Advertisement

ಕುಷ್ಟಗಿ: ಅದ್ದೂರಿಯಾಗಿ ನಡೆದ ಶ್ರೀ ಬುತ್ತಿ ಬಸವೇಶ್ವರ ಜಾತ್ರಾ ಮಹೋತ್ಸವ

07:59 PM Feb 05, 2023 | Team Udayavani |

ಕುಷ್ಟಗಿ:ಪಟ್ಟಣದ ಆರಾಧ್ಯ ದೈವ ಶ್ರೀ ಬುತ್ತಿ ಬಸವೇಶ್ವರ ಜಾತ್ರಾ ಮಹೋತ್ಸವದ ಮಹಾ ರಥೋತ್ಸವ ಭಾನುವಾರ ಸಂಜೆ ಅದ್ದೂರಿಯಾಗಿ ನಡೆಯಿತು.

Advertisement

ಬೆಳಗ್ಗೆ ಶ್ರೀ ಬುತ್ತಿ ಬಸವೇಶ್ವರ ಮೂರ್ತಿಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ನಂತರ ಇಲ್ಲಿನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಿಂದ ನಂದೀಶ್ವರ ಮೂರ್ತಿ ಹಾಗೂ ತೇರಿನ ಕಳಶದೊಂದಿಗೆ ಸಕಲ ವಾದ್ಯಗಳ ಸಮೇತ ಮೆರವಣಿಗೆ ನಡೆಯಿತು. ಮಧ್ಯಾಹ್ನ ದೇವಸ್ಥಾನ ಆವರಣದಲ್ಲಿ ಮಹಾ ದಾಸೋಹ ನೆರವೇರಿತು.

ಸಂಜೆ ಗೋಧೂಳಿ ಸಮಯದಲ್ಲಿ ಕೊರಡಕೇರಾದ ಹಾಲುಮತ ಭಕ್ತರಿಂದ ರಥದ ಹಗ್ಗವನ್ನು ಮೆರವಣಿಗೆಯಲ್ಲಿ ದೇವಸ್ಥಾನ ಆವರಣದ ರಥದವರೆಗೆ ತರಲಾಯಿತು. ಹಾಲಕೆರೆ ಅನ್ನದಾನೇಶ್ವರ ಸಂಸ್ಥಾನಮಠದ ಶ್ರೀ ಮುಪ್ಪಿನ ಬಸವಲಿಂಗ ದೇವರು ಸಾನಿಧ್ಯದಲ್ಲಿ ಮಹಾರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ಭಕ್ತಾಧಿಗಳು ಭಾವ ಪರವಶರಾಗಿ ರಥವನ್ನು ಪಾದಗಟ್ಟೆಯಿಂದ ಪುನಃ ರಥದ ಮನೆಯವರೆಗೂ ಎಳೆದು ಭಕ್ತಿ ಸೇವೆ ಸಲ್ಲಿಸಿ ಮಹಾ ರಥೋತ್ಸವ ವನ್ನು ಸಂಪನ್ನಗೊಳಿಸಿದರು. ಈ ಸಂಧರ್ಭದಲ್ಲಿ ಭಕ್ತಾಧಿಗಳು ಸಾಗಿದ ರಥಕ್ಕೆ ಉತ್ತತ್ತಿ ಎಸೆದು ಧನ್ಯತಾಭಾವ ಸಮರ್ಪಿಸಿದರು. ನಂತರ ಬಾಣಬಿರುಸು ಪ್ರದರ್ಶನ ನಡೆಯಿತು. ಹಾಲಕೆರೆ ಅನ್ನದಾನೇಶ್ವರ ಸಂಸ್ಥಾನಮಠದ ಶ್ರೀ ಮುಪ್ಪಿನ ಬಸವಲಿಂಗ ದೇವರು ಸಾನಿಧ್ಯದಲ್ಲಿ ಆಧ್ಯಾತ್ಮಿಕ ಪ್ರವಚನ ಜರುಗಿತು.

ಕುಷ್ಟಗಿ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತಾದಿಗಳು ಸಾಗಿದ ರಥಕ್ಕೆ ಉತ್ತತ್ತಿ ಎಸೆದು ಭಕ್ತಿ ಸೇವೆಯ ಮೂಲಕ ಪುನೀತರಾದರು. ನಾಗಲಾಪುರ ಕುರಗಗೋಡು ವಿರಕ್ತವ್ಮಠದ ನಿರಂಜನಪ್ರಭು ದೇವರು, ಸೋಮ ಸಮುದ್ರ ವಿರಕ್ತಮಠದ ಸಿದ್ದಲಿಂಗದೇವರು, ಶ್ರೀಧರಗಡ್ಡಿ ಮರಿಕೊಟ್ಟೂರು ದೇವರು, ವ್ಯಾಕರನಾಳ ವೀರೇಶ್ವರ ದೇವರು ಪಾಲ್ಗೊಂಡಿದ್ದರು. ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ, ಮಾಜಿ ಶಾಸಕ ದೊಡ್ಡನಗೌಡ ಪಾಟೀಲ, ಸಿಪಿಐ ನಿಂಗಪ್ಪ ರುದ್ರಪ್ಪಗೋಳ. ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ರಾಜೇಶ ಪತ್ತಾರ, ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next