Advertisement

Kunigal: ಸಶಸ್ತ್ರಪಡೆಯ ಪೊಲೀಸ್ ಪೇದೆಯ ಕೊಲೆಗೆ ಯತ್ನ!

10:48 PM Apr 21, 2024 | Team Udayavani |

ಕುಣಿಗಲ್ : ಬೆಂಗಳೂರು ನಗರ ಸಶಸ್ತ್ರಪಡೆಯ ಪೊಲೀಸ್ ಪೇದೆ ಚಲಾಯಿಸುತ್ತಿದ್ದ ಬೈಕ್‌ಗೆ ದುಷ್ಕರ್ಮಿಗಳು ಕಾರಿನಿಂದ ಗುದ್ದಿ, ನೆಲಕ್ಕೆ ಬೀಳಿಸಿ ಲಾಂಗ್‌ ಬೀಸಿ ಗಾಯಗೊಳಿಸಿ ಕೊಲೆಗೆ ಯತ್ನಿಸಿದ ಘಟನೆ ಭಾನುವಾರ ಹಾಡಹಗಲೇ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75 ಉರ್ಕೆಹಳ್ಳಿ ಗ್ರಾಮದ ಬಳಿ ನಡೆದಿದೆ.

Advertisement

ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕು ಸಿದ್ದಹಟ್ಟಿ ಗ್ರಾಮ, ಹಾಲಿ ಬೆಂಗಳೂರು ನಗರ ಸಶಸ್ತ್ರಪಡೆಯ ಪೊಲೀಸ್ ಪೇದೆ ಎಸ್.ಎಸ್.ಶ್ರೀಧರ್ (29) ದುಷ್ಕರ್ಮಿಗಳ ಹಲ್ಲೆಗೆ ಒಳಗಾದವರು.

ಶ್ರೀಧರ್ ಬೆಂಗಳೂರಿನಿಂದ ಸ್ವಗ್ರಾಮ ಚನ್ನರಾಯಪಟ್ಟಣ ತಾಲೂಕು ಸಿದ್ದಹಟ್ಟಿ ಗ್ರಾಮಕ್ಕೆ ಬರುತ್ತಿರುವಾಗ ಟಾಟಾ ಸುಮೋ ಮತ್ತು ಇಂಡಿಕಾ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಮೊದಲು ಟಾಟಾ ಸುಮೋದಿಂದ ಬೈಕ್‌ನ ಹಿಂಬದಿಗೆ ಢಿಕ್ಕಿ ಹೊಡೆದಿದ್ದು, ಶ್ರೀಧರ್ ನೆಲಕ್ಕೆ ಬಿದ್ದಿದ್ದಾರೆ, ಬಳಿಕ ಇಂಡಿಕಾ ಕಾರನ್ನು ಶ್ರೀಧರ್‌ನ ಮೇಲೆ ಹರಿಸಲು ಯತ್ನಿಸಿದ್ದಾರೆ. ಆದರೆ ಶ್ರೀಧರ್ ಪಕಕ್ಕೆ ಉರುಳಿದ ನಂತರ ಬೈಕ್ ಮೇಲೆ ಕಾರು ಹತ್ತಿಸಿದ್ದಾರೆ.

ಇಂಡಿಕಾ ಕಾರಿನಲ್ಲಿ ಇದ್ದ ವ್ಯಕ್ತಿ ಲಾಂಗ್ ಹಿಡಿದು ಶ್ರೀಧರ್ ಮೇಲೆ ಹಲ್ಲೆ ನಡೆಸಿ ಹತ್ಯೆಗೆ ಯತ್ನಿಸಿದ್ದಾನೆ, ಇದರಿಂದ ಗಾಬರಿಗೊಂಡ ಶ್ರೀಧರ್ ಸಮೀಪದಲ್ಲೇ ಇದ್ದ ಟೀ ಅಂಗಡಿ ಬಳಿಗೆ ಓಡಿ ಹೋಗಿದ್ದಾರೆ.

ಪೇದೆಯನ್ನು ರಕ್ಷಿಸಿದ ಜನ
ಟೀ ಅಂಗಡಿ ಬಳಿ ಇದ್ದ ಜನರು ಕಿರಿಚಿಕೊಂಡಾಗ ಹೆದರಿದ ದುಷ್ಕರ್ಮಿಗಳು ಬಂದಿದ್ದ ಕಾರಿನಲ್ಲೇ ಓಡಿ ಹೊಗಿದ್ದಾರೆ. ಜನರು ಅಲ್ಲಿ ಇಲ್ಲದಿದ್ದರೇ ಪೇದೆ ಹತ್ಯೆ ನಡೆದುಹೊಗುತ್ತಿತ್ತು ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.

Advertisement

ಓರ್ವನ ಬಂಧನ
ಘಟನೆ ಬಗ್ಗೆ ಸ್ಥಳೀಯ ಜನರು ಕುಣಿಗಲ್ ಪೊಲೀಸರಿಗೆ ಮಾಹಿತಿ ನೀಡಿದ ತತ್ ಕ್ಷಣ ಕಾರ್ಯ ಪ್ರವೃತ್ತರಾದ ಕುಣಿಗಲ್ ಠಾಣೆಯ ಸಿಪಿಐ ನವೀನ್‌ಗೌಡ ನೇತೃತ್ವದ ಪೊಲೀಸ್ ತಂಡ ಘಟನೆ ಸ್ಥಳಕ್ಕೆ ತೆರಳಿದ್ದು, ಕಾರನ್ನು ಹಿಂಬಾಲಿಸಿದ್ದಾರೆ, ಕುಣಿಗಲ್ ಪಟ್ಟಣದ ಬಳಿ ಕಾರನ್ನು ಹಿಂಬಾಲಿಸಿ ತಡೆದು, ಓರ್ವ ಆರೋಪಿಯನ್ನು ಬಂಧಿಸಿ, ಕಾರನ್ನು ವಶಕ್ಕೆ ಪಡೆದಿದ್ದಾರೆ. ಘಟನೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಆಸ್ಪತ್ರೆಗೆ ದಾಖಲು
ಘಟನೆಯಲ್ಲಿ ಗಾಯಗೊಂಡಿರುವ ಕೇಂದ್ರ ವಲಯ ಸಶಸ್ತ್ರಪಡೆಯ ಪೊಲೀಸ್ ಪೇದೆ ಎಸ್.ಎಸ್.ಶ್ರೀಧರ್ ಅವರನ್ನು ಕುಣಿಗಲ್ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ನಾಗಮಂಗಲ ತಾಲೂಕು ಅದಿಚುಂಚನಗಿರಿ ಆಸ್ಪತ್ರೆಗೆ ಕಳಿಸಿಕೊಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next