Advertisement

ಕುಷ್ಟಗಿ: ಬಿರುಸಿನ ಮಳೆಗೆ ಸಿಲುಕಿದ ಬಸ್; ಪೇಚಿಗೆ ಸಿಲುಕಿದ ಪ್ರಯಾಣಿಕರು

09:42 AM Oct 07, 2022 | Team Udayavani |

ಕುಷ್ಟಗಿ: ಕುಷ್ಟಗಿ- ಹನುಮಸಾಗರ ರಸ್ತೆಯಲ್ಲಿ ದೋ.. ಎಂದು ಸುರಿವ ಮಳೆಗೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕುಷ್ಟಗಿ ಘಟಕದ ಬಸ್ಸು ಸಿಲುಕಿ ಪ್ರಯಾಣಿಕರು ಪೇಚಿಗೆ ಸಿಲುಕಿದ ಪ್ರಸಂಗ ಅ.6 ರ ಗುರುವಾರ ರಾತ್ರಿ ನಡೆದಿದೆ.

Advertisement

ಕುಷ್ಟಗಿ -ಪಟ್ಟದಕಲ್ಲು ರಾಜ್ಯ ಹೆದ್ದಾರಿಯ ಅವಸ್ಥೆ ಇದು. ಗುರುವಾರ ಸಂಜೆ 7:30ಕ್ಕೆ ಕುಷ್ಟಗಿ- ಹನುಮಸಾಗರ ಬಸ್ಸು ಪಟ್ಟಣದ ಹೊರವಲಯದ ತಹಶೀಲ್ದಾರ್‌ ಕಚೇರಿಯ ಕೂಗಳತೆ ಅಂತರದಲ್ಲಿ ಹಿಂದಿನ ಗಾಲಿ ಸಿಲುಕಿಕೊಂಡಿದೆ. ಜೋರಾಗಿ ಸುರಿವ ಮಳೆಯ ಮದ್ಯೆ ಪ್ರಯಾಣಿಕರು ಹರಸಹಾಸಕ್ಕೆ ಇಳಿದು ಬಸ್ಸನ್ನು ದೂಡಲು ಯತ್ನಿಸಿದರಾದರೂ ಬಸ್ಸು ಜಪ್ಪಯ್ಯ ಎಂದರೂ ಕದಲಿಲ್ಲ. ಪ್ರಯಾಣಿಕರ ಪ್ರಯತ್ನ ವ್ಯರ್ಥವಾದ ಬಳಿಕ ಜೆಸಿಬಿ ಯಂತ್ರ ತರಿಸಿ, ತಗ್ಗಿನಲ್ಲಿ ಸಿಲುಕಿದ್ದ ಬಸ್ಸನ್ನು ಮೇಲಕ್ಕೆ ಎತ್ತಲಾಯಿತು. ರಸ್ತೆಯ ದುಸ್ಥಿತಿಗೆ ಬಸ್ ನಲ್ಲಿದ್ದ ಪ್ರಯಾಣಿಕರು ಶಾಸಕ ಬಯ್ಯಾಪೂರ ಅವರನ್ನು ಶಪಿಸಿದರು. ಈ ಬಸ್ ನಲ್ಲಿದ್ದ ಪ್ರಯಾಣಿಕರನ್ನು ನಂತರದ ಬಸ್ಸಿನಲ್ಲಿ ಕಳುಹಿಸುವ ವ್ಯವಸ್ಥೆ ಮಾಡಲಾಯಿತು.

ಗ್ರಾನೈಟ್ ಲಾರಿಗಳ ಭರಾಟೆ:

ಕುಷ್ಟಗಿಯಿಂದ ಹನುಮಸಾಗರ ವರೆಗೆ ರಸ್ತೆ ಅತೀ ಭಾರದ ಗ್ರಾನೈಟ್ ಲಾರಿಗಳ ಅಕ್ರಮ ಸಂಚಾರದಿಂದ ಈ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಅಕ್ರಮ ಗ್ರಾನೈಟ್ ಲಾರಿಗಳ ಓಡಾಟಕ್ಕೆ ಅರಣ್ಯ ಇಲಾಖೆ, ಕಂದಾಯ, ಲೋಕೋಪಯೋಗಿ ಇಲಾಖೆ, ಪೊಲೀಸ್ ಇಲಾಖೆ ಬ್ರೇಕ್ ಹಾಕಲು ಸಾದ್ಯವಾಗಿಲ್ಲ. ಗ್ರಾನೈಟ್ ಲಾರಿಯವರು ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್ ವೆಚ್ಚ ಉಳಿಸಲು ಹನುಮಸಾಗರ ಮಾರ್ಗದಲ್ಲಿ ಸಂಚರಿಸುತ್ತಿದ್ದು, ರಾಜ್ಯ ಹೆದ್ದಾರಿ ಹಾಳಾಗಿದೆ.

 

Advertisement

 

Advertisement

Udayavani is now on Telegram. Click here to join our channel and stay updated with the latest news.

Next