Advertisement

ಮನಗೆದ್ದ ರಾಷ್ಟ್ರ ಮಟ್ಟದ ಜಂಗಿ ನಿಕಾಲಿ ಕುಸ್ತಿಗಳು

03:36 PM Sep 12, 2022 | Team Udayavani |

ಮಹಾಲಿಂಗಪುರ: ಪಟ್ಟಣದ ಆರಾಧ್ಯಧೈವ ಮಹಾಲಿಂಗೇಶ್ವರ ಜಾತ್ರೆ ಅಂಗವಾಗಿ ಸರ್ಕಾರಿ ಕಾಲೇಜ ಆವರಣದಲ್ಲಿನ ಕುಸ್ತಿ ಮೈದಾನದಲ್ಲಿ ರವಿವಾರ ನಡೆದ ರಾಷ್ಟ್ರಮಟ್ಟದ ಪುರುಷರ ಕುಸ್ತಿ ಪಂದ್ಯಾವಳಿ ಕುಸ್ತಿ ಪ್ರೇಮಿಗಳ ಮನ ತಣಿಸುವಲ್ಲಿ ಯಶಸ್ವಿಯಾಯಿತು.

Advertisement

ಕುಸ್ತಿ ಪಂದ್ಯಾವಳಿಗೆ ಮಳೆರಾಯ ಅಡ್ಡಿಯಾಗುತ್ತಾನೆ ಎಂಬ ಆತಂಕದಲ್ಲಿದ್ದ ಜಾತ್ರಾ ಕಮೀಟಿ ಮತ್ತು ಕುಸ್ತಿ ಕಮೀಟಿಯ ಹಿರಿಯರು, ಮಧ್ಯಾಹ್ನ 3 ಗಂಟೆಯ ನಂತರ ಮಳೆರಾಯ ಸ್ವಲ್ಪ ವಿರಾಮ ನೀಡಿದ ಕಾರಣ ಒಂದು ಗಂಟೆ ತಡವಾಗಿ 4 ಗಂಟೆಗೆ ಆರಂಭಿಸಲಾಯಿತು.

ಕಳೆದ ಒಂದು ವಾರದಿಂದ ನಿರಂತರ ಮಳೆಯಾದ ಕಾರಣ, ಪಂದ್ಯಾವಳಿಯ ವೀಕ್ಷಣೆಗೆ ಆಗಮಿಸುವ ಕಲಾಭಿಮಾನಿಗಳ ಅನುಕೂಲಕ್ಕಾಗಿ ಪುರಸಭೆಯಿಂದ ಗರಸು ಹಾಕಿ, ಮೈದಾನವನ್ನು ದುರಸ್ತಿಗೊಳಿಸಲಾಗಿತ್ತು. ಜೊತೆಗೆ ಕುಸ್ತಿ ಕಮೀಟಿಯವರು ಇದೇ ಮೊದಲ ಬಾರಿಗೆ ಸುಮಾರು 4-5 ಸಾವಿರ ಜನರು ಕುಳಿತು ಕುಸ್ತಿ ಪಂದ್ಯಾವಳಿಯನ್ನು ವೀಕ್ಷಿಸಲು ಅನುಕೂಲವಾಗುವಂತೆ ಗ್ಯಾಲರಿ ನಿರ್ಮಿಸಿದ್ದು ವಿಶೇಷವಾಗಿತ್ತು.

