Advertisement

ಕುಕ್ಕೇಡಿ ಪಟಾಕಿ ತಯಾರಿ ಘಟಕ ಸ್ಫೋಟ ಪ್ರಕರಣ: ಡಿಐಜಿ ರವಿ ಚೆನ್ನಣ್ಣನವರ್‌ ಸ್ಥಳಕ್ಕೆ ಭೇಟಿ

11:51 PM Jan 29, 2024 | Team Udayavani |

ಬೆಳ್ತಂಗಡಿ: ವೇಣೂರು ಪೊಲೀಸ್‌ ಠಾಣೆ ವ್ಯಾಪ್ತಿಯ ಕುಕ್ಕೇಡಿ ಗ್ರಾ.ಪಂ. ವ್ಯಾಪ್ತಿಯ ಗೋಳಿಯಂಗಡಿ ಕಡ್ತ್ಯಾರು ಎಂಬಲ್ಲಿರುವ ಸುಡುಮದ್ದು ತಯಾರಿ ಘಟಕ “ಸಾಲಿಡ್‌ ಫೈರ್‌ ವರ್ಕ್ಸ್’ನಲ್ಲಿ ರವಿವಾರ ಸಂಜೆ ಸಂಭ ವಿಸಿದ ಸ್ಫೋಟದ ಹಿನ್ನೆಲೆಯಲ್ಲಿ ರಾಜ್ಯ ಅಗ್ನಿಶಾಮಕ ದಳ ಮತ್ತು ತುರ್ತು ಸೇವೆಗಳ ಡಿಐಜಿ ರವಿ ಡಿ. ಚೆನ್ನಣ್ಣನವರ್‌ ಸೋಮವಾರ ಹಿರಿಯ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಸಮಗ್ರ ಮಾಹಿತಿ ಕಲೆಹಾಕಿದ್ದಾರೆ.

Advertisement

ಸ್ಫೋಟದಿಂದ ದೇಹ ಛಿದ್ರಗೊಂಡಿದ್ದ ಕೇರಳದ ತೃಶ್ಶೂರ್‌ ನಿವಾಸಿ ವರ್ಗೀಸ್‌ (69), ಹಾಸನದ ಅನ್ನನಾಯ್ಕನಹಳ್ಳಿ ಚೇತನ್‌ ಎ.ಯು. (27) ಹಾಗೂ ಅರೆಜೀವಾವಸ್ಥೆಯಲ್ಲಿದ್ದ ಪಾಲಕ್ಕಾಡ್‌ನ‌ ಕೈರಾಡಿ ಕುರುಂಬೂರು ನಿವಾಸಿ ಸ್ವಾಮಿ ಯಾನೆ ನಾರಾಯಣ ಕೆ. (56) ಮೃತಪಟ್ಟಿದ್ದರು.

ಮಗನ ಸಾವಿನ ಮಾಹಿತಿ
ಚೇತನ್‌ 5 ವರ್ಷಗಳಿಂದ ಹಾಸನ ದಲ್ಲಿ ಪಟಾಕಿ ತಯಾರಿ ಘಟಕದಲ್ಲಿ ಕೆಲಸ ಮಾಡುತ್ತಿದ್ದು, 12 ದಿನಗಳ ಹಿಂದೆಯಷ್ಟೇ ಕಡ್ತ್ಯಾರು ಘಟಕಕ್ಕೆ ಸೇರಿದ್ದರು. ರವಿವಾರ ಬೆಳಗ್ಗೆ ಮನೆಗೆ ಕರೆಮಾಡಿ ಮಾತನಾಡಿದ್ದರು. ಆದರೆ ಊರಿನವರು ಘಟನೆಯ ವಿಷಯ ಟಿವಿ ಮೂಲಕ ತಿಳಿದು ಚೇತನ್‌ ತಂದೆ ಉಮೇಶ್‌ ಅವರನ್ನು ಸೋಮವಾರ ಬೆಳಗ್ಗೆ ಸ್ಥಳಕ್ಕೆ ಕರೆತಂದಿದ್ದರು. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲು ತ್ತಿರುವ ಅವರಿಗೆ ಮಗನ ಸಾವಿನ ಸುದ್ದಿ ಆಗಲೇ ತಿಳಿದದ್ದು.

