Advertisement

ಮುಂಗಾರು ಮಳೆ ಎದುರಿಸಲು ಕೊಂಕಣ ರೈಲ್ವೇ ಸಿದ್ಧತೆ

11:13 AM Jun 08, 2022 | Team Udayavani |

ಮುಂಬಯಿ: ಮುಂಗಾರು ಋತುವಿನಲ್ಲಿ ಕೊಂಕಣ ಪ್ರದೇಶದಲ್ಲಿ  ಭಾರೀ ಮಳೆಯಾಗುತ್ತಿದ್ದು, ಈ ಮಧ್ಯೆ ಕೊಂಕಣ ರೈಲ್ವೇ ತನ್ನ 740 ಕಿ. ಮೀ. ಮಾರ್ಗದಲ್ಲಿ ಯೋಜಿತ ಸುರಕ್ಷಾ ಕಾರ್ಯಗಳನ್ನು ಪೂರ್ಣಗೊಳಿಸಿ ಸಜ್ಜುಗೊಂಡಿದೆ.

Advertisement

ಕಳೆದ ಕೆಲವು ವರ್ಷಗಳಲ್ಲಿ  ರೈಲು ಮಾರ್ಗದ ಉದ್ದಕ್ಕೂ ಕಾರ್ಯಗತಗೊಳಿ ಸಲಾದ ಸುರಕ್ಷಾ ಕ್ರಮಗಳಿಂದಾಗಿ ಬಂಡೆಗಳು ಮತ್ತು ಮಣ್ಣು ಕುಸಿಯುವ ಘಟನೆಗಳು ಗಣನೀಯವಾಗಿ ಕಡಿಮೆ ಯಾಗಿದೆ. ಕಳೆದ 9 ವರ್ಷಗಳಲ್ಲಿ  ಮಳೆಗಾಲದಲ್ಲಿ ಬಂಡೆಗಳ ಕುಸಿತ ದಿಂದಾಗಿ ರೈಲು ಸೇವೆಗಳಿಗೆ ಯಾವುದೇ ದೊಡ್ಡ ಅಡಚಣೆ ಉಂಟಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸುಮಾರು 846 ಸಿಬಂದಿ ಗಸ್ತು :

ರೈಲುಗಳ ಸುರಕ್ಷಿತ ಸಂಚಾರಕ್ಕಾಗಿ ಕೊಂಕಣ ರೈಲ್ವೇ ನಿಗದಿತ ಮಾರ್ಗ ಸೂಚಿಗಳ ಪ್ರಕಾರ ಮುಂಗಾರು ಗಸ್ತು ನಡೆಸಲಿದೆ. ಮಳೆಗಾಲದಲ್ಲಿ ಸುಮಾರು 846 ಸಿಬಂದಿ ಕೊಂಕಣ ರೈಲ್ವೇ ಮಾರ್ಗದಲ್ಲಿ ಗಸ್ತು ತಿರುಗಲಿದ್ದು, ಗುರುತಿಸಲಾದ ಸೂಕ್ಷ್ಮ ಸ್ಥಳಗಳಲ್ಲಿ ಹಗಲಿರುಳು ಗಸ್ತು ನಡೆಸಲಿದ್ದಾರೆ. ಸ್ಟೇಷನರಿ ವಾಚ್‌ಮನ್‌ಗಳನ್ನು 24 ಗಂಟೆಗಳ ಕಾಲ ನಿಯೋಜಿಸಲಾಗಿದ್ದು, ಈ ಸ್ಥಳಗಳಲ್ಲಿ ವೇಗದ ನಿರ್ಬಂಧ ವಿಧಿಸಲಾಗಿದೆ. ಬಿಆರ್‌ಎನ್‌ ಮೌಂಟೆಡ್‌ ಅಗೆಯುವ ಯಂತ್ರಗಳನ್ನು ತುರ್ತು ಸಂದರ್ಭದಲ್ಲಿ  ಬಳಕೆಗಾಗಿ ನಿಗದಿತ ಸ್ಥಳಗಳಲ್ಲಿ  ಸಜ್ಜುಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಭಾರೀ ಮಳೆಯಲ್ಲಿ 40 ಕಿ. ಮೀ. ವೇಗ :