ಬೆಳ್ಳಿಗದೆ ಗೆದ್ದ ಮಲ್ಲಪ್ಪ ಪೈ ಅಥಣಿ: ಪ್ರಮುಖ ಮೊದಲ ನಾಲ್ಕು ನಂಬರಗಳ ಕುಸ್ತಿಯ ಜೊತೆಗೆ ಗಮನ ಸೆಳೆದ ಕುಸ್ತಿ ಎಂದರೆ ವಿಶೇಷ ಬಹುಮಾನ 17 ನಂಬರ ಕುಸ್ತಿ. ಈ ಕುಸ್ತಿಯಾಡಿದ ಮಲ್ಲಪ್ಪ ಪೈಅಥಣಿ, ಸಂಜು ಪೈ ಇಂಗಳಿ ಅವರ ನಡುವಿನ ಕುಸ್ತಿ ರೋಚಕವಾಗಿತ್ತು. ಮಳೆರಾಯನಿಂದ ಮಳೆಹನಿಯ ಸಿಂಚನ, ಪ್ರೇಕ್ಷರಿಂದ ಸಿಳ್ಳೆ-ಚಪ್ಪಾಳೆಗಳ ಪ್ರೋತ್ಸಾಹದಿಂದ ಇಬ್ಬರು ಪೈಲ್ವಾನ್‌ರು ಅರ್ಧಗಂಟೆಗಳ ಕಾಲ, ಕುಸ್ತಿಯ ವಿವಿಧ ಡಾವುಗಳ ಮೂಲಕ ಸೆಣಸಾಡಿದರು. ಅಂತಿಮವಾಗಿ ಅಥಣಿಯ ಮಲ್ಲಪ್ಪ ಪೈ ಅವರು ಇಂಗಳಿಯ ಸಂಜು ಪೈ ಅವರನ್ನು ಕುಸ್ತಿಯ ಅಖಾಡದ ಅಂತಿಮ ಕಸರತ್ತಿನಲ್ಲಿ ಚಿತ್‌ ಮಾಡುವ ಮೂಲಕ ಕುಸ್ತಿಯ ಜತೆಗೆ, ಡಾ| ಎ.ಆರ್‌.ಬೆಳಗಲಿ ಅವರು ಪಂದ್ಯಾವಳಿಯ ವಿಶೇಷ ಬಹುಮಾನವಾಗಿ ನೀಡಿದ 30 ಸಾವಿರ ಮೌಲ್ಯದ ಬೆಳ್ಳಿ ಗದೆಯನ್ನು ಗೆದ್ದುಕೊಂಡು ಸಂಭ್ರಮಿಸಿದರು.

ಸಮಬಲವಾದ ಕುಸ್ತಿಗಳು

Advertisement

ಪಂದ್ಯಾವಳಿಯಲ್ಲಿ ಒಟ್ಟು 37 ನಂಬರ್‌ ಕುಸ್ತಿಗಳಲ್ಲಿ 74 ಪೈಲ್ವಾನ್‌ ರು ಗೆಲುವಿಗಾಗಿ ಸೆಣಸಾಡಿದರು. ನಂಬರ 1 ಕುಸ್ತಿಯಲ್ಲಿ ಕರ್ನಾಟಕ ಕೇಸರಿ ಗೋಪಾಲ ಪೈ ಕೋಳಿ ಮತ್ತು ಹರಿಯಾಣದ ರೋಹಿತ್‌ ಪೈ ನಡುವೆ ನಂಬರ ಒಂದರ ಗೆಲುವಿಗಾಗಿ ಸುಮಾರು 45 ನಿಮಿಷಗಳವರೆಗೆ ನಡೆದ ರೋಚಕ ಕುಸ್ತಿ ಸೆಣಸಾಟವು ಅಂತಿಮ ಕ್ಷಣದವರೆಗೂ ಪ್ರೇಕ್ಷಕರ ಕುತೂಹಲ ಕಾಯ್ದುಕೊಂಡು, ಅಂತಿಮವಾಗಿ ಕುಸ್ತಿಯು ನಿಕಾಲಿಯಾಗದೇ ಸಮಬಲ ಸಾಧಿಸುವುದರೊಂದಿಗೆ ಮಹಾಲಿಂಗೇಶ್ವರ ಮಹಾಜಾತ್ರೆಯ ಕುಸ್ತಿ ಪಂದ್ಯಾವಳಿಯು ಸಮಾರೋಪಗೊಂಡಿತು.

