Advertisement

Kota: ಕಾಲುಗಳಲ್ಲಿ ಬಲವಿಲ್ಲದಿದ್ದರೇನಂತೆ, ಬಾಹುಬಲ ಮಾತ್ರ ಅಮೋಘ!

03:49 PM Sep 24, 2024 | Team Udayavani |

ಕೋಟ:  ಸಾಸ್ತಾನ ಸಮೀಪದ ಪಾಂಡೇಶ್ವರ ನಿವಾಸಿ ಸುರೇಶ ಬಿ. ಅವರಿಗೆ ಪೋಲಿಯೊದಿಂದಾಗಿ ಹುಟ್ಟಿನಿಂದಲೇ ಕಾಲುಗಳಲ್ಲಿ ಬಲವಿಲ್ಲ. ಆದರೆ, ಬದುಕಿನಲ್ಲಿ ಏನಾದರೂ ಸಾಧಿಸಬೇಕೆಂಬ ಛಲಕ್ಕೆ ಮಾತ್ರ ಕೊರತೆ ಇಲ್ಲ.

Advertisement

ಕಾಲಿನಲ್ಲಿ ಶಕ್ತಿ ಇಲ್ಲದಿದ್ದರೇನಂತೆ, ಕೈಗಳಿವೆಯಲ್ಲ ಎಂದು ಬಾಹುಬಲದ ಮೇಲೆ ನಂಬಿಕೆ ಇಟ್ಟು ಅವರು ಪಂಜ ಕುಸ್ತಿ (ಆರ್ಮ್ ರೆಸ್ಲಿಂಗ್‌) ಕ್ರೀಡೆಯನ್ನು ಆರಿಸಿಕೊಂಡರು. ಅವರ ಸಾಧನೆ ಎಷ್ಟಿದೆ ಎಂದರೆ  ಈ ಬಾರಿ ವಿಕಲಚೇತನ ವಿಭಾಗದಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಏಕೈಕ ಕ್ರೀಡಾಪಟುವಾಗಿ ಗುರುತಿಸಿಕೊಂಡಿದ್ದಾರೆ.  2024ರ ಸೆ.30ರಿಂದ ಅ.10 ತನಕ  ಗ್ರೀಸ್‌ನಲ್ಲಿ ನಡೆಯುವ  ಅಂತಾರಾಷ್ಟ್ರೀಯ ಚಾಂಪಿಯನ್‌ ಶಿಪ್‌ನಲ್ಲಿ ಭಾಗವಹಿಸುತ್ತಿದ್ದಾರೆ.

ಸುರೇಶ್‌ ಬಟ್ಟೆಯಂಗಡಿಯಲ್ಲಿ ಉದ್ಯೋಗಿ. ಬಾಡಿಬಿಲ್ಡ್‌ ಬಗ್ಗೆ  ಸಾಕಷ್ಟು ಆಸಕ್ತಿ ಇವರಿಗಿದೆ.  ಆರ್ಮ್ ರೆಸ್ಲಿಂಗ್‌ ಬಗ್ಗೆ ಯೂಟ್ಯೂಬ್‌ನಲ್ಲಿ  ಅಧ್ಯಯನ ನಡೆಸುತ್ತಿದ್ದ ಸಹಪಾಠಿಯೊಬ್ಬ ನೀವು ಟ್ರೈ ಮಾಡಿ ಎಂದು  ಸಲಹೆ ನೀಡಿದ್ದ. ಅದನ್ನೇ ಒಪ್ಪಿಕೊಂಡ ಸುರೇಶ್‌ 2022ರ ಏಪ್ರಿಲ್‌ನಲ್ಲಿ ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದರು. ಅದೇ ವರ್ಷ  ಗೋವಾದಲ್ಲಿ ನಡೆದ ರಾಷ್ಟ್ರೀಯ ಮಟ್ಟದ  ಸ್ಪರ್ಧೆಯಲ್ಲಿ ಎಡ ಕೈ ಹಾಗೂ ಬಲ ಕೈ ಎರಡೂ ವಿಭಾಗದಲ್ಲಿ ಒಂದು ಚಿನ್ನ ಮತ್ತು ಒಂದು ಬೆಳ್ಳಿ ಪದಕ ಪಡೆದು  ಫ್ರಾನ್ಸ್‌ನಲ್ಲಿ ನಡೆಯುವ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದರು. ಆದರೆ ಅರ್ಥಿಕ ಮುಗ್ಗಟ್ಟಿನಿಂದ ಪಂದ್ಯಾಟದಲ್ಲಿ ಭಾಗವಹಿಸಲಾಗಿರಲಿಲ್ಲ.

