Advertisement

Krishi Mela 2023: ಕಡಿಮೆ ನೀರಿನಲ್ಲಿ ಹೆಚ್ಚು ಇಳುವರಿ ನೀಡುವ ಸೂರ್ಯಕಾಂತಿ

11:10 AM Nov 20, 2023 | Team Udayavani |

ಬೆಂಗಳೂರು: ರಾಜ್ಯದಲ್ಲಿ ಸೂರ್ಯಕಾಂತಿ ಎಣ್ಣೆಗಳಿಗೆ ಹೆಚ್ಚಿನ ಬೇಡಿಕೆ ವ್ಯಕ್ತವಾಗಿರುವ ಬೆನ್ನಲ್ಲೇ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಕಡಿಮೆ ನೀರಿನಲ್ಲಿ 80 ದಿನಗಳಲ್ಲಿ ಕಟಾವಿಗೆ ಬರುವ, ಹೆಕ್ಟೇರ್‌ಗೆ 24 ಕ್ವಿಂಟಾಲ್‌ ಇಳುವರಿ ಕೊಡುವ “ಕೆಬಿಎಸ್‌ಎಚ್‌-90 ಸಂಕರಣ ಸೂರ್ಯಕಾಂತಿ ತಳಿ’ ಸಂಶೋಧಿಸಿದ್ದಾರೆ.

Advertisement

ಉಕ್ರೇನ್‌-ರಷ್ಯಾ ಯುದ್ಧದಿಂದ ಭಾರತಕ್ಕೆ ವಿದೇಶಗಳಿಂದ ಅಡುಗೆ ಎಣ್ಣೆ ಆಮದು ಮಾಡಿಕೊಳ್ಳುವುದು ಕಷ್ಟಕರವಾಗಿದೆ. ಹೀಗಾಗಿ ಸ್ವಾವಲಂಬನೆ ಸಾಧಿಸಲು ಹೊಸ ಮಾದರಿಯ ಸೂರ್ಯಕಾಂತಿ ಬೆಳೆಗೆ ಕರ್ನಾಟಕದಲ್ಲಿ ಹೆಚ್ಚಿನ ಬೇಡಿಕೆವ್ಯಕ್ತವಾಗಿದೆ. “ಕೆಬಿಎಸ್‌ಎಚ್‌-90 ಸಂಕರಣ ಸೂರ್ಯಕಾಂತಿ’ಯು ಅಲ್ಪಾವದಿ ತಳಿಯಾಗಿದ್ದು, 80 ದಿನಗಳಲ್ಲಿ ಕಟಾವಿಗೆ ಬರಲಿದೆ. ಒಂದು ಹೆಕ್ಟೇರ್‌ಗೆ ನೀರಾವರಿಪ್ರದೇಶದಲ್ಲಿ 24 ಕ್ವಿಂಟಾಲ್‌, ಮಳೆ ಆಶ್ರಿತ ಪ್ರದೇಶದಲ್ಲಿ 12 ಕ್ವಿಂಟಾಲ್‌ ಇಳುವರಿ ಬರುತ್ತದೆ. ಶೇ.40ರಷ್ಟು ಎಣ್ಣೆಯ ಅಂಶ ಹೊಂದಿರುತ್ತದೆ. ವರ್ಷಪೂರ್ತಿ ಎಲ್ಲ ವಾತಾವರಣಗಳಲ್ಲೂ ಈ ಬೆಳೆ ಬೆಳೆಯಬಹುದಾಗಿದೆ.

ಬರಗಾಲದಲ್ಲಿ “ಕೆಬಿಎಸ್‌ಎಚ್‌ -90′ ಸೂಕ್ತ: ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಗಳಲ್ಲಿ ಎಲ್ಲೆಂದರಲ್ಲಿ ಬೆಳೆಯಬಹುದು. ಹೆಚ್ಚಿನ ನೀರಿನ ಅಗತ್ಯತೆ ಇಲ್ಲ. ರಾಜ್ಯದಲ್ಲಿ ಮಳೆ ಕೊರತೆ ಇರುವ ಹಿನ್ನೆಲೆಯಲ್ಲಿ ಈ ಕಾಲಕ್ಕೆ ಕೆಬಿಎಸ್‌ಎಚ್‌-90 ಸೂರ್ಯಕಾಂತಿ ಬೆಳೆ ಸೂಕ್ತವಾಗಿದೆ.

