Advertisement

ಕುಕ್ಕೆ: ಸುಬ್ರಹ್ಮಣ್ಯಕ್ಕೆ ಕ್ಷೇತ್ರದಲ್ಲಿ ಸಡಗರದ ಲಕ್ಷದೀಪೋತ್ಸವ

12:31 PM Dec 08, 2018 | Team Udayavani |

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವರ ಲಕ್ಷದೀಪೋತ್ಸವವು ಭಕ್ತಿ-ಸಡಗರದಿಂದ ಗುರುವಾರ ರಾತ್ರಿ ನೆರವೇರಿತು. ಚಂದ್ರಮಂಡಲ ರಥದಲ್ಲಿ ಸುಬ್ರಹ್ಮಣ್ಯ ದೇವರ ಉತ್ಸವ ನಡೆಯಿತು. ರಥಬೀದಿಯಿಂದ ಕಾಶಿಕಟ್ಟೆ ತನಕ ಬೆಳಗಿದ ಲಕ್ಷ ಹಣತೆ ದೀಪದ ನಡುವೆ ಉತ್ಸವ ನೆರವೇರಿತು. ಈ ಮೂಲಕ ಶ್ರೀದೇವರ ರಥ ಬೀದಿ ಉತ್ಸವ ಆರಂಭವಾಯಿತು.

Advertisement

ಹೊರಾಂಗಣದ ಸುತ್ತ ಹಣತೆಗಳ ಸಾಲಿನ ದೀಪಾಲಂಕಾರದ ಜತೆಗೆ, ವಿದ್ಯುತ್‌ ಅಲಂಕಾರದಿಂದ ದೇವಸ್ಥಾನ ವಿಶೇಷವಾಗಿ ಕಂಗೊಳಿಸುತ್ತಿತ್ತು. ರಥಬೀ ದಿಯಿಂದ ಕಾಶಿಕಟ್ಟೆವರೆಗೆ ಬೆಳಗಿದ ಹಣತೆಗಳು ಲಕ್ಷದೀಪೋತ್ಸವಕ್ಕೆ ಮೆರುಗು ನೀಡಿದವು. ಸಹಸ್ರಾರು ಭಕ್ತರು ಚಂದ್ರಮಂಡಲ ರಥದಲ್ಲಿ ಉತ್ಸವ ವೀಕ್ಷಿಸಿ ಶ್ರೀ ದೇವರ ದರುಶನ ಪಡೆದು ಕೃತಾರ್ಥರಾದರು.

ಲಕ್ಷ ದೀಪೋತ್ಸವದ ಸಂದರ್ಭ ಈ ಬಾರಿ ಕ್ಷೇತ್ರದ ಇತಿಹಾಸ ದಲ್ಲಿ ಪ್ರಥಮ ಬಾರಿಗೆ ಲಕ್ಷಕ್ಕೂ ಮಿಕ್ಕಿದ ಹಣತೆಗಳನ್ನು ಹಚ್ಚಲಾಯಿತು. ಸಂಜೆ ಆದಿ ಸುಬ್ರಹ್ಮಣ್ಯದಲ್ಲಿ ದೀಪಾಲಂಕೃತ ರಂಗಪೂಜೆ ನಡೆಯಿತು. ಆ ಬಳಿಕ ಪ್ರಧಾನ ದೇವಾಲಯದಲ್ಲಿ 16 ಮಡಿಕೆಗಳಲ್ಲಿ ಮಣ್ಣು ಮತ್ತು ಮರಳನ್ನು ಮಿಶ್ರಮಾಡಿ ಅದರಲ್ಲಿ ನವಧಾನ್ಯಗಳನ್ನು ಬಿತ್ತುವ ಅಂಕುರಾರ್ಪಣೆ ನೆರವೇರಿತು.

