ಕೊರಟಗೆರೆ : ನಿರ್ಜನ ಪ್ರದೇಶಗಳಲ್ಲಿ ಒಂಟಿ ಜನರನ್ನು ಟಾರ್ಗೆಟ್ ಮಾಡಿ ಅಡ್ಡಗಟ್ಟಿ ಲಾಂಗು, ಮಚ್ಚು, ಚಾಕು ತೋರಿಸಿ ದರೋಡೆ ಮಾಡುತ್ತಿದ್ದ ಇಬ್ಬರು ಅಂತರರಾಜ್ಯ ದರೋಡೆಕೋರರನ್ನು ಬಂಧಿಸುವಲ್ಲಿ ಕೊರಟಗೆರೆ ಪೋಲೀಸರು ಇತ್ತೀಚಿಗೆ ಯಶಸ್ವಿಯಾಗಿದ್ದಾರೆ.
ಕೊರಟಗೆರೆ ತಾಲೂಕಿನಲ್ಲಿ 3 ಪ್ರಕರಣ, ಕೊಡಿಗೇನಹಳ್ಳಿಯಲ್ಲಿ 1, ಮಿಡಿಗೇಶಿಯಲ್ಲಿ 1, ಗುಡಿಬಂಡೆ ಬಳಿ 1 ಪ್ರಕರಣ, ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ 1 ಪ್ರಕರಣ ಸೇರಿದಂತೆ ಒಟ್ಟು 7ಪ್ರಕರಣಗಳಲ್ಲಿ 7.30 ಲಕ್ಷ ರೂಗಳಿಗೂ ಹೆಚ್ಚು ಮೌಲ್ಯದ ಚಿನ್ನಾಭರಣ ದರೋಡೆ ಮಾಡಿದ 4 ಅಂತರರಾಜ್ಯ ದರೋಡೆಕೋರರ ಪೈಕಿ ಇಬ್ಬರನ್ನು ಬಂಧಿಸಿದ್ದಾರೆ.
ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಚೇಳೂರು ಗ್ರಾಮದ ಮಹೇಶ್, ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕು ಹೊಸೂರುನ ಶ್ರೀನಿವಾಸ್ ಬಂಧಿತ ಆರೋಪಿಗಳಾಗಿದ್ದು, ಉಳಿದಂತೆ ಹಿಂದೂಪುರದ ಮಂಜುನಾಥ್ ಹಾಗೂ ಗೌರಿಬಿದನೂರು ಚೇತನ್ ಎಂಬುವವರು ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದು ಪೊಲೀಸರ ಕೈಯಿಂದ ತಪ್ಪೊಪ್ಪಿಕೊಂಡಿದ್ದಾರೆ.
ಪ್ರಕರಣದ ಹಿನ್ನೆಲೆ :
Related Articles
ಕಳೆದ ಮೂರು ತಿಂಗಳುಗಳ ಹಿಂದೆ ಮಾರ್ಚ್ 17 ರಂದು ಮಧುಗಿರಿ ತಾಲೂಕು ಬ್ಯಾಲ್ಯ ಗ್ರಾಮದ ನಂದೀಶ ಆರಾಧ್ಯ ಎಂಬುವವರು ಟಿವಿಎಸ್ 100 ಮೋಟರ್ ಸೈಕಲ್ ನಲ್ಲಿ ತನ್ನ ಹೆಂಡತಿಯೊಂದಿಗೆ ಸ್ವಗ್ರಾಮಕ್ಕೆ ಹಿಂದಿರುಗುತ್ತಿರುವಾಗ ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಯಾದಗೆರೆ ಸಮೀಪ ಮೂರು ಜನ ಡಕಾಯಿತರ ಗುಂಪು ಕಾರಿನಲ್ಲಿ ಹಿಂಬಾಲಿಸಿ ಬಂದು ಬೈಕ್ ಅಡ್ಡಗಟ್ಟಿ ಲಾಂಗು-ಮಚ್ಚು ಹಾಗೂ ಚಾಕು ತೋರಿಸಿ ಗಂಡ- ಹೆಂಡತಿಯಿಂದ 77 ಗ್ರಾಂ 2 ಚಿನ್ನದ ಸರಗಳನ್ನು ಕದ್ದು ಪರಾರಿಯಾಗಿದ್ದರು ಈ ಪ್ರಕರಣ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು.