ಡಿಎನ್‌ಎ ಪರೀಕ್ಷೆ ನಡೆಸಿ
ಮೃತದೇಹ ಹಸ್ತಾಂತರ
ಶವದ ಭಾಗಗಳು 70 ಮೀಟರ್‌ನಷ್ಟು ವ್ಯಾಪ್ತಿಯಲ್ಲಿ ಚದುರಿಬಿದ್ದಿದ್ದು, ರವಿವಾರ ಹಾಗೂ ಸೋಮವಾರ ಮುಂಜಾನೆಯವರೆಗೆ ಪೊಲೀಸರು ಇಬ್ಬರ ಮೃತದೇಹದ ಭಾಗಗಳಿಗೆ ಶೋಧ ನಡೆಸಲಾಯಿತು. ಶವಗಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದ ಸ್ವಾಮಿ ಯಾನೆ ನಾರಾಯಣ ಕೆ. ಅವರ ದೇಹವನ್ನು ಮನೆಯವರಿಗೆ ನೀಡಲಾಗಿದೆ. ವರ್ಗೀಸ್‌ ಮತ್ತು ಚೇತನ್‌ ಶವಗಳು ಛಿದ್ರಗೊಂಡು ಯಾರದೆಂದು ಗುರುತು ಸಿಗದ ಹಿನ್ನೆಲೆಯಲ್ಲಿ ಡಿಎನ್‌ಎ ಪರೀಕ್ಷೆ ನಡೆಸಿ 3-4 ದಿನಗಳಲ್ಲಿ ಮನೆಯವರಿಗೆ ಹಸ್ತಾಂತರಿಸುವ ಸಾಧ್ಯತೆಯಿದೆ.

ಘಟನೆಯ ಸಾಧ್ಯಾಸಾಧ್ಯತೆ
ಪಟಾಕಿ ಘಟದ ಮಾಲಕ ಸೈಯ್ಯದ್‌ ಬಶೀರ್‌ 33 ಸೆಂಟ್ಸ್‌ ಸ್ಥಳದಲ್ಲಿ ಸುಡು ಮದ್ದು ತಯಾರಿಕೆಗೆ ಅಧಿಕೃತ ಪರವಾ ನಿಗೆ ಪಡೆದಿದ್ದರು. ಜಾಗದಲ್ಲಿ ಅಡಿಕೆ ತೋಟವಿದ್ದು, ಗೋದಾಮು ಮತ್ತು ಜಮೀನು ಕೊನೆಯಲ್ಲಿ ತಯಾರಿ ಘಟಕವಿತ್ತು. ಮಾಲಕರು ಅಧಿಕೃತವಾಗಿ 15 ಕೆ.ಜಿ.ಯಷ್ಟು ಸಾಮರ್ಥ್ಯಕ್ಕೆ ಲೈಸನ್ಸ್‌ ಹೊಂದಿದ್ದು, ಜಾತ್ರೆ ಸಹಿತ ದೊಡ್ಡ ದೊಡ್ಡ ಸಮಾರಂಭಗಳಿಗೆ ಅವರ ತಂದೆಯ ಕಾಲದಿಂದ ಸುಡುಮದ್ದು ತಯಾರಿಸಿ ಕೊಡುತ್ತಿದ್ದರು. ರವಿವಾರ ಮೈಸೂರು ಸೇರಿದಂತೆ ವಿವಿಧೆಡೆ ಜಾತ್ರೆಗಾಗಿ ಪಟಾಕಿ ಸಿದ್ಧಪಡಿಸುತ್ತಿದ್ದರು ಎನ್ನಲಾಗಿದೆ.

