Advertisement

ಅನಾಥ ಶವದ ಅಂತ್ಯ ಸಂಸ್ಕಾರ ಮಾಡಿ ಮಾನವೀಯತೆ ಮೆರೆದ ಪೊಲೀಸ್ ಸಿಬ್ಬಂದಿ

09:03 PM Jan 12, 2023 | Team Udayavani |

ಕುಳಗೇರಿ ಕ್ರಾಸ್: ನಮ್ಮ ಕರ್ನಾಟಕ ಪೊಲೀಸರು ತಮ್ಮ ಕರ್ತವ್ಯದ ಜೊತೆಗೆ ಮಾನವೀಯ ಕಾರ್ಯಗಳನ್ನ ಮಾಡುತ್ತ ಜನ-ಮನ ಗೆಲ್ಲುತ್ತಾರೆ. ಇದಕ್ಕೆ ಸಾಕ್ಷಿ ಎಂಬಂತೆ ಇಂದು ಗ್ರಾಮದಲ್ಲಿ ನಡೆದ ಈ ಘಟನೆಯೇ ನಿದರ್ಶನ. ಗ್ರಾಮದ ಪೊಲೀಸ್ ಠಾಣೆಯ ಸಿಬ್ಬಂದಿ ಅನಾಥ ಶವಕ್ಕೆ ತಾವೇ ಮುಂದೆ ನಿಂತು ಗ್ರಾಪಂ ಹಾಗೂ ಸಾರ್ವಜನಿಕರ ಸಹಾಯದಿಂದ ಅಂತ್ಯ ಸಂಸ್ಕಾರ ನೆರವೇರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

Advertisement

ಗ್ರಾಮದ ರಾಷ್ಟ್ರೀಯ ಹೆದ್ದಾರಿ 218ರ ಪಕ್ಕ ಹೊರವಲಯದಲ್ಲಿ ಸುಮಾರು 50 ರಿಂದ 55 ವರ್ಷದ ಮಹಿಳೆ ಶವ ಪತ್ತೆಯಾಗಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸ್ ಸಿಬ್ಬಂದಿ ಕುಟುಂಬಸ್ಥರ ಬಗ್ಗೆ ವಿಚಾರಿಸಿದಾಗ ಮೃತ ಮಹಿಳೆ ಅನಾಥ ಎಂದು ತಿಳಿದು ಬಂದಿದೆ. ನಂತರ ತಾಲೂಕು ಆರೋಗ್ಯ ಅಧಿಕಾರಿ ಮಲ್ಲಿಕಾರ್ಜುನ ಪಾಟೀಲ ಶವಕ್ಕೆ ಮರಣೋತ್ತರ ಪರೀಕ್ಷೆ ನಡೆಸಿದರು.

ಬಳಿಕ ಪೊಲೀಸ್-ಗ್ರಾಪಂ ಸಿಬ್ಬಂದಿ ಹಾಗೂ ಸಾರ್ವಜನಿಕರು ಸೇರಿ ಧಾಮಿಕ ವಿಧಿ-ವಿಧಾನಗಳಿಂದ ಅನಾಥ ಶವದ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ. ಸದ್ಯ ಪೊಲಿಸ್ ಸಿಬ್ಬಂದಿಯ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಎಎಸ್‌ಐ ಬಿ ಎನ್ ರಾಯಚೂರ, ಪೊಲೀಸ್ ಸಿಬ್ಬಂದಿ ಎಚ್ ಎಸ್ ಮಸಳಿ, ಆರ್ ಎಸ್ ಬಿರಾದಾರ, ಜಿ ಎಸ್ ಹೊಸಮನಿ, ಆರ್ ಎಂ ಮರೆನ್ನವರ ಪಿಡಿಒ ಎಸ್ ಜಿ ಪರಸನ್ನವರ, ಗ್ರಾಪಂ ಸದಸ್ಯ ಹನಮಂತ ನರಗುಂದ, ನಿವೃತ್ತ ಸೈನಿಕ ಸುರೇಶ ಲೋಕಾಪೂರ, ಗಣೇಶ, ರಂಗಪ್ಪ, ರಿಂದಪ್ಪ, ಅಶೋಕ, ನಿಂಗನಗೌಡ, ದುರ್ಗಪ್ಪ ಸೇರಿದಂತೆ ಗ್ರಾಮಸ್ಥರು ಇದ್ದರು.

ಅಪರಿಚಿತ ಮಹಿಳೆಯ ಶವ ಪತ್ತೆ: ಮಾನಸೀಕ ಅಸ್ವಸ್ಥಳಾಗಿ ಅಲೆಯುತ್ತಿದ್ದ ಮಹಿಳೆಯು ಇಂದು ಬೆಳಿಗ್ಗೆ ಮೃತಪಟ್ಟ ಘಟನೆ ಕುಳಗೇರಿ ಕ್ರಾಸ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. ಯಾವುದೋ ಕಾಯಿಲೆಯಿಂದ ಬಳಲುತ್ತಿದ್ದಳು ಎನ್ನಲಾದ ಈ ಮಹಿಳೆ ಮುಳ್ಳುಕಂಠಿ ಪಕ್ಕ ಮಲಗಿದ್ದಲ್ಲೇ ಮೃತಪಟ್ಟಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಬಾದಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ಧಾಖಲಾಗಿದ್ದು ಬಾದಾಮಿ ಸಿಪಿಐ ಗುರುಶಾಂತ ದಾಶಾಳ, ಪಿಎಸ್‌ಐ ನೇತ್ರಾವತಿ ಪಾಟಿಲ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.

ಸದರಿ ಮಹಿಳೆಯ ವಾರಸುದಾರರು ಪತ್ತೆ ಆದಲ್ಲಿ 08357-220133 ಹಾಗೂ 9480803949 ಈ ದೂರವಾಣಿಗೆ ಸಂರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

ಇದನ್ನೂ ಓದಿ: ಇಬ್ಬರು ಹೆಣ್ಣು ಮಕ್ಕಳೊಂದಿಗೆ ಕಾಲುವೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ತಾಯಿ: ಒಂದು ಮಗುವಿನ ರಕ್ಷಣೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next