Advertisement

ಕೋವಿಡ್ 19 : ಸಂಕಷ್ಟದಲ್ಲಿ ದೈವಾರಾಧನೆಯಲ್ಲಿ ತೊಡಗಿಕೊಂಡಿರುವ ಸಮುದಾಯ..!

09:04 PM Jun 08, 2021 | Team Udayavani |

ಉಡುಪಿ/ದಕ್ಷಿಣ ಕನ್ನಡ : ಕೋವಿಡ್ ಮಹಾಮಾರಿಯಿಂದ ಇಡೀ ವಿಶ್ವಕ್ಕೆ ವಿಶ್ವವೇ ತತ್ತರಿಸಿ ಹೋಗಿದೆ. ಕಳೆದ ಬಾರಿ ಇಡೀ ದೇಶಕ್ಕೆ ದೇಶವೇ ಲಾಕ್ಡೌನ್ ಆಗಿರುವ ಕಾರಣದಿಂದಾಗಿ ಎಷ್ಟೋ ಶುಭ ಸಮಾರಂಭಗಳು, ಧಾರ್ಮಿಕ ಚಟುವಟಿಕೆಗಳು ಮುಂದೂಡಲಾಗಿ, ಆ ಶುಭ ಕಾರ್ಯಗಳನ್ನೇ ಆಧರಿಸಿ ಇದ್ದ ಸಮುದಾಯಗಳ ಬದುಕು ಪದಶಃ ಬೀದಿಗೆ ತಳ್ಳಿದಂತಾಗಿತ್ತು.

Advertisement

ಈ ವರ್ಷವೂ ಅದೇ ಪರಿಸ್ಥಿತಿ, ಕೋವಿಡ್ ಸೋಂಕಿನ ಎರಡನೇ ಅಲೆಯ ಕಾರಣದಿಂದಾಗಿ ಮತ್ತೆ ಲಾಕ್ ಡೌನ್, ಕರ್ಫ್ಯೂ ನಂತಹ ಬಿಗಿ ಕ್ರಮಗಳ ಕಾರಣದಿಂದಾಗಿ ಮತ್ತೆ ಈ ಸೀಸನ್ ನಲ್ಲಿ ನಡೆಯಬೇಕಾಗಿದ್ದ ಧಾರ್ಮಿಕ ಕಾರ್ಯಕ್ರಮಗಳೆಲ್ಲವೂ ಮುಂದೂಡಲ್ಪಟ್ಟಿವೆ.  ವಿಶೇಷವಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ವಿಶಿಷ್ಟವಾಗಿ ಕಂಡುಬರುವ ಸಂಪ್ರದಾಯ `ಭೂತಾರಾಧನೆ’ಗೂ ಲಾಕ್ ಡೌನ್ ಕರಿ ಛಾಯೆ ಬಿದ್ದಿದೆ.

ಇದನ್ನೂ ಓದಿ :   ಸಾರ್ವಜನಿಕ ಸ್ಥಳದಲ್ಲಿ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್‌ ಗೆ ಕಪಾಳಮೋಕ್ಷ : ವಿಡಿಯೋ ವೈರಲ್

ಈ ಭೂತಾರಾಧನೆ ಅಥವಾ ದೈವಾರಾಧನೆಯನ್ನೇ ನಂಬಿ ಬದುಕುತ್ತಿದ್ದ ಪರವ ಸಮುದಾಯ, ನಲಿಕೆ  ಸಮುದಾಯ, ಪಂಬದ  ಸಮುದಾಯ, ಕೊರಗ ಸಮುದಾಯ, ನಾಗಸ್ವರ ಬ್ಯಾಂಡ್ ವಾದಕರು, ದರ್ಶನ ಪಾತ್ರಿಗಳು, ಮಧ್ಯಸ್ಥರು, ಮುಕ್ಕಲಿ    ಮಡಿವಾಳರು, ಬಬ್ಬು ಸ್ವಾಮಿ  ಕೂಡುಕಟ್ಟು, ಮುಂಡಾಲ  ಸಮುದಾಯ, ಗರಡಿ ಕೂಡುಕಟ್ಟು,  ಹೀಗೆ ಹಲವಾರು ದೈವ ಚಾಕ್ರಿ ವರ್ಗದವರ ಪಾಡು ಹೇಳತೀರದಂತಾಗಿದೆ.

