Advertisement

ಕುಕ್ಕೆ ಸುಬ್ರಹ್ಮಣ್ಯ ಚಂಪಾಷಷ್ಠಿಗೆ ಸಕಲ ಸಿದ್ಧತೆ  

11:46 AM Dec 10, 2018 | |

ಸುಬ್ರಹ್ಮಣ್ಯ: ಭಕ್ತರ ಆರಾಧ್ಯ ದೇವರು ಕುಕ್ಕೆ ಶ್ರೀ ಸುಬ್ರಹ್ಮಣ್ಯನ ಜಾತ್ರೆಗೆ ದಿನಗಣನೆ ಆರಂಭವಾಗಿದೆ. ಡಿ. 12 ಮತ್ತು 13ರಂದು ನಡೆಯುವ ಚಂಪಾಷಷ್ಠಿ ಜಾತ್ರೆಗೆ ವಿಶೇಷ ರಂಗು ತುಂಬಲು ಸಕಲ ತಯಾರಿ ನಡೆದಿದೆ. ಕ್ಷೇತ್ರದ ಪರಿಸರವನ್ನು ಶುಚಿಗೊಳಿಸುವ ಕಾರ್ಯ ನಡೆಸಲಾಗಿದೆ. ದೇವಸ್ಥಾನ ಹಾಗೂ ಕ್ಷೇತ್ರದ ಕಟ್ಟಡಗಳಿಗೆ ಬಣ್ಣ ಬಳಿಯಲಾಗಿದೆ. ಎತ್ತ ನೋಡಿದರತ್ತ ಜಾತ್ರೆ ಸಂಭ್ರಮ ಕಣ್ತುಂಬಿಕೊಳ್ಳುತ್ತಿದೆ. ದೇವಸ್ಥಾನ, ನಗರದ ಕಟ್ಟಡಗಳು ಅಂಗಡಿ ಮುಂಗಟ್ಟುಗಳು ವಿದ್ಯುತ್‌ ದೀಪಗಳಿಂದ ಅಲಂಕೃತಗೊಂಡಿದೆ.

Advertisement

ಮಡೆಸ್ನಾನ ಪ್ರಾರಂಭ
ಕ್ಷೇತ್ರದಲ್ಲಿ ಬೀದಿ ಮಡೆಸ್ನಾನ ಸೇವೆ ಆರಂಭ ಗೊಂಡಿದೆ. ಕುಮಾರಧಾರಾ- ಕಾಶಿಕಟ್ಟೆ ತನಕ ರಸ್ತೆ ವಿಸ್ತರಣೆ ಕಾಮಗಾರಿ ನಡೆದಿದೆ. ಬೀದಿ ಮಡೆಸ್ನಾನ ನಡೆಸುವ ಭಕ್ತರಿಗೆ ಇದು ಅನುಕೂಲವಾಗಿದೆ. ಈ ಮಾರ್ಗದಲ್ಲಿ ಕುಮಾರಧಾರಾ, ಕುಲ್ಕುಂದ ತನಕ ವಿದ್ಯುದ್ದೀಪಗಳನ್ನು ಅಳವಡಿಸಲಾಗಿದೆ. ಎಚ್ಚರಿಕೆ ನಾಮಫಲಕವನ್ನೂ ರಸ್ತೆ ಬದಿ ಅಳವಡಿಸಲಾಗಿದೆ.

ಪಂಚಮಿ ದಿನ ಹಾಗೂ ಅವಭೃಥ ದಿನಗಳಲ್ಲಿ ಮಧ್ಯಾಹ್ನ ಮತ್ತು ರಾತ್ರಿ ಭಕ್ತರಿಗೆ ಅನ್ನಪ್ರಸಾದ ನೀಡಲಾಗುತ್ತದೆ. ಭೋಜನಕ್ಕೆ ದೇಗುಲದ ಭೋಜನ ಶಾಲೆ, ಅಂಗಡಿಗುಡ್ಡೆಯಲ್ಲಿ ವಿಶಾಲ ಚಪ್ಪರ ವ್ಯವಸ್ಥೆ ಇರಲಿದೆ. ಸ್ವಯಂ ಸೇವಕರಿಗೆ, ಕರ್ತವ್ಯಕ್ಕೆ ಬರುವ ಸಿಬಂದಿಗೆ, ವಿದ್ಯಾರ್ಥಿಗಳಿಗೆ ಆದಿಸುಬ್ರಹ್ಮಣ್ಯದ ಸರ್ಪಸಂಸ್ಕಾರ ಸೇವಾರ್ಥಿ ಭೋಜನ ಶಾಲೆಯಲ್ಲಿ ಉಪಹಾರ ವ್ಯವಸ್ಥೆ ಇದೆ. ನೀರಿನ ವ್ಯವಸ್ಥೆ, ನೈರ್ಮಲ್ಯ ಕಾಪಾಡಿಕೊಳ್ಳಲು ಸೂಚಿಸಲಾಗಿದೆ. 

