Advertisement

ಆದಿವಾಸಿಗಳ ವಿಶಿಷ್ಟ ವೇಷ ಧರಿಸುವ ಕುಂಡೆ ಹಬ್ಬ

03:26 PM May 27, 2023 | Team Udayavani |

ಹುಣಸೂರು: ಆದಿವಾಸಿಗಳು ತಮ್ಮ ಆರಾಧ್ಯ ದೈವ ಶ್ರೀ ಭದ್ರಕಾಳಿ ಹಾಗೂ ಅಯ್ಯಪ್ಪಸ್ವಾಮಿ ದೇವರ ಹಬ್ಬವನ್ನು ಹಳ್ಳಿ ಹಳ್ಳಿಗಳಲ್ಲಿ ಭಿಕ್ಷೆ ಬೇಡುತ್ತಾ ದೇವರು, ದಣಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ಕುಣಿದು-ಕುಪ್ಪಸುತ್ತಾ ಕುಂಡೆಹಬ್ಬವನ್ನು ಆಚರಿಸಿ ಸಂಭ್ರಮಿಸಿದರು.

Advertisement

ಆದಿವಾಸಿಗಳು ತಮ್ಮ ಆರಾಧ್ಯ ದೇವರಾದ ಭದ್ರಕಾಳಿ, ಅಯ್ಯಪ್ಪ ಸ್ವಾಮಿಯ ಹೆಸರಿನಲ್ಲಿ ನಡೆಸುವ ಈ ಹಬ್ಬಕ್ಕೆ ಹನಗೋಡು ಹೋಬಳಿ ವ್ಯಾಪ್ತಿಯಲ್ಲಿರುವ 35ಕ್ಕೂ ಹೆಚ್ಚು ಹಾಡಿಯ ಗಿರಿಜನರು ಕಾಡಿನಲ್ಲಿ ಸಿಗುವ ಸೊಪ್ಪು, ಹಳೆ- ಹರಿದ ಬಟ್ಟೆ ಹಾಗೂ ಗೋಣಿ ಚೀಲಗಳಿಂದ ವಿವಿಧ ವೇಷ ತೊಟ್ಟು, ಬಣ್ಣ ಹಚ್ಚಿಕೊಂಡು. ಒಣಗಿದ ಸೋರೆಕಾಯಿ ಬುರುಡೆ, ಪ್ಲಾಸ್ಟಿಕ್‌ ಡಬ್ಬಿ ಹಾಗೂ ಟಿನ್‌ಗಳನ್ನು ಬಳಸಿ ಬ್ಯಾಂಡ್‌ ಬಾರಿಸುತ್ತಾ ಆಕರ್ಷಕವಾಗಿ ಕುಣಿಯುತ್ತಾ, ಸಿಕ್ಕ-ಸಿಕ್ಕವರನ್ನು ಕೆಟ್ಟ ಪದಗಳಿಂದ ನಿಂದಿಸುತ್ತಾ ಭಿಕ್ಷಾಟನೆ ಮಾಡುತ್ತಾ ಹಣ, ದವಸ ಧಾನ್ಯಗಳನ್ನು ಸಂಗ್ರಹಿಸಿದರು. ಈ ಹಬ್ಬವನ್ನು ಮೂಲನಿವಾಸಿ ಗಿರಿಜನ ಜನಾಂಗಕ್ಕೆ ಸೇರಿದ ಬೆಟ್ಟಕುರುಬ, ಜೇನುಕುರುಬ, ಬುಡಕಟ್ಟು ಜನಾಂಗಕ್ಕೆ ಸೇರಿದವರು ಹೆಚ್ಚಾಗಿ ಆಚರಿಸುವ ಈ ಕುಂಡೆ ಹಬ್ಬದ ಸಂಭ್ರಮದಲ್ಲಿ ಕೊಡಗಿನ ಕಾಡಂಚಿನ ಜನರು ಸೇರಿ ಆಚರಿಸುವರು.

