ಸುಬ್ರಹ್ಮಣ್ಯ: ಆಚಾರ- ವಿಚಾರ ಉದ್ಧರಿಸುವ ಮೂಲಕ ಪ್ರಚಂಡ ಆಂದೋಲನವನ್ನು ವಿಶ್ವಾದ್ಯಂತ ಸಾರಿದ ದಾರ್ಶನಿಕ ವ್ಯಕ್ತಿ ಸ್ವಾಮಿ ವಿವೇಕಾನಂದರು ಓರ್ವ ಶ್ರೇಷ್ಠ ವ್ಯಕ್ತಿ. ಅವರ ಪ್ರಭಾವ ದೇಶ ಮಾತ್ರವಲ್ಲ, ವಿಶ್ವವ್ಯಾಪಿ ಪಸರಿಸಿದೆ. ಅತ್ಯಂತ ಪ್ರಭಾವೀ ಮತ್ತು ಪ್ರಭಾವಶಾಲಿ ತತ್ತ್ವಜ್ಞಾನಿಗಳಲ್ಲಿ ಅವರು ಒಬ್ಬರು ಎಂದು ಯುವ ಬ್ರಿಗೇಡ್ ರಾಜ್ಯ ಸಹಸಂಚಾಲಕ ಸಂತೋಷ್ ಸಾಮ್ರಾಟ್ ಅವರು ಹೇಳಿದರು.
ಯುವ ಬ್ರಿಗೇಡ್, ಸೋದರಿ ನಿವೇದಿತಾ ಪ್ರತಿಷ್ಠಾನ ಹಮ್ಮಿಕೊಂಡ ಸ್ವಾಮಿ ವಿವೇಕಾನಂದ ಅವರ ಶಿಕಾಗೋ ಭಾಷಣದ 125ನೇ ವರ್ಷದ ದಿಗ್ವಿಜಯ ರಥಯಾತ್ರೆ ಶನಿವಾರ ಸುಬ್ರಹ್ಮಣ್ಯಕ್ಕೆ ಆಗಮಿಸಿತು. ಈ ವೇಳೆ ನಗರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು. ಸ್ವಾಮಿ ವಿವೇಕಾನಂದ ಅವರ ತತ್ತ್ವಾದರ್ಶಗಳು ಅನುಕರಣೀಯ. ಅವರು ಶಿಕಾಗೋ ಸಮ್ಮೇಳನದಲ್ಲಿ ಮಾಡಿದ ಭಾಷಣ ವಿಶ್ವವನ್ನೆ ಬೆರಗುಗೊಳಿಸಿದೆ ಎಂದರು.
ಅವರ ಶಿಕಾಗೋ ಭಾಷಣದ 125ನೇ ವರ್ಷಾಚರಣೆ ಪ್ರಯುಕ್ತ ಅವರ ಸಂದೇಶಗಳನ್ನು ಸಾರುತ್ತ ಈ ಯಾತ್ರೆ ರಾಜ್ಯಾದ್ಯಂತ ಸಂಚರಿಸುತ್ತಿದೆ ಎಂದು ತಿಳಿಸಿದರು. ಹಾಸನದಿಂದ ಸುಬ್ರಹ್ಮಣ್ಯಕ್ಕೆ ಆಗಮಿಸಿದ ರಥಕ್ಕೆ ಸುಬ್ರಹ್ಮಣ್ಯ ಮುಖ್ಯ ಪೇಟೆಯಲ್ಲಿ ಭವ್ಯ ಸ್ವಾಗತ ಕೋರಲಾಯಿತು. ಬಳಿಕ ರಥಯಲ್ಲಿ ಸ್ವಾಮಿ ವಿವೇಕಾನಂದ ಹಾಗೂ ಸಹೋದರಿ ನಿವೇದಿತಾ ಭಾವಚಿತ್ರಕ್ಕೆ ಪುಷ್ಟಾರ್ಚನೆ ನಡೆಸಲಾಯಿತು. ಯುವ ಬ್ರಿಗೇಡ್ ಕಾರ್ಯದರ್ಶಿ ಧರ್ಮ, ಯುವ ಬ್ರಿಗೇಡ್ನ ಶ್ರೀಮಾಣಿ, ಪ್ರವೀಣ್, ಪ್ರಮೋದ್, ಚಂದ್ರಶೇಖರ ಹಾಗೂ ಬಿಜೆಪಿ ಯುವ ಮುಖಂಡ ಶ್ರೀಕುಮಾರ್, ವಿವಿಧ ಹಿಂದೂ ಸಂಘಟನೆಗಳ ಪ್ರಮುಖರು ಉಪಸ್ಥಿತರಿದ್ದರು.
ನಾಳೆ ಸುಳ್ಯಕ್ಕೆ
ಹಾಸನ-ಸಕಲೇಶಪುರ ಮಾರ್ಗವಾಗಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದ ರಥಯಾತ್ರೆ ಇಲ್ಲಿ ತಂಗಿದ ಬಳಿಕ ಸೋಮವಾರ ಸುಳ್ಯದ ಕಡೆಗೆ ಪ್ರಯಾಣ ಬೆಳೆಸಲಿದೆ. ಸುಳ್ಯದಲ್ಲಿ ದಿಗ್ವಿಜಯ ರಥಯಾತ್ರೆ ಪ್ರಯುಕ್ತ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.