Advertisement

ಕೆಎಸ್‌ಆರ್‌ಟಿಸಿ: ಶೇ.40 ಬಸ್‌ಗಳಿಗೆ ವಯಸ್ಸು ಮೀರಿವೆ!

12:55 AM Jul 21, 2022 | Team Udayavani |

ಬೆಂಗಳೂರು: ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕೂ ಸಾರಿಗೆ ನಿಗಮಗಳಲ್ಲಿ ಕಾರ್ಯಾಚರಣೆ ಮಾಡುವ ಬಸ್‌ಗಳ ಪೈಕಿ ಶೇ. 40ರಷ್ಟು ಬಸ್‌ಗಳು “ವಯಸ್ಸು ಮೀರಿವೆ’!

Advertisement

– ಹೀಗಂತ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಪುನಶ್ಚೇತನಕ್ಕೆ ಸಂಬಂಧಿಸಿದಂತೆ ನೇಮಿಸಿದ್ದ ಎಂ.ಆರ್‌. ಶ್ರೀನಿವಾಸಮೂರ್ತಿ ನೇತೃತ್ವದ ಏಕಸದಸ್ಯ ಸಮಿತಿ ಸರಕಾರಕ್ಕೆ ನೀಡಿದ ವರದಿಯಲ್ಲಿ ತಿಳಿಸಿದೆ.

ನಾಲ್ಕೂ ಸಾರಿಗೆ ನಿಗಮಗಳ ವ್ಯಾಪ್ತಿಯಲ್ಲಿ ಸುಮಾರು 24,200 ಬಸ್‌ಗಳಿವೆ. ಇವುಗಳಿಗೆ ಇಂತಿಷ್ಟು ಕಿ.ಮೀ. ಸಾಮಾನ್ಯವಾಗಿ 9 ಲಕ್ಷ ಕಿ.ಮೀ. ಅಥವಾ 8ರಿಂದ 10 ವರ್ಷ ಎಂದು ನಿಗದಿಪಡಿಸಲಾಗಿರುತ್ತದೆ. ಈ ಅವಧಿ ಮೀರಿದ ಬಸ್‌ಗಳೇ ನಿಗಮಗಳಲ್ಲಿ ಶೇ. 40ರಷ್ಟಿವೆ. ಇವುಗಳ ಜಾಗಕ್ಕೆ ಹೊಸ ವಾಹನಗಳನ್ನು ಪರಿಚಯಿಸಬೇಕು ಹಾಗೂ ನವೀಕ ರಿಸುವ ತುರ್ತು ಅವಶ್ಯಕತೆ ಇದೆ ಎಂದು ಸಮಿತಿ ತಿಳಿಸಿದೆ.

ಆದರೆ, ಇದಕ್ಕಾಗಿ ನಿಗಮಗಳ ಬಳಿ ಹಣವೇ ಇಲ್ಲ.ಕೆಲವು ವರ್ಷಗಳಿಂದ ನಿಗಮಗಳ ಬಸ್‌ಗಳಲ್ಲಿ ಯಾವುದೇ ಏರಿಕೆ ಕಂಡಿಲ್ಲ. 2013-14ರಲ್ಲಿ 24,355 ಇದ್ದ ಬಸ್‌ಗಳ ಸಂಖ್ಯೆ 2020-21ರಲ್ಲಿ 24,266 ಇದೆ. ಮತ್ತೂಂದೆಡೆ ಖಾಸಗಿ ವಾಹನ (ದ್ವಿಚಕ್ರ, ತ್ರಿಚಕ್ರ ಹಾಗೂ ನಾಲ್ಕುಚಕ್ರ)ಗಳ ಪ್ರಮಾಣ ವಾರ್ಷಿಕ ಶೇ. 10ರಿಂದ 14ರಷ್ಟು ಏರಿಕೆಯಾಗಿದೆ. ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಈ ಬಸ್‌ಗಳ ಪ್ರಮಾಣ ಕೂಡ ಹೆಚ್ಚಾಗಬೇಕಿತ್ತು. ಹಲವು ಕಾರಣಗಳಿಂದ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ.