ಧಣಿಗೆ ಬೈಯ್ದು ಕೋಪ ತಣಿಸಿಕೊಳ್ಳುವ ಹಬ್ಬ: ಈ ಹಿಂದೆ ಕೊಡಗಿನ ಜಮೀನಾªರರು ಕೂಲಿ ಕಾರ್ಮಿಕರನ್ನು ವರ್ಷವಿಡೀ ಬೈಯ್ಯುತ್ತಿದ್ದರು, ಇದನ್ನು ಗಿರಿಜನರು ಒಂದು ದಿನ ಬೈದು ಗಿರಿಜನರು ತಮ್ಮ ಆಕ್ರೋಶವನ್ನು ತೋಡಿಕೊಂಡು ದೇವರಲ್ಲಿ ಪೂಜೆಸಲ್ಲಿಸಿ ಕ್ಷಮೆ ಕೇಳಿ ಕೋಪ ತಣಿಸಿಕೊಳ್ಳುವುದೇ ಈ ಕುಂಡೆಹಬ್ಬದ ವಿಶೇಷ. ಪ್ರತಿ ವರ್ಷದ ಮೇ ತಿಂಗಳ ಕೊನೆಯ ವಾರದಲ್ಲಿ ಗಿರಿಜನರು ವಿವಿಧ ವೇಷ ಧರಿಸಿ ಆಚರಣೆ ಮಾಡುತ್ತಾರೆ, ದೇವರಲ್ಲಿ ಹೆಚ್ಚು ಭಯ, ಭಕ್ತಿ ಇರುವ ಆದಿವಾಸಿಗಳು ಭಕ್ತಿಯಿಂದ ಪ್ರಾರ್ಥನೆ ಮಾಡಿ ವೇಷ ಹಾಕುತ್ತಾರೆ(ಕಳಿ ಕಟ್ಟುವುದು). ನಂತರ ಕಾಲುನಡಿಗೆಯಲ್ಲೇ ಸುತ್ತ-ಮುತ್ತಲ ಹಳ್ಳಿ ಸೇರಿದಂತೆ ನಗರಪ್ರದೇಶಗಳಿಗೆ ಸುತ್ತಾಡಿ ಬಿಕ್ಷೆ ಬೇಡುತ್ತಾರೆ.

ದೇವರಿಗೆ ವಿಶೇಷ ಪೂಜೆ: ಕಾಡಿನ ದಾರಿಯಲ್ಲೇ ನಡೆದು ತೆರಳಿ ಈ ರೀತಿ ವಸೂಲಿ ಮಾಡಿದ ಹಣ ಮತ್ತು ದವಸ- ಧಾನ್ಯಗಳನ್ನು ವಿರಾಜಪೇಟೆ ರಸ್ತೆಯಲ್ಲಿರುವ ತಿತಿಮತಿ ಬಳಿಯ ದೇವರಪುರದಲ್ಲಿರುವ ಅಯ್ಯಪ್ಪ ಹಾಗೂ ಭದ್ರಕಾಳಿ ದೇವಾ ಲಯಕ್ಕೆ ಬೇಡಿದ ಹಣ ಹಾಗೂ ದವಸ ಧಾನ್ಯಗಳನ್ನು ತಂದು ಅರ್ಪಿಸಿ ದೇವರ ಉತ್ಸವದಲ್ಲಿ ಪಾಲ್ಗೊಂಡು ತಾವು ಮಾಡಿದ ತಪ್ಪಿಗಾಗಿ ದೇವರಲ್ಲಿ ಕ್ಷಮೆಯಾಚಿಸಿ ವಿಶೇಷ ಪೂಜೆ ಸಲ್ಲಿಸಿ, ಬಿಕ್ಷೆಯಿಂದ ಬಂದ ದವಸದಿಂದ ಅಡುಗೆ ತಯಾರಿಸಿ ಸಹಭೋಜನ ಮಾಡಿ ರಾತ್ರಿಇಡೀ ಉತ್ಸವ ನಡೆಸಿ, ಮಾರನೇದಿನ ವಾಪಸ್ಸಾಗುವರು.

-ಸಂಪತ್‌ ಕುಮಾರ್‌ ಹುಣಸೂರು 

Advertisement
Advertisement

Udayavani is now on Telegram. Click here to join our channel and stay updated with the latest news.

Next