Advertisement

ಆದರೆ ಸ್ಥಳದಲ್ಲಿ ಮುಂಜಾಗ್ರತೆ ವಹಿಸದೆ 100 ಕೆ.ಜಿ.ಗಿಂತ ಅಧಿಕ ಪ್ರಮಾಣದಲ್ಲಿ ಗನ್‌ಪೌಡರ್‌ ದಾಸ್ತಾನು ಇಟ್ಟದ್ದೇ ಘಟನೆಗೆ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ.

85 ಸ್ಯಾಂಪಲ್‌ ಪಡೆದ ತಂಡ
ಮಂಗಳೂರು ಪ್ರಾದೇಶಿಕ ವಿಧಿವಿಜ್ಞಾನ ಪ್ರಯೋಗಾಲಯದ ಹಿರಿಯ ವೈಜ್ಞಾನಿಕ ಅಧಿಕಾರಿ ಡಾ| ಗಿರೀಶ್‌ ಕೆ.ಎಸ್‌. ಮತ್ತು ತಂಡ 85ಕ್ಕೂ ಅಧಿಕ ಸ್ಯಾಂಪಲ್‌ಗ‌ಳನ್ನು ಕಲೆಹಾಕಿದೆ. ಗೋದಾಮಿನಲ್ಲಿ ಕಚ್ಚಾ ಪಟಾಕಿ ಕಂಡು ಬಂದಿದೆ. ಚಾರ್ಕೋಲ್‌, ಗಂಧಕ, ಅಲ್ಯುಮಿನಿಯಂ ಪೌಡರ್‌ ಸಹಿತ ಪಟಾಕಿ ತಯಾರಿಕೆಗೆ ಬೇಕಾಗುವ 10ಕ್ಕೂ ಅಧಿಕ ಸೊತ್ತುಗಳು ಲಭಿಸಿವೆ.

ದ.ಕ. ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್‌, ರಾಜ್ಯ ಅಗ್ನಿಶಾಮಕದಳ ಮತ್ತು ತುರ್ತು ಸೇವೆಗಳ ಉಪನಿರ್ದೇಶಕ (ಆಡಳಿತ) ಜಿ. ತಿಪ್ಪೇಸ್ವಾಮಿ, ಮುಖ್ಯ ಅಗ್ನಿಶಾಮಕಾಧಿಕಾರಿ ತಿರುಮಲೇಶ್‌, ಪ್ರಾದೇಶಿಕ ಅಗ್ನಿಶಾಮಕಾಧಿಕಾರಿ ರಂಗನಾಥ್‌, ಜಿಲ್ಲಾ ಅಗ್ನಿಶಾಮಕಾಧಿಕಾರಿ ಭರತ್‌ ಉಪಸ್ಥಿತರಿದ್ದರು.

ಹಲವು ಇಲಾಖೆಗಳಿಂದ
ತನಿಖೆ: ಗುಂಡೂರಾವ್‌
ಮಂಗಳೂರು: ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಕೇಂದ್ರ, ರಾಜ್ಯದ ಹಲವು ಇಲಾಖೆಗಳು ತನಿಖೆ ನಡೆಸುತ್ತಿವೆ. ಎಲ್ಲ ಇಲಾಖೆಗಳ ವರದಿ ಬಂದ ಬಳಿಕ ಸ್ಫೋಟದ ಕಾರಣ ತಿಳಿಯಬಹುದು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಅವರು ತಿಳಿಸಿದ್ದಾರೆ.

