Advertisement

ಹೊಸ ಕಾನೂನು ಸಮರಕ್ಕೆ ತೀರ್ಪು ನಾಂದಿ

11:29 AM May 19, 2017 | |

ಹೇಗ್‌/ಹೊಸದಿಲ್ಲಿ /ಇಸ್ಲಾಮಾಬಾದ್‌: ನೌಕಾಪಡೆ ನಿವೃತ್ತ ಅಧಿಕಾರಿ ಕುಲಭೂಷಣ್‌ ಜಾಧವ್‌ ಪ್ರಕರಣದಲ್ಲಿ ಭಾರತಕ್ಕೇನೋ ದೊಡ್ಡ ಜಯ ಸಿಕ್ಕಿರಬಹುದು. ಆದರೆ ಅಂತಾರಾಷ್ಟ್ರೀಯ  ಕೋರ್ಟ್‌ನ ಆದೇಶವನ್ನು ಪಾಕಿಸ್ಥಾನ ಪಾಲಿಸಲೇಬೇಕು ಎಂದೇನಿಲ್ಲ. 

Advertisement

ಈಗಾಗಲೇ ಇದರ ಮುನ್ಸೂಚನೆ ನೀಡಿರುವ ಪಾಕಿಸ್ಥಾನ ಮುಂದಿನ ದಿನಗಳಲ್ಲಿ ಭಾರತದೊಂದಿಗೆ ರಾಜತಾಂತ್ರಿಕ ಸಮರಕ್ಕೂ ಸಿದ್ಧವಾಗುತ್ತಿದೆ. ಜಾಧವ್‌ಗೆ ವಕೀಲರ ನೆರವು ಕೊಡಿಸುವ ಸಂಬಂಧ 16 ಬಾರಿ ಮನವಿ ಮಾಡಿದರೂ, ಪಾಕಿಸ್ಥಾನ ಒಪ್ಪಿರಲಿಲ್ಲ. ಇದೇ ಅಂಶವನ್ನು ಐಸಿಜೆ ಮುಂದಿಟ್ಟ ಭಾರತ, ಈ ವಿಚಾರದಲ್ಲಿ ಗೆದ್ದಿದೆ ಕೂಡ. ಆದರೆ ಪಾಕಿಸ್ಥಾನ ಕೇವಲ ವ್ಯಾಪ್ತಿಗೆ ಸಂಬಂಧಿಸಿ ವಾದಿಸಿ, 2008ರಲ್ಲಿ ಭಾರತದ ಜತೆ ಮಾಡಿಕೊಂಡ ಒಪ್ಪಂದವನ್ನೇ ಮರೆತಿದೆ. ಈ ಬೆಳವಣಿಗೆಗಳ ಮಧ್ಯೆ, ಜಾಧವ್‌ ಅವರನ್ನು ಶತಪ್ರಯತ್ನ ಮಾಡಿಯಾದರೂ ಸರಿ, ಬಿಡಿಸಿಕೊಂಡು ಬಂದೇ ಬರುತ್ತೇವೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಹೇಳಿದರೆ, ಪಾಕಿಸ್ಥಾನ ಸರಕಾರ, ಭಾರತದ ನಿಜಬಣ್ಣ  ಬಯಲು ಮಾಡುತ್ತೇವೆ ಎಂದು ಮರು ಸವಾಲು ಹಾಕಿದೆ. 

ಆದೇಶ ಧಿಕ್ಕರಿಸಬಹುದೇ?: ಅಂತಾರಾಷ್ಟ್ರೀಯ ನ್ಯಾಯಾಲಯದ ಅದೆಷ್ಟೋ ಆದೇಶಗಳನ್ನು ಬೇರೆ ಬೇರೆ ದೇಶಗಳು ಧಿಕ್ಕರಿಸಿದ್ದಿದೆ. ಇಂಥ ಸಂದರ್ಭಗಳಲ್ಲಿ ನೊಂದ ರಾಷ್ಟ್ರ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮುಂದೆ ಹೋಗಬೇಕು. ಆದರೆ ಭದ್ರತಾ ಮಂಡಳಿ ಇದುವರೆಗೂ ಒಂದೇ ಒಂದು ಪ್ರಕರಣದಲ್ಲಿ ಮಧ್ಯಪ್ರವೇಶ ಮಾಡಿ ವಿವಾದ ಬಗೆಹರಿಸಿಲ್ಲ!

