Advertisement

ಚುನಾವಣೆ ಕರ್ತವ್ಯ: ಸರಕಾರಿ ಬಸ್‌ ಸಂಚಾರ ಅಸ್ತವ್ಯಸ್ತ

01:30 PM Apr 19, 2019 | keerthan |

ಮಂಗಳೂರು: ಮತದಾನ ಹಿನ್ನೆಲೆಯಲ್ಲಿ ಗುರುವಾರ ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಕೆಎಸ್ಸಾರ್ಟಿಸಿ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಪ್ರಯಾಣಿಕರು ಸಕಾಲಕ್ಕೆ ಬಸ್‌ ಸೌಲಭ್ಯ ದೊರೆಯದೆ ಪರದಾಡಿದರು.

Advertisement

ಜಿಲ್ಲೆಯ ಸುಮಾರು 400ಕ್ಕೂ ಹೆಚ್ಚಿನ ಕೆಎಸ್ಸಾರ್ಟಿಸಿ ಬಸ್‌ಗಳನ್ನು ಚುನಾವಣ ಕಾರ್ಯಕ್ಕೆ ನಿಯೋಜಿಸಲಾಗಿತ್ತು. ಮಂಗಳೂರು ವಿಭಾಗದಿಂದ ಪ್ರತೀ ದಿನ ಸುಮಾರು 389ಕ್ಕೂ ಹೆಚ್ಚಿನ ಕೆಎಸ್ಸಾರ್ಟಿಸಿ ಬಸ್‌ಗಳು ವಿವಿಧ ಪ್ರದೇಶಗಳಿಗೆ ತೆರಳುತ್ತವೆ. ಈ ಬಾರಿ ಎ. 17, 18ರಂದು ಮಂಗಳೂರಿನ ಒಂದು ಮತ್ತು ಎರಡನೇ ಡಿಪೋದಿಂದ 138ಕ್ಕೂ ಹೆಚ್ಚಿನ ಬಸ್‌ಗಳನ್ನು ಚುನಾವಣೆಗಾಗಿ ಕಳುಹಿಸಲಾಗಿತ್ತು. ಪುತ್ತೂರು ವಿಭಾಗದಿಂದ ಸುಮಾರು 560 ಬಸ್‌ಗಳು ಸಂಚರಿಸುತ್ತಿದ್ದು, ಈ ಪೈಕಿ 263 ಬಸ್‌ ಸೇವೆಯಲ್ಲಿ ವ್ಯತ್ಯಯವಾಗಿತ್ತು.

ಬೆಂಗಳೂರು, ಮೈಸೂರು, ಚಿಕ್ಕಮಗಳೂರು, ಶಿವಮೊಗ್ಗ ಸಹಿತ ದೂರದ ಊರುಗಳಿಂದ ಆಗಮಿಸಿ ಸ್ವಂತ ಊರಿಗೆ ತೆರಳಲು ಬೆಳಗ್ಗೆ ನಗರದ ಬಿಜೈ ಕೆಎಸ್‌ಆರ್‌ ಟಿಸಿ ಮುಖ್ಯ ಬಸ್‌ ನಿಲ್ದಾಣಕ್ಕೆ ಧಾವಿಸುತ್ತಿದ್ದ ದೃಶ್ಯ ಕಾಣಿಸಿತು. ಬಿ.ಸಿ. ರೋಡ್‌, ಧರ್ಮಸ್ಥಳ, ಉಪ್ಪಿನಂಗಡಿ, ಚಿಕ್ಕಮಗಳೂರು, ಪುತ್ತೂರು ಸಹಿತ ವಿವಿಧ ಪ್ರದೇಶಗಳಿಗೆ ತೆರಳುವ ಬಸ್‌ ಸಂಖ್ಯೆ ವಿರಳವಿತ್ತು. ಮಂಗಳೂರಿನಿಂದ ಪುತ್ತೂರಿಗೆ ಕೂಡ ಕೆಲವೇ ಬಸ್‌ ಇದ್ದುದರಿಂದ ಹೆಚ್ಚಿನ ಮಂದಿ ಬೆಂಗಳೂರಿಗೆ ತೆರಳುವ ಐರಾವತ, ರಾಜಹಂಸ ಬಸ್‌ಗಳನ್ನೇರಿದ್ದು, ದುಪ್ಪಟ್ಟು ಹಣ ನೀಡಿ ಪ್ರಯಾಣಿಸಿದರು.

ಕಳೆದ ಬಾರಿ ಲೋಕಸಭಾ, ವಿಧಾನಸಭಾ ಚುನಾವಣೆಯ ಕಾರ್ಯದ ನಿಮಿತ್ತ ಜಿಲ್ಲೆಯ ಹೆಚ್ಚಿನ ಖಾಸಗಿ, ಸಿಟಿ ಬಸ್‌ಗಳು ತೆರಳಿದ್ದವು. ಆದರೆ ಈ ಬಾರಿ ಮಂಗಳೂರಿನ ಸಿಟಿ ಬಸ್‌ಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿರಲಿಲ್ಲ. ಹಾಗಾಗಿ ಎಲ್ಲ ಸಿಟಿ ಬಸ್‌ಗಳು ಎಂದಿನಂತೆ ಕಾರ್ಯಾಚರಿಸಿದವು.

ಮುಂಗಡ ಬುಕ್ಕಿಂಗ್‌ ಫುಲ್‌
ಮತದಾನಕ್ಕೆಂದು ಬಂದ ಮಂದಿಗೆ ಸಾಲು ರಜೆ ಇದೆ. ಎ. 17ರಂದು ಮಹಾವೀರ ಜಯಂತಿ, ಎ. 18 ಚುನಾವಣೆ, ಎ. 19 ಗುಡ್‌ಫ್ರೈಡೇ, ಎ. 21ರಂದು ರವಿವಾರ. ನಡುವಣ ಎ. 20ರ ಶನಿವಾರ ಮಾತ್ರ ಕೆಲಸದ ದಿನ. ಎ. 21ಕ್ಕೆ ಈಗಾಗಲೇ ಹೆಚ್ಚಿನ ಬಸ್‌ ಮುಂಗಡ ಬುಕ್ಕಿಂಗ್‌ ಆಗಿದೆ. ಇದೇ ಕಾರಣಕ್ಕೆ ಮಂಗಳೂರಿನಿಂದ ಮೈಸೂರು, ಬೆಂಗಳೂರು ಮತ್ತಿತರ ರೂಟ್‌ಗಳಿಗೆ ಅಗತ್ಯಕ್ಕೆ ತಕ್ಕಂತೆ ಹೆಚ್ಚುವರಿ ಬಸ್‌ ನಿಯೋಜಿಸಲು ಕೆಎಸ್ಸಾರ್ಟಿಸಿ ತೀರ್ಮಾನಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next