ಮಹಾಪೂಜೆ ಬಳಿಕ ಶ್ರೀ ದೇವರ ಹೊರಾಂಗಣ ಉತ್ಸವ ಆರಂಭವಾಯಿತು. ಪ್ರಥಮವಾಗಿ ಕಾಚುಕುಜುಂಬ ದೈವವು ಶ್ರೀ ದೇವರನ್ನು ಭೇಟಿಯಾಗಿ ನುಡಿಗಟ್ಟು ನಡೆಯಿತು.ಬಳಿಕ ದೈವದ ನರ್ತನ ಸೇವೆ, ಶ್ರೀ ದೇವರ ಶೇಷವಾಹನಯುಕ್ತ ಬಂಡಿ ಉತ್ಸವ, ಪಾಲಕಿ ಉತ್ಸವ ನೆರವೇರಿತು. ಬಳಿಕ ಚಂದ್ರಮಂಡಲ ರಥದಲ್ಲಿ ಶ್ರೀ ದೇವರ ಉತ್ಸವವು ಕಾಶಿಕಟ್ಟೆ ತನಕ ನಡೆಯಿತು. ಕಾಶಿಕಟ್ಟೆ ಮಹಾಗಣಪತಿ ಸನ್ನಿಧಾನದಲ್ಲಿ ಶ್ರೀದೇವರ ಗುರ್ಜಿ ಪೂಜೋತ್ಸವ ನೆರವೇರಿತು. ಕಾಶಿಕಟ್ಟೆ ಮಹಾಗಣಪತಿಗೆ ದೀಪಾರಾಧನೆಯುಕ್ತ ರಂಗಪೂಜೆ ನೆರವೇರಿತು. ಈ ಸಂದರ್ಭ ಶ್ರೀಕ್ಷೇತ್ರ ದೈವ ಹೊಸಳಿಗಮ್ಮನ ದೈವದರ್ಶನ ಮತ್ತು ನರ್ತನ ಸೇವೆ ಜರುಗಿತು.

ಮಡೆಸ್ನಾನ ಆರಂಭ
ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಚಂಪಾಷಷ್ಠಿ ವೇಳೆ ಭಕ್ತರು ನಡೆಸುವ ಪ್ರಮುಖ ಬೀದಿಮಡಸ್ನಾನ ಸೇವೆ ಶುಕ್ರವಾರದಿಂದ ಆರಂಭಗೊಂಡಿದೆ. ಶುಕ್ರವಾರ ಹಲವು ಭಕ್ತರು ಬೀದಿ ಮಡೆಸ್ನಾನ ನೆರವೇರಿಸಿದರು. ಗುರುವಾರ ರಾತ್ರಿ ಲಕ್ಷದೀಪೋತ್ಸವದ ಶ್ರೀದೇವರ ಚಂದ್ರಮಂಡಲ ರಥೋತ್ಸವ ನೆರವೇರಿದ ಬಳಿಕ ಸುಬ್ರಹ್ಮಣ್ಯ ದೇವರಿಗೆ ಅತ್ಯಂತ ಪ್ರಿಯವಾದ ಬೀದಿ ಮಡೆಸ್ನಾನ ಸೇವೆ ನಡೆಯುತ್ತದೆ. ಚಂಪಾಷಷ್ಠಿ ಮಹಾರಥೋತ್ಸವದ ತನಕ ಅಸಂಖ್ಯಾಕ ಭಕ್ತರು ಈ ಸೇವೆಯನ್ನು ನೆರವೇರಿಸುತ್ತಾರೆ. ಚರ್ಮರೋಗ ನಿವಾರಣೆ ಆಗುತ್ತದೆ ಎಂಬ ನಂಬಿಕೆ ಕ್ಷೇತ್ರದ ಭಕ್ತರದು. ಕುಮಾರಧಾರೆಯಿಂದ ದೇಗುಲದ ತನಕ 2.ಕಿ.ಮೀ ದೂರ ರಸ್ತೆಯಲ್ಲಿ ನಡೆಸುವ ಕಠಿನ ಸೇವೆ ಇದಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next