Advertisement

ತಾಲೂಕು ಕೇಂದ್ರದಲ್ಲೇ ಕುಂದು-ಕೊರತೆ ಪರಿಹಾರ: ಸಂವಾದದಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌

12:53 AM Aug 03, 2023 | Team Udayavani |

ಮಂಗಳೂರು: ಗ್ರಾಮೀಣ ಭಾಗದ ಸಾರ್ವಜನಿಕರು ತಮ್ಮ ಕುಂದು-ಕೊರತೆ ಪರಿಹಾರಕ್ಕೆ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಗೆ ಬರುವ ಬದಲು ಕಂದಾಯ ಸೇರಿದಂತೆ ಅಗತ್ಯ ಸೇವೆಗಳನ್ನು ನೀಡಲು ವಾರಕ್ಕೊಮ್ಮೆ ತಾಲೂಕು ಕೇಂದ್ರಕ್ಕೆ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಲಾಗುವುದು. ಮುಂದಿನ ವಾರದಿಂದಲೇ ತಾಲೂಕು ಭೇಟಿ ಆರಂಭಿಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೆ$ç ಮುಗಿಲನ್‌ ತಿಳಿಸಿದ್ದಾರೆ.

Advertisement

ಬುಧವಾರ ನಗರದ ಪ್ರಸ್‌ಕ್ಲಬ್‌ನಲ್ಲಿ ಆಯೋಜಿಸಲಾದ ಪತ್ರಿಕಾ ಸಂವಾದದಲ್ಲಿ ಅವರು ಜಿಲ್ಲೆ ಹಾಗೂ ನಗರ ವ್ಯಾಪ್ತಿಯ ಹಲವು ಸಮಸ್ಯೆಗಳನ್ನು ಪತ್ರಕರ್ತರೊಂದಿಗೆ ಚರ್ಚಿಸಿದರು.

ಆರಂಭದಲ್ಲಿ ತಾಲೂಕು ಕೇಂದ್ರಗಳಿಗೆ ಭೇಟಿ ನೀಡಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಲಾಗುವುದು. ಮುಂದಿನ ಹಂತದಲ್ಲಿ ಹೋಬಳಿ ಮಟ್ಟದಲ್ಲಿ ಸಭೆ ನಡೆಸಲಾಗುವುದು. ಗ್ರಾಮವಾಸ್ತವ್ಯಕ್ಕೆ ಸಂಬಂಧಿಸಿ ದಂತೆಯೂ ನಿರ್ಧರಿಸಲಾಗುವುದು ಎಂದರು.

ಜಿಲ್ಲೆಯಲ್ಲಿ ಸರಕಾರಿ ಬಸ್‌ ಸೇರಿದಂತೆ ಸಾರಿಗೆ ವಾಹನಗಳ ಓಡಾಡಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆ ಹರಿಸುವ ನಿಟ್ಟಿನಲ್ಲಿ ಸಾರಿಗೆ ಪ್ರಾಧಿಕಾರದ ಸಭೆ ನಡೆಸಲಾಗುವುದು. ವಿವಿಧ ತಾಲೂಕುಗಳಲ್ಲಿನ ಜಟಿಲ ಸಮಸ್ಯೆಗಳಾಗಿರುವ ಕಂದಾಯ ಅರಣ್ಯ ಭೂಮಿಯ ವರ್ಗೀಕರಣಕ್ಕೆ ಸಂಬಂಧಿಸಿ ಸರ್ವೇ ಕೇವಲ ಜಿಲ್ಲೆಯನ್ನು ಸೀಮಿತವಾಗಿ ನಡೆಸಲು ಸಾಧ್ಯತೆ ಬಗ್ಗೆ ಪರಿಶೀಲಿಸಲಾಗುವುದು. ಜಿಪಿಎಸ್‌ ಆಧಾರದಲ್ಲಿ ಅರಣ್ಯ ಹಾಗೂ ಕಂದಾಯ ಭೂಮಿಯನ್ನು ಗುರುತಿಸುವಿಕೆಯನ್ನು ವಿಶೇಷ ಅಧ್ಯಯನ ಹಾಗೂ ವಿಶೇಷ ತಂಡದ ಮೂಲಕ ನಡೆಸಲು ಪ್ರಯತ್ನಿಸಲಾಗುವುದು ಎಂದರು.