ಜಾತ್ರೆ ಸಮಯ ಒತ್ತಡ ನಿಯಂತ್ರಣಕ್ಕೆ ಪ್ರವೇಶ ಗೋಪುರ, ಹೊರಾಂಗಣ, ಆದಿ ಸುಬ್ರಹ್ಮಣ್ಯ ಭೋಜನಶಾಲೆ ಮೊದಲಾದ ಕಡೆಗಳಲ್ಲಿ ಸ್ವಯಂ ಸೇವಕರು ಕಾರ್ಯ ನಿರ್ವಹಿಸಲಿದ್ದಾರೆ. ಜಾತ್ರೆ ಸಂದರ್ಭ ನಿರಂತರ ವಿದ್ಯುತ್‌ ಸರಬರಾಜು, ಶ್ರೀ ದೇವರ ದರ್ಶನಕ್ಕೆ ಬರುವ ವಿಶೇಷ ಗಣ್ಯರಿಗೆ ದರ್ಶನ, ವಸತಿ ವ್ಯವಸ್ಥೆ ಮಾಡಲಾಗಿದೆ. ಹರಕೆ ಬಲಿವಾಡುಗಳನ್ನು ಜಮಾ ಉಗ್ರಾಣದಲ್ಲಿ ಸ್ವೀಕರಿಸಲು ಆಶ್ಲೇಷಾ ಬಲಿ ವಸತಿಗೃಹ ಮಾಹಿತಿ ವಿಭಾಗ, ದಾಸ್ತಾನು ಇರಿಸಲು ಪಕ್ಕದ ಕೊಠಡಿಯಲ್ಲಿ ವ್ಯವಸ್ಥೆ ಮಾಡಲಾಗಿದೆ.

ಕುಡಿಯುವ ನೀರಿನ ವ್ಯವಸ್ಥೆ
ಕಾಶಿಕಟ್ಟೆ, ಬಿಲದ್ವಾರ, ಜೂನಿಯರ್‌ ಕಾಲೇಜು, ಕುಮಾರಧಾರ, ವಾಸುಕಿ ಛತ್ರ ಮುಂಭಾಗ, ಆದಿ ಸುಬ್ರಹ್ಮಣ್ಯ ಹೊರಾಂಗಣದಲ್ಲಿ ಗಾಂಗೇಯ ಛತ್ರದ ಪಕ್ಕ, ರಕ್ತೇಶ್ವರಿ ಗುಡಿ ಪಕ್ಕ, ಇಂಡಿಯನ್‌ ಓವರ್‌ ಸೀಸ್‌ ಬ್ಯಾಂಕು, ಕೆಎಸ್‌ಆರ್‌ಟಿಸಿ ಬಿಸ್‌ ನಿಲುಗಡೆ, ಬಿಲದ್ವಾರ ಎದುರು, ಅರಣ್ಯ ಇಲಾಖೆ ಕಚೇರಿ ಬಳಿ, ಪಾರ್ಕಿಂಗ್‌ ಸ್ಥಳಗಳಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇದೆ. ಹೊಟೇಲುಗಳಲ್ಲಿ ಬಿಸಿ ನೀರು ನೀಡುವಂತೆ ಆರೋಗ್ಯ ಇಲಾಖೆ ಸೂಚಿಸಿದೆ.

