Advertisement

ಈ ಹೆದ್ದಾರಿಯ ಸಂಚಾರವೇ ಒಂದು ಸಾಹಸ : ಶಿರಸಿ-ಕುಮಟಾ ರಾಷ್ಟ್ರೀಯ ಹೆದ್ದಾರಿಯ ಅವ್ಯವಸ್ಥೆ

12:08 PM Sep 14, 2021 | Team Udayavani |

ಕುಮಟಾ : ಕುಮಟಾ – ಶಿರಸಿ ರಾಷ್ಟ್ರೀಯ ಹೆದ್ದಾರಿ 766E ರಸ್ತೆ ಸಂಚಾರ, ಪ್ರಯಾಣಿಕರ ಪಾಲಿಗೆ ಸಂಚಕಾರ ಉಂಟಾಗುವ ಎಲ್ಲಾ ಸಾಧ್ಯತೆಗಳಿದ್ದು, ಬಹುತೇಕ ರಸ್ತೆಯಲ್ಲಿ ಗುಂಡಿಗಳೇ ತುಂಬಿಕೊಂಡಿದೆ. ವಾಹನ ಸವಾರರು ಅನಿವಾರ್ಯತೆಯಿಂದ ಈ ರಸ್ತೆಯಲ್ಲಿ ಪ್ರಯಾಣಿಸಬೇಕಾದ ಪರಿಸ್ಥಿತಿ ಎದುರಾಗಿದೆ.

Advertisement

ಘಟ್ಟದ ಮೇಲಿನ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಕುಮಟಾ-ಶಿರಸಿ ರಸ್ತೆಯಲ್ಲಿನ ಗುಂಡಿಗಳಿಂದಾಗಿ ಲಘು ವಾಹನ ಸಂಚರಿಸದಷ್ಟು ದುಸ್ಥಿತಿ ಎದುರಾಗಿದೆ. ಈ ರಸ್ತೆಯಲ್ಲಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ರಸ್ತೆ ಅಗಲೀಕರಣ ಕಾರಣದಿಂದಾಗಿ ಕಳೆದ ಒಂದು ವರ್ಷಗಳಿಂದೀಚೆಗೆ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಆದರೂ ಈ ರಸ್ತೆಯಲ್ಲಿ ಸಂಚರಿಸುವ ಅನಿವಾರ್ಯತೆ ಎದುರಾಗಿದೆ. ರಾಷ್ಟ್ರೀಯ ಹೆದ್ದಾರಿ 766E ಶಿರಸಿ ಕುಮಟಾ ರಸ್ತೆಯಲ್ಲಿ ಸಾಗುವಾಗ ಕತಗಾಲ ಸಮೀಪದ ಅಳಕೋಡ, ಆನೆಗುಂಡಿ, ಹೊಂಡದಕ್ಕಲ್ ಕ್ರಾಸ್ ಹಾಗೂ ಶಿರಸಿ ತಾಲೂಕು ವ್ಯಾಪ್ತಿಯಲ್ಲಿ ದೇವಿಮನೆ, ಬಂಡಲ ಘಟ್ಟ , ಸಂಪಖಂಡ , ಗದ್ದೆಮನೆ , ಜಾನ್ಮನೆ , ಹೀಪವಳ್ಳಿ ಮುಂತಾದ ಕಡೆಗಳಲ್ಲಿ ಅಪಾಯಕಾರಿ ಹೊಂಡಗಳೇ ಕಾಣುತ್ತದೆ.

