Advertisement

ಮೀಸಲು ಕ್ಷೇತ್ರದಲ್ಲಿ ಹಾಲಿ, ಮಾಜಿ ಶಾಸಕರ ಮಧ್ಯ ಫೈಟ್‌

02:13 PM May 07, 2023 | Team Udayavani |

ಕೊಳ್ಳೇಗಾಲ: ಮೀಸಲು ವಿಧಾನಸಭಾ ಕ್ಷೇತ್ರ ರಾಜ್ಯ ರಾಜಕೀಯದಲ್ಲಿ ತನ್ನದೇ ಆದ ಪ್ರಾಮುಖ್ಯತೆ ಪಡೆದುಕೊಂಡಿದೆ. ಬಿಎಸ್‌ಪಿಯಿಂದ ಗೆದ್ದು ರಾಜ್ಯದ ಗಮನ ಸೆಳೆದಿದ್ದ ಶಾಸಕ ಎನ್‌. ಮಹೇಶ್‌ ನಂತರ ನಡೆದ ರಾಜಕೀಯ ಬೆಳವಣಿಗೆಯಿಂದ ಬಿಜೆಪಿ ಸೇರಿ ಈಗ ಕಣದಲ್ಲಿದ್ದಾರೆ. ಇತ್ತ 6 ಸೋಲುಗಳು ಕಂಡು ಈಗ 2ನೇ ಬಾರಿ ಕಾಂಗ್ರೆಸ್‌ನಿಂದ ಟಿಕೆಟ್‌ ಪಡೆದಿರುವ ಎ.ಆರ್‌. ಕೃಷ್ಣಮೂರ್ತಿ ಗೆಲ್ಲಲು ಎಲ್ಲಾ ರಣತಂತ್ರಗಳನ್ನು ರೂಪಿಸುತ್ತಿದ್ದಾರೆ.

Advertisement

ಇತ್ತ ಜೆಡಿಎಸ್‌ ಅಭ್ಯರ್ಥಿ ಪುಟ್ಟಸ್ವಾಮಿ ತಮ್ಮ ಸರ್ಕಲ್‌ ಇನ್ಸ್‌ ಪೆಕ್ಟರ್‌ ಕೆಲಸಕ್ಕೆ ರಾಜೀನಾಮೆ ನೀಡಿ, ಜೆಡಿಎಸ್‌ ಟಿಕೆಟ್‌ ಗಿಟ್ಟಿಸಿ ಕೊಂಡು ಕ್ಷೇತ್ರದಲ್ಲಿ ಸಂಚರಿಸುತ್ತ ಮತಭಿಕ್ಷೆಯನ್ನು ಕೇಳುತ್ತಿದ್ದಾರೆ. ಈ ಬಾರಿ ಕೊಳ್ಳೇಗಾಲ ರಣಕಣ ಕೂತೂಹಲ ಕೆರಳಿಸಿದೆ.

ದೊಡ್ಡ ಕ್ಷೇತ್ರ: ಕ್ಷೇತ್ರದಲ್ಲಿ ಕೊಳ್ಳೇಗಾಲ, ಯಳಂದೂರು, ಸಂತೇಮರಹಳ್ಳಿ ಸೇರಿ ಚಾಮರಾಜನಗರ ತಾಲೂಕಿನವರೆಗೂ ವಿಸ್ತಾರ ಹೊಂದಿರುವ ದೊಡ್ಡ ಕ್ಷೇತ್ರವಾಗಿದೆ.

ಸತತ ಗೆಲುವು ಇಲ್ಲ: ಪವಾಡ ಪುರುಷರು ನೆಲೆಸಿದ ಕ್ಷೇತ್ರದಲ್ಲಿ ಕಾಂಗ್ರೆಸ್‌, ಜೆಡಿಎಸ್‌, ಬಿಜೆಪಿ, ಬಿಎಸ್ಪಿ ಮತ್ತು ಪಕ್ಷೇತರ ಅಭ್ಯರ್ಥಿಗಳು ಸ್ಪರ್ಧೆ ಮಾಡಿ ಗೆಲುವು ಸಾಧಿಸಿದ್ದಾರೆ. ಆದರೆ, 2ನೇ ಬಾರಿಗೆ ಸತತವಾಗಿ ಯಾರೂ ಗೆದ್ದಿಲ್ಲ. 2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್‌ಪಿಯಿಂದ ಸ್ಪರ್ಧಿಸಿದ್ದ ಶಾಸಕ ಎನ್‌.ಮಹೇಶ್‌ 72 ಸಾವಿರಕ್ಕೂ ಹೆಚ್ಚು ಮತ ಪಡೆದು ಆಯ್ಕೆಗೊಂಡರು.

