ಕೋಟೇಶ್ವರ: ಇಲ್ಲಿನ ಗ್ರಾ.ಪಂ. ಕಚೇರಿ ಬಳಿಯಿದ್ದ ಬೃಹತ್ ಓವರ್ ಹೆಡ್ ಟ್ಯಾಂಕನ್ನು ತೆರವು ಮಾಡುವ ವೇಳೆ ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿ ಸೃಷ್ಟಿಯಾದ ಹೊಂಡಕ್ಕೆ ಕೊನೆಗೂ ಮುಕ್ತಿ ಸಿಕ್ಕಿದೆ.
ಸರ್ವಿಸ್ ರಸ್ತೆಯಲ್ಲಿರುವ ಹೊಂಡಕ್ಕೆ ಕಾಂಕ್ರೀಟ್ ಹಾಕಿ ಮುಚ್ಚಲಾಗಿದೆ. ಇದರಿಂದ ವಾಹನ ಸವಾರರು ನಿಟ್ಟುಸಿರು ಬಿಡುವಂತಾಗಿದೆ. ಕಳೆದ ತಿಂಗಳು ಇಲ್ಲಿನ ಪಂಚಾಯತ್ ಬಳಿಯ ಬೃಹತ್ ನೀರಿನ ಟ್ಯಾಂಕ್ ತೆರವು ವೇಳೆ ಈ ಹೊಂಡ ಸೃಷ್ಟಿಯಾಗಿದ್ದು, ವಾಹನ ಸವಾರರು ನಿತ್ಯವೂ ತೊಂದರೆ ಅನುಭವಿಸುತ್ತಿದ್ದರು. ನಿತ್ಯವೂ ಈ ಮಾರ್ಗದಲ್ಲಿ ಆ್ಯಂಬುಲೆನ್ಸ್ ಸಹಿತ ಉಡುಪಿಯಿಂದ ಕುಂದಾಪುರಕ್ಕೆ 100ಕ್ಕೂ ಮಿಕ್ಕಿ ಬಸ್ ಗಳು, ಸಾವಿರಾರು ಇತರ ವಾಹನಗಳು ಸಂಚರಿಸುತ್ತವೆ. ಸರ್ವಿಸ್ ರಸ್ತೆಯು ಆ ಪ್ರದೇಶದಲ್ಲಿ ಕುಸಿದಂತಾಗಿದ್ದು, ಇಲ್ಲಿ ವಾಹನ ಒಮ್ಮೆ ನಿಲ್ಲಿಸದೇ ತೆರಳುವಂತಿಲ್ಲ ಅನ್ನುವಂತಾಗಿತ್ತು.
ಆದರೆ ಈಗ ಸರ್ವಿಸ್ ರಸ್ತೆಯ ಈ ಹೊಂಡವನ್ನು ಕಾಂಕ್ರೀಟ್ ಹಾಕಿ ಮುಚ್ಚುವ ಮೂಲಕ ವಾಹನ ಸವಾರರ ದೊಡ್ಡ ಸಮಸ್ಯೆಯನ್ನು ನಿವಾರಿಸಿದಂತಾಗಿದೆ. ಈ ಹೊಂಡ ಮುಚ್ಚುವಂತೆ ವಾಹನ ಸವಾರರು, ಸಾರ್ವಜನಿಕರು ಸಂಬಂಧಪಟ್ಟ ಸ್ಥಳೀಯ ಗ್ರಾ.ಪಂ. ಹಾಗೂ ಹೆದ್ದಾರಿ ಇಲಾಖೆಯನ್ನು ಒತ್ತಾಯಿಸಿದ್ದರು.