ಕತಗಾಲ ಭಾಗದ ಅಳಕೊಡ ಸೇತುವೆ ಮುಂದೆ ರಸ್ತೆಯ ಇಕ್ಕೆಲಗಳಲ್ಲಿ ಕಡಿದಾದ ತಿರುವುಗಳಿದ್ದು, ಭಾರಿ ಗಾತ್ರದ ಹೊಂಡಗಳ ಸರಣಿಯೇ ಕಾಣುತ್ತಿದ್ದು ಸೇತುವೆ ಕೂಡ ಕಿರಿದಾಗಿರುವುದರಿಂದ ವಾಹನ ಸವಾರರು ಹೊಂಡಗಳನ್ನು ತಪ್ಪಿಸಲು ಹೋಗಿ ಅಪಘಾತಕ್ಕೀಡಾಗುವ ಸಾಧ್ಯತೆ ಹೆಚ್ಚಾಗಿದೆ. ಸ್ಥಳೀಯರು ಹೊಂಡಗಳಿಗೆ ಮಣ್ಣನ್ನು ತುಂಬಿ ತೇಪೆ ಹಚ್ಚುತ್ತಿದ್ದರೂ ಸಹ ಮಳೆಯ ರಭಸಕ್ಕೆ ಕೊಚ್ಚಿ ಹೋಗಿ ಇನ್ನಷ್ಟು ದೊಡ್ಡ ಪ್ರಮಾಣದ ಮಣ್ಣಿನ ಗುಂಡಿಯಂತಾಗುತ್ತದೆ. ಜೊತೆಗೆ ಮಳೆಗಾಲದಲ್ಲಿ ರಸ್ತೆಯ ಗುಂಡಿಗಳಲ್ಲಿ ನೀರು ತುಂಬಿರುವುದರಿಂದ ಗುಂಡಿಯ ಆಳ ಅರಿವಾಗದೆ, ವಾಹನದ ಟೈರ್ ಹೊಂಡಕ್ಕೆ ಬಿದ್ದು ಮುಂದೆ ಸಾಗಲಾಗದ ಪರಿಸ್ಥಿತಿಯಿಂದಾಗಿ ವಾಹನ ಚಾಲಕರು ಬೇಸತ್ತು ಹೋಗಿದ್ದಾರೆ. ಇದರಿಂದಾಗಿ ಹಲವಾರು ಅಪಘಾತಗಳು ಈ ಭಾಗದಲ್ಲಿ ಸಂಭವಿಸುತ್ತಿದ್ದು, ತುರ್ತು ಸಂದರ್ಭದಲ್ಲಿ ಆ್ಯಂಬುಲೆನ್ಸ್ ಗೆ ಕರೆ ಮಾಡಲು ನೆಟ್ವರ್ಕ್ ಕೂಡ ಸಿಗದ ಈ ಭಾಗದಲ್ಲಿ ಸಂಚರಿಸುವಾಗ ಕೈಯಲ್ಲಿ ಜೀವ ಹಿಡಿದು ಪ್ರಯಾಣಿಸಬೇಕಾದ ಅನಿವಾರ್ಯತೆ ಇದೆ.

ಇದನ್ನೂ ಓದಿ :ಸಿಂದಗಿ ಬಳಿ ಎರಡು ಲಾರಿಗಳ ನಡುವೆ ಭೀಕರ ಅಪಘಾತ : ನಾಲ್ವರ ಸ್ಥಿತಿ ಗಂಭೀರ

ದೇವಿಮನೆ ಘಟ್ಟದ ರಸ್ತೆಯಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚಾರ ಮಾಡುತ್ತವೆ. ಶಿರಸಿ ಭಾಗದಿಂದ ಕುಮಟಾ, ಭಟ್ಕಳ, ಮಂಗಳೂರು, ಧರ್ಮಸ್ಥಳ ಭಾಗಗಳಿಗೆ ಸಾರಿಗೆ ಬಸ್‌ಗಳು ಸಹ ಇದೇ ಹೆದ್ದಾರಿಯಲ್ಲಿ ಸಂಚರಿಸುತ್ತವೆ. ಅಲ್ಲದೇ ಕರಾವಳಿ ಭಾಗದಿಂದ ಹುಬ್ಬಳ್ಳಿ, ದಾವಣಗೆರೆ, ಬೆಳಗಾವಿ, ಶಿವಮೊಗ್ಗ, ಬೆಂಗಳೂರು ಭಾಗಗಳಿಗೆ ಸಂಚರಿಸಲು ಸಹ ಇದು ಪ್ರಮುಖ ಮಾರ್ಗವಾಗಿದೆ.

Advertisement

ಈ ಹಿಂದೆ ಸಮರ್ಪಕ ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳುವಂತೆ ಆಗ್ರಹಿಸಿ ಪ್ರತಿಭಟನೆ ಕೂಡ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಸ್ಪಂದಿಸಿದ್ದ ಶಾಸಕ ದಿನಕರ ಶೆಟ್ಟಿ ರಸ್ತೆ ದುರಸ್ತಿ ಮಾಡಿಸಿದ್ದರು. ಆದರೆ ಈದೀಗ ರಸ್ತೆ ಮತ್ತದೆ ಹೊಂಡಗಳಿಂದ ಕೂಡಿಕೊಂಡಿವೆ. ವರ್ಷದ ಹಿಂದೆಯೇ ಕುಮಟಾ – ಶಿರಸಿ ರಾಜ್ಯ ಹೆದ್ದಾರಿ 766E ಅನ್ನು ಮೇಲ್ದರ್ಜೆಗೇರಿಸಿ ರಾಷ್ಟ್ರೀಯ ಹೆದ್ದಾರಿಯಾಗಿ ಅಭಿವೃದ್ಧಿ ಪಡಿಸಲು ಯೋಜನೆ ಜಾರಿಗೆ ತರಲಾಗಿದ್ದು ಮುರುಡೇಶ್ವರದ ಆರ್ ಎನ್ ಎಸ್ ಸಂಸ್ಥೆಗೆ ರಸ್ತೆ ಅಗಲೀಕರಣ, ಉನ್ನತೀಕರಣದ ಗುತ್ತಿಗೆ ನೀಡಲಾಗಿತ್ತು. ಆದರೆ ಈವರೆಗೆ ರಸ್ತೆ ಸುಧಾರಣೆಯಾಗದಿರುವುದರಿಂದ ಈಗಿರುವ ರಸ್ತೆಯನ್ನು ಸುಗಮ ಸಂಚಾರದ ದೃಷ್ಟಿಯಿಂದ ದುರಸ್ತಿ ಮಾಡಬೇಕು ಎನ್ನುವುದು ವಾಹನ ಸವಾರರ ಆಗ್ರಹವಾಗಿದೆ.