ಬಿಜೆಪಿ ಸೇರಿದ್ದಕ್ಕೆ ವಿರೋಧ: ಬದಲಾದ ರಾಜಕೀಯ ಲೆಕ್ಕಚಾರದಿಂದಾಗಿ ಬಿಎಸ್ಪಿ ವರಿಷ್ಠೆ ಮಾಯಾವತಿ ಅವರು ಪಕ್ಷದಿಂದ ಉಚ್ಛಾಟನೆಯನ್ನು ಮಾಡಿದ ಬಳಿಕ ಅಂಬೇಡ್ಕರ್‌ ವಾದಿಯಾಗಿದ್ದ ಶಾಸಕ ಎನ್‌.ಮಹೇಶ್‌ ಬಿಜೆಪಿ ಸೇರಿದ್ದಾರೆ. ಆದರೆ, ಇಲ್ಲಿನ ಹಲವು ಮತದಾರರು ಕೋಮುವಾದಿ ಪಕ್ಷಕ್ಕೆ ಸೇರಿದ್ದಾರೆ ಎಂಬ ಕಾರಣಕ್ಕಾಗಿಯೇ ಇವರಿಗೆ ಸ್ವಲ್ಪ ವಿರೋಧ ವ್ಯಕ್ತವಾಗುತ್ತಿದೆ.

Advertisement

ಗೋಬ್ಯಾಕ್‌ ವಿಡಿಯೋ ವೈರಲ್‌: ಪ್ರಚಾರದ ವೇಳೆ ಮಸಣಾಪುರ, ಉಮ್ಮತ್ತೂರು, ಆಲ್ಕೆರೆ ಅಗ್ರಹಾರ, ಹೊನ್ನೂರು ಗ್ರಾಮಗಳೂ ಸೇರಿದಂತೆ ಅನೇಕ ಕಡೆ ಗೋ ಬ್ಯಾಕ್‌ ಮಹೇಶ್‌ ಎಂದು ಹಲವರು ಇವರ ಬರುವಿಕೆಯನ್ನು ವಿರೋಧಿಸಿದ್ದಾರೆ. ಇರಸವಾಡಿ ಗ್ರಾಮದಲ್ಲಿ ಭಗೀರಥ ಮಹರ್ಷಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲು ತೆರಳಿದ್ದ ಶಾಸಕರನ್ನು ಹೂವಿನ ಹಾರ ಹಾಕದಂತೆ ತಡೆದು ಮುಜುಗರ ಉಂಟು ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಚುನಾವಣೆ ಸಮೀಪಿಸುತ್ತಿದ್ದಂತೆ ಇಂತಹ ಕೂಗುಗಳು ಹೆಚ್ಚುತ್ತಿರುವುದು ಪಕ್ಷದ ಕಾರ್ಯಕರ್ತರಿಗೂ ಮುಜುಗರ ಮೂಡಿಸಿದೆ.

ಒಂದು ಓಟಿನಿಂದ ಸೋತಿದ್ದ ಎಆರ್‌ಕೆ: ಹಿಂದೆ ಸಂತೆಮರಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಶಾಸಕರಾಗಿದ್ದ ಕಾಂಗ್ರೆಸ್‌ ಅಭ್ಯರ್ಥಿ ಎ.ಆರ್‌.ಕೃಷ್ಣಮೂರ್ತಿ ಶಾಸಕರಾಗಿ ಕ್ಷೇತ್ರದಲ್ಲಿ ಪ್ರಸಿದ್ಧಿ ಪಡೆದಿದ್ದರು. 2004ರಲ್ಲಿ ಸಂತೆಮರಹಳ್ಳಿ ವಿಧಾನಸಭಾ ಕ್ಷೇತ್ರ ದಿವಂಗತ ಆರ್‌ .ಧ್ರುವನಾರಾಯಣ ವಿರುದ್ಧ ಒಂದು ಓಟಿನಿಂದ ಎ.ಆರ್‌. ಕೃಷ್ಣಮೂರ್ತಿ ಸೋಲು ಕಂಡಿದ್ದರು. ಇದು ಚುನಾವಣೆಯ ಇತಿಹಾಸದಲ್ಲಿ ದಾಖಲಾಗಿದ್ದು, ಸಂತೆಮರಹಳ್ಳಿ ಕ್ಷೇತ್ರ ರದ್ದಾಗಿ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರಕ್ಕೆ ಸೇರಿಕೊಂಡಿದೆ.

