ಬೆಂಗಳೂರು: ನಮಗೆ ವರ್ಗಾವಣೆ ದಂಧೆಯ ಆರೋಪಿ ಸ್ಯಾಂಟ್ರೋ ರವಿನೂ ಒಂದೇ, ಮಂಗಳೂರಿನಲ್ಲಿ ಕುಕ್ಕರ್ ಬ್ಲಾಸ್ಟ್ ಪ್ರಕರಣದ ಆರೋಪಿ ಶಾರಿಕ್ನೂ ಒಂದೇ. ಎಲ್ಲ ಅಪರಾಧಿಗಳನ್ನು ರಾಜ್ಯ ಬಿಜೆಪಿ ಸರ್ಕಾರ ಸಮಾನವಾಗಿ ನೋಡುತ್ತದೆ. ಯಾವುದೇ ಆರೋಪಿಯನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ಅಪರಾಧಿಗಳೆಲ್ಲರನ್ನೂ ಕಾನೂನಿನ ಚೌಕಟ್ಟಿನೊಳಗೆ ತರುತ್ತೇವೆಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿ, ಸ್ಯಾಂಟ್ರೋ ರವಿ ಇರಲಿ, ಸ್ಯಾಂಟ್ರೋ ಅಲ್ಲದೇ ಇರೋ ರವಿ ಇರಲಿ. ಕಾನೂನಿನ ಚೌಕಟ್ಟನ್ನು ವಿರೋಧ ಮಾಡಿದವರನ್ನು ಕ್ಷಮಿಸುವ ಅವಶ್ಯಕತೆ ನಮಗಿಲ್ಲ. ಕಾನೂನು ತನ್ನದೇ ದಾರಿಯಲ್ಲಿ ಸಾಗುತ್ತದೆ. ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಕೋಲಾರದಲ್ಲಿ ಬಿಜೆಪಿಗೆ ಗೆಲುವು: ಸಿದ್ದರಾಮಯ್ಯ ಅವರು ಕೋಲಾರದಲ್ಲಿ ಸ್ಪರ್ಧಿಸುವುದಾಗಿ ಹೇಳಿರುವುದು ಅವರ ಹಕ್ಕು. ಈ ಬಗ್ಗೆ ನಾವೇನು ಹೇಳಲಾಗದು. ಆದರೆ ಯಾವ ಕ್ಷೇತ್ರದಲ್ಲಿ ನಿಲ್ಲುತ್ತೀರಿ ಅನ್ನೋದನ್ನ ಖಚಿತಪಡಿಸಿಕೊಳ್ಳುವಂತೆ ನಾವೇ ಹೇಳಿದ್ದೆವು. ಅದರಂತೆ ಅವರು ಕೋಲಾರದಿಂದ ಸ್ಪರ್ಧಿಸುವುದಾಗಿ ಪ್ರಕಟಿಸಿದ್ದಾರೆ. ಆದರೆ ಅಲ್ಲಿನ ವಿದ್ಯಮಾನಗಳನ್ನು ಗಮನಿಸಿದರೆ ಅಲ್ಲಿಯೂ ನಾವೇ ಗೆಲ್ಲುತ್ತೇವೆ ಎಂದು ಹೇಳಿದರು.