ಮಂಗಳೂರು : ಸುಮಾರು 5 ದಶಕಗಳ ಕಾಲ ರಂಗಸ್ಥಳವನ್ನಾವರಿಸಿ ಯಕ್ಷಗಾನ ಕಲಾಪ್ರಕಾರವನ್ನು ಇನ್ನಷ್ಟು ಎತ್ತರಕ್ಕೇರಿಸಿದ ಮಹಾನ್ ಕಲಾವಿದ, ಕನ್ನಡ ಸಾಂಸ್ಕೃತಿಕ ಲೋಕದ ಮಹಾನ್ ಸಾಧಕ ಕುಂಬಳೆ ಸುಂದರ ರಾಯರು ಪಂಚಭೂತಗಳಲ್ಲಿ ಲೀನವಾದರು.
ಬುಧವಾರ ನಿಧನ ಹೊಂದಿದ ಸುಂದರ ರಾವ್ ಅವರ ಅಂತ್ಯಕ್ರಿಯೆಯು ಗುರುವಾರ ಬೆಳಗ್ಗೆ ಮಂಗಳೂರಿನ ನಂದಿಗುಡ್ಡೆ ರುದ್ರಭೂಮಿಯಲ್ಲಿ ಬಂಧುಗಳು, ಅಭಿಮಾನಿಗಳ ಸಮ್ಮುಖದಲ್ಲಿ ನೆರವೇರಿತು.
ಬೆಳಗ್ಗೆ 9.30ಕ್ಕೆ ಪಂಪ್ವೆಲ್ನಲ್ಲಿರುವ ನಿವಾಸದಿಂದ ಅಲಂಕೃತ ವಾಹನದಲ್ಲಿ ಪಾರ್ಥಿವ ಶರೀರವನ್ನು ನಂದಿಗುಡ್ಡೆ ರುದ್ರಭೂಮಿಗೆ ತರಲಾಯಿತು. ಅಲ್ಲಿ ಅಂತಿಮ ನಮನ ಸಲ್ಲಿಸಿದ ಬಳಿಕ ಅಂತ್ಯಸಂಸ್ಕಾರದ ವಿಧಿವಿಧಾನಗಳನ್ನು ನೆರವೇರಿಸಿ ಪುತ್ರರು ಚಿತೆಗೆ ಆಗ್ನಿಸ್ಪರ್ಶಗೈದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ ಮೂಡುಬಿದಿರೆ, ರಾಜ್ಯಸಭಾ ಸದಸ್ಯ ನಾರಾಯಣ್, ಮಾಜಿ ಸಚಿವ ಜೆ. ಕೃಷ್ಣ ಪಾಲೆಮಾರ್, ಸಾಹಿತಿ-ರಂಗಕರ್ಮಿ ಡಾ| ನಾ.ದಾ. ಶೆಟ್ಟಿ, ಕಸಾಪ ಮಾಜಿ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ವಿಶ್ವಹಿಂದೂ ಪರಿಷತ್ ಮುಖಂಡರಾದ ಶರಣ್ ಪಂಪ್ವೆಲ್, ಶಿವಾನಂದ ಮೆಂಡನ್, ಸಂಸ್ಕಾರ ಭಾರತಿಯ ಚಂದ್ರಶೇಖರ ಶೆಟ್ಟಿ, ಮಾಜಿ ಮೇಯರ್ ದಿವಾಕರ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಮನಪಾ ಸದಸ್ಯ ಸುಧೀರ್ ಶೆಟ್ಟಿ ಕಣ್ಣೂರು,ಸಂದೀಪ್ ಗರೋಡಿ, ಬಿಜೆಪಿ ಮುಖಂಡ ಜಗದೀಶ ಅಧಿಕಾರಿ,ದೇವಾಂಗ ಸಮಾಜದ ಅಧ್ಯಕ್ಷ ದುಗೇìಶ್ ಚೆಟ್ಟಿಯಾರ್ ಮೊದಲಾದವರು ಉಪಸ್ಥಿತರಿದ್ದರು.
Related Articles
ಗಣ್ಯರಿಂದ ನುಡಿನಮನ
ರಾಜ್ಯ ಬಿಜೆಪಿ ಅಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ವೇದವ್ಯಾಸ ಕಾಮತ್, ವಿ.ಪ. ಮಾಜಿ ಸದಸ್ಯ ಮೋನಪ್ಪ ಭಂಡಾರಿ ನುಡಿನಮನ ಸಲ್ಲಿಸಿದರು.
ಸುಂದರ ರಾಯರು ವೇಷಧಾರಿ, ಅರ್ಥದಾರಿ, ವಾಗ್ಮಿ, ಸಂಘಟಕ, ರಾಜಕಾರಣಿ ಹೀಗೆ ತನ್ನ ವ್ಯಕ್ತಿತ್ವವನ್ನು ಹಲವು ಆಯಾಮಗಳಲ್ಲಿ ಅಭಿವ್ಯಕ್ತಿಗೊಳಿಸಿ ಸಾರ್ಥಕ್ಯ ಮೆರೆದವರು. ಹಿಂದೂ ವಿಚಾರಧಾರೆಗಳಿಗೆ ಬದ್ಧರಾಗಿದ್ದ ಅವರು ಪಕ್ಷದ ಮೇಲೆ ಅಚಲ ನಿಷ್ಠೆಯನ್ನು ಹೊಂದಿದ್ದರು. ಪಕ್ಷಕ್ಕೆ, ಕಾರ್ಯಕರ್ತರಿಗೆ ಪ್ರೇರಣೆಯಾಗಿದ್ದರು ಎಂದು ನಳಿನ್ ಸ್ಮರಿಸಿದರು.
ಯಕ್ಷಗಾನ ಕ್ಷೇತ್ರದಲ್ಲಿ ಅಪಾರ ಜನಮನ್ನಣೆ ಗಳಿಸಿರುವ ಶ್ರೇಷ್ಠ ಕಲಾವಿದ ಸುಂದರ ರಾವ್ ಅವರು ಶಾಸಕರಾಗಿಯೂ ಕ್ಷೇತ್ರದ ಅಭಿವೃದ್ಧಿಗೆ ಬಹಳಷ್ಟು ಕೊಡುಗೆ ನೀಡಿದ್ದಾರೆ. ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲೂ ತೊಡಗಿಸಿಕೊಂಡು ಸೇವೆ ನೀಡಿದ್ದರು ಎಂದು ಕಾಮತ್ ಹೇಳಿದರು.
ಯಕ್ಷಗಾನ ರಂಗದ ಮೇರುಕಲಾವಿದರಾದ ಸುಂದರ ರಾಯರು ಶಾಸಕರಾಗಿ, ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿ ಅನನ್ಯ ಕೊಡುಗೆ ನೀಡಿದ್ದಾರೆ. ಅಪಾರ ಅಭಿಮಾನಿ ಬಳಗ, ದೊಡ್ಡ ಸ್ನೇಹಿತವರ್ಗವನ್ನು ಹೊಂದಿದ್ದರು. ಅವರ ಆತ್ಮಕ್ಕೆ ಭಗವಂತನು ಚಿರಶಾಂತಿ ಕರುಣಿಸಲಿ ಎಂದು ಭಂಡಾರಿ ಪ್ರಾರ್ಥಿಸಿದರು.