ವಯಸ್ಸು ಮೀರಿದೆ
ಈ ಮಧ್ಯೆ 9 ಲಕ್ಷ ಕಿ.ಮೀ. ದಾಟಿದ ಬಸ್‌ಗಳ ಪ್ರಮಾಣ ಏರಿಕೆಯಾಗುತ್ತಿದೆ. ಮತ್ತೂಂದೆಡೆ 2030ರ ವೇಳೆಗೆ ಬಿಎಂಟಿಸಿಯಲ್ಲಿ ಬಸ್‌ಗಳ ಸಂಖ್ಯೆ 16 ಸಾವಿರ ಹಾಗೂ ಉಳಿದ ಮೂರು ನಿಗಮಗಳಲ್ಲಿ 25 ಸಾವಿರ ಆಗಬೇಕಿದೆ. ಆದರೆ, ಸದ್ಯದ ಆರ್ಥಿಕ ಸ್ಥಿತಿಯಲ್ಲಿ ಈ “ವಯಸ್ಸು ಮೀರಿದ’ ಬಸ್‌ಗಳ ನವೀಕರಣ ಮತ್ತು ಹೊಸ ಬಸ್‌ಗಳ ಸೇರ್ಪಡೆಗೊಳಿಸುವುದು ನಿಗಮಗಳ ಮುಂದಿರುವ ದೊಡ್ಡ ಸವಾಲು.

Advertisement

ಕಡ್ಡಾಯ ನವೀಕರಣ
ವಿಶೇಷವಾಗಿ 8-9 ಲಕ್ಷ ಕಿ.ಮೀ. ಮೀರಿದ ಬಸ್‌ಗಳನ್ನು ಕಡ್ಡಾಯವಾಗಿ ನವೀಕರಣಗೊಳಿಸಿ, ಇನ್ನೂ ಮೂರ್‍ನಾಲ್ಕು ಲಕ್ಷ ಕಿ.ಮೀ. ಹೆಚ್ಚುವರಿಯಾಗಿ ಕಾರ್ಯಾ ಚರಣೆಯಾಗು ವಂತೆ ಮಾಡಬೇಕು. ಇದಕ್ಕಾಗಿ ವಿಭಾಗೀಯ ಮತ್ತು ಪ್ರಾದೇಶಿಕ ಕಾರ್ಯಾಗಾರಗಳಲ್ಲಿ ಹೊರಗುತ್ತಿಗೆಯಲ್ಲಿ ತಂತ್ರಜ್ಞರನ್ನು ನೇಮಿಸಿಕೊಳ್ಳಬೇಕು. ಅಲ್ಲದೆ, ಕಾರ್ಯಾಗಾರ ಗಳನ್ನೂ ಆಧುನಿಕ ತಂತ್ರಜ್ಞಾನಗಳ ಅಳವಡಿಕೆ ಮೂಲಕ ಮೇಲ್ದರ್ಜೆಗೇರಿಸುವ ಅವಶ್ಯಕತೆ ಇದೆ ಎಂದು ಎಂ.ಆರ್‌. ಶ್ರೀನಿವಾಸಮೂರ್ತಿ ತಮ್ಮ ವರದಿಯಲ್ಲಿ ಶಿಫಾರಸು ಮಾಡಿದ್ದಾರೆ.

ನಿಯಮಿತ ಪ್ರಯಾಣ ದರ ಪರಿಷ್ಕರಣೆ?
ಸರ್ಕಾರವು ಯಾವುದೇ ಮಾರ್ಪಾ ಡುಗಳಿಲ್ಲದೆ, ಯಥಾವತ್ತಾಗಿ ಈ ವರದಿಯನ್ನು ಒಪ್ಪಿಕೊಂಡು ಅನು ಮೋದನೆ ನೀಡಿದರೆ, ಮುಂಬರುವ ದಿನಗಳಲ್ಲಿ ಬಸ್‌ ಪ್ರಯಾಣಿಕರಿಗೆ ವಿದ್ಯುತ್‌ ದರ ಏರಿಕೆ ಮಾದರಿಯಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ನಿಯಮಿತವಾಗಿ ದರ ಪರಿಷ್ಕರಣೆ ಬಿಸಿ ತಟ್ಟಲಿದೆ.

