Advertisement

ಕುಂದಾಪುರ ನಗರ ಪ್ರವೇಶ ಇನ್ನೂ ಮರೀಚಿಕೆ!

07:55 PM Nov 09, 2021 | Team Udayavani |

ಕುಂದಾಪುರ: ರಾಷ್ಟ್ರೀಯ ಹೆದ್ದಾರಿಯಿಂದ ಕುಂದಾಪುರ ನಗರಕ್ಕೆ ಪ್ರವೇಶ ಇನ್ನೂ ಮರೀಚಿಕೆಯಾಗಿದೆ. ಎಪ್ರಿಲ್‌ನಲ್ಲಿ ಕಾಮಗಾರಿ ಮುಗಿದಿದ್ದು ಲಾಕ್‌ಡೌನ್‌ ಘೋಷಣೆಯಾದ ದಿನದಿಂದ ರಾಷ್ಟ್ರೀಯ ಹೆದ್ದಾರಿ, ಫ್ಲೈಓವರ್‌, ಅಂಡರ್‌ಪಾಸ್‌ ಮೂಲಕ ವಾಹನಗಳ ಓಡಾಟ ಆರಂಭವಾಗಿದೆ. ಅಂದಿನಿಂದ ಹೆದ್ದಾರಿ ವಾಹನಗಳಿಗೆ ನಗರದ ಸಂಪರ್ಕ ತಪ್ಪಿದೆ.

Advertisement

ಸಾರ್ವಜನಿಕರಿಂದ ಬೇಡಿಕೆ
ಈ ಹಿಂದೆ ಬಳಕೆಯಲ್ಲಿದ್ದ ರಾಷ್ಟ್ರೀಯ ಹೆದ್ದಾರಿಯೇ ನಗರ ಸಂಪರ್ಕ ಕಲ್ಪಿಸುವ ಸರ್ವಿಸ್‌ ರಸ್ತೆಯಾಗಿದೆ. ಹೆದ್ದಾರಿ ಜತೆಗೆ ಸಮಾನಾಂತರವಾಗಿ ಸಾಗುತ್ತದೆ. ಆದ್ದರಿಂದ ಕುಂದಾಪುರ ನಗರಕ್ಕೆ ಹೆದ್ದಾರಿಯಿಂದ ತೆರಳಲು ಅವಕಾಶ ಕೊಡಬೇಕೆಂದು ಸಾರ್ವಜನಿಕರು ಬೇಡಿಕೆ ಇಟ್ಟಿದ್ದಾರೆ. ಕುಂದಾಪುರ ಪುರಸಭೆ ವ್ಯಾಪ್ತಿ¤ಯಲ್ಲಿ ಎಲ್ಲಿಯೂ ಹೆದ್ದಾರಿಯಿಂದ ನಗರಕ್ಕೆ ತೆರಳಲು ಅವಕಾಶ ಕೊಡದ ಹಿನ್ನೆಲೆಯಲ್ಲಿ ಬೇಡಿಕೆಗೆ ಬಲ ಬಂದಿದೆ. ಹೆದ್ದಾರಿಯಿಂದ ಪ್ರತ್ಯೇಕ ಪ್ರವೇಶ ನೀಡದ ಕಾರಣ ಪ್ರವಾಸಿ ವಾಹನಗಳು ನಗರಕ್ಕೆ ಬರುವುದು ಕಡಿಮೆಯಾಗಿದೆ. ವ್ಯಾಪಾರ, ವಹಿವಾಟು, ಆರ್ಥಿಕತೆ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ನಗರಕ್ಕೆ ಪ್ರವೇಶ ಎಲ್ಲಿ ಎಂದು ತಿಳಿಯದೇ ಈಗಲೂ ಹೆದ್ದಾರಿ ಸವಾರರು ಕಕ್ಕಾಬಿಕ್ಕಿಯಾಗಿ ಊರು ಸುತ್ತುವುದೂ ಇದೆ.