Advertisement

ಪೊಲೀಸರಿಂದಲೂ ಸಕಲ ಸಿದ್ಧತೆ
ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್‌ ಸಿಬಂದಿ, ಗೃಹರಕ್ಷಕದಳ ಸಿಬಂದಿಯವರನ್ನು ನಿಯೋಜಿಸಲು ಕ್ರಮ ವಹಿಸಲಾಗಿದೆ. ದೇಗುಲದ ಒಳಾಂಗಣ, ಹೊರಾಂಗಣ, ಸ್ನಾನಘಟ್ಟ, ಭೋಜನ ಶಾಲೆ ಆದಿಸುಬ್ರಹ್ಮಣ್ಯ, ರಥಬೀದಿ, ಪಾರ್ಕಿಂಗ್‌ ಸ್ಥಳ ಮೊದಲಾದ ಕಡೆಗಳಲ್ಲಿ ಘರ್ಷಣೆ, ಕಳ್ಳತನ, ಅಹಿತಕರ ಘಟನೆ ನಡೆಯದಂತೆ ಪೊಲೀಸ್‌ ಇಲಾಖೆ ಸಿದ್ಧತೆ ನಡೆಸಿಕೊಂಡಿದೆ. ಹೆಚ್ಚುವರಿ ಗೃಹರಕ್ಷಕ ದಳ ಸಿಬಂದಿ ಸಹಕಾರ ಪಡೆಯಲಾಗಿದೆ. ಪಾರ್ಕಿಂಗ್‌ ಸ್ಥಳಗಳು, ರಥಬೀದಿ ಹಾಗೂ ಇತರ ಕಡೆಗಳಲ್ಲಿ ಸಿಸಿಟಿವಿ ಅಳವಡಿಕೆ, ಬ್ರಹ್ಮರಥ ಎಳೆಯುವ ವೇಳೆ ನೂಕುನುಗ್ಗಲು ನಿಯಂತ್ರಿಸಲು ರಥಬೀದಿಯ ಎರಡು ಬದಿ ಮಾರ್ಕಿಂಗ್‌, ಬ್ಯಾರಿಕೇಡ್‌ ಅಳವಡಿಕೆ, ಐಒಬಿ, ಜಂಕ್ಷನ್‌, ಕಾಶಿಕಟ್ಟೆ ಮೊದಲಾದ ಕಡೆಗಳಲ್ಲಿ ಎಲ್‌ಇಡಿ ಸ್ಕ್ರೀನ್‌ ಅಳವಡಿಸಲಾಗುತ್ತದೆ. 

ಸುವ್ಯವಸ್ಥಿತ ಪಾರ್ಕಿಂಗ್‌
ಪುತ್ತೂರು ಗುಂಡ್ಯ ಹಾಗೂ ಉಪ್ಪಿನಂಗಡಿ ಕಡೆಯಿಂದ ಬರುವ ಖಾಸಗಿ ವಾಹನಗಳಿಗೆ ಪದವಿಪೂರ್ವ ಕಾಲೇಜು, ಎಸ್‌ಎಸ್‌ಪಿಯು ಕಾಲೇಜು ಮೈದಾನ, ಬಸ್‌ಗಳಿಗೆ ಬಿಲದ್ವಾರ ಎದುರಿನ ಪಾರ್ಕಿಂಗ್‌ನಲ್ಲಿ ನಿಲುಗಡೆ. ಹರಕೆ ರಥೋತ್ಸವ, ಸೇವಾರ್ಥಿಗಳು, ವಿವಿಧ ಇಲಾಖೆ ವಾಹನಗಳಿಗೆ ವಿವಿಐಪಿಗಳ ವಾಹನಗಳಿಗೆ ಅರಣ್ಯ ಇಲಾಖೆ ಕಚೇರಿ ಹಿಂಭಾಗದಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿದೆ. ಸುಳ್ಯ ಕಡೆಯಿಂದ ಬರುವ ಸರಕಾರಿ ಹಾಗೂ ಖಾಸಗಿ ಬಸ್ಸುಗಳಿಗೆ ಸವಾರಿ ಮಂಟಪ ಬಳಿಯ ಪಾರ್ಕಿಂಗ್‌ ಸ್ಥಳ, ಇತರೆ ವಾಹನಗಳಿಗೆ ಕನ್ನಡಿ ಹೊಳೆ ಸೇತುವೆ ಬಳಿ ಪಾರ್ಕಿಂಗ್‌ಗೆ ವ್ಯವಸ್ಥೆಗೊಳಿಸಲಾಗಿದೆ. ದ್ವಿಚಕ್ರ ವಾಹನಗಳಿಗೆ ಪೊಲೀಸ್‌ ಗ್ರೌಂಡ್‌, ಲಘು ವಾಹನಗಳಿಗೆ ವಲ್ಲೀಶ ಸಭಾಭವನ ಪಕ್ಕದ ಖಾಲಿ ಸ್ಥಳ, ಹೆಲಿಪ್ಯಾಡ್‌ ಸ್ಥಳದಲ್ಲಿ ನಾಲ್ಕು ಚಕ್ರಗಳ ವಾಹನ ನಿಲುಗಡೆ. ಈ ಕಡೆಗಳಲ್ಲಿ ಬೆಳಕಿನ ವ್ಯವಸ್ಥೆ ಮಾಡಲಾಗಿದೆ. ಕೆಎಸ್‌ ಆರ್‌ಟಿಸಿ ಹಾಗೂ ಖಾಸಗಿ ಬಸ್ಸಿನವರು ಮಾರ್ಗ ಬದಿಯಲ್ಲಿ ಪ್ರಯಾಣಿಕರನ್ನು ಇಳಿಸುವುದು ಮತ್ತು ಹತ್ತಿಸುವುದಕ್ಕೆ ಅವಕಾಶವಿಲ್ಲ.

