Advertisement

16 ವರ್ಷದ ನಂತರ ಕೋಡಿ ಬಿದ್ದ ಕೋಲಾರಮ್ಮ ಕೆರೆ

04:13 PM Sep 24, 2021 | Team Udayavani |

ಕೋಲಾರ: ಹದಿನಾರು ವರ್ಷದ ನಂತರ ಕೋಲಾರಮ್ಮ ಕೆರೆ ಗುರುವಾರ ಮುಂಜಾನೆಯಿಂದ ಕೋಡಿ ಹರಿಯು ತ್ತಿದ್ದು ನಾಗರಿಕರ ಸಂತಸಕ್ಕೆ ಪಾರವಿಲ್ಲದಂತಾಗಿದೆ.

Advertisement

20 ವರ್ಷಗಳ ಅವಧಿಯಲ್ಲಿ ಕೋಲಾರಮ್ಮ ಕೆರೆ 2003, 2005ರಲ್ಲಿ ಕೋಡಿ ಹರಿದಿತ್ತು. ಆ ನಂತರ 2017ರಲ್ಲಿ ಕೋಡಿ ಹಂತದವರೆಗೂ ನೀರು ಬಂದಿತ್ತಾದರೂ ಕೋಡಿ ಹರಿದಿರಲಿಲ್ಲ. 16 ವರ್ಷಗಳ ಅವಧಿಯಲ್ಲಿ 2-3 ಬಾರಿ ಒಂದಷ್ಟು ನೀರು ಸಂಗ್ರಹಗೊಂಡಿತ್ತಾದರೂ ಕೋಡಿ ಹರಿದಿರಲಿಲ್ಲ.

6 ತಿಂಗಳಿನಿಂದಲೂ ಕೋಲಾರಮ್ಮ ಕೆರೆಗೆ ಹರಿಯುತ್ತಿ ರುವ ಕೆ.ಸಿ.ವ್ಯಾಲಿ ನೀರು ಹಾಗೂ ಇತ್ತೀಚಿಗೆ ಸುರಿ ಯುತ್ತಿರುವ ಮಳೆ ನೀರಿನಿಂದಾಗಿ ಕೋಲಾರಮ್ಮ ಕೆರೆ ಕೋಡಿ ಭಾಗ್ಯ ಕಾಣುವಂತಾಗಿದೆ. ಸುಮಾರು ವಾರದಿಂದಲೂ ಕೋಲಾರ ನಗರದ ಜನತೆ ಕೋಲಾರಮ್ಮ ಕೆರೆ ಯಾವಾಗ ಕೋಡಿ ಹರಿಯುತ್ತದೆ ಎಂಬ ಕುತೂಹಲ ದಲ್ಲಿ ನಿತ್ಯವೂ ಕೋಡಿಯನ್ನು ಗಮನಿಸುತ್ತಿದ್ದರು. ಬುಧವಾರ ಕೋಡಿಗಿಂತಲೂ ಕೇವಲ ಅರ್ಧ ಅಡಿಗಿಂತಲೂ ಕಡಿಮೆ ಇದ್ದರಿಂದ ಗುರುವಾರ ಕೋಡಿ ಹರಿಯುವುದನ್ನು ಖಚಿತಪಡಿಸಿಕೊಂಡಿದ್ದರು. ಕೆರೆ ಕೋಡಿ ಹರಿಯುವ ಕಾಲುವೆಗಳನ್ನು ಬುಧವಾರವೇ ಜೆಸಿಬಿಗಳ ಮೂಲಕ ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ಮಾಡಲಾಗಿತ್ತು.

2 ಕೋಡಿ ಆಕರ್ಷಣೆ: ಕೋಲಾರಮ್ಮ ಕೆರೆಗೆ 2 ಕೋಡಿ ಗಳಿದ್ದು, ಪಶ್ಚಿಮ ದಿಕ್ಕಿನಲ್ಲಿರುವ ಕೋಡಿಯ ಅರ್ಧಭಾಗ ದಲ್ಲಿ ನೀರು ಕೋಡಿ ಹರಿಯುತ್ತಿದ್ದು, ಗಾಂಧಿನಗರದ ಪೂರ್ವ ದಿಕ್ಕಿನ ಕೋಡಿಯಲ್ಲಿ ಕಾಲು ಭಾಗದಲ್ಲಿ ಮಾತ್ರ ಕೋಡಿ ಹರಿಯುತ್ತಿದೆ. ಶುಕ್ರವಾರ ಮತ್ತಷ್ಟು ಮಳೆಯಾದರೆ ಕೋಡಿ ಪ್ರಮಾಣ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ. ವಾರಾಂತ್ಯಗಳಲ್ಲಿ ಕೋಲಾರಮ್ಮ ಕೋಡಿ ಬಳಿ ಜನಜಾತ್ರೆ ಏರ್ಪಡುವ ಸಾಧ್ಯತೆಯೂ ಇದೆ.

