ಕೊರಟಗೆರೆ: ತಾಲೂಕು ಹೊಳವನಹಳ್ಳಿ ಹೋಬಳಿ ಅರಸಾಪುರ ಗ್ರಾಪಂಯ ಅರಸಾಪುರ, ಬೈರೇನಹಳ್ಳಿ ಮತ್ತು ಅರಸಾಪುರ ತಾಂಡದ40ಕ್ಕೂ ಅಧಿಕ ಬಡಜನರ ಮನೆಗಳು ರಾತ್ರೋರಾತ್ರಿ ನೆಲಸಮವಾಗಿವೆ. ರೈತಾಪಿವರ್ಗ ಮತ್ತು ಕೂಲಿಕಾರ್ಮಿಕ ಕುಟುಂಬಗಳಿಗೆ ಸಮಸ್ಯೆಯಾದ್ರು ತುಮಕೂರು ಜಿಲ್ಲೆಯ ಸಂಸದ, ಸಚಿವ ಅಥವಾ ಸ್ಥಳೀಯ ಶಾಸಕರು ಭೇಟಿ ನೀಡದೇ ನಿರ್ಲಕ್ಷ್ಯ ವಹಿಸಿರುವುದೇ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ರಾಷ್ಟ್ರೀಯ ಹೆದ್ದಾರಿ ರಸ್ತೆಯ ಜಾಗದಲ್ಲಿ ರೈತಾಪಿವರ್ಗ ಮತ್ತು ಕೂಲಿಕಾರ್ಮಿಕರ ಮನೆಗಳು ಸೇರಿದಂತೆ ಸರಕಾರಿ ಶಾಲೆ, ಅಂಗನವಾಡಿ ಕೇಂದ್ರ, ಕಂದಾಯ ಇಲಾಖೆಯ ಕಚೇರಿ, ಶುದ್ದ ಕುಡಿಯುವ ನೀರಿನ ಘಟಕವು ಸಹ ನಿರ್ಮಾಣ ಆಗಿವೆ. ರೈತರೇನೂ ಸರಿ ಅವರಿಗೆ ತಿಳಿಯಲಿಲ್ಲ ಸರಕಾರಿ ಅಧಿಕಾರಿಗಳಿಗೆ ಇದರ ಮಾಹಿತಿ ಇಲ್ಲವೇ. ಇದ್ದರೂ ಅನುದಾನ ಬಳಕೆ ಮಾಡುವ ತರಾತುರಿಯ ಕೆಲಸಕ್ಕೆ ಮುಂದಾಗಿ ಈಗ ಪಶ್ಚಾತಾಪ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.
235 ಕೋಟಿ ರೂ. ವೆಚ್ಚದ ಹೆದ್ದಾರಿ ಕಾಮಗಾರಿ
ಚಿಕ್ಕಬಳ್ಳಾಪುರದಿಂದ ಗೌರಿಬಿದನೂರು ಮಾರ್ಗವಾಗಿ ಕೊರಟಗೆರೆಯ ಬೈರೇನಹಳ್ಳಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯ 51.5 ಕಿಮೀ ನಾಲ್ಕುಪಥದ ರಾಷ್ಟ್ರೀಯ ಹೆದ್ದಾರಿ ರಸ್ತೆ ಉನ್ನತೀಕರಣ ಕಾಮಗಾರಿ. ಬೀದರ್ ಮೂಲದ ಕೆಜಿಸಿಐಪಿಎಲ್ ಖಾಸಗಿ ಕಂಪನಿಯು 235 ಕೋಟಿ ರೂ. ಅನುದಾನದ ಟೆಂಡರ್ ಪಡೆದಿದ್ದಾರೆ. ಸ್ಥಳೀಯರಿಗೆ ಮಾಹಿತಿಯನ್ನೇ ನೀಡದೇ ಗ್ರಾಮಗಳಲ್ಲಿ 41 ಅಡಿ ವiತ್ತು ಹೊರಗಡೆ 46 ಅಡಿ ಅಗಲೀಕರಣದ ಕಾಮಗಾರಿಯನ್ನು ಸ್ಥಳೀಯರಿಗೆ ತಿಳಿಸದೇ ರಾತ್ರೋರಾತ್ರಿ ಪ್ರಾರಂಭ ಮಾಡಲಾಗಿದೆ.