ವಿಶೇಷ ತಪಾಸಣ ತಂಡ
ಶುಚಿತ್ವಕ್ಕೆ ಹೆಚ್ಚಿನ ಒತ್ತು ನೀಡುವ ನಿಟ್ಟಿನಲ್ಲಿ ಹೆಚ್ಚುವರಿ ತಾತ್ಕಾಲಿಕ ಶೌಚಾಲಯ ನಿರ್ಮಾಣ, ಸುಬ್ರಹ್ಮಣ್ಯ ಆಸುಪಾಸಿನಲ್ಲಿ ಚೌತಿ, ಪಂಚಮಿ, ಷಷ್ಠಿ ಈ ಮೂರು ದಿನ ಮದ್ಯ ನಿಷೇಧಿಸಿ ಮದ್ಯದಂಗಡಿ, ಬಾರ್‌ ಮುಚ್ಚುವುದು. ಮಾಂಸ ಮಾರಾಟ, ಪ್ಲಾಸ್ಟಿಕ್‌ ಬಳಕೆ, ತಂಬಾಕು ಪದಾರ್ಥಗಳ ನಿಷೇ ಧಿಸುವುದು. ಇದಕ್ಕಾಗಿಯೇ ವಿಶೇಷ ತಪಾಸಣ ತಂಡ ರಚಿಸಲಾಗಿದೆ. ಲಗೇಜ್‌ ಕೊಠಡಿ, ಧ್ವನಿವರ್ಧಕ, ಪಾರ್ಕಿಂಗ್‌, ಡ್ರೆಸ್ಸಿಂಗ್‌, ಬೆಳಕು, ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ. ಕೃಷಿಮೇಳ, ವಿಶೇಷ ಬಸ್‌ ವ್ಯವಸ್ಥೆ ಮಾಡಲಾಗಿದೆ.

ಅಲ್ಲಲ್ಲಿ ಸಿಸಿ
ಕೆಮರಾ ಅಳವಡಿಕೆ ಕಾನೂನು ಸುವ್ಯವಸ್ಥೆ ಕುರಿತು ಹೆಚ್ಚಿನ ನಿಗಾ ಇಡಲಾಗಿದೆ. ಅಹಿತಕರ ನಡೆಯದಂತೆ ಹೆಚ್ಚುವರಿ ಸಿಬಂದಿ, ಗೃಹರಕ್ಷಕ ದಳ ಹಾಗೂ ಸಿಸಿ ಟಿವಿ ಕೆಮರಾ ಅಳವಡಿಸಲಾಗಿದೆ. ಸೋಮವಾರ ಸಂಜೆ ವೇಳೆಗೆ ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದ ಬಹತೇಕ ಕಾರ್ಯ ಪೂರ್ಣವಾಗುತ್ತದೆ.
-ಗೋಪಾಲ ಪಿಎಸ್‌ಐ,
ಸುಬ್ರಹ್ಮಣ್ಯ ಪೊಲೀಸ್‌ ಠಾಣೆ 

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next