ಭೂತಾರಾಧನೆಯನ್ನೇ ವೃತ್ತಿಯಾಗಿಸಿಕೊಂಡವರು ಉಡುಪಿ ಹಾಗೂ ದಕ್ಷಿಣ ಕನ್ನಡದಲ್ಲಿ ಸುಮಾರು ಒಂದು ಲಕ್ಷದ ಇಪ್ಪತ್ತು ಸಾವಿರಕ್ಕೂ ಅಧಿಕ ಮಂದಿ ಇದ್ದಾರೆ. ದೈವಾರಾಧನೆಯಲ್ಲಿ  ಬರುವ ಸಂಭಾವನೆಯಲ್ಲಿಯೇ ಕುಟುಂಬವನ್ನು ನಡೆಸಬೇಕಾದ ಅನಿವಾರ್ಯ ಈ ಸಮುದಾಯದವರಿಗೆ ಇರುವ ಕಾರಣದಿಂದಾಗಿ ಕಳೆದ ಒಂದುವರೆ ವರ್ಷಗಳಿಂದ ಸಂಕಷ್ಟದಲ್ಲಿ ಸಿಲುಕಿದ್ದಾರೆ.

Advertisement

ಸರ್ಕಾರ, ಸಚಿವರು ಸ್ಪಂದಿಸುತ್ತಿಲ್ಲ

ಕೋವಿಡ್ ಕಾರಣದಿಂದ ಕಳೆದ ಬಾರಿ ದೇಶದಲ್ಲಿ ಲಾಕ್ ಡೌನ್ ಸಂದರ್ಭದಲ್ಲಿ ಎಲ್ಲಾ ಧಾರ್ಮಿಕ ಚಟುವಟಿಕೆಗಳು ಮುಂದೂಡಲಾಗಿತ್ತು. ಈ ಬಾರಿಯೂ ಕೂಡ  ಅದೇ ಪರಿಸ್ಥಿತಿ. ದೈವ ಚಾಕ್ರಿ(ದೈವಾರಾಧನೆ ಮಾಡುವವರು) ಮಾಡುವ ವರ್ಗದವರಿಗೆ ದೊಡ್ಡ ಪ್ರಮಾಣದಲ್ಲಿ ಹೊಡೆತ ಬಿದ್ದಿದೆ. ಸರ್ಕಾರ ಈ ಹಿಂದುಳಿದ ವರ್ಗದವರಿಗೆ ಇದುವೆರೆಗೂ ಯಾವುದೇ ಪರಿಹಾರವನ್ನು ನೀಡಿಲ್ಲ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನಗಳನ್ನು ಕೂಡ ಮಾಡುತ್ತಿದ್ದೇವೆ. ಆದರೇ, ಯಾವುದೇ ಪ್ರಯೋಜನವಾಗುತ್ತಿಲ್ಲ. ಜನಪ್ರತಿನಿಧಿಗಳು, ಸಚಿವರುಗಳು ಈ ವಿಚಾರವಾಗಿ ಮೌನ ತಾಳಿದ್ದಾರೆ. ದೈವ ಚಾಕ್ರಿ ಮಾಡುವ ವರ್ಗದ ಪರವಾಗಿ ಸರ್ಕಾರ ನಿಲ್ಲಬೇಕಾಗಿದೆ.

