Advertisement

ಕೃಷ್ಣ, ಯಡಿಯೂರಪ್ಪ  ಭೇಟಿ ಅನುಮಾನ

03:45 AM Feb 05, 2017 | Team Udayavani |

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರನ್ನು ಭೇಟಿ ಮಾಡಲು ಸಿಎಂ ಸಿದ್ದರಾಮಯ್ಯ, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಪ್ರಯತ್ನ ನಡೆಸಿದ್ದರಾದರೂ ಯಾರ ಭೇಟಿಗೂ ಎಸ್‌.ಎಂ. ಕೃಷ್ಣ ಸಮಯ ನೀಡದೆ ಅಂತರ ಕಾಯ್ದುಕೊಂಡಿದ್ದಾರೆ. ಕೃಷ್ಣ ಅವರು ಕಾಂಗ್ರೆಸ್‌ಗೆ ವಿದಾಯ ಹೇಳುವ ದಿನ ಪತ್ರಿಕಾಗೋಷ್ಠಿ ನಡೆಸಿದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ತಮ್ಮ ರಾಜಕೀಯ ಕಾರ್ಯದರ್ಶಿ ಗೋವಿಂದ ರಾಜ್‌ ಮೂಲಕ ಕೃಷ್ಣ ಅವರ ಭೇಟಿಗೆ ಸಮಯ ಕೋರಿದ್ದರು.

Advertisement

ಆದರೆ, ಎಸ್‌.ಎಂ.ಕೃಷ್ಣ ಮುಖ್ಯಮಂತ್ರಿ ಭೇಟಿಗೆ ನಿರಾಕರಿಸಿದ್ದಾರೆ ಎಂದು ಕೃಷ್ಣ ಅವರ ಆಪ್ತ ಮೂಲಗಳು ತಿಳಿಸಿವೆ.
ಇನ್ನೊಂದೆಡೆ ಎಸ್‌.ಎಂ. ಕೃಷ್ಣ ಅವರು ಬಿಜೆಪಿ ಸೇರುತ್ತಾರೆಂದು ಬಹಿರಂಗವಾಗಿಯೇ ಹೇಳಿಕೆ ನೀಡುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಕೂಡ ಭಾನುವಾರ ಕೃಷ್ಣ ಅವರನ್ನು ಭೇಟಿಯಾಗಿ ಮಾತುಕತೆ ನಡೆಸುವುದಾಗಿ ತಿಳಿಸಿದ್ದಾರೆ. ಆದರೆ, ಕೃಷ್ಣ ಅವರ ಮೂಲಗಳ ಪ್ರಕಾರ ಭಾನುವಾರ ಯಾರ ಭೇಟಿಗೂ ಅವಕಾಶ ನೀಡದಂತೆ ಕೃಷ್ಣ ತಮ್ಮ ಸಿಬ್ಬಂದಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಭಾನುವಾರ ಯಡಿಯೂರಪ್ಪ, ಎಸ್‌.ಎಂ.ಕೆ. ಅವರನ್ನು ಭೇಟಿ ಮಾಡುವುದು ಅನುಮಾನ ಎಂದು ಹೇಳಲಾಗುತ್ತಿದೆ.

ಕಾಂಗ್ರೆಸ್‌ ಹಿರಿಯ ನಾಯಕರ ಒತ್ತಾಯ: ಎಸ್‌.ಎಂ. ಕೃಷ್ಣ ಕಾಂಗ್ರೆಸ್‌ನಲ್ಲಿ ಹಿರಿಯರಿಗೆ ಗೌರವವಿಲ್ಲ ಎಂಬ ಹೇಳಿಕೆ ಬಗ್ಗೆ ರಾಷ್ಟ್ರೀಯ ಕಾಂಗ್ರೆಸ್‌ ನಾಯಕರೂ ಗಂಭೀರವಾಗಿ ಪರಿಗಣಿಸಿದ್ದಾರೆ. ಹಿರಿಯ ನಾಯಕರಾದ ಎ.ಕೆ. ಆಂಟನಿ, ಅಂಬಿಕಾ ಸೋನಿ, ಗುಲಾಮ್‌ ನಬಿ ಆಜಾದ್‌ ಈ ಬಗ್ಗೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಜತೆ ಮಾತನಾಡಿ, ಎಸ್‌.ಎಂ. ಕೃಷ್ಣ ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳಲು ಪ್ರಯತ್ನಿಸುವಂತೆ ಮನವಿ ಮಾಡಿಕೊಂಡಿದ್ದಾರೆ ಎಂದು ಕಾಂಗ್ರೆಸ್‌ ಉನ್ನತ ಮೂಲಗಳು ತಿಳಿಸಿವೆ.