ಡೀಸೆಲ್‌ ದರವು ಆಗಾಗ್ಗೆ ಪರಿಷ್ಕರಣೆ ಆಗುತ್ತಲೇ ಇದ್ದು, ಆದರೆ ಕಳೆದ ಕೆಲ ವರ್ಷಗಳಿಂದ ಪ್ರಯಾಣ ದರ ಮಾತ್ರ ಪರಿಷ್ಕರಣೆ ಆಗಿಲ್ಲ. ಇದರಿಂದ ನಿಗಮಗಳ ಮೇಲೆ ಹೊರೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ “ಸಮೂಹ ಸಾರಿಗೆ ಪ್ರಯಾಣ ದರ ಸಮಿತಿ’ (ಪಿಟಿಎಫ್ಆರ್‌ಸಿ) ರಚಿಸಬೇಕು. ಇದು ಕಾರ್ಯಾಚರಣೆ, ಹಣಕಾಸು, ಸಾರ್ವಜನಿಕ ನೀತಿ-ನಿಯಮಗಳ ಬಗ್ಗೆ ಜ್ಞಾನ ಹೊಂದಿರುವ ಮೂವರು ಸದಸ್ಯರನ್ನು ಒಳಗೊಂಡಿರಬೇಕು. ಪ್ರತಿ ಮೂರು ವರ್ಷಕ್ಕೊಮ್ಮೆ ನಿಗಮಗಳ ಸ್ಥಿತಿಗತಿ, ಡೀಸೆಲ್‌ ದರ, ಕಾರ್ಯಾಚರಣೆ ವೆಚ್ಚವನ್ನು ಆಧರಿಸಿ ದರ ಪರಿಷ್ಕರಣೆ ಮಾಡುವ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ.

ಕನಿಷ್ಠ ಶೇ. 50 ಇ- ಬಸ್‌ಗಳು ಇರಲಿ
ಡೀಸೆಲ್‌ ಬೆಲೆ ನಿರಂತರವಾಗಿ ಹೆಚ್ಚಳ ಆಗುತ್ತಿದ್ದು, ಭವಿಷ್ಯದ ದೃಷ್ಟಿಯಿಂದ ನಿಗಮಗಳು ಹಂತ ಹಂತವಾಗಿ ವಿದ್ಯುತ್‌ಚಾಲಿತ ಬಸ್‌ಗಳಿಗೆ ಶಿಫ್ಟ್ ಆಗಬೇಕು. ಒಟ್ಟಾರೆ ಶೇ. 50 ರಷ್ಟು ಇ- ಬಸ್‌ಗಳಿಗೆ ಹೊಂದಬೇಕು ಎಂದ ಸಮಿತಿ, ಬಿಎಂಟಿಸಿಯಲ್ಲಿ ಈಗಾಗಲೇ 90 ಇ- ಬಸ್‌ಗಳನ್ನು ರಸ್ತೆಗಿಳಿಸಿದೆ. ಇನ್ನೂ 300 ಬಸ್‌ಗಳು ಇದಕ್ಕೆ ಸೇರ್ಪಡೆಗೊಳ್ಳಲಿವೆ. ಇನ್ನೂ ಮುಂದೆ ಹೋಗಿ, ಕೇಂದ್ರದ ಫೇಮ್‌-2 ಯೋಜನೆ ಅಡಿ ಲಭ್ಯವಿರುವ ಸಬ್ಸಿಡಿ ನೆರವಿನಿಂದ 579 ಇ- ಬಸ್‌ಗಳನ್ನು ರಸ್ತೆಗಿಳಿಸಬೇಕು ಎಂದೂ ಏಕಸದಸ್ಯ ಸಮಿತಿ ಸಲಹೆ ಮಾಡಿದೆ.

-ವಿಜಯಕುಮಾರ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next