ಕರಾವಳಿಯಂತಹ ನೀರು ನಿಲ್ಲುವ ಪ್ರದೇಶಗಳಲ್ಲಿ ಹಾಗೂ ಉಪ್ಪು ಮಣ್ಣು ಇರುವ ಪ್ರದೇಶಕ್ಕೆ ಈ ಬೆಳೆ ಸೂಕ್ತವಲ್ಲ. ಬತ್ತದ ಗದ್ದೆಗಳಲ್ಲೂ ಇದನ್ನು ಬಿತ್ತನೆ ಮಾಡಬಹುದು. 80 ದಿನಗಳಲ್ಲಿ ಬೆಳೆ ಬರುವುದರಿಂದ ಮುಂಗಾರಿನಲ್ಲಿ ಬೆಳೆ ತೆಗೆದು ಮತ್ತೆ ಹಿಂಗಾರಿನಲ್ಲಿ ಇನ್ನೊಂದು ಬೆಳೆ ತೆಗೆದುಕೊಂಡರೆ ಹೆಚ್ಚು ಇಳುವರಿ ನಿರೀಕ್ಷಿಸಬಹುದು. ಜಿಕೆ-ವಿಕೆಯಲ್ಲಿರುವ ರಾಷ್ಟ್ರೀಯ ಬೀಜ ಪ್ರಯೋಜನೆಯಲ್ಲಿ “ಕೆಬಿಎಸ್‌ ಎಚ್‌-90 ಬೀಜವನ್ನು ಉತ್ಪಾದಿಸಿ ರೈತರಿಗೆ ಮಾರುಕಟ್ಟೆಗೆ ಕೊಡುತ್ತಾರೆ. ಕೆಬಿಎಸ್‌ಎಚ್‌-90 ತಳಿಯ ಬೀಜಕ್ಕೆ ಒಂದು ಕೆಜಿಗೆ 500 ರೂ. ನಿಗದಿಪಡಿಸಲಾಗಿದೆ. 2024ರಿಂದ ಈ ಬೀಜ ಖರೀದಿಸಬಹುದು.

ಬಿತ್ತನೆ ಮಾಡುವುದು ಹೇಗೆ ?: ಒಂದು ಎಕರೆಗೆ ಎರಡು ಕೆಜಿ ಬೀಜ ಬೇಕಾಗುತ್ತದೆ. ಎರಡು ಅಡಿ ಸಾಲು ಮಾಡಬೇಕು. ಸಾಲಿನಿಂದ ಸಾಲಿಗೆ ಎರಡು ಅಡಿ, ಗಿಡದಿಂದ ಗಿಡಕ್ಕೆ ಸಾಲಿನೊಳಗೆ ಒಂದು ಅಡಿ ಅಂತರ ನಿರ್ಮಿಸಬೇಕು. ಸಾಲಿನಲ್ಲಿಗೊಬ್ಬರ ಹಾಕಿ ಒಂದೊಂದು ಗುಣಿಗೆ ಎರೆಡೆರಡು ಬೀಜ ಬಿತ್ತಿದರೆ ಅದು 6 ದಿನಕ್ಕೆ ಮೊಳಕೆ ಬರುತ್ತದೆ. 10 ದಿನಗೊಳಗೆ ಒಂದು ಗುಣಿಯಿಂದ ಒಂದೇ ಗಿಡ ಬಿಡುತ್ತದೆ. ಒಂದು ವೇಳೆ ಒಂದು ಗುಣಿಯಲ್ಲಿ ಎರಡು ಗಿಡ ಬಿಟ್ಟರೆ ಇಳುವರಿ ಕಡಿಮೆಯಾಗುತ್ತದೆ. ವರ್ಷದಲ್ಲಿ 3 ಬಾರಿ ಬೆಳೆ ತೆಗೆಯಬಹುದು. ಒಂದೇ ಪ್ರದೇಶದಲ್ಲಿ ಪದೇಪದೆ ಬೆಳೆದರೆ ಆ ಪ್ರದೇಶದ ಮಣ್ಣಿನ ಫ‌ಲವತ್ತತೆ ಕಡಿಮೆಯಾಗುವ ಸಾಧ್ಯತೆಗಳಿರುತ್ತದೆ.

Advertisement

ಹೀಗಾಗಿ ಒಂದು ವರ್ಷ ಒಂದು ಪ್ರದೇಶದಲ್ಲಿ ಬೆಳೆದರೆ ಮತ್ತೂಂದು ವರ್ಷ ಅದರ ಪಕ್ಕದ ಜಾಗದಲ್ಲಿ ಬೆಳೆಯಬೇಕು. ಕೇಂದ್ರ ಸರ್ಕಾರದ ಬೆಂಬಲ ಬೆಲೆಯ ಪ್ರಕಾರ 1 ಕ್ವಿಂಟಾಲ್‌ಗೆ ಮಾರುಕಟ್ಟೆಯಲ್ಲಿ 6,700 ರೂ. ಇದೆ.