ಇದನ್ನೂ ಓದಿ :ತಲೆಗೆ ಗುಂಡು ಹೊಡೆದುಕೊಂಡು ಸಾವಿಗೆ ಶರಣಾದ ರಾಷ್ಟ್ರ ಮಟ್ಟದ ಶೂಟರ್

ರಸ್ತೆಯ ಅವ್ಯವಸ್ಥೆಯನ್ನು ನೋಡಿದರೆ ನಮ್ಮ ಆಡಳಿತ ವ್ಯವಸ್ಥೆಯ ಕುರಿತು ಬೇಸರವಾಗುತ್ತದೆ. ಕುಮಟಾದಿಂದ ಶಿರಸಿಗೆ ತಲುಪಲು ಈ ಹಿಂದೆ ಒಂದರಿಂದ ಒಂದುವರೆ ಗಂಟೆ ಬೇಕಾಗಿತ್ತು. ಆದರೆ ಈಗ ರಸ್ತೆ ಗುಂಡಿಗಳಿಂದಾಗಿ ಎರಡರಿಂದ ಎರಡುವರೆ ಗಂಟೆ ಬೇಕಾಗುತ್ತದೆ. ತುರ್ತು ಸಂಧರ್ಭದಲ್ಲಿ ಈ ಬಾಗದ ಜನರ ಪರಿಸ್ಥಿತಿ ತೀರಾ ಕಷ್ಟಕರ. ಜನಸಾಮಾನ್ಯ ಪ್ರತಿಯೊಂದಕ್ಕೂ ತೆರಿಗೆ ಕಟ್ಟಿ, ಕೊನೆಗೆ ತಾನು ಓಡಾಡುವ ವಾಹನಕ್ಕೂ ರಸ್ತೆ ತೆರಿಗೆ ಪಾವತಿಸಿ ಇಂತಹ ರಸ್ತೆಯಲ್ಲಿ ಓಡಾಡಬೇಕಾದ ಅನಿವಾರ್ಯತೆ ಇದೆ, ಇದು ನಮ್ಮ ದೌರ್ಭಾಗ್ಯ.ಇದು ನಮ್ಮ ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿ. ಈ ಕುರಿತು ಸಂಬಂಧಿಸಿದ ಇಲಾಖೆ, ಹಾಗೂ ಜನಪ್ರತಿನಿಧಿಗಳು ಗಮನಹರಿಸಲಿ. ಆದಷ್ಟು ಶೀಘ್ರ ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳಲಿ.
– ರಾಜು ಮಾಸ್ತಿಹಳ್ಳ, ಜಿಲ್ಲಾಧ್ಯಕ್ಷರು,ಕರವೇ ಸ್ವಾಭಿಮಾನಿ ಬಣ.

ಈ ಬಾರಿಯ ಮಳೆಯಿಂದಾಗಿ ಬಹುತೇಕ ಕಡೆ ರಸ್ತೆ ಹಾಳಾಗಿದ್ದು, ಕುಮಟಾ ಶಿರಸಿ ಮಾರ್ಗದ ಕತಗಾಲ ಹಾಗೂ ಇತರೆ ಭಾಗದಲ್ಲಿ ರಸ್ತೆ ದುರಸ್ಥಿ ಕಾರ್ಯ ಅತೀ ಅವಶ್ಯಕವಾಗಿದೆ ಎಂಬುದು ನನ್ನ ಗಮನಕ್ಕೆ ಬಂದಿರುತ್ತದೆ. ಹೀಗಾಗಿ ಸಂಭಂದಪಟ್ಟ ಇಲಾಖೆಗೆ ತಿಳಿಸಿ ತುರ್ತು ದುರಸ್ಥಿ ಕಾರ್ಯ ಕೈಗೊಳ್ಳಲು ಸೂಚಿಸುತ್ತೇನೆ.
– ವಿವೇಕ ಶೇಣ್ವಿ, ತಹಸಿಲ್ದಾರ, ಕುಮಟಾ

Advertisement

Udayavani is now on Telegram. Click here to join our channel and stay updated with the latest news.

Next