Advertisement

Laxmeshwar: ಭಾವೈಕ್ಯದ ಕೊರಿಕೊಪ್ಪ ಆಂಜನೇಯ ದೇವಸ್ಥಾನ…ಇಲ್ಲಿ ಮುಸ್ಲಿಮರೇ ಅರ್ಚಕರು

06:29 PM Aug 28, 2023 | Team Udayavani |

ಲಕ್ಷ್ಮೇಶ್ವರ: ದೇಶದಲ್ಲಿ ಇವತ್ತಿಗೂ ಅನೇಕ ಕಡೆ ಹಿಂದೂ-ಮುಸ್ಲಿಮರು ಜಾತಿ, ಧರ್ಮ ಭೇದ ಮರೆತು ಸಹೋದರತೆಯಿಂದ ಬಾಳುತ್ತಾ ಬಂದಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಂತೂ ಹಬ್ಬ ಹರಿದಿನ, ಜಾತ್ರೆ, ಸಂಪ್ರದಾಯ ಆಚರಣೆ ಸಂದರ್ಭದಲ್ಲಿ ಇದನ್ನು ಕಾಣಬಹುದಾಗಿದೆ.

Advertisement

ಇದಕ್ಕೆ ಲಕ್ಷ್ಮೇಶ್ವರದ ಸಮೀಪದ ಅಡರಕಟ್ಟಿ- ಕೊಂಡಿಕೊಪ್ಪ ಗ್ರಾಮದ ಬಳಿ ಕೊರಿಕೊಪ್ಪ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಉತ್ತಮ ಉದಾಹರಣೆಯಾಗಿದೆ. ವಿಶೇಷವಾಗಿ ಈ ದೇವಸ್ಥಾನವನ್ನು ತಲೆ ತಲಾಂತರಗಳಿಂದ ಮುಸ್ಲಿಂ, ಹಿಂದೂ ಬಾಂಧವರು ನಡೆದುಕೊಳ್ಳುತ್ತಿದ್ದು, ಇಲ್ಲಿಗೆ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಭಕ್ತರು ಆಗಮಿಸುತ್ತಾರೆ. ದೇವಸ್ಥಾನದ ಪೂಜೆಯನ್ನು ಪು. ಬಡ್ನಿ ಗ್ರಾಮದ ಮುಸ್ಲಿಂ ಕುಟುಂಬದವರೇ ಮಾಡುತ್ತಾ ಬಂದಿದ್ದಾರೆ. ಅದಕ್ಕಾಗಿ ಅವರಿಗೆ ದೇಗುಲಕ್ಕೆ ಹೊಂದಿಕೊಂಡಂತೆ ಜಮೀನಿದೆ.

ದೇವಸ್ಥಾನದ ಹಿನ್ನೆಲೆ: ಕೊರಿಕೊಪ್ಪ ಆಂಜನೇಯ ದೇವಸ್ಥಾನ ನೂರಾರು ವರ್ಷಗಳ ಹಿನ್ನೆಲೆ ಹೊಂದಿದೆ. ದೇವಸ್ಥಾವಿರುವ ಪ್ರದೇಶದಲ್ಲಿ ಹಿಂದೆ ಕೊನೇರಿಕೊಪ್ಪ, ಕೊರಿಕೊಪ್ಪ ಹಾಗೂ ಕೊಂಡಿಕೊಪ್ಪ ಎಂಬ ಗ್ರಾಮಗಳು ಇದ್ದವು. ಈ ಗ್ರಾಮಗಳಲ್ಲಿನ ಜನರು ಪ್ಲೇಗ್‌, ಸಿಡುಬು, ಕಾಲರಾಗಳಂತ ಸಾಂಕ್ರಾಮಿಕ ಕಾಯಿಲೆಗಳಿಂದ ಗ್ರಾಮಗಳನ್ನು ತೊರೆದು ಬೇರೆಡೆ ನೆಲೆ ನಿಂತರು. ಇದಕ್ಕೆ ಸಾಕ್ಷಿ ಎಂಬಂತೆ ಈ ಸ್ಥಳದಲ್ಲಿರುವ ಆಂಜನೇಯ, ದೇವಿ ದೇವಸ್ಥಾನ, ಇಲ್ಲಿನ ಜಮೀನುಗಳಲ್ಲಿ ಈಗಲೂ ಆಗಾಗ್ಗೆ ಕಾಣಸಿಗುವ ಒಡೆದ ಮಣ್ಣಿನ ಮಡಕೆ, ಬಿಸುವ ಕಲ್ಲು, ಒಳ್ಳಕಲ್ಲು, ಧಾನ್ಯ ಸಂಗ್ರಹದ ಹಗೆವು ಪತ್ತೆಯಾಗುತ್ತವೆ.