ಅನಿವಾರ್ಯ
ಅನೇಕ ಊರುಗಳಲ್ಲಿ ಹೆದ್ದಾರಿ ಊರ ಹೊರಗೆ ಪ್ರತ್ಯೇಕವಾಗಿರುತ್ತದೆ. ಹಾಗಿರುವಾಗ ಒಂದು ಕಡೆ ನಗರಕ್ಕೆ ಪ್ರವೇಶ ನೀಡಿದರೆ ಸಾಕಾಗುತ್ತದೆ. ಆದರೆ ಉಡುಪಿ, ದ.ಕ. ಮಟ್ಟಿಗೆ ಹಾಗಲ್ಲ. ಮೂಲ್ಕಿ, ಸುರತ್ಕಲ್‌, ಪಡುಬಿದ್ರೆ, ಕಾಪು, ಬ್ರಹ್ಮಾವರ, ಸಾಲಿಗ್ರಾಮ, ಕೋಟ, ಕುಂದಾಪುರ ಹೀಗೆ ಅನೇಕ ಪ್ರಮುಖ ನಗರಗಳಲ್ಲಿಯೇ ಹೆದ್ದಾರಿ ಹಾದುಹೋಗುತ್ತದೆ. ಹಾಗಿರುವಾಗ ನಗರಕ್ಕೆ ಹೆದ್ದಾರಿಯಿಂದ ಪ್ರವೇಶವೇ ನೀಡುವುದಿಲ್ಲ ಎಂದರೆ ಅದು ಇಲಾಖೆಗಳ  ಎನಿಸುತ್ತದೆ. ಅಂದಿನ ಸಂಸದರು ಬೇಡಿಕೆ ಇಟ್ಟರು ಎಂದು ನಗರವನ್ನು ಇಬ್ಭಾಗಗೊಳಿಸಿ 300-400 ಕೋ.ರೂ. ಖರ್ಚು ಮಾಡಿ ಫ್ಲೈಓವರ್‌ ನಿರ್ಮಿಸಿದ ಇಲಾಖೆ, ವಿಐಪಿಗಳು ಕೇಳಿದರು ಎಂದು ಬಸ್ರೂರು ಮೂರುಕೈ ಅಂಡರ್‌ಪಾಸ್‌ಗೆ ಮತ್ತೆ ನೂರು ಕೋ.ರೂ. ಖರ್ಚು ಮಾಡಿದೆ.

ಈ ಎರಡು ಪ್ರಕ್ರಿಯೆ ನಡುವೆ ನಗರ ಪ್ರವೇಶಕ್ಕೆ ಅನುಕೂಲ ಮಾಡಿಕೊಡಬೇಕಾದ್ದು ಇಲಾಖೆಯ ಕರ್ತವ್ಯ. ಆದರೆ ಅಂತಹ ಯಾವುದೇ ಪ್ರಸ್ತಾವನೆ ತಯಾರಿಸದ ಎಂಜಿನಿಯರ್‌ಗಳು ಈಗ ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಕುಂದಾಪುರ ನಗರದ 2 ಸಾವಿರದಷ್ಟು ವ್ಯಾಪಾರಿಗಳ ಪಾಲಿಗೆ ಖಳರಾಗಿದ್ದಾರೆ.

ಇದನ್ನೂ ಓದಿ:ಭಾರತೀಯ ಮೂಲದವನ ಮರಣದಂಡನೆಗೆ ತಡೆ ನೀಡಿದ ಸಿಂಗಾಪುರ ನ್ಯಾಯಾಲಯ

Advertisement

ವರದಿ ಸಲ್ಲಿಕೆ
ಪುರಸಭೆ ವತಿಯಿಂದ ಡಿಸಿಗೆ ಮನವಿ ಸಲ್ಲಿಕೆ, ಸಾಮಾಜಿಕ ಜಾಲತಾಣದಲ್ಲಿ ಡಿಸಿಗೆ ಮನವಿ, ಪತ್ರಿಕೆಗಳಲ್ಲಿ ಸತತ ವರದಿ ಬಳಿಕ ಉಡುಪಿ ಜಿಲ್ಲಾಧಿಕಾರಿ ಎಸಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ವರದಿ ನೀಡುವಂತೆ ಸೂಚಿಸಿದ್ದರು. ಅದರಂತೆ ಎಸಿಯವರು ಡಿಸಿಗೆ ವರದಿ ಸಲ್ಲಿಸಿದ್ದಾರೆ. ಇದರಲ್ಲೂ ಹೆದ್ದಾರಿ ಇಲಾಖೆ ವ್ಯತಿರಿಕ್ತ ಅಭಿಪ್ರಾಯ ನೀಡಿದೆ ಎಂಬ ಮಾಹಿತಿ ಇದೆ.

ನೆಹರೂ ಮೈದಾನ ಸಮೀಪ ಏಕಮುಖ ನಿರ್ಬಂಧ ಮೂಲಕ ಹೆದ್ದಾರಿಯಿಂದ ನಗರಕ್ಕೆ ಪ್ರವೇಶಕ್ಕೆ ಎಸಿ ಸಮಿತಿ ಶಿಫಾರಸು ಮಾಡಿದೆ ಎಂಬ ಮಾಹಿತಿ ಇದೆ. ಜತೆಗೆ ಸಾವಿರಾರು ಶಾಲಾ, ಕಾಲೇಜು ಮಕ್ಕಳಿಗೆ ನೆರವಾಗುವಂತೆ ಪಾದಚಾರಿ ಮೇಲ್‌ಸೇತುವೆ ರಚನೆಗೆ ಬೇಡಿಕೆ ಇಟ್ಟಿದೆ ಎನ್ನಲಾಗಿದೆ.