ಬಿಎಸ್‌ಪಿ, ಇತರೆ ಪಕ್ಷಗಳ ಬೆಂಬಲ: ಲೋಕಸಭೆ, ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಕಳೆದ 19 ವರ್ಷದಿಂದ ಸೋಲಿನ ವನವಾಸ ಅನುಭವಿಸಿದ ಎ.ಆರ್‌. ಕೃಷ್ಣಮೂರ್ತಿಗೆ 2018ರಲ್ಲಿ ಕಾಂಗ್ರೆಸ್‌ ಪಕ್ಷದಿಂದ ಟಿಕೆಟ್‌ ನೀಡಲಾಗಿತ್ತು. ಈ ಚುನಾವಣೆಯಲ್ಲಿ ಇವರು ಸೋತಿದ್ದರು. ಈಗ 2023ರ ವಿಧಾನಸಭಾ ಚುನಾವಣೆಯಲ್ಲೂ ಮತ್ತೂಮ್ಮೆ ಇವರು ಟಿಕೆಟ್‌ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮಾಜಿ ಶಾಸಕ ಎಸ್‌.ಜಯಣ್ಣ, ಜಿ. ಎನ್‌.ನಂಜುಂಡಸ್ವಾಮಿ ಇವರಿಗೆ ಸಾಥ್‌ ನೀಡುತ್ತಿದ್ದಾರೆ. ಇದರೊಂದಿಗೆ ಬಿಎಸ್‌ಪಿ, ಎಸ್‌ಡಿಪಿಐ ಸೇರಿ ಹಲವು ಪಕ್ಷಗಳು ಇವರಿಗೆ ಬೆಂಬಲ ನೀಡುತ್ತಿದ್ದು, ಕ್ಷೇತ್ರದಲ್ಲಿ ಅನೇಕ ಮುಖಂಡರು ಇವರ ಬೆಂಬಲಕ್ಕೆ ನಿಂತಿರುವುದು ಈ ಬಾರಿ ಗೆಲುವಿನ ಕನಸಲ್ಲಿ ಎಆರ್‌ಕೆ, ಇವರ ಬೆಂಬಲಿಗರು ಇದ್ದಾರೆ.