ಒತ್ತುವರಿದಾರರಿಗೆ ಆತಂಕ: ಕೋಲಾರಮ್ಮ ಕೆರೆ 876 ಎಕರೆ ಹೊಂದಿದೆ ಎಂದು ದಾಖಲಾತಿಗಳು ಹೇಳುತ್ತಿವೆ ಯಾದರೂ, ಈ ಪೈಕಿ ಕೆರೆ ಸುತ್ತಲೂ ಸಾಕಷ್ಟು ಒತ್ತುವರಿ ಯಾಗಿದೆ. ಒತ್ತುವರಿ ಜಾಗದಲ್ಲಿ ಕೃಷಿ, ಖಾಸಗಿ, ಸರ್ಕಾರಿ ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿದೆ. ಇದೀಗ ಹೀಗೆ ಒತ್ತುವರಿ ಮಾಡಿದವರಿಗೆ ಸಂಕಷ್ಟ ಎದುರಾಗಿದೆ. ಕೋಲಾ ರಮ್ಮ ಕೆರೆ ಕೋಡಿ ಎತ್ತರದಲ್ಲಿ ನೀರು ಸಂಗ್ರಹವಾಗಿರುವು ರಿಂದ ಒತ್ತುವರಿ ಮಾಡಿದ ಕಟ್ಟಡಗಳನ್ನು ನೀರು ಆವರಿಸುತ್ತಿದೆ. ದೇವರಾಜ ಅರಸು ಭವನ ಬುಧವಾರವೇ ಜಲಾವೃತಗೊಂಡು ಅಧಿಕಾರಿ, ಸಿಬ್ಬಂದಿ, ಸಾರ್ವಜನಿಕರು ಪರದಾಡಿದ್ದರು. ದೇವಾಲಯ, ದರ್ಗಾ ಇತ್ಯಾದಿ ಕಟ್ಟಡ ನೀರಿನಿಂದ ಸಮಸ್ಯೆ ಎದುರಿಸುತ್ತಿವೆ.

Advertisement

ಇದನ್ನೂ ಓದಿ:ಸ್ನೇಹರ್ಷಿ ನಗು: ಮೊದಲ ಹೆಜ್ಜೆಗೆ ಮಿಲಿಯನ್‌ ಹಿಟ್ಸ್‌

ದೊಡ್ಡ ಕುಂಟೆಯಷ್ಟೇ?: ಕೋಲಾರ ಶಾಶ್ವತ ನೀರಾವರಿ ಹೋರಾಟ ಸಮಿತಿ ಮುಖಂಡ ಕುರುಬರ ಪೇಟೆ ವೆಂಕಟೇಶ್‌, ಕೋಲಾರಮ್ಮ ಕೆರೆ ಬಹುತೇಕ ಜಾಗ ಒತ್ತುವರಿ ಆಗಿರುವುದರಿಂದ ಕೆರೆಯು ಕುಂಟೆಯ ಸ್ವರೂಪವನ್ನಷ್ಟೇ ಉಳಿಸಿಕೊಂಡಿದೆ. ಕೆರೆಯು ಹೂಳು ತುಂಬಿ, ಗಿಡ ಗಂಟೆಗಳಿಂದ ತುಂಬಿದೆ. ಅರ್ಧ ಕೆರೆಯಲ್ಲಿ ನೀರು, ಜೊಂಡು ಹರಡುತ್ತಿದೆ. ಇವೆಲ್ಲವನ್ನು ಸ್ವತ್ಛಗೊಳಿಸಬೇಕಾದ ಸಂಬಂಧಪಟ್ಟ ಅಧಿಕಾರಿಗಳು ಮೌನವಾಗಿದ್ದಾರೆಂದು ಟೀಕಿಸಿದ್ದಾರೆ.