ಮಾಲಕನ ಬಂಧನ
ವೇಣೂರು ಪೊಲೀಸ್‌ ಠಾಣೆಯಲ್ಲಿ ಸಾಲಿಡ್‌ ಫೈರ್‌ ವಕ್ಸ್‌Õì ಮಾಲಕ ವೇಣೂರಿನ ಸೈಯದ್‌ ಬಶೀರ್‌ ಮೇಲೆ ದೂರು ದಾಖಲಿಸಲಾಗಿತ್ತು. ರವಿವಾರವೇ ಪರಾರಿಯಾಗುತ್ತಿದ್ದ ಬಶೀರ್‌ನನ್ನು ಖಚಿತ ಮಾಹಿತಿ ಮೇರೆಗೆ ಕಲ್ಲಗುಂಡಿ ಸಮೀಪ ಸುಳ್ಯ ಪೊಲೀಸ್‌ ಠಾಣೆಯ ಉಪನಿರೀಕ್ಷಕ ಈರಯ್ಯ ದೂಂತೂರು ನೇತೃತ್ವದ ತಂಡ ಬಂಧಿಸಿ ಹೆಚ್ಚಿನ ವಿಚಾರಣೆಗೆ ವೇಣೂರು ಠಾಣೆಗೆ ಒಪ್ಪಿಸಿತ್ತು. ಘಟಕದಲ್ಲಿ ಸುಡುಮದ್ದು ತಯಾರಿಸುತ್ತಿದ್ದ ಮತ್ತೋರ್ವ ಕಿರಣ್‌ ಎಂಬಾತನನ್ನು ವಶಕ್ಕೆ ಪಡೆದು ದ.ಕ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಿಷ್ಯಂತ್‌ ಸಿ.ಬಿ. ನೇತೃತ್ವದ ತಂಡ ತನಿಖೆ ಮುಂದುವರಿಸಿದೆ.

ಜಿಲೆಟಿನ್‌ ರೂಪದ ಕುರುಹುಗಳಿಲ್ಲ
ಮೇಲ್ನೋಟಕ್ಕೆ ಗನ್‌ಪೌಡರ್‌ ರೂಪದ ಅನೇಕ ಕಚ್ಚಾ ವಸ್ತುಗಳು ಕಂಡುಬಂದಿದ್ದು, ಜಿಲೆಟಿನ್‌ ಸಂಬಂಧಿಸಿದಂತೆ ವಿಧಿವಿಜ್ಞಾನ ತಂಡಕ್ಕೆ ಯಾವುದೇ ಕುರುಹು ಪತ್ತೆಯಾಗಿರುವುದಿಲ್ಲ. ಪಟಾಕಿ ತೀವ್ರತೆ ಉಂಟು ಮಾಡಲು ಪೊಟ್ಯಾಶಿಯಂ ಕ್ಲೋರೈಟ್‌, ಪೊಟ್ಯಾಶಿಯಂ ನೈಟ್ರೈಟ್‌ ನಂತಹ ವಸ್ತುಗಳ ಬಳಸಿರುವ ಸಾಧ್ಯತೆಯಿದ್ದು, ಪಟಾಕಿ ಲೋಡ್‌ ಮಾಡುವ ವೇಳೆ ಒತ್ತಡ ಉಂಟಾಗಿ ಸ್ಫೋಟಿಸಿರುವ ಸಾಧ್ಯತೆಯಿದೆ. ಅಥವಾ ಸ್ಥಳದಲ್ಲಿ ಸಿಗರ್‌ಲೈಟ್‌ ರೀತಿಯ ವಸ್ತು ಬಳಕೆಯಿಂದ ಬೆಂಕಿ ಹತ್ತಿರುವ ಸಾಧ್ಯತೆಯೂ ಮೂಡಿದೆ. ಇವೆಲ್ಲದಕ್ಕೂ ನಿಖರ ಕಾರಣ ಏನೆಂಬುದು ಈಗಾಗಲೆ ವಿಧಿವಿಜ್ಞಾನ ಪ್ರಯೋಗಾಲಯ ಸಂಗ್ರಹಿಸಿರುವ ಸ್ಯಾಂಪಲ್‌ನ ವರದಿ ಇನ್ನಷ್ಟೇ ಬರಬೇಕಿದೆ.