ಇದನ್ನೂ ಓದಿ : ಪ್ರಧಾನಿ ರಾಜ್ಯ ಪ್ರವಾಸ : ಡಜನ್ ಪ್ರಶ್ನೆಗಳನ್ನು ಮುಂದಿಟ್ಟ ರಾಮಲಿಂಗಾ ರೆಡ್ಡಿ
ಉಳಿದಂತೆ ಬೊಮ್ಮಲದೇವಿಪುರ ಗ್ರಾಮಕ್ಕೆ ಬರುವಾಗ ಮಾರ್ಗದ ಮಧ್ಯೆ ಗಂಡ-ಹೆಂಡತಿ ಅಡ್ಡಗಟ್ಟಿ ಲಾಂಗು-ಮಚ್ಚು- ಚಾಕು ತೋರಿಸಿ ಕತ್ತಿನಲ್ಲಿದ್ದ ಚಿನ್ನದ ಸರ ಮತ್ತು ನಗದು ನಂತರ ಮಲ್ಲೇಕಾವು ಬಳಿ ದನ ಮೇಯಿಸುತ್ತಿದ್ದ ಅಜ್ಜಿಗೆ ಲಾಂಗ್ ನಿಂದ ಹೊಡೆದು ಚಿನ್ನದ ಕಾಸಿನ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದರು. ಉಳಿದಂತೆ ಕೊಡಿಗೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಗುಂಡಗಲ್ಲು ಬಳಿ ಗಂಡ-ಹೆಂಡತಿಯನ್ನ ಅಡ್ಡಗಟ್ಟಿ ಮಾಂಗಲ್ಯ ಸರ ದೋಚಿದ್ದರು ಎನ್ನಲಾಗಿದೆ.
ಈ ಎಲ್ಲಾ ಪ್ರಕರಣಗಳನ್ನು ಬೇಧಿಸಲು ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪುರ್ ಒಂದು ವಿಶೇಷ ತಂಡವನ್ನು ರಚನೆ ಮಾಡಿ ಅಡಿಷನಲ್ ಎಸ್ಪಿ ಉದೇಶ್, ಡಿವೈಎಸ್ಪಿ ರಾಮಕೃಷ್ಣಯ್ಯ ಮಾರ್ಗದರ್ಶನದಂತೆ ಸಿಪಿಐ ಸಿದ್ದರಾಮೇಶ್ವರ ಮಧುಗಿರಿ ಸಿಪಿಐ ಸರ್ದಾರ್, ಕೊಡಿಗೇನಹಳ್ಳಿ ಪಿಎಸ್ಐ ನಾಗರಾಜು ಸೇರಿ ತಂಡ ರಚನೆ ಮಾಡಿ ಇವರೊಟ್ಟಿಗೆ ಮಿಡಿಗೇಶಿ ಎಎಸ್ಐ ಖಾನ್, ಕೊರಟಗೆರೆ ಮೋಹನ್ ಕುಮಾರ್, ನಾರಾಯಣ್, ಸಿದ್ದಲಿಂಗ ಪ್ರಸನ್ನ, ಸೈಯದ್ ರಿಫತ್ ಅಲಿ, ಎಸ್ಪಿ ಕಚೇರಿಯ ತಾಂತ್ರಿಕ ಸಲಹೆಗಾರ ರಮೇಶ್ ಒಳಗೊಂಡ ತಂಡ ಯಶಸ್ವಿ ಕಾರ್ಯಾಚರಣೆ ನಡೆಸಿ ಅಂತರರಾಜ್ಯ ಡಕಾಯಿತರನ್ನು ಎಡಮುರಿ ಕಟ್ಟಿ ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಅಂತರ್ರಾಜ್ಯ ಡಕಾಯಿತರ ಗುಂಪನ್ನು ಬೇಧಿಸಿ ನಾಲ್ಕು ಜನ ಡಕಾಯಿತರ ಪೈಕಿ ಇಬ್ಬರನ್ನು ಬಂದಿಸಿ ಇಡೀ ಪ್ರಕರಣ ಬೆಳಕಿಗೆ ತಂದ ಪೊಲೀಸ್ ತಂಡಕ್ಕೆ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪುರ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.