Advertisement

ಕೊಲ್ಲೂರು: ಬಳಕೆಯಾಗದೆ ಅನಾಥವಾಗಿ ಉಳಿದ ನೀರಿನ ಟ್ಯಾಂಕ್‌

10:54 AM May 27, 2022 | Team Udayavani |

ಕೊಲ್ಲೂರು: ಕಳೆದ ಮೂರು ವರುಷಗಳ ಹಿಂದೆ ಕೊಲ್ಲೂರು ಗ್ರಾಮದ ಒಂದು ಭಾಗದ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆಗಾಗಿ ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಿಸಲಾದ ವಾಟರ್‌ ಟ್ಯಾಂಕ್‌ ಬಳಕೆಯಾಗದೇ ನಿರುಪಯೋಗಿಯಾಗಿ ಬಿದ್ದಿರುವುದು ಚರ್ಚೆಗೆ ಗ್ರಾಸವಾಗಿದೆ.

Advertisement

ಸುಬ್ಬರಸನ ತೊಪ್ಪಲು ನಿವಾಸಿಗಳಿಗೆ ನಿರಾಸೆ

ಸುಬ್ಬರಸನ ತೊಪ್ಪಲು ಗ್ರಾಮ ಪ್ರದೇಶ ದಲ್ಲಿ 30 ಮನೆಗಳಿದ್ದು, ಆ ಭಾಗದಲ್ಲಿ 300ಕ್ಕೂ ಹೆಚ್ಚು ಮಂದಿ ವಾಸವಾಗಿದ್ದಾರೆ. ಕುಡಿಯುವ ನೀರಿನ ಟ್ಯಾಂಕ್‌ ನಿರ್ಮಾಣ ವಾದಾಗ ಇನ್ನೇನು ನೀರಿನ ಸಮಸ್ಯೆ ಬಗೆಹರಿಯಿತು ಅಂದುಕೊಂಡ ಅಲ್ಲಿನ ನಿವಾಸಿಗಳಿಗೆ ಬೇಸಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಜ್ವಲಂತವಾಗಿ ಉಳಿದಿದ್ದು, ವಾಟರ್‌ ಟ್ಯಾಂಕ್‌ನ್ನು ನೋಡಿ ಸಾಗಬೇಕಾದ ಪರಿಸ್ಥಿತಿ ಎದುರಾಗಿದೆ.

ಶಿಥಿಲಗೊಳ್ಳುತ್ತಿರುವ ಟ್ಯಾಂಕ್‌ ಕಂಬ

Advertisement

ಕಳೆದ ಮೂರು ವರುಷಗಳ ಹಿಂದೆ ನಿರ್ಮಿಸಲಾಗಿರುವ ನೀರು ಸರಬರಾಜು ಟ್ಯಾಂಕ್‌ ಬಳಕೆಯಾಗದೇ ಅನಾಥವಾಗಿದ್ದು, ಕಂಬಗಳು ಶಿಥಿಲಗೊಳ್ಳುತ್ತಿದೆ. ಇಲ್ಲಿ ಕುಡಿಯುವ ನೀರಿನ ಟ್ಯಾಂಕ್‌ ನಿರ್ಮಿಸಲಾಗಿದ್ದರೂ ಬಳಸದಿರುವುದು ನಾನಾ ಪ್ರಶ್ನೆಗಳಿಗೆ ಎಡೆಮಾಡಿದೆ.

ಪಂಪ್‌ಹೌಸ್‌ ದುರ್ವಿನಿಯೋಗ

ಸನಿಹದಲ್ಲಿ ಕಟ್ಟಲಾದ ಪಂಪ್‌ ಹೌಸ್‌ ಅನೈತಿಕ ಚಟುವಟಿಕೆಗೆ ಎಡೆಮಾಡಿದೆ ಎನ್ನಲಾಗುತ್ತಿದ್ದು ಬಾಗಿಲಿಲ್ಲದ ಇಲ್ಲಿ ಮದ್ಯದ ಬಾಟಲಿ, ಬೀಡಿ ಸಿಗರೇಟು ಇನ್ನಿತರ ವಸ್ತುಗಳು ಕಂಡುಬಂದಿದೆ.

ವಾಟರ್‌ಟ್ಯಾಂಕ್‌ ಬಳಕೆಯಾದೀತೆ?

ಇದನ್ನು ನಿರ್ಮಿಸಿ ಮೂರು ವರುಷ ಸಂದರೂ ಬಳಕೆಯಾಗದ ಇದನ್ನು ಸುಸ್ಥಿತಿಗೆ ತರುವಲ್ಲಿ ಆಡಳಿತ ವ್ಯವಸ್ಥೆ ಶ್ರಮಿಸಬೇಕು. ಇದರ ಬಳಕೆಯಾಗದಿದ್ದಲ್ಲಿ ಕಟ್ಟಡ ಶಿಥಿಲಗೊಂಡು ವ್ಯಯಿಸಲಾದ ಲಕ್ಷಾಂತರ ರೂ. ಮೊತ್ತದ ಕಟ್ಟಡ ನಾಮಾವಶೇಷಗೊಳ್ಳುವ ಸಾಧ್ಯತೆ ಇದೆ.

ಸ್ಥಳೀಯರ ಆಕ್ಷೇಪದಿಂದ ಸಂಕಷ್ಟ

ಸುಮಾರು ಮೂರು ವರ್ಷಗಳ ಹಿಂದೆ ವಾಟರ್‌ ಟ್ಯಾಂಕ್‌ ನಿರ್ಮಿಸಲಾಗಿದೆ. ಆದರೆ ಬೋರ್‌ ವೆಲ್‌ ಬಳಸಲು ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿರುವುದರಿಂದ ನೀರಿನ ಟ್ಯಾಂಕ್‌ ಗೆ ನೀರು ಸರಬರಾಜು ಮಾಡಲು ಕಷ್ಟಸಾಧ್ಯವಾಗಿದೆ. -ರುಕ್ಕನ ಗೌಡ, ಪಿಡಿಒ ಕೊಲ್ಲೂರು,ಗ್ರಾ.ಪಂ.

ವಾಟರ್‌ ಟ್ಯಾಂಕ್‌ ಬಳಕೆಗೆ ಕ್ರಮ

ನೀರಿನ ಟ್ಯಾಂಕ್‌ ನಿರ್ಮಾಣಕ್ಕೆ ಮೊದಲೇ ಅದರ ಪೂರ್ವಾಪರ ಯೋಚಿಸಬೇಕಿತ್ತು. ಎದುರಾಗಿರುವ ಸಮಸ್ಯೆ ಬಗೆಹರಿಸಿ, ನೀರು ಒದಗಿಸಿ ವಾಟರ್‌ ಟ್ಯಾಂಕ್‌ ಬಳಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. – ಶಿವರಾಮಕೃಷ್ಣ ಭಟ್‌, ಅಧ್ಯಕ್ಷರು, ಗ್ರಾ.ಪಂ.ಕೊಲ್ಲೂರು.

ಡಾ| ಸುಧಾಕರ ನಂಬಿಯಾರ್‌

Advertisement

Udayavani is now on Telegram. Click here to join our channel and stay updated with the latest news.

Next