ರಾಜಕಾಲುವೆಯಲ್ಲಿ ಹಿನ್ನೀರು?: ಕೋಲಾರಮ್ಮ ಕೆರೆಗೆ ದೊಡ್ಡ ಪ್ರಮಾಣದಲ್ಲಿ ನೀರು ಹರಿಸುವ ಎರಡು ರಾಜಕಾಲುವೆಗಳಿವೆ. ಈ ಎರಡೂ ರಾಜಕಾಲುವೆಗಳು ಕೋಲಾರ ನಗರವನ್ನು ಉತ್ತರ ಮತ್ತು ದಕ್ಷಿಣ ದಿಕ್ಕಿನಲ್ಲಿ ಆವೃತಗೊಂಡಿವೆ. ಒಂದು ಆರ್‌ಟಿಣಿ ಕಚೇರಿ ಸಮೀಪ ಹರಿದರೆ ಮತ್ತೂಂದು ತಾಲೂಕು ಕಚೇರಿ ಪಕ್ಕದಿಂದ ಕೆರೆಗೆ ನೀರು ಸೇರಿಸುತ್ತದೆ. ಆದರೆ, ಕೆರೆ ಹೂಳು ತುಂಬಿ ಕೊಂಡು ಕೆರೆ ಬಟ್ಟಲಿನ ಸ್ಪರೂಪ ಕಳೆದುಕೊಂಡಿರು ವುದರಿಂದ ರಾಜಕಾಲುವೆಯಿಂದ ಕೆರೆಗೆ ಹರಿಯ ಬೇಕಾದ ನೀರು ಕೆರೆಯಿಂದಲೇ ರಾಜಕಾಲುವೆ ಯಲ್ಲಿಯೇ ಅರ್ಧ ಕಿ.ಮೀ.ನಷ್ಟು ನಿಲ್ಲುವಂತಾಗಿದೆ. ಮತ್ತಷ್ಟು ಮಳೆ ಸುರಿದರೆ ಕಾಲಕಾಲುವೆಗಳು ತುಂಬಿ ಅಕ್ಕಪಕ್ಕದಲ್ಲಿ ನಿರ್ಮಾಣವಾಗಿರುವ ಮನೆಗಳಿಗೆ ನೀರು ನುಗ್ಗುವ ಅಪಾಯವೂ ಇದೆ.

ವಿಳಂಬವಾದ ಪಾರ್ಕ್‌: ಸಂಸದ ಎಸ್‌.ಮುನಿ ಸ್ವಾಮಿಯ ಕನಸಿನ ಕೂಸಾದ ಕೋಲಾರಮ್ಮ ಅಮ್ಯೂಸ್‌ ಮೆಂಟ್‌ ಪಾರ್ಕ್‌ ಕಾಮಗಾರಿ ಸ್ಥಗಿತಗೊಂಡಿದೆ. ಕೋಲಾರಮ್ಮ ಕೆರೆಗೆ ಕೆ.ಸಿ. ವ್ಯಾಲಿ ನೀರು ಬಿಡುವ ಮುನ್ನ ಕೆರೆಯಲ್ಲಿ ಬೆಳೆದಿದ್ದ ಗಿಡ ಗಂಟಿಗಳನ್ನು ಸಂಸದರು ಸ್ವತ್ಛಗೊಳಿಸಿದ್ದರು. ಆದರೆ, ಇದೀಗ ಕೆರೆ ತುಂಬಿದ್ದರೂ ಸಂಸದರು ನೀಡಿದ್ದ ಹೇಳಿಕೆ ಅನುಷ್ಠಾನಗೊಂಡಿಲ್ಲವೆಂದು ಸಾರ್ವಜನಿಕರು ಟೀಕಿಸುತ್ತಿದ್ದಾರೆ.

ದೀಪೋತ್ಸವ-ತೆಪ್ಪೋತ್ಸವಕ್ಕೆ ಸಿದ್ಧತೆ: ಕೋಲಾರಮ್ಮ ಕೆರೆಯು ಕೋಡಿ ಹರಿಯುತ್ತಿದ್ದ ಸಂದರ್ಭದಲ್ಲಿ ಹಿಂದಿನ ದಶಕಗಳಲ್ಲಿ ಇಡೀ ಕೆರೆಯನ್ನು ವಿದ್ಯುತ್‌ ದೀಪಗಳಿಂದ ಸಿಂಗರಿಸಿ, ತೆಪ್ಪೋತ್ಸವ ಪೂಜೆ ಸಲ್ಲಿಸಲಾಗುತ್ತಿತ್ತು. ಇದೀಗ 20 ವರ್ಷಗಳ ನಂತರ ಕೋಲಾರಮ್ಮ ಕೆರೆ ಕೋಡಿ ಹರಿ ಯುತ್ತಿರುವುದರಿಂದ ಈ ಬಾರಿ ಸಂಪ್ರದಾಯ ಬದ್ಧ ವಾಗಿಯೇ ಇಡೀ ಕೋಲಾರ ನಗರದಲ್ಲಿ ದೀಪೋತ್ಸವ, ತೆಪ್ಪೋತ್ಸವ ಆಚರಿಸುವ ಕುರಿತು ಸಿದ್ಧತೆ ನಡೆಯುತ್ತಿದ್ದು, ದಿನಾಂಕ ನಿಗದಿಪಡಿಸುವ ಚಿಂತನೆ ನಡೆದಿದೆ.