ಹೊಸ ತಾಲೂಕುಗಳಲ್ಲಿ ಅಗತ್ಯ ಮೂಲಸೌಕರ್ಯ ಒದಗಿಸುವ ಸಲವಾಗಿ ಕಂದಾಯ ಇಲಾಖೆ ಈಗಾಗಲೇ ಮಾಹಿತಿ ಪಡೆದಿದೆ. ಶೀಘ್ರದಲ್ಲೇ ತಾಲೂಕು ಕೇಂದ್ರಗಳಲ್ಲಿ ಸೌಕರ್ಯ ಲಭ್ಯವಾಗಲಿವೆ. ಪಡೀಲ್‌ನ ನೂತನ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಎರಡನೇ ಹಂತದ ಕೆಲಸಕ್ಕೆ ಇನ್ನೂ 32 ಕೋ.ರೂ. ಅಗತ್ಯವಿದ್ದು, ಶೀಘ್ರ ಕಂದಾಯ ಇಲಾಖೆಯಿಂದ ಅನುದಾನ ಬಿಡುಗಡೆಯಾಗುವ ನಿರೀಕ್ಷೆಯಿದೆ ಎಂದರು.

Advertisement

ಪ್ರವಾಸೋದ್ಯಮಕ್ಕೆ ಪ್ರತ್ಯೇಕ ಪೋರ್ಟಲ್‌
ಬಹುಸಂಖ್ಯೆಯಲ್ಲಿ ಶಿಕ್ಷಣ, ಆರೋಗ್ಯ, ಧಾರ್ಮಿಕ ಕೇಂದ್ರಗಳ ಜತೆಗೆ ಬೀಚ್‌ಗಳಿಂದ ಕೂಡಿರುವ ದ.ಕ. ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶವಿದೆ. ಜಿಲ್ಲೆಯ ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಇಂಟಿಗ್ರೇಟೆಡ್‌ ಪೋರ್ಟಲ್‌ ಅಭಿವೃದ್ಧಿ ಪಡಿಸಲಾಗಿದ್ದು, ಅದನ್ನು ಜಾರಿಗೊಳಿಸಲಾಗುವುದು. ಜಿಲ್ಲಾ ಪ್ರವಾಸೋದ್ಯಮ ಸಮಿತಿ ಮೂಲಕ, ಸ್ಥಳೀಯ ಪಾಲುದಾರರ ಮೂಲಕ ನಿರ್ವಹಣೆ ಮಾಡಲಾಗುವುದು. ಸರ್ಫಿಂಗ್‌, ಪಿಲಿಕುಳದ ಡಾ| ಶಿವರಾಮ ಕಾರಂತ ನಿಸರ್ಗಧಾಮವನ್ನು ಒಳಗೊಂಡು ಜಿಲ್ಲೆಯ ಎಲ್ಲ ಪ್ರವಾಸಿ ಕೇಂದ್ರಗಳನ್ನು ಕ್ರೋಡೀಕರಿಸಿ “ಕಾರ್ಯಕ್ರಮ ಆಧಾರಿತ ಪ್ರವಾಸೋದ್ಯಮ’ ಯೋಜನೆಯ ರೂಪಿಸುವ ಉದ್ದೇಶವಿದೆ ಎಂದರು.

ಶಾಲೆಗೆ ರಜೆ ಉಂಟಾ ಸಾರ್‌!
ರೆಡ್‌ ಅಲರ್ಟ್‌ ಸಂದರ್ಭ ಮಕ್ಕಳಿಂದ ಸಾಕಷ್ಟು ಕರೆಗಳು ಬರುತ್ತಿದ್ದವು. ತಡರಾತ್ರಿ, ಬೆಳಗ್ಗೆ ನಾಲ್ಕು ಗಂಟೆಗೆಲ್ಲ ಕರೆ ಬರುತ್ತಿತ್ತು. ತುರ್ತು ಕರೆ ಎಂದು ಭಾವಿಸಿ ತೆಗೆದರೆ ಮಕ್ಕಳು “ಶಾಲೆಗೆ ರಜೆ ಉಂಟಾ ಸಾರ್‌’! ಎಂದು ಕೇಳುತ್ತಿದ್ದರು. ಪಿಯುಗೆ ಕೊಟ್ಟಿದ್ದೀರಿ ನಮಗೆ ಯಾಕೆ ಕೊಟ್ಟಿಲ್ಲ ಎಂದು ಪದವಿಯವರು ಕೇಳುತ್ತಿದ್ದರು. ಹಾಗೇ ವೃತ್ತಿಪರ ಶಿಕ್ಷಣ ವಿಭಾಗದವರೂ ಕರೆ ಮಾಡುತ್ತಿದ್ದರು. ಮಳೆಗಾಲದಲ್ಲಿ ತರಗತಿ ಮಾಡಲು ಸಾಧ್ಯವಾಗದ ಪರಿಸ್ಥಿತಿ ಇರುವುದರಿಂದ ಕರಾವಳಿಗೆ ಪ್ರತ್ಯೇಕ ಶೈಕ್ಷಣಿಕ ವೇಳಾಪಟ್ಟಿ
ರಚಿಸುವ ಅಗತ್ಯದ ಬಗ್ಗೆಯೂ ಜಿಲ್ಲಾಧಿಕಾರಿ ಪ್ರಸ್ತಾವಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next