ಕುಂದಾಪುರ: ಪ್ರಾಕೃತಿಕ ವಿಕೋಪದಿಂದ ಹಾನಿ ಸಂಭವಿಸಿದರೆ ದುರ್ಘಟನೆ ನಡೆದು 24 ಗಂಟೆಯ ಒಳಗೆ ಸಂಬಂಧಪಟ್ಟ ಅಧಿಕಾರಿಗಳು ಸರಕಾರಕ್ಕೆ ವರದಿ ಸಲ್ಲಿಸಬೇಕು. 48 ಗಂಟೆಯ ಒಳಗೆ ಸಂತ್ರಸ್ತರಿಗೆ ಪರಿಹಾರಧನ ಪಾವತಿಸಬೇಕು ಎಂದು ಸಹಾಯಕ ಕಮಿಷನರ್ ರಶ್ಮೀ ಎಸ್.ಆರ್. ಹೇಳಿದ್ದಾರೆ.
ಅವರು ಶುಕ್ರವಾರ ಅಪರಾಹ್ನ ಇಲ್ಲಿನ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಪ್ರಾಕೃತಿಕ ವಿಕೋಪ ಮುನ್ನೆಚ್ಚರಿಕೆ ಸಭೆಯಲ್ಲಿ ಮಾತನಾಡಿದರು.
ಮಾಹಿತಿ ಫಲಕ
ಈ ಹಿಂದಿನ ಮಳೆಗಾಲಗಳಲ್ಲಿ ಸಂಭವಿಸಿದ ದುರ್ಘಟನೆಗಳ ಜಾಗದ ಕುರಿತು ಗಮನ ಹರಿಸಿ. ನುರಿತ ಈಜುಪಟುಗಳ ಸಂಖ್ಯೆ, ಬೋಟು ಹೊಂದಿದವರ, ಜೆಸಿಬಿ ಹೊಂದಿದವರ, ಮರ ಕಡಿಯುವವರ ವಿವರಗಳು ಪಂಚಾಯತ್ ಹಾಗೂ ಗ್ರಾಮಕರಣಿಕರ ಕಚೇರಿ ಫಲಕದಲ್ಲಿರಲಿ. ಗುಡ್ಡದ ಅಂಚಿನ ಮನೆಯವರಿಗೆ ಮಾಹಿತಿ ನೀಡಿ. ಸ್ಥಳಾಂತರದ ಅವಶ್ಯವಿದ್ದರೆ ಗುರುತಿಸಿ ಇಟ್ಟುಕೊಳ್ಳಿ. ನದಿ ಬದಿಯ ಮನೆ, ಹಟ್ಟಿ ಇತ್ಯಾದಿಗಳ ಕುರಿತು ಮಾಹಿತಿ ಇರಲಿ ಎಂದರು.
ಗ್ರಾಮಗಳು
ಗುಲ್ವಾಡಿ, ಕಾವ್ರಾಡಿ, ಹಳ್ನಾಡು, ಹಕ್ಲಾಡಿ, ಕಟ್ಬೆಲೂ¤ರು, ದೇವಲ್ಕುಂದ, ಗುಜ್ಜಾಡಿ, ಬಳ್ಕೂರು, ಆನಗಳ್ಳಿ ಗ್ರಾಮಗಳಲ್ಲಿ ಈ ಹಿಂದೆ ತೊಂದರೆಯಾಗಿತ್ತು. ಅಮಾಸೆಬೈಲು, ಹಕ್ಲಾಡಿ ಮೊದಲಾದೆಡೆಯ ಶಾಲೆಗಳು ಎಚ್ಚರದಲ್ಲಿರಬೇಕು. ಕಾಳಜಿ ಕೇಂದ್ರಗಳನ್ನು ತೆರೆಯಲು ಶಾಲೆಯಲ್ಲಿ ವ್ಯವಸ್ಥೆ ಇರಬೇಕು ಎಂದರು.
Related Articles
ಪರಿಹಾರ ಹೆಚ್ಚಳ
ಬಟ್ಟೆ, ಪಾತ್ರೆ ಇತ್ಯಾದಿ ಹಾನಿಗೆ 1,800ರೂ. ಬದಲಿಗೆ 2,500 ರೂ., ಜಾನುವಾರು ಸಾವಿಗೆ 30 ಸಾವಿರ ರೂ. ಬದಲಿಗೆ 37,500 ರೂ., ಆಡು, ಕುರಿ, ಹಂದಿಗೆ 3ರ ಬದಲು 4 ಸಾವಿರ ರೂ., ವಿವಿಧ ರೀತಿಯ ಮನೆ ಹಾನಿಗೆ 5 ಸಾವಿರ ಬದಲು 6,500 ರೂ., 3,200 ರೂ. ಬದಲು 4,200 ರೂ., ಗುಡ್ಡಗಾಡಿನ ಮನೆ ಹಾನಿಗೆ 95,100 ರೂ. ಬದಲು 1.2 ಲಕ್ಷ ರೂ., 1.01 ಲಕ್ಷ ರೂ. ಬದಲು 1.3 ಲಕ್ಷ ರೂ. ಹೆಚ್ಚಿಸಲಾಗಿದೆ. ಕೃಷಿ ಹಾನಿ ಪರಿಹಾರವೂ ಹೆಚ್ಚಾಗಿದೆ. ನೆರೆಬಾಧಿತ ತಾಲೂಕಾಗಿ ಘೋಷಣೆಯಾದರೆ ಪರಿಹಾರದ ಮೊತ್ತವನ್ನು ಸರಕಾರವೇ ಸೂಚಿಸುತ್ತದೆ ಎಂದರು.