ಜೋಡಿ ಕುರಿ ಬಲಿ
ಸಾಮಾನ್ಯವಾಗಿ ಕೆರೆ ಕೋಡಿ ಹರಿದರೆ ಬಾಗಿನ ಬಿಡುವುದು ಸಂಪ್ರದಾಯ. ಆದರೆ, ಕೋಲಾರಮ್ಮ ಕೆರೆ 2 ದಶಕಗಳ ನಂತರ ಕೋಡಿ ಹರಿಯುತ್ತಿರುವುದರಿಂದ ಕೆರೆಗೆ 2 ಕುರಿ ಬಲಿಕೊಟ್ಟು ಆಚರಿಸಿದರು. ಗಾಂಧಿನಗರ ನಿವಾಸಿಗಳು ಬಲಿಪೂಜೆ ಮೂಲಕ ಕೆರೆಯಿಂದ ಯಾವುದೇ ಅಪಾಯ ಎದುರಾಗದಂತೆ ಗುರುವಾರ ಬೆಳಗ್ಗೆಯೇ ಪ್ರಾರ್ಥಿಸಿದರು

ದುಗ್ಗಲಮ್ಮ ವರ!
ಸಾಮಾನ್ಯವಾಗಿ ಕೆರೆಯನ್ನು ಕಾಪಾಡುವ ದೇವಿ ಎಂದೇ ಖ್ಯಾತಿಯಾಗಿರುವ ದುಗ್ಗಲಮ್ಮ ದೇವಿಗೆ ಕೋಡಿ ಸಂದರ್ಭದಲ್ಲಿ ಪೂಜೆ ಸಲ್ಲಿಸುತ್ತಿದ್ದಾಗ, ದೇವಿ ತಲೆಯ ಮೇಲಿಂದ ಹೂವು ಜಾರಿ ಬಿದ್ದಿರುವುದನ್ನು ದೇವಿ ವರ ಕೊಟ್ಟಳೆಂದೇ ಜನತೆ ಭಾವಿಸಿ ಧನ್ಯತಾ ಭಾವ ಅನುಭವಿಸುತ್ತಿದ್ದಾರೆ. ದೇವಿ ತಲೆಯ ಮೇಲಿನ ಹೂವು ಜಾರಿ ಬೀಳುತ್ತಿರುವುದು ಮಾಧ್ಯಮಗಳ ಫೋಟೋ ಮತ್ತು ವಿಡಿಯೋದಲ್ಲಿ ದಾಖಲಾಗಿರುವುದು, ಇಡೀ ದಿನ ವೈರಲ್‌ ಆಗುವಂತಾಯಿತು.

ಕೋಲಾರಮ್ಮ ಕೆರೆ ಇನ್ನು ಮುಂದೆ ತುಂಬುವುದೇ ಇಲ್ಲ ಎಂದು ಭಾವಿಸಿದ್ದೆವು. ಆದರೆ, ಇದೀಗ ಕೋಲಾರ ನಗರಕ್ಕೆ ಸಂಭ್ರಮ ತಂದಿದೆ. ಈ ಹಿಂದಿನಂತೆ ದೀಪೋತ್ಸವ ತೆಪ್ಪೋತ್ಸವ ಆಚರಿಸುವ ಕುರಿತು ಚಿಂತನೆ ನಡೆದಿದೆ.
-ಜ್ಯೂಸ್‌ ನಾರಾಯಣಸ್ವಾಮಿ, ನಾಗರಿಕ.
ಕೋಟೆ, ಕೋಲಾರ

ಕೆ.ಸಿ.ವ್ಯಾಲಿ ಮತ್ತು ಮಳೆ ನೀರಿನಿಂದ ಕೋಲಾರಮ್ಮ ಕೆರೆ 16 ವರ್ಷಗಳ ನಂತರ ಕೋಡಿ ಹರಿಯುತ್ತಿರುವುದು ಸಂತಸ ತಂದಿದೆ. ಮಾಜಿ ಸಿಎಂ ಸಿದ್ದರಾಮಯ್ಯ, ರಮೇಶ್‌ಕುಮಾರ್‌, ಕೃಷ್ಣಬೈರೇಗೌಡ ಇತರರ ಪ್ರಯತ್ನದಿಂದ ಕೋಲಾರಮ್ಮ ಕೆರೆ ಕೋಡಿ ಹರಿದಿದ್ದು, ಇನ್ನು ಮುಂದೆ ಸದಾ ಕೋಡಿ ಹರಿಯುತ್ತಿರಲಿ ಎಂದು ಸಮಸ್ತ ಕೋಲಾರ ನಾಗರಿಕರ ಪರವಾಗಿ ಕೋರುತ್ತೇನೆ.
-ಶ್ವೇತಾ ಶಬರೀಶ್‌, ಅಧ್ಯಕ್ಷರು,
ನಗರಸಭೆ, ಕೋಲಾರ

-ಕೆ.ಎಸ್‌.ಗಣೇಶ್‌

Advertisement

Udayavani is now on Telegram. Click here to join our channel and stay updated with the latest news.

Next