ಆದೇಶ ಹೊರಬಿದ್ದಾಕ್ಷಣ ಭಾರತದಾದ್ಯಂತ ಸಂಭ್ರ ಮಾಚರಣೆ ನಡೆದರೆ, ಪಾಕಿಸ್ಥಾನ ತೀವ್ರ ಮುಜುಗರ ಅನುಭವಿಸಿದೆ. ಅಲ್ಲದೆ ಅಲ್ಲಿನ ವಿದೇಶಾಂಗ ಇಲಾಖೆ ಪತ್ರಿಕಾ ಹೇಳಿಕೆ ಹೊರಡಿಸಿ, ಐಸಿಜೆ ತೀರ್ಪು ಒಪ್ಪಲು ಸಾಧ್ಯವಿಲ್ಲ ಎಂದಿತು. ಜತೆಗೆ ವಿಯೆನ್ನಾ ಒಪ್ಪಂದದಂತೆ ಆಂತರಿಕ ಭದ್ರತೆ ವಿಚಾರದಲ್ಲಿ ಐಸಿಜೆಗೆ ಮಧ್ಯಪ್ರವೇಶ ಮಾಡುವ ಹಕ್ಕಿಲ್ಲ ಎಂದಿತು. ಮುಂದಿನ ದಿನಗಳಲ್ಲಿ ಜಾಧವ್‌ ವಿರುದ್ಧದ ಸಾಕ್ಷ್ಯಗಳನ್ನು ಐಸಿಜೆ ಮುಂದೆ ಪ್ರಬಲವಾಗಿ ಮಂಡಿಸುತ್ತೇವೆ ಎಂದೂ ತಿಳಿಸಿದೆ.

ಪಾಕಿಸ್ಥಾನ ಈ ಮಾತಿನ ಪ್ರಕಾರ, ಐಸಿಜೆ ತೀರ್ಪು ಪಾಲಿಸದೇ ಇರಬಹುದು. ಹಾಗೆಯೇ ಜಾಧವ್‌ರನ್ನು ಗಲ್ಲಿಗೇರಿಸಲೂಬಹುದು. ಹೀಗೆ ಮಾಡಿದರೆ, ಪಾಕಿಸ್ಥಾನಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೆಟ್ಟ ಹೆಸರು ಬರುತ್ತದೆ. ಈ ವಿಚಾರದಲ್ಲಿ ಭಾರತಕ್ಕೆ ನೈತಿಕ ಜಯ ಸಿಕ್ಕಂತಾಗುತ್ತದೆ. ಅಲ್ಲದೆ ಭಾರತ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮುಂದೆ ಹೋದರೂ, ಅಲ್ಲಿ ಪಾಕಿಸ್ಥಾನದ ಮಿತ್ರರಾಷ್ಟ್ರ ಚೀನ ಇರುವುದರಿಂದ ಅಲ್ಲಿ ಸೋಲಾಗಬಹುದು. ಜತೆಗೆ ನಿಕಾರಗುವಾ- ಅಮೆರಿಕ ಪ್ರಕರಣದಲ್ಲಿ ವಿಶ್ವಕೋರ್ಟ್‌, ನಿಕಾರಗುವ ದೇಶದ ಪರ ತೀರ್ಪು ಕೊಟ್ಟಿತ್ತು. ಇದರಿಂದಾಗಿ ಅಮೆರಿಕ ಮುಂದಿನ ವಿಚಾರಣೆಗೆ ವಕೀಲರನ್ನೇ ಕಳುಹಿಸಲಿಲ್ಲ. ಜತೆಗೆ ತೀರ್ಪು ಪಾಲನೆ ಮಾಡಲೂ ಇಲ್ಲ. ನಿಕರಾಗುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮುಂದೆ ಹೋದಾಗಲೂ, ಅಮೆರಿಕ ಬಾಗಿಲಲ್ಲೇ ಈ ಅರ್ಜಿಯನ್ನು ತಡೆದಿತ್ತು. ಇದಷ್ಟೇ ಅಲ್ಲ, ಅಂತಾರಾಷ್ಟ್ರೀಯ ಶಾಂತಿಗಾಗಿ ಮಧ್ಯ ಪ್ರವೇಶ ಮಾಡಬಹುದಾದರೂ, ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಇದುವರೆಗೂ ಅಂಥ ಕೆಲಸವನ್ನೇ ಮಾಡಿಲ್ಲ. 