Related Articles
ನಮಗೆ ಮಾಹಿತಿಯೇ ನೀಡದೇ ರಾತ್ರೋರಾತ್ರಿ ಮನೆಗಳ ನೆಲಸಮ ಮಾಡಿದ್ದಾರೆ. ನಮ್ಮ ಕುಟುಂಬಗಳ ಜೀವಕ್ಕೆ ಬೆಲೆಯೇ ಇಲ್ಲವೇ. ನಾವು ಪ್ರಶ್ನೆ ಮಾಡಿದ್ರೇ ನಮ್ಮ ಮೇಲೆ ದಬ್ಬಾಳಿಕೆ ಮಾಡ್ತಾರೇ. ರಂಜಾನ್ ಹಬ್ಬವಿದೆ ೧ ತಿಂಗಳ ಅವಕಾಶ ನೀಡಿ ಅಂದರೂ ಕರುಣೆಯೇ ತೋರದೇ ಮನೆಗಳನ್ನ ಒಡೆದು ಹಾಕಿದರು. ಮತ ಕೇಳಲು ಯಾರಾದರೂ ನಮ್ಮೂರಿಗೆ ಬರಲಿ ಬುದ್ದಿ ಕಲಿಸುತ್ತೇವೆ ಎಂದು ಅರಸಾಪುರ ಸ್ಥಳೀಯ ನಿವಾಸಿ ನಹೀಮ್ ಉನ್ನಿಸಾ ಪ್ರಶ್ನಿಸಿದ್ದಾರೆ.
ಅರಸಾಪುರ ಗ್ರಾಪಂ 30 ವರ್ಷದ ಹಿಂದೆ ಮನೆಯ ಖಾತೆ ಮಾಡಿಕೊಟ್ಟು ವಸತಿ ಯೋಜನೆಯಡಿ ಅನುಧಾನವು ನೀಡಿದೆ. ಪ್ರತಿವರ್ಷವು ನಮ್ಮ ಹತ್ತಿರ ಮನೆ ಮತ್ತು ನೀರಿನ ಕಂದಾಯ ವಸೂಲಿ ಮಾಡ್ತಾರೇ. ಈಗ ರಾಷ್ಟ್ರೀಯ ಹೆದ್ದಾರಿಯವ್ರು ಬಂದು ಜಾಗ ನಮ್ಮದು ಅಂತಾರೇ. ಸಾಲ ಮಾಡಿ ಮನೆ ಕಟ್ಟಿದ್ದೇವೆ ಈಗ ನಾವು ಎಲ್ಲಿಗೇ ಹೋಗ್ಬೇಕು ಎಂದು ಅರಸಾಪುರ ನಿವಾಸಿ ಶಮೀವುಲ್ಲಾ ಪ್ರಶ್ನಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಜಾಗದಲ್ಲಿ ಮನೆ ಅಥವಾ ಸರಕಾರಿ ಕಟ್ಟಡ ನಿರ್ಮಾಣಕ್ಕೆ ಅವಕಾಶವಿಲ್ಲ. ಗ್ರಾಪಂಯಿಂದ ಮನೆ ಜಾಗ ಮಂಜೂರು ಮತ್ತು ಕಂದಾಯ ವಸೂಲಾತಿಯ ಬಗ್ಗೆ ತಕ್ಷಣ ಮಾಹಿತಿ ಪಡೆಯುತ್ತೇನೆ. ಅರಸಾಪುರ ಗ್ರಾಮಕ್ಕೆ ತಕ್ಷಣ ಬೇಟಿ ನೀಡಿ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ಜೊತೆ ಚರ್ಚಿಸಿ ರೈತಾಪಿವರ್ಗ ಮತ್ತು ಕೂಲಿಕಾರ್ಮಿಕರಿಗೆ ಅನುಕೂಲ ಕಲ್ಪಿಸುತ್ತೇನೆ ಎಂದು ಕೊರಟಗೆರೆ ತಹಶೀಲ್ದಾರ್ ಮುನಿಶಾಮಿ ರೆಡ್ಡಿ ಹೇಳಿದ್ದಾರೆ.