Advertisement

ಭಾರೀ ಮಳೆಯ ಸಂದರ್ಭದಲ್ಲಿ  40 ಕಿ. ಮೀ. ವೇಗದಲ್ಲಿ ರೈಲುಗಳನ್ನು ಓಡಿಸಲು ರೈಲಿನ ಪೈಲಟ್‌ಗಳಿಗೆ ಸೂಚನೆ ನೀಡಲಾಗಿದೆ. ಸ್ವಯಂಚಾಲಿತ ಅಪಘಾತ ಪರಿಹಾರ ವೈದ್ಯಕೀಯ ವ್ಯಾನ್‌ (ಎಆರ್‌ಎಂವಿ), ಆಪರೇಶನ್‌ ಥಿಯೇಟರ್‌, ತುರ್ತು ವೈದ್ಯಕೀಯ ನೆರವು ರತ್ನಗಿರಿ ಮತ್ತು ವೆರ್ನಾದಲ್ಲಿ ಹಾಗೂ ಅಪಘಾತ ಪರಿಹಾರ ರೈಲು (ART) ಅನ್ನು ವೆರ್ನಾದಲ್ಲಿ  ಸಜ್ಜುಗೊಳಿಸಲಾಗಿದೆ. ತುರ್ತು ಪರಿಸ್ಥಿತಿಯಲ್ಲಿ  ನಿಯಂತ್ರಣ ಕಚೇರಿ, ನಿಲ್ದಾಣವನ್ನು ಸಂಪರ್ಕಿಸಲು ಎಲ್ಲ ಸುರಕ್ಷಾ ವರ್ಗದ ಸಿಬಂದಿಗೆ ಮೊಬೈಲ್‌ ಫೋನ್‌ಗಳನ್ನು ಒದಗಿಸಲಾಗಿದೆ. ರೈಲು ಗಳ ಪೈಲಟ್‌ಗಳು ಮತ್ತು ಗಾರ್ಡ್‌ ಗಳಿಗೆ ವಾಕಿಟಾಕಿ ಒದಗಿಸಲಾಗಿದೆ.

ತುರ್ತು ಸಂಪರ್ಕ :

ಕೊಂಕಣ ರೈಲ್ವೇಯಲ್ಲಿನ ಪ್ರತಿ ಯೊಂದು ನಿಲ್ದಾಣವು 25 ವ್ಯಾಟ್‌ ವಿಎಚ್‌ಎಫ್‌ ಬೇಸ್‌ ಸ್ಟೇಷನ್‌ ಅನ್ನು ಹೊಂದಿದೆ. ಇದು ರೈಲು ಸಿಬಂದಿ ಮತ್ತು  ಸ್ಟೇಷನ್‌ ಮಾಸ್ಟರ್‌ ನಡುವೆ ವೈರ್ಲೆಸ್‌ ಸಂಪರ್ಕಕ್ಕೆ ಸಹಕಾರಿಯಾಗುತ್ತದೆ. ಕೊಂಕಣ ರೈಲ್ವೇ ಮಾರ್ಗದಲ್ಲಿ ಸರಾಸರಿ 1 ಕಿ. ಮೀ. ದೂರದಲ್ಲಿ ತುರ್ತು ಸಂವಹನ ಸಾಕೆಟ್‌ (EMC)ಗಳನ್ನು ಒದಗಿಸಲಾಗಿದ್ದು, ಇದು ಯಾವುದೇ ತುರ್ತು ಸಂದರ್ಭಗಳಲ್ಲಿ ಸ್ಟೇಷನ್‌ ಮಾಸ್ಟರ್‌ ಮತ್ತು ಕಂಟ್ರೋಲ್‌ ಆಫೀಸ್‌ ಅನ್ನು ಸಂಪರ್ಕಿಸಲು ಗಸ್ತು ನಿರತರು, ವಾಚ್‌ಮನ್‌, ರೈಲಿನ ಪೈಲಟ್‌ಗಳು, ಗಾರ್ಡ್‌ ಮತ್ತು ಇತರ ಕ್ಷೇತ್ರ ನಿರ್ವ ಹಣ ಸಿಬಂದಿಗೆ ಸಹಕಾರಿಯಾಗಲಿದೆ.

ಸ್ವಯಂ ರೆಕಾರ್ಡಿಂಗ್‌ ಮಳೆ ಮಾಪಕ :

ತುರ್ತು ಸಂಪರ್ಕಕ್ಕಾಗಿ ಅಪಘಾತ ಪರಿಹಾರ ವೈದ್ಯಕೀಯ ವ್ಯಾನ್‌ನಲ್ಲಿ ಉಪಗ್ರಹ ಫೋನ್‌ ಸಂವಹನ ಒದಗಿಸಲಾಗಿದೆ. ಸಿಗ್ನಲ್‌ ಸುಧಾರಿಸಲು ಕೊಂಕಣ ರೈಲ್ವೇಯಲ್ಲಿನ ಎಲ್ಲ ಪ್ರಮುಖ ಸಿಗ್ನಲ್‌ ಅಂಶಗಳನ್ನು ಪ್ರಸ್ತುತ ಎಲ್‌ಇಡಿಗಳಿಗೆ ಬದಲಾಯಿಸಲಾಗಿದೆ. 9 ಕೇಂದ್ರಗಳಲ್ಲಿ  ಸ್ವಯಂ ರೆಕಾರ್ಡಿಂಗ್‌ ಮಳೆ ಮಾಪಕಗಳನ್ನು ಅಳವಡಿಸಲಾಗಿದೆ. ಮಾಂಗಾವ್‌, ಚಿಪ್ಳೂಣ್‌, ರತ್ನಗಿರಿ, ವಿಲ್ವಾಡೆ, ಕನಕಾವಲಿ, ಮಡ್ಗಾಂವ್‌, ಕಾರವಾರ, ಭಟ್ಕಳ ಮತ್ತು ಉಡುಪಿಯಲ್ಲಿ  ಮಳೆಯ ಪ್ರಮಾಣ ದಾಖಲಾಗಲಿದ್ದು, ಪ್ರಮಾಣ ಹೆಚ್ಚಾದರೆ ಅಧಿಕಾರಿಗಳನ್ನು ಎಚ್ಚರಿಸಲಾಗುತ್ತದೆ.