ಫೈರ್‌ ಸೇಫ್ಟಿ ಬಳಕೆಯಾಗಿಲ್ಲ
ಪಟಾಕಿ ಗೋದಾಮಿಗೆ ಅನುಮತಿಯಿರುವುದರಿಂದ ವಾರದ ಹಿಂದಷ್ಟೆ ವೇಣೂರು ಪೊಲೀಸ್‌ ಠಾಣೆ ಅಧಿಕಾರಿಗಳು ಸ್ಥಳ ಮಹಜರು ನಡೆಸಿದ್ದರಂತೆ. ಆದರೆ ಇಲ್ಲಿ ಫೈರ್‌ ಆ್ಯಂಡ್‌ ಸೇಫ್ಟಿಯ ಯಾವುದೇ ಮುಂದಾಲೋಚನೆ ನಡೆಸಿಲ್ಲ. ಗೋದಾಮು ಕನಿಷ್ಠ ಅರ್ಧ ಮೀಟರ್‌ ದಪ್ಪದ ಗೋಡೆ ಸಹಿತ ಸ್ವಾಲಿಡ್‌ ಮೆಟೀರಿಯಲ್‌ನಿಂದ ನಿರ್ಮಿಸಿರಬೇಕು. ಆದರೆ ಇಲ್ಲಿ ಸಾಮಾನ್ಯ ಕಲ್ಲು ಹಾಗೂ ಸಿಮೆಂಟ್‌ ಶೀಟ್‌ನಿಂದ ನಿರ್ಮಿಸಲಾಗಿದೆ. ಹಾಗಾಗಿ ನಿಯಮ ಗಾಳಿಗೆ ತೂರಿರುವುದು ಸ್ಪಷ್ಟವಾಗಿ ಕಂಡುಬರುತ್ತಿದೆ. ಜತೆಗೆ ಕಾರ್ಮಿಕರಲ್ಲಿ ವರ್ಗೀಸ್‌ ಹೊರತುಪಡಿಸಿದರೆ ಪರಿಣತರು ಇರಲಿಲ್ಲ. ಈ ವಿಚಾರವಾಗಿ ಡಿಐಜಿ ರವಿ ಡಿ. ಚೆನ್ನಣ್ಣನವರ್‌ ಅರ್ಧ ತಾಸಿಗೂ ಅಧಿಕ ಕಾಲ ಸಂಪೂರ್ಣ ಮಾಹಿತಿ ಕಲೆ ಹಾಕಿದರು.

ಘಟನೆ ನಡೆದ ಸ್ಥಳ ಪರಿಶೀಲಿಸಿದ್ದೇನೆ. ಈಗಾಗಲೆ ದಕ್ಷಿಣ ಕನ್ನಡ ಎಸ್‌ಪಿ ವರಿಷ್ಠಾಧಿಕಾರಿ ಸಹಿತ ವಿಶೇಷ ತಂಡ ತನಿಖೆ ನಡೆಸುತ್ತಿದೆ. ಯಾವುದೇ ಸುರಕ್ಷತೆ ಇಲ್ಲದೇ ಸುಡುಮದ್ದು ತಯಾರಿಸುವ ಘಟಕಕ್ಕೆ ಅನುಮತಿ ನಿರಾಕರಿಸುವಂತೆ ಹಾಗೂ ಬೇರೆ ಕಡೆ ಇರುವ ಘಟಕದ ಕುರಿತು ಮುನ್ನೆಚ್ಚರಿಕೆ ವಹಿಸಲು ಕ್ರಮ ಕೈಗೊಳ್ಳಲಾಗುವುದು.
– ರವಿ ಡಿ.ಚೆನ್ನಣ್ಣನವರ್‌, ಡಿಐಜಿ, ರಾಜ್ಯ ಅಗ್ನಿಶಾಮಕದಳ, ಮತ್ತು ತುರ್ತು ಸೇವೆ

Advertisement

Udayavani is now on Telegram. Click here to join our channel and stay updated with the latest news.

Next