ಸೂಚನೆ
ತಾ.ಪಂ. ಯೋಜನಾ ನಿರ್ದೇಶಕ ಅರುಣ್ ಕುಮಾರ್, ಎಲ್ಲ ಪಿಡಿಒಗಳಿಗೆ ಸೂಚನೆ ನೀಡಲಾಗಿದೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಾಂತರಾಜು ಸಿ.ಎಸ್., ಎಲ್ಲ ಶಾಲಾ ಮುಖ್ಯಸ್ಥರ ಸಭೆ ಕರೆದು ಸೂಚಿಸಲಾಗಿದೆ. ಮಕ್ಕಳ ರಕ್ಷಣೆ ಹೊಣೆ ವಹಿಸಲಾಗಿದೆ, ಪುರಸಭೆ ಮುಖ್ಯಾಧಿಕಾರಿ ಮಂಜುನಾಥ ಆರ್., 6 ತಂಡಗಳನ್ನು ರಚಿಸಿ ಕ್ಷಿಪ್ರ ಸ್ಪಂದನೆಗೆ ಸೂಚಿಸಲಾಗಿದೆ, ಪಶುವೈದ್ಯಕೀಯ ಇಲಾಖೆ ಸಹಾಯಕ ನಿರ್ದೇಶಕ ಡಾ| ಬಾಬು ಪೂಜಾರಿ, ತಾತ್ಕಾಲಿಕ ಹಟ್ಟಿ ರಚನೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು. ಅಗ್ನಿಶಾಮಕ ದಳದವರು ಬೋಟ್, ರೈನ್ಕೋಟ್, ಮರ ಕಡಿಯುವ ಸಾಧನ ಬೇಕೆಂದರು. ಕೃಷಿ, ತೋಟಗಾರಿಕೆ, ಮೆಸ್ಕಾಂ, ಆರೋಗ್ಯ ಇಲಾಖೆ, ಜಲಸಂಪನ್ಮೂಲ ಮೊದಲಾದವ ಇಲಾಖೆಯವರು ಮಾತನಾಡಿದರು.ತಹಶೀಲ್ದಾರ್ ಶೋಭಾಲಕ್ಷ್ಮೀ ಉಪಸ್ಥಿತರಿದ್ದರು.
ಕಂಟ್ರೋಲ್ ರೂಂ
ಕಂದಾಯ ಇಲಾಖೆಯಿಂದ ಕಂಟ್ರೋಲ್ ರೂಂ ತೆರೆಯಲಾಗುವುದು. ಪಿಡಿಒ, ವಿಎ ಸೇರಿದಂತೆ ಎಲ್ಲ ಇಲಾಖೆಯವರೂ ಜನರ ತುರ್ತು ಸಂಪರ್ಕಕ್ಕೆ ದೊರೆಯಬೇಕು. ನೆರವಿಗೆ ಧಾವಿಸಬೇಕು. ಹಾನಿ ಮೌಲ್ಯಮಾಪನ ಮಾಡಬೇಕು ಎಂದರು. ಗಣಿಗಾರಿಕೆಗಳಿದ್ದಲ್ಲಿ ನೀರು ತುಂಬುವ ಜಾಗಗಳಿಗೆ ಬೇಲಿ ಹಾಕಬೇಕು, ದುರಂತಗಳಿಗೆ ಸ್ಥಳೀಯ ಅಧಿಕಾರಿ ಹೊಣೆಯಾಗಬೇಕಾಗುತ್ತದೆ ಎಂದರು. ಕುಂದಾಪುರ ಹೋಬಳಿಗೆ ಲೋಕೋಪಯೋಗಿ ಇಲಾಖೆ ಸಹಾಯಕ ಎಂಜಿನಿಯರ್ ಮೂರ್ತಿ, ವಂಡ್ಸೆ ಹೋಬಳಿಗೆ ಕಿರಿಯ ಎಂಜಿನಿಯರ್ ರಾಮ ಶೇಖರ್ ಅವರು ಮೌಲ್ಯಮಾಪನ ಅಧಿಕಾರಿಗಳಾಗಿರುತ್ತಾರೆ ಎಂದು ರಶ್ಮೀ ಹೇಳಿದರು.