ಹೀಗಾಗಿ ಸೋನಿಯಾ ಗಾಂಧಿ ಕೃಷ್ಣ ಅವರ ಮನವೊಲಿಕೆಗೆ ಎಐಸಿಸಿಯಿಂದ ಯಾರಾದರೂ ಹಿರಿಯ ನಾಯಕರನ್ನು
ನೇರವಾಗಿ ಮಾತುಕತೆಗೆ ಕಳುಹಿಸಿಕೊಡಬಹುದು ಎಂಬ ಮಾತು ಕಾಂಗ್ರೆಸ್‌ ವಲಯದಲ್ಲಿ ಕೇಳಿ ಬರುತ್ತಿದೆ. 

ಸ್ವಾಭಿಮಾನಿಗಳು ಕಾಂಗ್ರೆಸ್‌ ತೊರೆಯುತ್ತಿದ್ದಾರೆ
ಬೆಂಗಳೂರು:
ಸ್ಫೂರ್ತಿ ಇಲ್ಲದ ನಾಯಕತ್ವದಿಂದಾಗಿ ವಿವೇಕವುಳ್ಳವರು ಮತ್ತು ಸ್ವಾಭಿಮಾನಿಗಳು ಕಾಂಗ್ರೆಸ್‌ ತೊರೆಯುತ್ತಿದ್ದಾರೆ ಎಂದು ಕೇಂದ್ರ ಸಚಿವ ವೆಂಕಯ್ಯನಾಯ್ಡು ತಿಳಿಸಿದ್ದಾರೆ. ಎಸ್‌.ಎಂ.ಕೃಷ್ಣ ಕಾಂಗ್ರೆಸ್‌ ತೊರೆದಿರುವ
ಕುರಿತು ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‌ನಲ್ಲಿ ಸ್ಫೂರ್ತಿದಾಯಕ ನಾಯಕರಿಲ್ಲ. ಹೀಗಾಗಿ ಅವರ ಬಗ್ಗೆ ಕಾಂಗ್ರೆಸಿಗರೇ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ. ಅಜಿತ್‌ ಜೋಗಿ, ವಿಜಯ್‌ ಬಹುಗುಣ, ರೀಟಾ ಬಹುಗುಣ ಮುಂತಾದವರೇ ಸಾಕ್ಷಿ ಎಂದು ಹೇಳಿದರು. ಎಸ್‌.ಎಂ.ಕೃಷ್ಣ ಅವರು ಬಿಜೆಪಿ ಸೇರುವ ಬಗ್ಗೆ ತಮಗೇನೂ ಮಾಹಿತಿ ಇಲ್ಲ. ಆದರೆ, ಅವರು
ಕಾಂಗ್ರೆಸ್‌ ತೊರೆದಿರುವುದು ಗೊತ್ತಿದೆ. ಅವರು ಬಿಜೆಪಿಗೆ ಬರುತ್ತಾರೆಯೇ ಎಂಬುದರ ಬಗ್ಗೆ ಗೊತ್ತಿಲ್ಲ. ಬರುವುದಾದರೆ
ಈ ಕುರಿತು ಪಕ್ಷ ಸೂಕ್ತ ತೀರ್ಮಾನ ಕೈಗೊಳ್ಳುತ್ತದೆ ಎಂದರು.

Advertisement

ಎಸ್‌.ಎಂ.ಕೃಷ್ಣ ಅವರು ಬಿಜೆಪಿಗೆ ಬರಲು ಒಪ್ಪಿದ್ದಾರೆ. ಅವರೊಂದಿಗೆ ಮಾತುಕತೆ ನಡೆಸುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌ .ಯಡಿಯೂರಪ್ಪ ಅವರು ನೀಡಿರುವ ಹೇಳಿಕೆ ಕುರಿತು ಸುದ್ದಿಗಾರರ ಪ್ರಶ್ನೆಗೆ, ಯಡಿಯೂರಪ್ಪ
ಅವರು ಹೇಳಿದ್ದಾರೆ ಎಂದ ಮೇಲೆ ನಾನೇನು ಹೇಳುವುದು? ಅವರೇ ಮಾತುಕತೆ ನಡೆಸುತ್ತಾರೆ ಮತ್ತು ಸೂಕ್ತ ನಿರ್ಧಾರ
ತೆಗೆದುಕೊಳ್ಳುತ್ತಾರೆ. ಇದು ಪಕ್ಷಕ್ಕೆ ಸಂಬಂಧಿಸಿದ ವಿಚಾರವಾಗಿದ್ದರಿಂದ ನಾನು ಪ್ರತಿಕ್ರಿಯಿಸುವುದಿಲ್ಲ ಎಂದು
ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next