2ನೇ ನಂಬರ ಕುಸ್ತಿಯಲ್ಲಿ ಪುಣೆಯ ಸುನೀಲ ಪೈ ವಿರುದ್ದ ಅಸ್ಲಮ್‌ಕಾಜಿಯ ಮಹಾರುದ್ರ ಕಾಳೆ ಜಯಶಾಲಿಯಾದರು. 3ನೇ ನಂಬರನ ಕುಸ್ತಿಯಲ್ಲಿ ಮೈಸೂರಿನ ಯಶವಂತ ಪೈ ಹಾಗೂ ಅಸ್ಲಮಕಾಜಿಯ ಜಮೀರ ಮುಲಾನಿ, 4ನೇ ನಂಬರನ ಬೆಳಗಾವಿಯ ಶಿವಯ್ಯ ಪೈ ಪೂಜೇರಿ ವಿರುದ್ದ ಕುರಡೆವಾಡಿಯ ದಾದಾ ಮುಲಾನಿ, 5ನೇ ನಂಬರನ ಮೋಮಿನ ಪಟೇಲ್‌ -ಶಿವಾನಂದ ನಿರವಾನಟ್ಟಿ ನಡುವಿನ ಕುಸ್ತಿ ಸೇರಿದಂತೆ ಪ್ರಮುಖ 5 ಕುಸ್ತಿಗಳಲ್ಲಿ 4 ಕುಸ್ತಿಗಳು ಕುಸ್ತಿಗಳು ಸಮಬಲವಾದವು.

ಮಹಾಲಿಂಗೇಶ್ವರ ಮಠದ ಈಶ್ವರ ಮಠದ ಅವರು ಕುಸ್ತಿ ಕಣಕ್ಕೆ ಪೂಜೆ ಸಲ್ಲಿಸಿದರು. ಜಾತ್ರಾ ಕಮೀಟಿಯ ಅಧ್ಯಕ್ಷರಾದ ರವಿಗೌಡ ಪಾಟೀಲ, ಬಸನಗೌಡ ಪಾಟೀಲ, ಯಲ್ಲನಗೌಡ ಪಾಟೀಲ, ಅಶೋಕಗೌಡ ಪಾಟೀಲ, ಕೃಷ್ಣಗೌಡ ಪಾಟೀಲ, ಪುರಸಭೆ ಅಧ್ಯಕ್ಷ ಬಸವರಾಜ ಹಿಟ್ಟಿನಮಠ ಅವರು ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿದರು.

ಕುಸ್ತಿ ಕಮಿಟಿಯ ಸದಸ್ಯರಾದ ನಿಂಗಪ್ಪ ಬಾಳಿಕಾಯಿ, ಸದಸ್ಯರಾದ ಮುದಕಪ್ಪ ಮಾಳಿ, ಪರಪ್ಪ ಹಟ್ಟಿ, ಮಹಾಲಿಂಗ ಮಾಳಿ, ಹಣಮಂತ ಬುರುಡ, ಅಪ್ಪಾಸಿ ಕಾರಜೋಳ ಕುಸ್ತಿ ಪಂದ್ಯಾವಳಿಗಳನ್ನು ಅಚ್ಚುಕಟ್ಟಾಗಿ ಆಯೋಜಿಸಿದ್ದರು. ಜಾತ್ರಾ ಕಮೀಟಿ ಅಧ್ಯಕ್ಷ ರವಿಗೌಡ ಪಾಟೀಲ, ಶಾಸಕ ಸಿದ್ದು ಸವದಿ, ಅಂಬಾದಾಸ ಕಾಮೂರ್ತಿ, ಬಸವರಾಜ ಹಿಟ್ಟಿನಮಠ, ಬಸವರಾಜ ಕೊಣ್ಣುರ, ಡಾ| ಎ.ಆರ್‌.ಬೆಳಗಲಿ, ಸಿದ್ದು ಕೊಣ್ಣುರ, ಡಾ| ಪದ್ಮಜೀತ ನಾಡಗೌಡ ಪಾಟೀಲ, ಯಲ್ಲನಗೌಡ ಪಾಟೀಲ, ಲಕ್ಷ್ಮಣಗೌಡ ಪಾಟೀಲ, ಶ್ರೀಮಂತ ಹಳ್ಳಿ, ಶಿವಲಿಂಗ ಘಂಟಿ, ಮಹಾಲಿಂಗಪ್ಪ ಕುಳ್ಳೋಳ್ಳಿ, ಈರಪ್ಪ ದಿನ್ನಿಮನಿ, ಚನ್ನಪ್ಪ ಪಟ್ಟಣಶೆಟ್ಟಿ, ಚನ್ನಯ್ನಾ ಛಟ್ಟಿಮಠ, ಮಹಾದೇವ ಮಾರಾಪುರ, ಪ್ರಕಾಶ ಅರಳಿಕಟ್ಟಿ, ಪುರಸಭೆ ಮುಖ್ಯಾಕಾರಿ ಜಗದೀಶ ಈಟಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next