ಕಂಟ್ರೋಲ್‌ ರೂಮ್‌ಗಳು :

ಬೆಲಾಪುರ, ರತ್ನಗಿರಿ ಮತ್ತು ಮಡ್ಗಾಂವ್‌ನಲ್ಲಿ ಕಂಟ್ರೋಲ್‌ ರೂಮ್‌ಗಳು ಮುಂಗಾರು ಅವಧಿಯಲ್ಲಿ ರೈಲುಗಳ ಸುರಕ್ಷಿತ ಸಂಚಾರಕ್ಕಾಗಿ 24×7 ಕಾರ್ಯನಿರ್ವಹಿಸಲಿವೆ. ಮುಂಗಾರು ಟೈಮ್‌ ಟೇಬಲ್‌ ಜೂ. 10ರಿಂದ ಅ. 31ರ ವರೆಗೆ ಜಾರಿಯಲ್ಲಿರಲಿದೆ. www.konkanrailway.com ಗೆ ಭೇಟಿ ನೀಡುವುದು, Google Play Store ನಿಂದ ಡೌನ್‌ಲೋಡ್‌ ಮಾಡುವ ಮೂಲಕ ಅಥವಾ 139 ಅನ್ನು ಡಯಲ್‌, ಕೆಆರ್‌ಸಿಎಲ್‌ ಅಪ್ಲಿಕೇಶನ್‌ ಬಳಸುವ ಮೂಲಕ ಪ್ರಯಾಣಿಕರು ಮುಂಗಾರು ಸಮಯದಲ್ಲಿ ರೈಲು ಸಂಚಾರದ ಸ್ಥಿತಿಯನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಬಹುದು ಎಂದು ಕೊಂಕಣ ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರವಾಹ ಎಚ್ಚರಿಕೆ ವ್ಯವಸ್ಥೆ :

ಮೂರು ಪ್ರಮುಖ ಸ್ಥಳಗಳಾದ ಮಂಗಾಂವ್‌-ವೀರ್‌ ನಡುವಿನ ಕಾಳಿ ನದಿ, ವೀರ್‌ – ಸಪೆವಾಮನೆ ನಡುವಿನ ಸಾವಿತ್ರಿ ನದಿ, ಚಿಪ್ಲೂಣ್‌ – ಕಾಮಟೆ ನಡುವಿನ ವಸಿಷ್ಟಿ ನದಿಗಳ ಸೇತುವೆಗಳಿಗೆ ಪ್ರವಾಹ ಎಚ್ಚರಿಕೆ ವ್ಯವಸ್ಥೆ ಒದಗಿಸಲಾಗಿದೆ. ನೀರಿನ ಹರಿವು ಅಪಾಯದ ಮಟ್ಟಕ್ಕಿಂತ ಹೆಚ್ಚಾದರೆ ಅಧಿಕಾರಿಗಳಿಗೆ ಮುನ್ನೆಚ್ಚರಿಕೆ ನೀಡುತ್ತದೆ. ಗಾಳಿಯ ವೇಗವನ್ನು ಗಮನಿಸಲು ರತ್ನಗಿರಿ – ನಿವಾಸರ ನಡುವಿನ ಪನ್ವಾಲ್‌ ವಯಾಡಕ್ಟ್, ಥಿವಿಮ್‌- ಕರ್ಮಾಲಿ ನಡುವಿನ ಮಾಂಡೋವಿ ಸೇತುವೆ, ಕರ್ಮಾಲಿ – ವೆರ್ನಾ ನಡುವಿದ ಜುವಾರಿ ಸೇತುವೆ, ಹೊನ್ನಾವರ – ಮಂಕಿ ನಡುವಿನ ಶರಾವತಿ ಸೇತುವೆಯನ್ನೊಳಗೊಂಡು ನಾಲ್ಕು ಕಡೆಗಳಲ್ಲಿ ಎನಿಮೋ ಮೀಟರ್‌ಗಳನ್ನು ಅಳವಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next