ನವದೆಹಲಿ: ಹರ್ಯಾಣ ಶಾಸಕ ಕುಲ್ ದೀಪ್ ಬಿಷ್ಣೋಯಿ ಬುಧವಾರ (ಆಗಸ್ಟ್ 03) ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದು, ಬಹುತೇಕ ಆಡಳಿತಾರೂಢ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಳ್ಳುವ ಸಾಧ್ಯತೆ ಇದ್ದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಸಾಲ ಪಡೆಯಲು ಅಸಲಿ ಎಂದು ನಂಬಿಸಿ ನಕಲಿ ದಾಖಲೆ ಪತ್ರ ಸಲ್ಲಿಕೆ : ದೂರು
ಬಿಷ್ಣೋಯಿ ತಮ್ಮ ರಾಜೀನಾಮೆ ಪತ್ರವನ್ನು ವಿಧಾನಸಭಾ ಸ್ಪೀಕರ್ ಗ್ಯಾನ್ ಚಂದ್ ಗುಪ್ತಾ ಅವರಿಗೆ ಸಲ್ಲಿಸಿದ್ದಾರೆ. ಇಂದಿರಾ ಗಾಂಧಿ, ರಾಜೀವ್ ಗಾಂಧಿ ಕಾಲದಲ್ಲಿ ಇದ್ದಂತೆ ಇನ್ನು ಮುಂದೆ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿರಲು ಸಾಧ್ಯವಿಲ್ಲ ಎಂದು ಬಿಷ್ಣೋಯಿ ಹೇಳಿದರು.
ನಾಲ್ಕು ಬಾರಿ ಶಾಸಕರಾಗಿ, ಎರಡು ಬಾರಿ ಸಂಸದರಾಗಿದ್ದ ಬಿಷ್ಣೋಯಿ ರಾಜೀನಾಮೆಯಿಂದಾಗಿ ಕಾಂಗ್ರೆಸ್ ಪಕ್ಷಕ್ಕೆ ಭಾರೀ ಹಿನ್ನಡೆಯಾದಂತಾಗಿದೆ. ಜೂನ್ ನಲ್ಲಿ ನಡೆದ ರಾಜ್ಯಸಭಾ ಚುನಾವಣೆ ವೇಳೆ ಬಿಷ್ಣೋಯಿ ಅಡ್ಡಮತದಾನ ಮಾಡಿದ್ದು, ಬಳಿಕ ಕಾಂಗ್ರೆಸ್ ಪಕ್ಷ ಬಿಷ್ಣೋಯಿಯನ್ನು ಪಕ್ಷದ ಎಲ್ಲಾ ಹುದ್ದೆಯಿಂದ ವಜಾಗೊಳಿಸಿತ್ತು.
ಕಳೆದ ಕೆಲವು ವಾರಗಳಲ್ಲಿ ಬಿಷ್ಣೋಯಿ ಕೇಂದ್ರ ಸಚಿವ ಅಮಿತ್ ಶಾ, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಹರ್ಯಾಣ ಮುಖ್ಯಮಂತ್ರಿ ಎಂಎಲ್ ಖಟ್ಟರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿರುವುದಾಗಿ ವರದಿ ತಿಳಿಸಿದೆ.