ಚಿನ್ನ ತಂದ ಕೀರ್ತಿವಂತ
2023ರ ಎಪ್ರಿಲ್‌ನಲ್ಲಿ  ರಾಜ್ಯ ಮಟ್ಟದಲ್ಲಿ ಗೆದ್ದು, ಮೇನಲ್ಲಿ ನಡೆದ ರಾಷ್ಟ್ರಮಟ್ಟದ ಚಾಂಪಿಯನ್‌ ಶಿಪ್‌ ಎರಡು ಬೆಳ್ಳಿ ಪದಕ ಧರಿಸಿದರು.  ಅಕ್ಟೋಬರ್‌ನಲ್ಲಿ  ಮಲೇಶಿಯಾದಲ್ಲಿ  ನಡೆದ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಬಲ ಮತ್ತು ಎಡ ಎರಡೂ ಕೈಗಳ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದು ಭಾರತಕ್ಕೆ ಕೀರ್ತಿ ತಂದಿದ್ದರು.  ಈಗ ಮೂರನೇ ಬಾರಿಗೆ ಅವರು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಜಯಿಸಿ ಗ್ರೀಸ್‌ನಲ್ಲಿ ನಡೆಯುವ ಚಾಂಪಿಯನ್‌ಶಿಪ್‌ಗೆ ಮೂರನೇ ಬಾರಿಗೆ ಆಯ್ಕೆಯಾಗಿದ್ದಾರೆ. ಭಾರತದ ಬೇರೆ-ಬೇರೆ ರಾಜ್ಯದಿಂದ 30 ಮಂದಿ ಈ ಸ್ಪರ್ಧೆಯಲ್ಲಿದ್ದಾರೆ. ಕರ್ನಾಟಕದಿಂದ ಸುರೇಶ್‌ ಒಬ್ಬರೇ.

Advertisement

ಆರ್ಥಿಕ ಬಲ ಬೇಕಾಗಿದೆ
ಹಣವಿಲ್ಲದ ಕಾರಣಕ್ಕಾಗಿ ಹಿಂದೆ ಫ್ರಾನ್ಸ್‌ ಕೂಟವನ್ನು ಮಿಸ್‌ ಮಾಡಿಕೊಂಡಿದ್ದ ಸುರೇಶ್‌ ಅವರಿಗೆ ಈ ಬಾರಿಯೂ ಅನಿಶ್ಚಿತತೆ ಕಾಡಿದೆ. ಕ್ರೀಡಾಪ್ರೇಮಿಗಳು ಸಹಕಾರ ನೀಡಿದರೆ ಇವರ ಕ್ರೀಡಾಯಾನ ಮುಂದುವರಿಯಲಿದೆ. ಕ್ರೀಡಾಭಿಮಾನಿಗಳು, ಸಹೃದಯರು ಅವರನ್ನು ಸಂಪರ್ಕಿಸಿ (ಸಂಪರ್ಕ ಸಂಖ್ಯೆ: 9986550577) ಬೆಂಬಲಿಸಬಹುದು.

ಏನಿದು ತೋಳ್ಬಲದ ಪಂಜ ಕುಸ್ತಿ?
ಪಂಜ ಕುಸ್ತಿಯಲ್ಲಿ ಇಬ್ಬರು ಸ್ಪರ್ಧಿಗಳು ಎದುರು-ಬದುರಾಗಿ ಕುಳಿತು ಅಥವಾ ನಿಂತು ಪರಸ್ಪರರು ಒಂದು ಕೈ ಬಳಸಿ ಬಲಪ್ರಯೋಗ ಮಾಡುತ್ತಾರೆ. ಯಾರು ಮೊದಲಿಗೆ ಎದುರಾಳಿಯ ಕೈ ಭಾಗಿಸುತ್ತಾರೋ ಅವರು ಪಂದ್ಯದ ವಿಜೇತರು. ಎರಡೂ ಕೈಗಳ ವಿಭಾಗದಲ್ಲಿ ಈ ಸ್ಪರ್ಧೆ ನಡೆಯುತ್ತದೆ. ಒಲಂಪಿಕ್‌ ಸೇರಿದಂತೆ, ರಾಷ್ಟ್ರ ಮಟ್ಟದ ಕ್ರೀಡೆಗಳಲ್ಲೂ ಇದನ್ನು ಸೇರ್ಪಡೆಗೊಳಿಸಬೇಕು ಎನ್ನುವ ಬೇಡಿಕೆ ಇದೆ. 2022ರಲ್ಲಿ ಮೈಸೂರು ದಸರಾದ ಕ್ರೀಡಾಕೂಟದಲ್ಲಿ ಸುರೇಶ್‌ ಚಿನ್ನದ ಪದಕ ಪಡೆದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next