ಅಲ್ಲದೇ ವಿಶೇಷತೆ ಹೊಂದಿರುವ ದೇವಸ್ಥಾನದ ಸುತ್ತ ನಿಧಿ ಸಿಗುತ್ತದೆಂಬ ಕಾರಣದಿಂದ ದೇವಸ್ಥಾನದ ಸುತ್ತಲು ನಿಧಿ ಕಳ್ಳರು ಗುಂಡಿ ತೊಡಿರುವುದು, ಮೂರ್ತಿ ಧ್ವಂಸ, ವಾಮಾಚಾರ ಮಾಡುವ ಮೂಲಕ ನಿಧಿ ಆಸೆಗೆ ಈ ಸ್ಥಳದಲ್ಲಿ ಅನೇಕ ದುಷ್ಕೃತ್ಯಗಳು ನಡೆಯುತ್ತಲೇ ಇವೆ. ಆದರೆ ಸುತ್ತಲಿನ ನೂರಾರು ರೈತರಿಗೆ ಇಷ್ಟಾರ್ಥಸಿದ್ಧಿಸುವ ದೇವಸ್ಥಾನ ಇದಾಗಿದೆ. ಕೇವಲ ಕಲ್ಲಿನ ಗೂಡಿನಂತಿರುವ ದೇವಸ್ಥಾನ ಜೀರ್ಣೋದ್ಧಾರ ಮಾಡಬೇಕೆಂದು ಕೊಂಡಿಕೊಪ್ಪ, ಅಡರಕಟ್ಟಿ, ಪು. ಬಡ್ನಿ, ಲಕ್ಷ್ಮೇಶ್ವರ ಭಾಗದ ರೈತರೆಲ್ಲರ ಸಂಕಲ್ಪ-ಸಹಕಾರದಿಂದ ದೇವಸ್ಥಾನ ಜೀರ್ಣೋದ್ಧಾರ ಮಾಡಿದ್ದಾರೆ.

ಮೂರ್ತಿ ಮರು ಪ್ರತಿಷ್ಠಾಪನೆ
ಶ್ರಾವಣ ಮಾಸದ 2ನೇ ಶನಿವಾರದ ದೇವಸ್ಥಾನದಲ್ಲಿ ಮೂಲ ಆಂಜನೇಯ ಮೂರ್ತಿ ಮರು ಪ್ರತಿಷ್ಠಾಪನೆ, ಹೋಮ, ಹವನ, ಅಭಿಷೇಕ, ಕುಂಕುಮಾರ್ಚನೆ, ಭಜನೆ ಸೇರಿದಂತೆ ವಿವಿಧ ಸಾಂಪ್ರದಾಯಿಕ ಪೂಜಾ ಕಾರ್ಯಕ್ರಮ ನೆರವೇರಿಸಲಾಯಿತು. ಶ್ರದ್ಧಾ, ಭಕ್ತಿ ನಂಬಿಕೆಯುಳ್ಳ ಅಪಾರ ಭಕ್ತರು ದರ್ಶನ ಪಡೆದರು. ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ರೈತರಾದ ಶಿವಪುತ್ರಯ್ಯ ಶಿಗ್ಲಿಮಠ, ರಾಮಣ್ಣ ಚಿಕ್ಕಣ್ಣವರ, ಶಿವಪ್ಪ ಜೈನ್‌, ರವಿ ನಾಯಕ, ಮೊಹಮ್ಮದ್‌ ಲಕ್ಷ್ಮೇಶ್ವರ, ಲಕ್ಷ್ಮಣ ಲಮಾಣಿ, ಬಸವರಾಜ ದೊಡಮನಿ, ಅಶೋಕ ಬನ್ನಿಮಟ್ಟಿ, ಜೀನೆಶ್‌ ಜೈನ್‌, ಮಂಜು ಲಮಾಣಿ ಸೇರಿ ಹಲವರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next