೊರಗಿದೆ. ಕೆರೆಯಲ್ಲಿ ಹೂಳು ತುಂಬಿಕೊಂಡು, ಕೆರೆ ನೀರು ಸರಿಯಾಗಿ ನಿಲ್ಲುತ್ತಿಲ್ಲ. ಗಿಡಗಂಟಿ ಹೇರಳವಾಗಿ ಬೆಳೆದು ದುರ್ನಾತ ಬೀರುತ್ತಿದೆ. ಈ ಹಿಂದೆ ಜಿಲ್ಲಾಧಿಕಾರಿ ಆಗಿದ್ದ ಕರೀಗೌಡರ ನೇತೃತ್ವದಲ್ಲಿ ನಾಗರಕೆರೆಯ ಗೋಸಾಯಿ ಕುಂಟೆ ಪುನಶ್ಚೇತನವಾಗಿದ್ದು ಬಿಟ್ಟರೆ ಇತ್ತೀಚೆಗೆ ನಾಗರಕೆರೆ ಅಭಿವೃದ್ಧಿಗೆ ಪೂರಕವಾಗುವ ಯಾವುದೇ ಯೋಜನೆ ರೂಪಿಸಿಲ್ಲ. ಕೆಲವು ಕಂಪನಿಗಳ ಸಿಎಸ್‌ಆರ್‌ ಅನುದಾನದಲ್ಲಿ ಕೆರೆ ಸುತ್ತ ಸಸಿಗಳನ್ನು ನೆಡಲಾಗಿದೆ.

  • 7.60 ಚ.ಕಿ.ಮೀ ಕೆರೆ ಜಲಾನಯನ ಪ್ರದೇಶ       
  • 190 ಎಕರೆ ಜಲಾವೃತ ಪ್ರದೇಶ
  • 1194ಮೀಟರ್‌ ಕೆರೆ ಏರಿ ಉದ್ದ
  • 60.70 ಹೆಕ್ಟೇರ್‌ ಕೆರೆಯ ಅಚ್ಚುಕಟ್ಟು
  • 20ಕ್ಕೂ ಹೆಚ್ಚು ಎಕರೆ ಒತ್ತುವರಿ
  • 500ವರ್ಷಗಳ ಇತಿಹಾಸ ನಾಗರಕೆರೆಗಿದೆ
Advertisement

ದೊಡ್ಡಬಳ್ಳಾಪುರದ ನಾಗರಕೆರೆಗೆ ಸುಮಾರು 500 ವರ್ಷಗಳ ಇತಿಹಾಸವಿದೆ. ವಿಜಯನಗರದ ಅರಸರ ಕಾಲದಲ್ಲಿ ಆಸ್ಥಾನ ಗುರುಗಳಾಗಿದ್ದ ಶ್ರೀ ವ್ಯಾಸರಾಜರು ಸಾಮ್ರಾಜ್ಯದ ಎಲ್ಲೆಯನ್ನು ಗುರುತಿಸುವುದಕ್ಕಾಗಿ ರಾಜ್ಯಾದ್ಯಂತ ಸಂಚರಿಸುವ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರು. ಕ್ರಿ.ಶ.1501 ರಿಂದ 1510ರ ವೇಳೆ ವ್ಯಾಸರಾಜರು ತನ್ನ ಅಣ್ಣನ ಮಗಳು ಅರವಿಂದಾಂಬೆಯ ಪತಿಯಾದ ನಾಗಪ್ಪನನ್ನು ಈ ಪ್ರದೇಶದ ಮಂತ್ರಿಯನ್ನಾಗಿ ಮಾಡಿದ್ದರು.

ಇದೇ ಸಮಯದಲ್ಲಿ ನಂದಿ ಬೆಟ್ಟದಲ್ಲಿ ಜನ್ಮ ತಾಳುವ ಅರ್ಕಾವತಿ ನದಿಗೆ ಕಟ್ಟೆಗಳನ್ನು ಕಟ್ಟಿಸಿ ತಾಲೂಕಿನ ಶಿವಪುರದ ಕೆರೆ, ನಾಗರಕೆರೆ, ರಾಜಘಟ್ಟದ ಕೆರೆ, ಅರಳು ಮಲ್ಲಿಗೆ ಕೆರೆಗಳನ್ನು ನಿರ್ಮಿಸಿದ್ದರೆಂದು ಇತಿಹಾಸದಿಂದ ತಿಳಿಯುತ್ತದೆ. ನಾಗಪ್ಪ ತಾನು ವಾಸವಾಗಿದ್ದ ಕೆರೆಯನ್ನು ವ್ಯಾಸರಾಜರಿಗೆ ಗುರುಕಾಣಿಕೆಯಾಗಿ ನೀಡಿ, ಕೆರೆಯ ಉಸ್ತುವಾರಿಯನ್ನೂ ನೋಡಿಕೊಂಡನು.