ನಿರ್ಲಕ್ಷ್ಯ
ಅಂಡರ್‌ಪಾಸ್‌ ಹಾಗೂ ಫ್ಲೈಓವರ್‌ ಸೇರುವಲ್ಲಿ ಇಳಿಜಾರು ಇದ್ದು ವಾಹನಗಳು ವೇಗವಾಗಿರುತ್ತವೆ, ಅಪಘಾತಕ್ಕೆ ಕಾರಣವಾಗಬಹುದು ಎನ್ನುವುದು ಹೆದ್ದಾರಿ ಇಲಾಖೆಯ ವಾದ. ಈ ವಾದಕ್ಕೆ ಯಾರೂ ಆಕ್ಷೇಪ ಮಾಡುತ್ತಿಲ್ಲ. ಅಪಘಾತಗಳೇ ಆಗದಂತೆ ನಗರಕ್ಕೆ ಪ್ರವೇಶ ಕಲ್ಪಿಸುವಂತೆ ವಿನ್ಯಾಸ ಮಾಡಿಲ್ಲ ಯಾಕೆ ಎನ್ನುವುದೇ ಪ್ರಶ್ನೆ. ವಿನ್ಯಾಸ ಮಾಡಿದಾಗ ಸ್ಥಳೀಯ ಪುರಸಭೆ, ಜನಪ್ರತಿನಿಧಿಗಳ, ಸಾರ್ವಜನಿಕರ ಗಮನಕ್ಕೆ ತಂದಿಲ್ಲ ಯಾಕೆ ಎನ್ನುವುದು ಪ್ರಶ್ನೆ. ಈಗಲೂ ಅಪಘಾತ ಆಗದಂತೆ ಬದಲಿ ವ್ಯವಸ್ಥೆ ಮಾಡಿಕೊಡಿ ಎನ್ನುವುದಷ್ಟೆ ಬೇಡಿಕೆ. ಇಲಾಖೆ ಯಾವುದಕ್ಕೂ ಸ್ಪಂದಿಸುತ್ತಿಲ್ಲ. ಅಷ್ಟೇ ಅಲ್ಲ ಅನೇಕ ಬಾರಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಹೇಳಿದರೂ ಪರಿಹಾರ ಒದಗಿಸುತ್ತಿಲ್ಲ. ಹಿಂದಿನ ಸಂಸದರು ಹೇಳಿದಾಗ 400 ಕೋ.ರೂ. ಖರ್ಚಿನ ಯೋಜನೆ ಮಾಡಬಹುದಾದರೆ ಈಗ ಖರ್ಚೇ ಇಲ್ಲದ ಜನೋಪಯೋಗಿ ಕಾರ್ಯಕ್ಕೆ ನಿರಾಸಕ್ತಿ ಯೇಕೆ ಎನ್ನುವುದು ಸಾರ್ವಜನಿಕರ ಪ್ರಶ್ನೆ.

ವರದಿ ನೀಡಲಾಗಿದೆ
ಸಾರ್ವಜನಿಕರ ಬೇಡಿಕೆ, ಅಪಘಾತಗಳನ್ನು ತಪ್ಪಿಸಿ ಹೇಗೆ ನಗರಕ್ಕೆ ಅನುಕೂಲ ಮಾಡಿಕೊಡಬಹುದು ಎಂಬ ನಿಟ್ಟಿನಲ್ಲಿ ಡಿಸಿಯವರಿಗೆ ವರದಿ ಸಲ್ಲಿಸಲಾಗಿದೆ. ಮುಂದಿನ ತೀರ್ಮಾನ ಅವರು ಮಾಡಲಿದ್ದಾರೆ. ಏನು ವರದಿ ಕೊಟ್ಟಿದ್ದೇವೆ ಎಂದು ಈ ಸಂದರ್ಭದಲ್ಲಿ ಬಹಿರಂಗ ಮಾಡುವುದು ಸರಿಯಲ್ಲ.
ಕೆ.ರಾಜು, ಸಹಾಯಕ ಕಮಿಷನರ್‌,
ಸಮಿತಿ ಅಧ್ಯಕ್ಷರು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next