Advertisement

ಹೊಸ ಕಟ್ಟಡ ಕಾಮಗಾರಿಗೆ ವೇಗ: ಎಂಟು ತಿಂಗಳೊಳಗೆ ಪೂರ್ಣ

08:13 PM Oct 06, 2021 | Team Udayavani |

ಮಹಾನಗರ: ಕೊಡಿಯಾಲಬೈಲ್‌ನ ಕುದ್ಮಲ್ ರಂಗರಾವ್‌ ಹೆಣ್ಮಕ್ಕಳ ವಸತಿ ನಿಲಯ ಹೊಸ ಕಟ್ಟಡ ಕಾಮಗಾರಿಗೆ ವೇಗ ನೀಡಲಾಗಿದ್ದು, ಇನ್ನೇನೂ ಎಂಟು ತಿಂಗಳೊಳಗೆ ಪೂರ್ಣಗೊಳಿಸುವ ಇರಾದೆ ಯನ್ನು ಸಮಾಜ ಕಲ್ಯಾಣ ಇಲಾಖೆ ಹೊಂದಿದೆ.

Advertisement

ನೂತನ ಕಟ್ಟಡ ನಿರ್ಮಾಣಕ್ಕೆ ಎಪ್ರಿಲ್‌ ತಿಂಗಳಿನಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗಿದ್ದು, 8 ಕೋ.ರೂ. ವೆಚ್ಚದಲ್ಲಿ ನೂತನವಾಗಿ ವಸತಿ ನಿಲಯ ನಿರ್ಮಾಣವಾಗಲಿದೆ. ಶಂಕುಸ್ಥಾಪನೆ ನೆರವೇರಿಸಿದಾಗಿನಿಂದಲೇ ಕಾಮಗಾರಿಗೆ ವೇಗ ನೀಡಲಾಗಿದೆ. ಪರಿಶಿಷ್ಟ ಜಾತಿ, ಪಂಗಡಕ್ಕೆ ಸೇರಿದ ದೂರದ ಊರಿನ ವಿದ್ಯಾರ್ಥಿನಿಯರಿಗೆ ವಸತಿ, ಊಟದ ವ್ಯವಸ್ಥೆಯನ್ನು ಉಚಿತವಾಗಿ ಕಲ್ಪಿಸುವ ನಿಟ್ಟಿನಲ್ಲಿ ಮೂವತ್ತು ವರ್ಷಗಳ ಹಿಂದೆ ಸ್ಥಾಪನೆಗೊಂಡಿದ್ದ ವಸತಿ ನಿಲಯ ಶಿಥಿಲಾವಸ್ಥೆಯಿಂದ ಕೂಡಿತ್ತು. ಇದೀಗ ಹೊಸ ವಸತಿ ನಿಲಯ ನಿರ್ಮಾಣಕ್ಕೆ ಹಣ ಮಂಜೂರಾಗಿ ಹಳೆ ಕಟ್ಟಡವನ್ನು ಕೆಡವಿ ಅದೇ ಜಾಗದಲ್ಲಿ ಹೊಸ ಕಟ್ಟಡ ನಿರ್ಮಾಣವಾಗುತ್ತಿದೆ.

ಅಧಿಕಾರಿಗಳು ಹೇಳುವ ಪ್ರಕಾರ ಮುಂದಿನ ವರ್ಷ ಜೂನ್‌ ತಿಂಗಳಿನಲ್ಲಿ ವಸತಿ ನಿಲಯದ ಕಾಮಗಾರಿ ಪೂರ್ಣಗೊಳ್ಳಲಿದೆ. ಇದರಿಂದಾಗಿ ಜಿಲ್ಲೆಯ ಸುಮಾರು 300 ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.

ಈ ಹಿಂದೆ ಇದೇ ಸ್ಥಳದಲ್ಲಿದ್ದ ವಸತಿ ನಿಲಯ ಕಟ್ಟಡ ವಾಸಯೋಗ್ಯವಲ್ಲ ಎಂಬ ವರದಿಯನ್ನು ತಜ್ಞರು ನೀಡಿದ ಬಳಿಕ ಇಲಾಖೆ ಇಲ್ಲಿಂದ ವಿದ್ಯಾರ್ಥಿನಿಯರನ್ನು ಖಾಸಗಿ ಕಟ್ಟಡಕ್ಕೆ ಸ್ಥಳಾಂತರಗೊಳಿಸಿತ್ತು. ಕೂಡಲೇ ವಸತಿ ನಿಲಯದ ದುರಸ್ತಿಗೆ ಸರಕಾರಕ್ಕೆ ಮನವಿ ಮಾಡಿತ್ತು. ಆದರೆ ವರ್ಷಗಳೇ ಸಂದರೂ ಸರಕಾರ ಸ್ಪಂದಿಸದ ಹಿನ್ನೆಲೆಯಲ್ಲಿ ಖಾಸಗಿ ಕಟ್ಟಡಕ್ಕೆ ದುಬಾರಿ ಬಾಡಿಗೆ ನೀಡುವಂತಾಗಿತ್ತು. ಬಳಿಕ ಹಣ ಮಂಜೂರಾಗಿ ನೂತನ ಕಟ್ಟಡ ಕೆಲಸ ಆರಂಭವಾಗಿದೆ.