ಇದನ್ನು ಶ್ಲಾಘಿಸಿದ ವ್ಯಾಸರಾಜರು, ಈ ಕೆರೆಗೆ ನಾಗಪ್ಪಯ್ಯನ ಕೆರೆ ಎಂದು ನಾಮಕರಣ ಮಾಡಿದರು. ಅದು ಕ್ರಮೇಣ ನಾಗಪ್ಪ ಕೆರೆಯಾಗಿ ಹಾಗೂ ಈ ಕೆರೆಯಲ್ಲಿ ನಾಗರ ಹಾವುಗಳು ಹೆಚ್ಚಾಗಿ ಇದ್ದರಿಂದ ನಾಗರಕೆರೆಯಾಗಿ ಪ್ರಚಲಿತವಾಯಿತೆಂದು ತಿಳಿದು ಬರುತ್ತದೆ. ನಾಗರ ಕೆರೆ ಸಣ್ಣ ನೀರಾವರಿ ಕೆರೆಯಾಗಿದ್ದು, ನಗರಸಭಾ ವ್ಯಾಪ್ತಿಗೆ ಒಳಪಡುತ್ತದೆ. ಅರ್ಕಾವತಿ ನದಿ ಹರಿಯುವ ಪ್ರದೇಶದ ಮೊದಲ ದೊಡ್ಡಕೆರೆ ಇದಾಗಿದೆ.

“ನಾಗರಕೆರೆ ಸಣ್ಣ ನೀರಾವರಿ ಇಲಾಖೆಗೆ ಒಳಪಟ್ಟಿದ್ದು, ನಗರಸಭೆ ವ್ಯಾಪ್ತಿಗೆ ಬರುತ್ತದೆ. ಕೆರೆಗೆ ತ್ಯಾಜ್ಯದ ನೀರು ಹರಿಯದಂತೆ ನೋಡಿಕೊಳ್ಳುವಂತೆ ನಗರಸಭೆಗೆ ಸೂಚನೆ ನೀಡಲಾಗುವುದು. ಸಣ್ಣ ನೀರಾವರಿ, ನಗರಸಭೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕ್ರಮ ವಹಿಸಲಾಗುವುದು.”  

ಟಿ.ಎಸ್‌.ಶಿವರಾಜ್‌, ತಹಶೀಲ್ದಾರ್‌

ಖಾಸ್‌ಬಾಗ್‌ನಿಂದ ಡಿ.ಕ್ರಾಸ್‌ವರೆಗೂ ವಿಸ್ತಾರ ನಾಗರಕೆರೆ ಬಹು ವಿಸ್ತಾರವಾಗಿದೆ: ನಗರದ ಖಾಸ್‌ಬಾಗ್‌ನಿಂದ ಹಿಡಿದು ಡಿ.ಕ್ರಾಸ್‌ವರೆಗೆ ತನ್ನ ಎಲ್ಲೆಯನ್ನು ವಿಸ್ತರಿಸಿಕೊಂಡಿದೆ. ನಾಗರಕೆರೆಯಲ್ಲಿಯೇ ಒಳಚರಂಡಿ ಚೇಂಬರ್‌ಗಳನ್ನು ನಿರ್ಮಿಸಲಾಗಿದ್ದು, ಹಲವು ಬಾರಿ ಈ ಚೇಂಬರ್‌ಗಳಲ್ಲಿ ನೀರು ಸರಾಗವಾಗಿ ಹರಿಯದೇ ತುಂಬಿ ಬಂದು ಚರಂಡಿ ನೀರು ಕೆರೆಗೆ ಸೇರ್ಪಡೆಯಾಗುತ್ತಿದೆ. ನಗರದ ಡಿ.ಕ್ರಾಸ್‌ ಅಯ್ಯಪ್ಪ ಸ್ವಾಮಿ ದೇವಾಲಯದ ಸಮೀಪದ ಕೆರೆ ಅಂಗಳದಲ್ಲಿ ಚರಂಡಿ ನೀರು ಕೆರೆಗೆ ಸೇರುತ್ತಿದೆ. ಇದರೊಂದಿಗೆ ಕೆರೆಗೆ ಕಸ, ಕಡ್ಡಿ ತ್ಯಾಜ್ಯ ವಸ್ತುಗಳನ್ನು ಹಾಕುತ್ತಿರುವುದು ಕೆರೆ ಮಲಿನವಾಗಲು ಕಾರಣವಾಗಿದೆ. ಕೆರೆ ಏರಿ ಮೇಲೆ ನಿತ್ಯ ವಾಯುವಿಹಾರಕ್ಕೆ ಬರುವವರಿಗೆ ಕೆರೆಯಿಂದ ದುರ್ನಾತ ಬೀರುವುದರೊಂದಿಗೆ ನಾಗರಕೆರೆಯ ಸೌಂದರ್ಯ ಸವಿಯಲು ಕಸಿವಿಸಿಯಾಗುತ್ತಿದೆ

“ದೊಡ್ಡಬಳ್ಳಾಪುರ ನಗರದ ಜೀವನಾಡಿ ಯಾದ ನಾಗರಕೆರೆ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಈ ಬಗ್ಗೆ ಸಣ್ಣ ನೀರಾವರಿ ಇಲಾಖೆ ಹಾಗೂ ನಗರಸಭೆ ಜಂಟಿಯಾಗಿ ಕಾರ್ಯಕ್ರಮ ರೂಪಿಸಿ ಅಭಿವೃದ್ಧಿಪಡಿಸಬೇಕಿದೆ.ʼ

ಯಲ್ಲಪ್ಪ, ಮುನಿರಾಜು,

ಪರಿಸರ ಪ್ರೇಮಿಗಳು

Advertisement

Udayavani is now on Telegram. Click here to join our channel and stay updated with the latest news.

Next