ಬಿಜೆಪಿ ಮತ್ತು ಕಾಂಗ್ರೆಸ್‌ ಅಭ್ಯರ್ಥಿಗಳು ಅಬ್ಬರದ ಪ್ರಚಾರದ ನಡುವೆ ಜೆಡಿಎಸ್‌ ಅಭ್ಯರ್ಥಿ ಬಿ.ಪುಟ್ಟಸ್ವಾಮಿ ಅವರು ತಮ್ಮ ಸರ್ಕಲ್‌ ಇನ್ಸ್‌ಪೆಕ್ಟರ್‌ ಹುದ್ದೆಗೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರಿ ಟಿಕೆಟ್‌ ತರುವ ಪ್ರಯತ್ನ ವಿಫ‌ಲವಾದ ಬಳಿಕ ಜೆಡಿಎಸ್‌ನಿಂದ ಸ್ಪರ್ಧೆ ಮಾಡಿ ಕಣಕ್ಕೆ ಇಳಿದಿದ್ದಾರೆ.  ಜೆಡಿಎಸ್‌ನಲ್ಲಿ ಹೆಚ್ಚು ಸಂಘಟನೆ ಇಲ್ಲದಿದ್ದರೂ ಕೊರೊನಾ ಸಂದರ್ಭದಲ್ಲಿ ಸ್ಥಾಪನೆಯಾಗಿದ್ದ ಬಿ.ಪುಟ್ಟಸ್ವಾಮಿ ಅಭಿಮಾನಿಗಳ ಬಳಗದಿಂದ ಮಾಡಿದ ಸಾಮಾಜಿಕ ಕಾರ್ಯಗಳನ್ನು ಇಟ್ಟುಕೊಂಡು ಇವರು ಸ್ಪರ್ಧೆಗೆ ಇಳಿದಿದ್ದಾರೆ. ಇದರೊಂದಿಗೆ ಕೊಳ್ಳೇಗಾಲದ ರಣಕಣದಲ್ಲಿ ಒಟ್ಟು 13 ಅಭ್ಯರ್ಥಿಗಳಿದ್ದು, ತಮ್ಮ ಅದೃಷ್ಟ ಪರೀಕ್ಷೆಗೆ ತಮ್ಮದೇ ಶೈಲಿಯಲ್ಲಿ ಕ್ಷೇತ್ರಾದ್ಯಂತ ಪ್ರಚಾರನಿರತರಾಗಿದ್ದಾರೆ.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಆಡಳಿತ ಅವಧಿಯಲ್ಲಿ ಜನಪರ ಕೆಲಸವೇ ಈ ಚುನಾವಣೆಗೆ ಶ್ರೀರಕ್ಷೆಯಾಗಿದೆ. ಕೊರೊನಾ ಮತ್ತು ಪ್ರವಾಹದಂತಹ ಸಂದರ್ಭದಲ್ಲಿ ಜನರ ಸಮಸ್ಯೆಗೆ ಸ್ಪಂದನೆ ಮಾಡಿ, ಹೋರಾಟ ನಡೆಸಿದ್ದೇನೆ. ಇದರಿಂದ ಮತದಾರರು ಕೈಹಿಡಿಯುತ್ತಾರೆ. –ಎನ್‌.ಮಹೇಶ್‌, ಶಾಸಕ, ಬಿಜೆಪಿ ಅಭ್ಯರ್ಥಿ.

ಲೋಕಸಭಾ, ವಿಧಾನಸಭಾ ಚುನಾವಣೆ ಗಳಲ್ಲಿ ಸತತ ಸೋಲು ಅನುಭವಿಸಿದ್ದೇನೆ. 19 ವರ್ಷ ರಾಜಕೀಯ ವನವಾಸ ಅನುಭವಿಸಿದ್ದೇವೆ. ಈ ಬಾರಿ ಮತ ಭಿಕ್ಷೆ ನೀಡುವಂತೆ ಜನರಲ್ಲಿ ಮನವಿ ಮಾಡಿದ್ದೇನೆ. ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟ ಆಡಳಿತದಿಂದ ಬೇಸತ್ತ ಜನ ಈ ಬಾರಿ ಕಾಂಗ್ರೆಸ್‌ನತ್ತ ಒಲವು ತೋರುತ್ತಿದ್ದಾರೆ. -ಎ.ಆರ್‌.ಕೃಷ್ಣಮೂರ್ತಿ, ಕಾಂಗ್ರೆಸ್‌ ಅಭ್ಯರ್ಥಿ.

ಮೀಸಲು ಕ್ಷೇತ್ರದಲ್ಲಿ ಮಾಡಿರುವ 13 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಆದರೆ, ಅಭಿಮಾನಿಗಳ ಬಳಗದಿಂದ ಮಾಡಿರುವ ಸಾಮಾಜಿಕ ಸೇವೆ ಪರಿಗಣಿಸಿ ಈ ಬಾರಿ ಮತದಾರರು ಜೆಡಿಎಸ್‌ನತ್ತ ಒಲವು ತೋರು ತ್ತಿದ್ದಾರೆ. ಪಕ್ಷದಿಂದ ಹೊರತಂದಿರುವ ಪಂಚರತ್ನ ಯೋಜನೆಗಳು ಈ ಬಾರಿ ನನ್ನ ಗೆಲುವಿಗೆ ಶ್ರೀರಕ್ಷೆ ಆಗಲಿವೆ. -ಬಿ.ಪುಟ್ಟಸ್ವಾಮಿ, ಜೆಡಿಎಸ್‌ ಅಭ್ಯಥಿ

-ಡಿ.ನಟರಾಜು

Advertisement

Udayavani is now on Telegram. Click here to join our channel and stay updated with the latest news.

Next