-ವಿನೋದ್ ಶೆಟ್ಟಿ

ಪ್ರಧಾನ ಕಾರ್ಯದರ್ಶಿ, ಅಖಿಲ ಭಾರತ ತುಳುನಾಡ ದೈವಾರಾಧಕರ ಒಕ್ಕೂಟ.

——————————————————–

ಸರ್ಕಾರದಿಂದ ಯಾವುದೇ ಪರಿಹಾರ ಸಿಕ್ಕಿಲ್ಲ

ಲಾಕ್ ಡೌನ್ ನ ಕಾರಣದಿಂದ ಈ ಬಾರಿಯೂ ದೈವಾರಧನೆ ನಡೆಸಲು ಅವಕಾಶವಿರಲಿಲ್ಲ. ದೈವಾರಾಧನೆಯಲ್ಲಿ ತೊಡಗಿಕೊಂಡವರಿಗೆ ಸರ್ಕಾರ ಯಾವುದೇ ರೀತಿಯಲ್ಲಿ ಸಹಾಯ ನೀಡಿಲ್ಲ. ದೈವಾರಾಧನೆಯಲ್ಲಿ ತೊಡಗಿಕೊಂಡಿರುವ ಸಮುದಾಯದವರು ಬದುಕಿಗೆ ದೈವ ಚಾಕ್ರಿಯನ್ನೇ ಆಧರಿಸಿಕೊಂಡಿದ್ದಾರೆ. ಲಾಕ್ ಡೌನ್ ಕಾರಣದಿಂದಾಗಿ ಬದುಕು ಸಂಕಷ್ಟದಲ್ಲಿದೆ.

-ರಕ್ಷಿತ್ ಕೋಟ್ಯಾನ್

ದೈವ ಮಧ್ಯಸ್ಥರು

——————————————————–

ಪರಿಹಾರ ನಿಡುವಂತೆ ಮತ್ತೊಮ್ಮೆ ಮನವಿ ಮುಂದಿಡುತ್ತೇನೆ : ಸಚಿವ ಕೋಟ

ಕೋಲ ಕಟ್ಟುವವರು ಹಾಗೂ ಗರಡಿಯ ಅರ್ಚಕರು ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಬರುವುದಿಲ್ಲ. ಆದರೇ, ಆ ವರ್ಗದವರಿಗೆ ಪರಿಹಾರ ನೀಡುವಂತೆ ಈಗಾಗಲೇ ನಾವು ಮುಖ್ಯಮಂತ್ರಿಗಳೊಂದಿಗೆ ಮಾತಾಡಿದ್ದೇವೆ. ಆರ್ಥಿಕ ಸಮಸ್ಯೆಯ ಕಾರಣದಿಂದ ಸರ್ಕಾರ ನಮ್ಮ ಮನವಿಯನ್ನು ಮಂಜೂರು ಮಾಡಿಲ್ಲ. ಮತ್ತೊಮ್ಮೆ, ದೈವಾರಾಧನೆ ಮಾಡುವವರಿಗೆ ಪರಿಹಾರ ನೀಡುವಂತೆ ಮನವಿ ಮಾಡಿಕೊಳ್ಳುತ್ತೆನೆ.

ಕೋಟ ಶ್ರೀನಿವಾಸ್ ಪೂಜಾರಿ

ಸಚಿವರು, ಧಾರ್ಮಿಕ ದತ್ತಿ ಇಲಾಖೆ ಕರ್ನಾಟಕ ಸರ್ಕಾರ

———————————————————–

ಇದನ್ನೂ ಓದಿ :   ರಾಜ್ಯದಲ್ಲಿ ಕೈಗಾರಿಕೆ ನಡೆಸುವ ಕುರಿತು ನಾಳೆ ಮುಖ್ಯಮಂತ್ರಿಗಳೊಂದಿಗೆ ಚರ್ಚೆ : ಶೆಟ್ಟರ್

Advertisement

Udayavani is now on Telegram. Click here to join our channel and stay updated with the latest news.

Next