Advertisement

ವ್ಯಾಪ್ತಿ ವಿಚಾರದಲ್ಲಿ ಪಾಕಿಸ್ಥಾನ ಸೋತದ್ದೆಲ್ಲಿ?: ಕುಲ ಭೂಷಣ್‌ ಜಾಧವ್‌ ಪ್ರಕರಣದಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯ ಮಧ್ಯಪ್ರವೇಶಿಸಲು ಬರುವುದಿಲ್ಲವೆಂಬ ಪಾಕಿಸ್ಥಾನಕ್ಕೆ ಸೋಲಾಗಿದ್ದುದು, 2008ರ ಒಪ್ಪಂದದಿಂದ. ಭಾರತ ಮತ್ತು ಪಾಕಿಸ್ಥಾನ ವಿಯೆನ್ನಾ ಒಪ್ಪಂದದಂತೆ 2008ರಲ್ಲಿ ಪರಸ್ಪರ ದೇಶಗಳಲ್ಲಿ ಸೆರೆ ಸಿಕ್ಕವರಿಗೆ ವಕೀಲರ ನೆರವಿಗೆ ಅವಕಾಶ ನೀಡಬೇಕು ಎಂಬ ಅಂಶವೂ ಇತ್ತು. ಭಾರತ ಇದೇ ಅಂಶವನ್ನು ಇಟ್ಟುಕೊಂಡು ಐಸಿಜೆ ಮುಂದೆ ವಾದ ಮಾಡಿತ್ತು. ಅಂತಾರಾಷ್ಟ್ರೀಯ ನ್ಯಾಯಲಯ ಕೂಡ, ಪಾಕಿಸ್ಥಾನ ವ್ಯಾಪ್ತಿ ವಿಚಾರ ಪ್ರಸ್ತಾವಿಸಿ, 2008ರಲ್ಲಿ ಭಾರತ ಹಾಗೂ ಪಾಕಿಸ್ಥಾನ ಮಾಡಿಕೊಂಡ ಒಪ್ಪಂದವನ್ನು ನೆನಪಿಸಿತು. ಇದರ ಪ್ರಕಾರ ಮೇಲ್ನೋಟಕ್ಕೆ ಐಸಿಜೆ ಈ ಪ್ರಕರಣದ ವಿಚಾರಣೆ ನಡೆಸಬಹುದಾಗಿದೆ ಎಂದು ಹೇಳಿತು. 

ನಾವು ತಪ್ಪು ಮಾಡಿದೆವು ಎಂದ ಪಾಕಿಸ್ಥಾನ ಮಾಧ್ಯಮಗಳು
ಜಾಧವ್‌ ಪ್ರಕರಣದಲ್ಲಿ ಮುಜುಗರಕ್ಕೀಡಾದ ಪಾಕಿಸ್ಥಾನ ಸರಕಾರದ ವಿರುದ್ದ ಅಲ್ಲಿನ ಮಾಧ್ಯಮಗಳು ತಿರುಗಿಬಿದ್ದಿವೆ. ನಾವು ತಪ್ಪು ಮಾಡಿಬಿಟ್ಟೆವು ಎಂದು ಮಾಧ್ಯಮಗಳು ವರದಿ ಮಾಡುತ್ತಿವೆ. ಐಸಿಜೆಯಲ್ಲಿ ಪಾಕಿಸ್ಥಾನ ಸರಿಯಾಗಿ ವಾದ ಮಾಡಲಿಲ್ಲವೆಂಬುದು ಅವುಗಳ ಆರೋಪ. ವಾದ ಮಂಡನೆಗೆ 90 ನಿಮಿಷ ಕೊಟ್ಟಿದ್ದರೂ, ಪಾಕಿಸ್ಥಾನ ಕೇವಲ 40 ನಿಮಿಷ ಗಳಲ್ಲಿ ವಾದ ಮುಗಿಸಿದೆ. ಹೀಗಾಗಿ ಅಟಾರ್ನಿ ಜನರಲ್‌ ಸರಿಯಾಗಿ ಸಿದ್ಧತೆ ಮಾಡಿಕೊಂಡು ಹೋಗಿಲ್ಲ ಎಂದು ಕೆಲವು ವಕೀಲರೇ ಆಕ್ಷೇಪಿಸಿದ್ದಾರೆ. ಅಲ್ಲದೆ ಪಾಕಿಸ್ಥಾನ ಐಸಿಜೆಯ ವಿಚಾರಣೆಗೆ ಹಾಜರಾಗಲೇಬಾರದಿತ್ತು ಎಂದು ಕೆಲವು ನಿವೃತ್ತ ನ್ಯಾಯಾಧೀಶರು ಸರಕಾರಕ್ಕೆ ಸಲಹೆ ನೀಡಿದ್ದಾರೆ.

