Advertisement

ಇಂದಿನಿಂದಲೇ ಮುಂಗಾರು ಹಂಗಾಮಿಗೆ ಶಾಸ್ತ್ರೀ, ಬಸವ ಸಾಗರ ಜಲಾಶಯಗಳಿಂದ ನೀರು ಬಿಡುಗಡೆ

04:47 PM Jul 26, 2022 | Team Udayavani |

ವಿಜಯಪುರ : ಜುಲೈ 26 ರಿಂದ ಮುಂಗಾರು ಹಂಗಾಮಿಗಾಗಿ ಆಲಮಟ್ಟಿಯ ಲಾಲ್ ಬಹಾದ್ದೂರ್ ಶಾಸ್ತ್ರೀ ಮತ್ತು ನಾರಾಯಣಪುರ ಬಸವ ಸಾಗರ ಜಲಾಶಯಗಳಿಂದ ಕೃಷಿ ಕಾರ್ಯಕ್ಕೆ ನೀರು ಹರಿಸಲು ಕೃಷ್ಣ ಮೇಲ್ದಂಡೆ ಯೋಜನೆಯ ನೀರಾವರಿ ಸಲಹಾ ಸಮಿತಿ ಸಭೆಯು ತೀರ್ಮಾನಿಸಿದೆ.

Advertisement

ಮಂಗಳವಾರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿಯ ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತದ ಆಲಮಟ್ಟಿ ಕಚೇರಿಯ ಸಭಾಂಗಣದಲ್ಲಿ ನೀರಾವರಿ ಸಲಹಾ ಸಮಿತಿಯ ಅಧ್ಯಕ್ಷರಾದ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ
ಜಲಾಶಯದಲ್ಲಿ ಪ್ರಸ್ತುತ ಲಭ್ಯವಿರುವ ನೀರನ್ನು ಆಧರಿಸಿ ಮುಂಗಾರು ಹಂಗಾಮಿಗೆ ಜುಲೈ 26 ರಿಂದಲೇ ಅನ್ವಯವಾಗುವಂತೆ ಮುಂಗಾರು ಹಂಗಾಮಿಗೆ ಜಲಾಶಯಗಳಿಂದ ನೀರು ಹರಿಸಲು ನಿರ್ಧರಿಸಲಾಯಿತು.

ವಿಜಯಪುರ ಜಿಲ್ಲಾ ಉಸ್ತುವಾರಿ ಹೊಂದಿರುವ ಅರಣ್ಯ ಸಚಿವ ಉಮೇಶ ಕತ್ತಿ ಅವರ ಸಮ್ಮುಖದಲ್ಲಿ ಜುಲೈ 26 ರಂದು ನಡೆದ 2022-23ನೇ ಸಾಲಿನ ಮುಂಗಾರು ಹಂಗಾಮಿಗೆ ಕೃಷ್ಣ ಮೇಲ್ದಂಡೆ ಯೋಜನೆಯ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನೀರಿನ ಲಭ್ಯತೆಯ ಬಗ್ಗೆ ಚರ್ಚಿಸಿ ಈ ನಿರ್ಧಾರ ಪ್ರಕಟಿಸಲಾಯಿತು.