ಇದನ್ನೂ ಓದಿ:ಹಸಿರುಕ್ರಾಂತಿ  ಸಂಪಾದಕ ಕಲ್ಯಾಣರಾವ್  ನಿಧನಕ್ಕೆ ಸಚಿವೆ ಶಶಿಕಲಾ ಜೊಲ್ಲೆ ಸಂತಾಪ

Advertisement

800ರಷ್ಟು ವಿದ್ಯಾರ್ಥಿಗಳಿಗೆ ವಾಸ್ತವ್ಯ ಹೂಡಲು ನೂತನ ಕಟ್ಟಡದಲ್ಲಿ ಸುಮಾರು 800ರಷ್ಟು ವಿದ್ಯಾರ್ಥಿಗಳಿಗೆ ವಾಸ್ತವ್ಯ ಹೂಡಲು ಅವಕಾಶವಿದೆ. ಆದರೆ ಪ್ರತಿ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳು ಬರುತ್ತವೆ. ಬಳಿಕ ವಿದ್ಯಾರ್ಥಿಗಳ ಆಯ್ಕೆ ಮಾಡಿ ವಸತಿ ವ್ಯವಸ್ಥೆ ಮಾಡಲಾಗುತ್ತದೆ.

ಈಗಾಗಲೇ ನಗರದಲ್ಲಿ ಮೆಟ್ರಿಕ್‌ ಅನಂತರದ ವಿದ್ಯಾರ್ಥಿ ನಿಲಯ ಹುಡು ಗರಿಗೆ, ಮೆಟ್ರಿಕ್‌ ಪೂರ್ವ ವಸತಿ ನಿಲಯ ಹುಡುಗಿಯರಿಗೆ, ಮೆಟ್ರಿಕ್‌ ಅನಂತರದ ವಿದ್ಯಾರ್ಥಿ ನಿಲಯ ಹುಡುಗರಿಗೆ, ಮೆಟ್ರಿಕ್‌ ಪೂರ್ವ ವಸತಿ ವ್ಯವಸ್ಥೆ ಹುಡುಗರಿಗೆ ಇದೆ. ನಗರ ವ್ಯಾಪ್ತಿಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ವಸತಿ ನಿಲಯಗಳಲ್ಲಿ ಅವಕಾಶ ಸಿಗುತ್ತಿಲ್ಲ ಎಂಬ ಮಾತು ಕೇಳಿಬರುತ್ತಿದೆ.

ಕಾಮಗಾರಿಗೆ ವೇಗ
ಕೊಡಿಯಾಲಬೈಲ್‌ನಲ್ಲಿ ಈ ಹಿಂದೆ ಇದ್ದಂತಹ ವಸತಿ ನಿಲಯ ಶಿಥಿಲಾವಸ್ಥೆಯಿಂದ ಕೂಡಿತ್ತು. ಇದೀಗ ಕೆಡವಲಾಗುತ್ತಿದ್ದು, ಹಳೆ ಕಟ್ಟಡ ಕೆಡಹಿ ಅದೇ ಜಾಗದಲ್ಲಿ ನೂತನ ಹಾಸ್ಟೆಲ್‌ ನಿರ್ಮಾಣ ಕಾರ್ಯ ಸಾಗುತ್ತಿದೆ. ಕಟ್ಟಡ ಕಾಮಗಾರಿಗೆ ವೇಗ ನೀಡಲಾಗಿದ್ದು, ಕೆಲವೇ ತಿಂಗಳಿನಲ್ಲಿ ವಿದ್ಯಾರ್ಥಿಗಳು ಈ ಕಟ್ಟಡದ ಉಪಯೋಗವನ್ನು ಪಡೆಯಬಹುದು.
-ಡಾ| ಯೋಗೀಶ್‌, ಉಪ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ದ.ಕ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next