Advertisement

ಇತರ ಭಾಷೆಗಳನ್ನು ಕಸಿಯುತ್ತಿರುವ ಇಂಗ್ಲಿಷ್‌: ಸಚಿವ ಅಶ್ವತ್ಥನಾರಾಯಣ

10:48 PM Sep 18, 2022 | Team Udayavani |

ಬೆಂಗಳೂರು: ದೇಶದ ಎಲ್ಲ ಭಾಷೆ, ಸಂಸ್ಕೃತಿಗಳಿಗೆ ಆಂಗ್ಲ ಭಾಷೆ ದೊಡ್ಡ ಸವಾಲಾಗಿದೆ. ಅದು ಇತರ ಸ್ಥಳೀಯ ಭಾಷೆಗಳನ್ನು ಕಸಿದುಕೊಳ್ಳುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ| ಸಿ. ಎನ್‌. ಅಶ್ವತ್ಥನಾರಾಯಣ ಆತಂಕ ವ್ಯಕ್ತಪಡಿಸಿದರು.

Advertisement

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ಮಲ್ಲೇಶ್ವರದ ಕಾಶಿ ಮಠದಲ್ಲಿ ರವಿವಾರ ಹಮ್ಮಿಕೊಳ್ಳಲಾಗಿದ್ದ “ಗೌರವ ಪ್ರಶಸ್ತಿ-2022′ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಸಂಸ್ಕೃತಿ, ಭಾಷೆ, ಆಚಾರ-ವಿಚಾರಗಳನ್ನು ಉಳಿಸಿಕೊಳ್ಳುವುದು ದೊಡ್ಡ ಸವಾಲಾಗಿದೆ. ಜಾಗತೀಕರಣದ ಬಳಿಕ ಇಂಗ್ಲಿಷ್‌ ಭಾಷೆ ನಮ್ಮೆಲ್ಲರನ್ನೂ ಆಕ್ರಮಿಸಿಕೊಂಡಿದೆ ಎಂದು ಹೇಳಿದರು.

ಪ್ರತಿಷ್ಠೆಗಾಗಿ ಈ ಭಾಷೆಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಮಕ್ಕಳನ್ನು ಕನ್ನಡ ಮಾಧ್ಯಮಕ್ಕೆ ಸೇರಿಸಲು ಪಾಲಕರೇ ಹಿಂದೇಟು ಹಾಕುತ್ತಿದ್ದಾರೆ. ಆದರೆ ಪ್ರಪಂಚದ ಬೇರೆ ಭಾಗಗಳಲ್ಲಿ ಮಾತೃ ಭಾಷೆಯಲ್ಲೇ ಶಿಕ್ಷಣ ಕೊಡಿಸಲಾಗುತ್ತಿದೆ. ನಾವು ಮಾತೃ ಭಾಷೆಯಲ್ಲಿ ಹಿಡಿತ ಸಾಧಿಸಿದರೆ ಎಲ್ಲ ಭಾಷೆಗಳನ್ನೂ ಕಲಿಯಬಹುದು ಎಂಬುದು ವೈಜ್ಞಾನಿಕವಾಗಿ ದೃಢಪಟ್ಟಿದೆ. ಎಷ್ಟೇ ದೊಡ್ಡ ಹುದ್ದೇಗೇರಿದರೂ ಅಂತಿಮವಾಗಿ ನಮ್ಮ ಸಂಸ್ಕೃತಿ, ಆಚಾರ ವಿಚಾರ ಆಧಾರಿತವಾಗಿ ನಮ್ಮನ್ನು ಗುರುತಿಸುತ್ತಾರೆ ಎಂದರು.

ಒಂದೂವರೆ ಸಾವಿರ ಭಾಷೆ ಕಣ್ಮರೆ: ಡಿ.ವಿ.
ಸಂಸದ ಡಿ.ವಿ. ಸದಾನಂದ ಗೌಡ ಮಾತನಾಡಿ, ಸಂಸ್ಕೃತಿ, ಸಂಪ್ರದಾಯ, ಸಂಸ್ಕಾರ, ಜೀವನ ಪದ್ಧತಿ ಸಮಾಜದ ಆಧಾರ ಸ್ಥಂಭಗಳು. ಈ ಪೈಕಿ ಒಂದರಲ್ಲಿ ಕೊರತೆಯಾದರೂ ಸಮಾಜದ ಅಧಃಪತನ ಆಗುತ್ತದೆ. ನಮ್ಮ ದೇಶದಲ್ಲಿದ್ದ 2,800 ಭಾಷೆಗಳ ಪೈಕಿ ಒಂದೂವರೆ ಸಾವಿರ ಭಾಷೆಗಳು ಕಣ್ಮರೆಯಾಗಿವೆ ಎಂದು ಹೇಳಿದರು.

ಗೌರವ ಪ್ರಶಸ್ತಿ ಪುರಸ್ಕೃತರು
ಸಾಧಕರಾದ ಎಚ್‌.ಎಂ. ಪೆರ್ನಾಲ್‌, ರಮೇಶ್‌ ಕಾಮತ್‌, ಕುಮುದಾ ಗಡಕರ್‌ ಅವರಿಗೆ “ಗೌರವ ಪ್ರಶಸ್ತಿ-2022′ ಪ್ರದಾನಿಸಲಾಯಿತು.

Advertisement

1ರಿಂದ 4ನೇ ತರಗತಿ ವರೆಗೆ ಕೊಂಕಣಿ ಭಾಷೆಯಲ್ಲೂ ಪಾಠ ಮಾಡಲು ಅವಕಾಶ ಕಲ್ಪಿಸಬೇಕೆಂದು ಈ ಹಿಂದೆ ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಕೊಂಕಣಿಗರ ಕೆಲವು ಸಮಸ್ಯೆಗಳನ್ನು ಪರಿಹರಿಸಲು ಸರಕಾರ ಮುತುವರ್ಜಿ ವಹಿಸಬೇಕು.
-ಡಾ| ಕೆ. ಜಗದೀಶ್‌ ಪೈ, ಅಧ್ಯಕ್ಷ, ಕೊಂಕಣಿ ಸಾಹಿತ್ಯ ಅಕಾಡೆಮಿ

Advertisement

Udayavani is now on Telegram. Click here to join our channel and stay updated with the latest news.

Next