ತೀರ್ಪು ಕೊಟ್ಟ ನ್ಯಾಯಮೂರ್ತಿಗಳಲ್ಲಿ ಒಬ್ಬರು ಭಾರತದವರು
ಜಾಧವ್‌ ಪ್ರಕರಣದ ತೀರ್ಪು ಕೊಟ್ಟದ್ದು ರೋನಿ ಅಬ್ರಾಹಂ ನೇತೃತ್ವದ 11 ನ್ಯಾಯಮೂರ್ತಿಗಳಿದ್ದ ಪೀಠ. ಅಚ್ಚರಿಯೆಂದರೆ ಎಲ್ಲ 11 ನ್ಯಾಯಮೂರ್ತಿಗಳೂ ಗಲ್ಲುಶಿಕ್ಷೆಗೆ ತಡೆ ನೀಡುವ ಬಗ್ಗೆ ಸಮ್ಮತಿಸಿದ್ದಾರೆ. ಪೀಠದಲ್ಲಿ ಒಬ್ಬರು ಚೀನ ನ್ಯಾಯಮೂರ್ತಿಯೂ ಇದ್ದರು ಎಂಬುದು ವಿಶೇಷ. ಅಲ್ಲದೆ ಪೀಠದಲ್ಲಿ ಭಾರತದಿಂದಲೂ ಒಬ್ಬರು ನ್ಯಾಯಮೂರ್ತಿ ಇದ್ದರು. ಸುಪ್ರೀಂಕೋರ್ಟ್‌ನ ಹಿರಿಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದ ನ್ಯಾ| ದಲ್ವಿàರ್‌ ಭಂಡಾರಿ ಅವರೂ ಇದ್ದಾರೆ. ಇವರು ಪ್ರತ್ಯೇಕವಾಗಿಯೇ ತೀರ್ಪು ನೀಡಿದ್ದು, ಗಲ್ಲು ಶಿಕ್ಷೆಗೆ ತಡೆ ಕೊಟ್ಟಿದ್ದು, ವಕೀಲರ ಸಂಪರ್ಕಕ್ಕೆ ಆದೇಶಿಸಿದ್ದು, ಪ್ರಕರಣದ ವ್ಯಾಪ್ತಿ ಕುರಿತಂತೆ ಪ್ರಸ್ತಾವಿಸಿದ್ದಾರೆ. 

ಒಂದು ರೂಪಾಯಿಯ 
ವಕೀಲ ಸಾಳ್ವೆಗೆ ಶ್ಲಾಘನೆ

ಐಸಿಜೆಯಲ್ಲಿ ಭಾರತ ಗೆಲ್ಲುತ್ತಿದ್ದಂತೆ ಭಾರೀ ಪ್ರಶಂಸೆಗೆ ಪಾತ್ರರಾದವರು ಹಿರಿಯ ವಕೀಲ ಹರೀಶ್‌ ಸಾಳ್ವೆ ಅವರು. ಸೋಮವಾರ 11 ನ್ಯಾಯಮೂರ್ತಿಗಳ ಮುಂದೆ ಪ್ರಬಲವಾಗಿ ವಾದ ಮಂಡಿಸಿದ್ದ ಅವರು, ವಕೀಲರ ತಂಡದ ನಾಯಕತ್ವವನ್ನೂ ವಹಿಸಿಕೊಂಡಿದ್ದರು. ಅಲ್ಲದೆ ಯಾವ ರೀತಿ ವಾದ ಮಂಡಿಸಬೇಕು, ಯಾವ ಅಂಶಗಳಿರಬೇಕು ಎಂಬುದನ್ನು ಸಮಗ್ರವಾಗಿ ರೂಪಿಸಿಕೊಂಡಿದ್ದ ಅವರು, ತಮಗೆ ಕೊಟ್ಟಿದ್ದ 90 ನಿಮಿಷವನ್ನೂ ಸಂಪೂರ್ಣವಾಗಿ ಬಳಸಿಕೊಂಡು ಪಾಕಿಸ್ಥಾನದ ಬಣ್ಣ ಬಯಲು ಮಾಡಿದ್ದರು. ಸೋಮವಾರದ ವಿಚಾರಣೆ ಅನಂತರ, ಈ ಪ್ರಮಾಣದ ದೊಡ್ಡ ವಕೀಲರನ್ನು ನೇಮಕ ಮಾಡಬೇಕಿತ್ತೇ ಎಂಬ ಆಕ್ಷೇಪಗಳೂ ಕೇಳಿಬಂದಿದ್ದವು. ಇದಕ್ಕೆ ಉತ್ತರಿಸಿದ್ದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರು, ಕೇವಲ 1 ರೂ. ಪಡೆದಿರುವ ಬಗ್ಗೆ ಮಾಹಿತಿ ನೀಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next