ಕೆಬಿಎಸ್‌ಎಚ್‌-90 ವಿಶೇಷತೆ ಏನು ?: ಸಾಮಾನ್ಯ ಸೂರ್ಯಕಾಂತಿ ಬೆಳೆಗಳಲ್ಲಿ ಇತ್ತೀಚೆಗೆ ವಿವಿಧ ರೋಗಗಳು ಬಾಧಿಸಿ ಇಳುವರಿ ಕಡಿಮೆಯಾಗುತ್ತದೆ. ಆದರೆ, ಕೆಬಿಎಸ್‌ಎಚ್‌ -90 ತಳಿ ರೋಗ ರುಜಿನ ತಡೆದುಕೊಳ್ಳುವ ಶಕ್ತಿ ಹೆಚ್ಚಿರುತ್ತದೆ. ಇದು ಉತ್ತಮ ಸಂಕರಣ ತಳಿಯಾಗಿರುವ ಹಿನ್ನೆಲೆಯಲ್ಲಿ ಸಾಮಾನ್ಯ ಸೂರ್ಯಕಾಂತಿಗಿಂತ ಇದರಲ್ಲಿ ಕಾಳು ಕಟ್ಟುವಿಕೆ ಹೆಚ್ಚಾಗಿ ಇಳುವರಿಗೆ ಸಹಕಾರಿಯಾಗಿದೆ. ಜೊತೆಗೆ ಎಣ್ಣೆಯ ಅಂಶ ಹೆಚ್ಚಿರುತ್ತದೆ. ಸೂರ್ಯಕಾಂತಿಗೆ ಹೆಚ್ಚಾಗಿ ಬಾಧಿಸುವ ಕೇದಿಗೆರೋಗ ಕೆಬಿಎಸ್‌ ಎಚ್‌-90ಗೆ ತಗುಲುವುದಿಲ್ಲ. ಹೀಗಾಗಿ ಇವುಗಳಿಗೆ ಔಷಧಿ ಸಿಂಪಡಿಸುವ ಅಗತ್ಯವಿಲ್ಲ

ಸೂರ್ಯಕಾಂತಿ ಗಿಡಗಳ ನಡುವೆ ಜೇನು ಕೃಷಿ:  ಕೆಬಿಎಸ್‌ಎಚ್‌-90 ತಳಿಯ ಸೂರ್ಯಕಾಂತಿ ಗಿಡಗಳ ಮಧ್ಯೆ ಜೇನು ಕೃಷಿ ಮೂಲಕ ರೈತರು ಇನ್ನಷ್ಟು ಲಾಭಗಳಿಸಬಹುದು. ಜೇನು ನೊಣಗಳ ಪರಾಗಸ್ಪರ್ಶಕ್ಕಾದರೆ ಒಂದು ಎಕರೆಗೆ 4 ಜೇನು ಪೆಟ್ಟಿಗೆ ಇಡಬಹುದು. ಜೇನುತುಪ್ಪ ಸಂಗ್ರಹಕ್ಕಾದರೆ 10 ಅಡಿ ಅಂತರದಲ್ಲಿ ಒಂದೊಂದು ಜೇನು ಪೆಟ್ಟಿಗೆ ಇಡಬಹುದು. ಒಂದು ಜೇನುಪೆಟ್ಟಿಯಿಂದ 10 ಕೆಜಿ ಜೇನು ಸಂಗ್ರಹಿಸಬಹುದು ಎನ್ನುತ್ತಾರೆ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಜೇನು ಕೃಷಿ ತಜ್ಞ ನಿತಿನ್‌.

ಕಳೆದ 6 ವರ್ಷಗಳ ಸತತ ಸಂಶೋಧನೆ ನಡೆಸಿ ಕೆಬಿಎಸ್‌ಎಚ್‌-90 ಸಂಕರಣ ಸೂರ್ಯಕಾಂತಿ ತಳಿ ಪತ್ತೆ ಹಚ್ಚಿ ಅಭಿವೃದ್ಧಿಪಡಿಸಿದ್ದೇವೆ. 2024ರ ಆರಂಭದಲ್ಲಿ ಇದರ ಬೀಜ ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಿದ್ಧತೆ ನಡೆಯುತ್ತಿದೆ. ಸಾಮಾನ್ಯ ಸೂರ್ಯಕಾಂತಿಗೆ ಹೋಲಿಸಿದರೆ ಈ ತಳಿಯಲ್ಲಿ ಕಡಿಮೆ ಅವಧಿಯಲ್ಲಿ ಹೆಚ್ಚಿನ ಇಳುವರಿ ತೆಗೆಯಬಹುದು.ಡಾ.ಎಸ್‌.ಡಿ.ನೆಹರು, ಹಿರಿಯ ವಿಜ್ಞಾನಿ, ಸೂರ್ಯಕಾಂತಿ ಪ್ರಾಯೋಜನೆ ವಿಭಾಗ, ಜಿಕೆ-ವಿಕೆ 

ಅವಿನಾಶ ಮೂಡಂಬಿಕಾನ

Advertisement

Udayavani is now on Telegram. Click here to join our channel and stay updated with the latest news.

Next