Advertisement

Kolkata ರೇ*ಪ್‌ ಆರೋಪಿಗೆ ಮೃಗೀಯ ಸ್ವಭಾವವಿತ್ತು: ಸಿಬಿಐ

01:36 AM Aug 24, 2024 | Team Udayavani |

ಹೊಸದಿಲ್ಲಿ: ಪಶ್ಚಿಮ ಬಂಗಾಲದ ಟ್ರೈನಿ ವೈದ್ಯೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿ ಸಂಜಯ್‌ ರಾಯ್‌ “ಮೃಗೀಯ ಸ್ವಭಾವ’ವನ್ನು ಹೊಂದಿದ್ದಾನೆ ಎಂದು ಸಿಬಿಐ ಶುಕ್ರವಾರ ಹೇಳಿದೆ. ಅಲ್ಲದೇ ಅಪರಾಧವನ್ನು ಒಪ್ಪಿಕೊಳ್ಳುವ ಸಮಯ ದಲ್ಲಿ ಯಾವುದೇ ಪಶ್ಚಾತ್ತಾಪ ತೋರಿಸಲಿಲ್ಲ ಎಂದು ಹೇಳಿದೆ.

Advertisement

ಈಗಾಗಲೇ ಆರೋಪಿಯ ಮನೋವಿಶ್ಲೇಷ ಣೆಯ ವರದಿಯನ್ನು ತಯಾರಿಸಲು ಸಿಬಿಐ ಸೂಚಿಸಿದ್ದು, ಇದರ ಆಧಾರದ ಮೇಲೆ ಮುಂದಿನ ವಿಚಾರಣೆ ನಡೆಸುವ ಸಾಧ್ಯತೆ ಇದೆ. ಅಪರಾಧ ನಡೆದ ಸಮಯದಲ್ಲಿ ರಾಯ್‌ ಆ ಸ್ಥಳದಲ್ಲಿದ್ದ ಎಂಬುದಕ್ಕೆ ಸಾಕಷ್ಟು ತಾಂತ್ರಿಕ ಮತ್ತು ವೈಜ್ಞಾನಿಕ ಸಾಕ್ಷ್ಯಗಳಿವೆ ಎಂದು ಸಿಬಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಘಟನೆ ಬಗ್ಗೆ ಪಶ್ಚಾತ್ತಾಪವಿಲ್ಲ: ಆರೋಪಿ ರಾಯ್‌ಗೆ ಘಟನೆಯ ಬಗ್ಗೆ ಯಾವುದೇ ಪಶ್ಚಾತ್ತಾಪವಿಲ್ಲ. ಇಡೀ ಘಟನೆಯ ಇಂಚಿಂಚನ್ನೂ ಸ್ವಲ್ಪವೂ ಹಿಂಜ ರಿಕೆ ಇಲ್ಲದೇ ಆತ ವಿಚಾರಣೆಯ ಸಮಯದಲ್ಲಿ ಹೇಳಿದ್ದಾನೆ. ಆತ ಕಾಮುಕನಾಗಿದ್ದು, ಮೃಗದ ರೀತಿ ಯಲ್ಲಿ ವರ್ತಿಸುತ್ತಿದ್ದ ಎಂದು ಅವರು ಹೇಳಿದ್ದಾರೆ.

ಕೋಲ್ಕತಾ ಆಸ್ಪತ್ರೆಯ ಅವ್ಯವಹಾರ ಕೇಸ್‌ ಸಿಬಿಐಗೆ
ಕೋಲ್ಕತಾ: ಇಲ್ಲಿನ ಆರ್‌ಜಿಕಾರ್‌ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದಿದೆ ಎನ್ನಲಾದ ಆರ್ಥಿಕ ಅವ್ಯವಹಾರ ಪ್ರಕರಣದ ತನಿಖೆಯನ್ನು ಕಲ್ಕತ್ತಾ ಹೈಕೋರ್ಟ್‌ ಸಿಬಿಐಗೆ ವಹಿಸಿದೆ. ಆಸ್ಪತ್ರೆಯ ಪ್ರಾಂಶುಪಾಲ ಸಂದೀಪ್‌ ಘೋಷ್‌ ಅವರ ಕಾಲದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಬಗ್ಗೆ ತನಿಖೆ ಇ.ಡಿ. ತನಿಖೆಗೆ ಆದೇಶಿಸಬೇಕು ಎಂದು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು.

ಸಂಜಯ ರಾಯ್‌ಗೆ ಸುಳ್ಳುಪತ್ತೆ ಪರೀಕ್ಷೆಗೆ ಕೋರ್ಟ್‌ ಒಪ್ಪಿಗೆ
ಕೋಲ್ಕತಾ ಅತ್ಯಾಚಾರದ ಪ್ರಕರಣದ ಆರೋಪಿ ಸಂಜಯ್‌ ರಾಯ್‌ಗೆ ಸುಳ್ಳುಪತ್ತೆ ಪರೀಕ್ಷೆ ನಡೆಸಲು ಕೋರ್ಟ್‌ ಶುಕ್ರವಾರ ಅನುಮತಿ ನೀಡಿದೆ. ಕೇಂದ್ರ ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಈ ಪರೀಕ್ಷೆ ನಡೆಸಲಿದ್ದಾರೆ. ಆರೋ­ಪಿಯ ಡಿಎನ್‌ಎ ಮತ್ತು ಮನೋವಿ­ಶ್ಲೇ­ಷಣ ವರದಿಗೆ ಸಿಬಿಐ ಅಧಿಕಾರಿಗಳು ಕಾಯು­ತ್ತಿದ್ದು, ಇದು ಸಿಕ್ಕಿದ ಬಳಿಕ ವಿಚಾರಣೆಯ ದಿಕ್ಕನ್ನು ನಿರ್ಧರಿಸಲಾಗು­ವುದು ಎಂದು ಅಧಿ­ಕಾರಿಯೊಬ್ಬರು ತಿಳಿಸಿದ್ದಾರೆ. ಆರ್‌ಜಿ ಕಾರ್‌ ಕಾಲೇಜಿನ ಪ್ರಾಂಶು­ಪಾಲ ಹಾಗೂ ಇತರರಿಗೆ ಸುಳ್ಳುಪತ್ತೆ ಪರೀಕ್ಷೆ ನಡೆಸಲು ಕೋರ್ಟ್‌ ಈಗಾಗಲೇ ಒಪ್ಪಿಗೆ ನೀಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next