ಇದನ್ನೂ ಓದಿ: ಗುಜರಾತ್ ಕಳ್ಳಭಟ್ಟಿ ದುರಂತ: 28ಕ್ಕೇರಿದ ಸಾವಿನ ದುರಂತ

ಆಲಮಟ್ಟಿಯ ಶಾಸ್ತ್ರೀ ಜಲಾಶಯ ಮತ್ತು ನಾರಾಯಣಪುರ ಬಸವ ಸಾಗರ ಎರಡೂ ಜಲಾಶಯಗಳಲ್ಲಿ 97.491 ಟಿಎಂಸಿ ಅಡಿ ನೀರು ಲಭ್ಯವಿದೆ. ಮುಂಗಾರು ಹಂಗಾಮಿನ ಕೃಷಿ ಬಳಕೆಗೆ 120 ದಿನಗಳಿಗೆ ಯೋಜನಾ ವರದಿಯಂತೆ 67 ಟಿಎಂಸಿ ನೀರಿನ ಪ್ರಮಾಣದ ಅಗತ್ಯವಿದೆ. ಅಗತ್ಯ ಬಳಕೆಗೆ ಮುಂಗಾರು ಹಂಗಾಮಿಗೆ 13 ಟಿಎಂಸಿ ನೀರು ಬೇಕಾಗುತ್ತದೆ. ಇವೆರಡು ಸೇರಿ ಒಟ್ಟು ಬಳಕೆಗೆ 80 ಟಿಎಂಸಿ ನೀರಿ ಬೇಕಾಗುತ್ತದೆ. ಮುಂಗಾರು ಹಂಗಾಮಿಗೆ ಅಗತ್ಯ ಇರುವ ನೀರಿನ ಪ್ರಮಾಣ ಜಲಾಶಯದಲ್ಲಿ ಸಂಗ್ರಹವಿದೆ. ಮುಂಗಾರು ಹಂಗಾಮಿಗೆ ಅಗತ್ಯದ ನೀರಿನ ಪ್ರಮಾಣ ಜಲಾಶಯದಲ್ಲಿ ಸಂಗ್ರಹವಿದೆ. ಮುಂಬರುವ ದಿನಗಳಲ್ಲಿ ಜಲಾಶಯಗಳಿಗೆ ಕೃಷ್ಣಾ ನದಿ ಮೂಲಕ ಬರುವ ಒಳಹರಿವು ಗಮನದಲ್ಲಿ ಇರಿಸಿಕೊಂಡು 2022-23 ರ ಮುಂಗಾರು ಹಂಗಾಮಿಗೆ ಅಚ್ಚುಕಟ್ಟು ಪ್ರದೇಶದ ಕಾಲುವೆ ಜಾಲ, ಆಣಿಕಟ್ಟು ಹಾಗೂ ಮುಖ್ಯ ಸ್ಥಾವರಗಳ ಕ್ಲೋಜರ್ ಅವಧಿಯ ಕಾಮಗಾರಿಗಳ ಪ್ರಗತಿ ಆಧರಿಸಿ ಮುಂಗಾರು ಹಂಗಾಮಿಗೆ ನೀರು ಪೂರೈಸಬಹುದಾಗಿದೆ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಕುಮಾರ ಸಭೆಗೆ ವಿವರಿಸಿದರು.

Advertisement

ನಮ್ಮ ನಮ್ಮ ಕ್ಷೇತ್ರಗಳಲ್ಲಿ ನೀರಿನ ಅಭಾವವಿದೆ. ರೈತರು ನೀರು ಕೇಳುತ್ತಿದ್ದಾರೆ. ಕಾಲುವೆಗಳಿಗೆ ಈ ಕೂಡಲೇ ನೀರು ಬಿಡುಗಡೆ ಮಾಡಬೇಕು ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಜಿಲ್ಲೆಯ ಸಿಂದಗಿ ಶಾಸಕ ರಮೇಶ ಭೂಸನೂರ, ಯಶವಂತರಾಯಗೌಡ ಪಾಟೀಲ,ಕೊಪ್ಪಳ ಜಿಲ್ಲೆಯ ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪುರ, ರಾಯಚೂರು ಜಿಲ್ಲೆಯ ದೇವದುರ್ಗ ಶಾಸಕ ಶಿವನಗೌಡ ನಾಯಕ, ಯಾದಗಿರಿ ಜಿಲ್ಲೆಯ ಸುರಪುರ ಶಾಸಕ ರಾಜುಗೌಡ ಇತರರು ಆಗ್ರಹಿಸಿದರು.

ಸಭೆಯಲ್ಲಿದ್ದ ಹಾಜರಿದ್ದ ಜನಪ್ರತಿನಿಧಿಗಳು, ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು, ಯೋಜನಾ ವ್ಯಾಪ್ತಿಯ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಸೇರಿದಂತೆ ಸಭೆಯಲ್ಲಿ ಹಾಜರಿದ್ದವರು ಸುಧೀರ್ಘ ಚರ್ಚೆಯ ಬಳಿಕ
ಎಲ್ಲ ಶಾಸಕರ ಒಮ್ಮತದ ಅಭಿಪ್ರಾಯ ಆಧರಿಸಿ ಕೃಷಿ ಕಾರ್ಯಕ್ಕೆ ಮುಂಗಾರು ಹಂಗಾಮಿಗೆ ನೀರು ಹರಿಸಲು ನಿರ್ಧರಿಸಲಾಯಿತು.

ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಸುರಿಯುವ ಮಳೆ ಹಾಗೂ ಜಲಾಶಯಗಳಿಗೆ ಒಳ ಹರಿವು ಆಧರಿಸಿ, ಒಳ ಹರಿವು ಸ್ಥಗಿತವಾದ ನಂತರ 14 ದಿನ ಚಾಲೂ ಹಾಗೂ 8 ದಿನ ವಾರಾಬಂದ ಪದ್ಧತಿ ಅನುಸರಿಸಿ ಜುಲೈ 26 ರಿಂದ ಮುಂಗಾರು ಹಂಗಾಮಿಗೆ ನೀರು ಹರಿಸಲು ನಿರ್ಧರಿಸಲಾಯಿತು.
ಅಲ್ಲದೇ ಮುಂಗಾರು ಮುಗಿದ ಕೂಡಲೇ ಕಾಲುವೆಗಳ ಕ್ಲೋಸರ್ ಕಾಮಗಾರಿ ಪೂರ್ಣಗೊಳಿಸಲು ಕೂಡ ಸಭೆಯಲ್ಲಿ ನಿರ್ಣಯಿಸಲಾಯಿತು.

ರೈತ ಬಾಂಧವರಲ್ಲಿ ಮನವಿ: ಸಮಸ್ತ ಅಚ್ಚುಕಟ್ಟು ರೈತ ಬಾಂಧವರು ಲಘು ನೀರಾವರಿ ಬೆಳೆಗಳನ್ನು ಮಾತ್ರ ಬೆಳೆಯಲು ಹಾಗೂ ನೀರು ಪೋಲಾಗದಂತೆ ಹಿತಮಿತ ಬಳಸಲು ಕೃಷ್ಣ ಭಾಗ್ಯ ಜಲ ನಿಗಮ ಅಧಿಕಾರಿಗಳೊಂದಿಗೆ ಸಹಭಾಗಿತ್ವ ನೀಡಲು ಇದೆ ವೇಳೆ ಸಚಿವ ಸಿಸಿ ಪಾಟೀಲ ರೈತರಲ್ಲಿ ಮನವಿ ಮಾಡಿದರು.

ನವೆಂಬರ್ ಅತ್ಯಂಕ್ಕೆ ಸಭೆ:
ನವೆಂಬರ್ 2022ರಲ್ಲಿ ಶಾಸ್ತ್ರೀ ಹಾಗೂ ಬಸವ ಸಾಗರ ಎರಡೂ ಜಲಾಶಯಗಳಲ್ಲಿನ ನೀರು ಸಂಗ್ರಹ ಆಧರಿಸಿ 2022-23ನೇ ಸಾಲಿನ ಹಿಂಗಾರು ಹಂಗಾಮಿನ ನೀರವಾರಿ ಸಲಹಾ ಸಮಿತಿ ಸಭೆ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಭೆಯಲ್ಲಿ ಶಾಸಕರಾದ ಬಾಗಲಕೋಟೆಯ ವೀರಣ್ಣ ಚರಂತಿಮಠ, ಮುದ್ದೇಬಿಹಾಳದ ಎ.ಎಸ್.ಪಾಟೀಲ ನಡಹಳ್ಳಿ, ರಾಯಚೂರು ಗ್ರಾಮೀಣದ ಬಸನಗೌಡ ದದ್ದಲ್, ಲಿಂಗಸ್ಗೂರಿನ ಡಿ.ಎಸ್.ಹೂಲಗೇರಿ, ಜಿಲ್ಲಾಧಿಕಾರಿಗಳಾದ ಡಾ.ವಿ.ಬಿ. ದಾನಮ್ಮನವರ, ಸುನೀಲಕುಮಾರ, ನಿಗಮದ ಮುಖ್ಯ ಎಂಜಿನಿಯರ್ ಎಚ್ ಸುರೇಶ, ಅಧೀಕ್ಷಕ ಎಂಜಿನಿಯರ್ ಬಿ.ಬಸವರಾಜ, ಆಟೆಕಟ್ಟು ವಿಭಾಗದ ಇಇ ಮೋಹನ್ ಹಲಗತ್ತಿ ಸೇರಿದಂತೆ ನಿಗಮದ ಹಿರಿ ಕಿರಿ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next