Advertisement

ಕುಡುಪು ಬ್ರಹ್ಮಕಲಶಾಭಿಷೇಕ ಧಾರ್ಮಿಕ ಸಭೆ 

02:49 PM Feb 23, 2018 | Team Udayavani |

ಮಂಗಳೂರು: ದೇವಾಲಯಗಳಲ್ಲಿ ಹೊರಗಿನ ವೈಭವಕ್ಕಿಂತ ಹೆಚ್ಚು ಸಾನ್ನಿಧ್ಯಕ್ಕೆ ಪೂರಕವಾಗಿರುವ ವಿಧಿ-ವಿಧಾನಗಳಿಗೆ ಹೆಚ್ಚಿನ ಮಹತ್ವ ನೀಡಬೇಕು. ಆಗ ಸಾನ್ನಿಧ್ಯ ವೃದ್ಧಿಯಾಗುತ್ತದೆ ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆನುವಂಶಿಕ ಅರ್ಚಕ ಅನಂತಪದ್ಮನಾಭ ಆಸ್ರಣ್ಣ ಹೇಳಿದರು.

Advertisement

ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ನಡೆಯುತ್ತಿರುವ ಬ್ರಹ್ಮಕಲಾಶಾಭಿಷೇಕ ಸಮಾರಂಭದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದ ಅವರು, ಕುಡುಪು ಕ್ಷೇತ್ರವು ಶಾಸ್ತ್ರೀಯವಾಗಿ ನಿರ್ಮಾಣವಾಗಿದೆ. ದಕ್ಷಿಣ ಕನ್ನಡದಲ್ಲಿ ನಿರ್ಮಾಣಗೊಂಡಿರುವ ಉತ್ತಮವಾದ ಕ್ಷೇತ್ರಗಳ ಪೈಕಿ ಕುಡುಪು ಕ್ಷೇತ್ರವೂ ಒಂದು ಎಂದರು.

ಅನೇಕ ಕಡೆಗಳಲ್ಲಿ ದೇವಸ್ಥಾನಗಳ ಜೀರ್ಣೋದ್ಧಾರ ಕಾರ್ಯಗಳನ್ನು ಅತ್ಯಂತ ತರಾತುರಿಯಲ್ಲಿ ನಡೆಸುತ್ತಾರೆ. ಇದರಿಂದಾಗಿ ಅನೇಕ ಸಮಸ್ಯೆಗಳು ಉದ್ಭವಿಸುತ್ತವೆ. ಆದರೆ ಕುಡುಪು ಕ್ಷೇತ್ರವು 20 ವರ್ಷಗಳ ಬಳಿಕ ಯಾವುದೇ ನ್ಯೂನತೆ ಬಾರದ ರೀತಿಯಲ್ಲಿ ಶಾಸ್ತ್ರೀಯವಾಗಿ ಜೀರ್ಣೋದ್ಧಾರವಾಗಿದೆ. ಅಂತಃಶಕ್ತಿ ಬೆಳಗಿದರೆ ಮಾನವನ ಜೀವನ ಸಾರ್ಥಕವಾಗುತ್ತದೆ. ಜಿಲ್ಲೆಯಲ್ಲಿ ಕಚ್ಚಾಟಗಳು ಕಡಿಮೆಯಾಗಿ ಪರಸ್ಪರ ಏಕತೆಯ ಮನೋಭಾವ ಮೂಡಲಿ ಎಂದು ಹಾರೈಸಿದರು.

ಹಿರಿಯ ಜಾನಪದ ವಿದ್ವಾಂಸ ಕೆ.ಎಲ್‌. ಕುಂಡಂತಾಯ ಅವರು “ದೇವಾಲಯ ಮತ್ತು ಸಂಸ್ಕೃತಿ’ ಎಂಬ ವಿಷಯದ ಬಗ್ಗೆ ಧಾರ್ಮಿಕ ಉಪನ್ಯಾಸದಲ್ಲಿ ಮಾತನಾಡಿ, ಭಾರತೀಯ ದೇವಾಲಯಗಳಿಗೆ ಜಾನಪದದ ಮೂಲವಿದೆ. ದೇಶದ ಧಾರ್ಮಿಕ ಮನಸ್ಸು ಎಲ್ಲ ಹಂತಗಳಲ್ಲಿಯೂ ಬೆಳವಣಿಗೆಯಾಗಿಯೇ ಈಗಿರುವ ದೇವಸ್ಥಾನ ಸಂಸ್ಕೃತಿಯು ರೂಪುಗೊಂಡಿದೆ. ಭಾರತೀಯ ಸಂಸ್ಕೃತಿ ