Advertisement

ಕೊಲ್ಲೂರು-ಕೊಡಚಾದ್ರಿ ಕೇಬಲ್‌ ಕಾರ್‌ ಯೋಜನೆ; 500 ಕೋ.ರೂ. ಬಿಡುಗಡೆ

05:52 PM Feb 02, 2023 | Team Udayavani |

ಕೊಲ್ಲೂರು: ಶಂಕರಾಚಾರ್ಯರ ತಪೋಭೂಮಿಯಾದ ಕೊಡಚಾದ್ರಿ ಬೆಟ್ಟ ಹಾಗೂ ಕೊಲ್ಲೂರು ನಡುವೆ ನೇರ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಕಳೆದ 2 ವರ್ಷಗಳಿಂದ ನಡೆಯುತ್ತಿರುವ ಭಗೀರಥ ಪ್ರಯತ್ನಕ್ಕೆ ಕೇಂದ್ರ ಸರಕಾರದಿಂದ ಅನುಮೋದನೆ ಲಭಿಸಿದ್ದು, ಕೇಬಲ್‌ ಕಾರ್‌ ಮೂಲಕ ಕೊಡಚಾದ್ರಿಗೆ ಸಾಗುವ ಐತಿಹಾಸಿಕ ಯೋಜನೆಗೆ 500 ಕೋಟಿ ರೂ. ಬಿಡುಗಡೆಗೊಳಿಸಿದೆ.

Advertisement

ಪ್ರವಾಸೋದ್ಯಮಕ್ಕೆ ಆದ್ಯತೆ
ಧಾರ್ಮಿಕ ಶ್ರದ್ಧಾ ಭಕ್ತಿಯ ಕೇಂದ್ರ ಸ್ಥಾನವಾಗಿರುವ ಕೊಡಚಾದ್ರಿಯ ಅಂತಃಸತ್ವಕ್ಕೆ ಕುಂದುಂಟಾಗದಂತೆ ಶ್ರದ್ಧೆಯಿಂದ ನಿರ್ವಹಿಸಲಿರುವ ಈ ಕೇಬಲ್‌ ಕಾರ್‌ ಯೋಜನೆಯಿಂದ ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡಿದಂತಾಗುತ್ತದೆ. ಭಕ್ತರಿಗೆ ಕೆಲವೇ ಗಂಟೆಯಲ್ಲಿ ಕೊಲ್ಲೂರಿನಿಂದ ಕೊಡಚಾದ್ರಿಗೆ ಸಾಗಲು ಅನುಕೂಲ ವಾಗುವ ನಿಟ್ಟಿನಲ್ಲಿ ನಿರ್ಮಿಸಲಾಗುವ ಈ ಯೋಜನೆಗೆ ಸ್ಥಳ ಗುರುತು ಕಾರ್ಯ ಭರದಿಂದ ಸಾಗುತ್ತಿದೆ.

ಸಂಸದರ ಪ್ರಯತ್ನ
ಶಿವಮೊಗ್ಗ- ಬೈಂದೂರು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರು ಕೇಂದ್ರ ಸರಕಾರದ ಸಂಬಂಧಪಟ್ಟ ಸಚಿವರು ಹಾಗೂ ಇಲಾಖೆಯ ಮುಖ್ಯಸ್ಥರೊಡನೆ ಕಳೆದ 2 ವರ್ಷಗಳಿಂದ ಸಂಪರ್ಕವಿಟ್ಟು ಯೋಜನೆಯ ಮಹತ್ವವನ್ನು ವಿವರಿಸಿರುವುದಲ್ಲದೇ ಆಯ್ದ ಪ್ರವಾಸೋದ್ಯಮ ಕೇಂದ್ರಗಳಲ್ಲಿ ಕೊಲ್ಲೂರನ್ನು ಪರಿಗಣಿಸುವಂತೆ ಮನವರಿಕೆ ಮಾಡಿದ್ದರು.

ಶಾಸಕರ ಕನಸು ನನಸು
ಶಾಸಕ ಬಿ.ಎಂ. ಸುಕುಮಾರ್‌ ಶೆಟ್ಟಿಯವರು ಕೊಲ್ಲೂರು ದೇಗುಲದ ಆಡಳಿತ ಧರ್ಮದರ್ಶಿಯಾಗಿ ಸೇವೆ ಸಲ್ಲಿಸಿದ್ದಾಗ ಕೊಡಚಾದ್ರಿ ಕೇಬಲ್‌ ಕಾರ್‌ ಹಾಗೂ ಎಂಜಿನಿಯರಿಂಗ್‌ ಕಾಲೇಜು ಆರಂಭಿಸುವ ಬಗ್ಗೆ ಸರಕಾರದ ಗಮನ ಸೆಳೆದಿದ್ದರು. ಇದೀಗ ಬಿ.ವೈ. ರಾಘವೇಂದ್ರ ಅವರ ಪ್ರಯತ್ನದಿಂದ ಕೇಂದ್ರ ಸರಕಾರ ಅನುದಾನ ಬಿಡುಗಡೆಗೊಳಿಸಿರುವ ಬಗ್ಗೆ ಸಂತಸ ವ್ಯಕ್ತಪಡಿಸಿ ಅಭಿನಂದಿಸಿರುತ್ತಾರೆ.

ಸ್ಥಳೀಯರಿಗೆ ಉದ್ಯೋಗಾವಕಾಶ ನೀಡಲಿ
ಕೊಲ್ಲೂರು ಕೊಡಚಾದ್ರಿ ನಡುವೆ ನಿರ್ಮಾಣಗೊಳ್ಳಲಿರುವ ಕೇಬಲ್‌ ಕಾರ್‌ ವ್ಯವಸ್ಥೆಯಿಂದ ಸ್ಥಳೀಯ ರಿಗೆ ಉದ್ಯೋಗಾವಕಾಶ ಸಿಗುವ ನಿರೀಕ್ಷೆಯಿದೆ. ಅಲ್ಲದೇ ಕೊಲ್ಲೂರು ಪರಿಸರವು ಪ್ರವಾಸೋದ್ಯಮ ಕೇಂದ್ರವಾಗಿ ಬೆಳೆಯುವುದರಿಂದ ಅನೇಕ ಉದ್ಯೋಗಗಳಿಗೆ ವಿಪುಲ ಅವಕಾಶವಿದೆ, ಆ ನಿಟ್ಟಿನಲ್ಲಿ ಸರಕಾರ ಯೋಜನೆ ರೂಪಿಸಿ, ಯಾತ್ರಾರ್ಥಿಗಳ ಸುಗಮ ಪ್ರಯಾಣದೊಡನೆ ಗ್ರಾಮಸ್ಥರಿಗೆ ಎದುರಾಗುವ ಸಮಸ್ಯೆಯನ್ನು ನಿಭಾಯಿಸುವಲ್ಲಿ ಕ್ರಮ ಕೈಗೊಳ್ಳಬೇಕಾಗಿದೆ.

Advertisement

ಜೀಪ್‌ ಪ್ರಯಾಣಕ್ಕೂ ಅವಕಾಶ ದೊರಕಲಿ
ಕೊಲ್ಲೂರಿನಲ್ಲಿ ಅನೇಕ ಮಂದಿ ಜೀಪ್‌ ಚಾಲಕ ಮಾಲಕರು ಯಾತ್ರಾರ್ಥಿಗಳ ಕೊಡಚಾದ್ರಿ ಪ್ರಯಾಣವನ್ನೇ ಅವಲಂಬಿಸಿ ಬದುಕುತ್ತಿದ್ದಾರೆ. ಅವರ ದೈನಂದಿನ ಬದುಕು ಇದರಿಂದಾಗಿ ಸಾಗಬೇಕಾಗಿದೆ. ಕೇಬಲ್‌ಕಾರ್‌ ಆರಂಭಗೊಳ್ಳಲಿರುವ ಈ ದಿಸೆಯಲ್ಲಿ ಕೊಡಚಾದ್ರಿಗೆ ಜೀಪಿನಲ್ಲಿ ಸಾಗುವವರಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸರಕಾರ ಕ್ರಮ ಕೈಗೊಳ್ಳುವುದು ಸೂಕ್ತ. ಇಲ್ಲದಿದ್ದಲ್ಲಿ ಅದನ್ನೇ ಅವಲಂಬಿಸಿ ಬದುಕುತ್ತಿರುವ ಮಂದಿಯ ಜೀವನ ಕ್ರಮ ಹೈರಾಣವಾಗಲಿದೆ.

ಅರಣ್ಯ, ವನ್ಯಜೀವಿಗಳ ಸಂರಕ್ಷಣೆ ಅಗತ್ಯ

ಅಭಯಾರಣ್ಯದ ನಡುವೆ ಆರಂಭಗೊಳ್ಳಲಿರುವ ಕೇಬಲ್‌ ಕಾರ್‌ ನಿರ್ಮಾಣ ಕಾರ್ಯದಿಂದ ಅಲ್ಲಿನ ದಟ್ಟಾರಣ್ಯ, ಪರಿಸರದಲ್ಲಿ ವಾಸವಾಗಿರುವ ಪ್ರಾಣಿ-ಪಕ್ಷಿಗಳಿಗೆ ಯಾವುದೇ ಹಾನಿಯಾಗದಂತೆ ಅವುಗಳನ್ನು ಸಂರಕ್ಷಿಸುವ ಜವಬ್ದಾರಿ ಕಾಮಗಾರಿ ಕೈಗೆತ್ತಿಕೊಳ್ಳುವವರಿಗಿದೆ ಎನ್ನುವುದನ್ನು ಅರಿತು ಯೋಜನೆ ಆರಂಭಿಸಬೇಕಾಗಿದೆ. ಪರಿಸರ ಉಳಿಸಿ ಬೆಳೆಸುವ ಬಗ್ಗೆ ಸರಕಾರ ಯೋಜನೆ ರೂಪಿಸಿರುವ ಈ ನಿಟ್ಟಿನಲ್ಲಿ ಕೊಡಚಾದ್ರಿ ಹಾಗೂ ಅದರ ತಪ್ಪಲಿನ ಕಾಡುತ್ಪತ್ತಿಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಇದೆ ಎನ್ನುವುದನ್ನು ಮರೆಯಬಾರದು.

ಕೊಡಚಾದ್ರಿಗೆ ಪ್ರಯಾಸದ ಹರಕೆಯ ಕಾಲ್ನಡಿಗೆ ಪ್ರಯಾಣ
ಇತ್ತೀಚಿನ ದಿನಗಳವರೆಗೂ ಕರ್ನಾಟಕ, ಕೇರಳ, ತಮಿಳುನಾಡು ಆಂಧ್ರ ಹಾಗೂ ಮಹಾರಾಷ್ಟ್ರದ ಸಹಸ್ರಾರು ಭಕ್ತರು ಕಾಲ್ನಡಿಗೆಯಲ್ಲಿ ಕೊಡಚಾದ್ರಿ ಬೆಟ್ಟಕ್ಕೆ ಸಾಗಿ ಸರ್ವಜ್ಞ ಪೀಠದಲ್ಲಿ ವಿಶೇಷ ಪೂಜೆ ಸಲ್ಲಿಸಿ ತ್ರಿಶೂಲಕ್ಕೆ ಪ್ರದಕ್ಷಿಣಿ ಹಾಕಿ ಶ್ರೀ ದೇವರ ಗರ್ಭಗುಡಿ ಬಳಿ ಧ್ಯಾನ ಮಾಡುವ ಪರಂಪರೆ ನಡೆಯುತ್ತಾ ಬಂದಿದೆ. ಅರಣ್ಯ ಇಲಾಖೆ ಕೊಡಚಾದ್ರಿ ಸಹಿತ ಆಸುಪಾಸಿನ ಭಾಗವನ್ನು ತಮ್ಮ ನಿಯಂತ್ರಣಕ್ಕೆ ತಂದ ಬಳಿಕ ಪ್ರವಾಸಿಗರು ಅರಣ್ಯ ಇಲಾಖೆಯ ಅನುಮತಿಯೊಡನೆ ಸುಂಕ
ತೆತ್ತು ಸಾಗಬೇಕಾದ ವ್ಯವಸ್ಥೆ ಆರಂಭಗೊಂಡಿದೆ.

*ಡಾ.ಸುಧಾಕರ ನಂಬಿಯಾರ್

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next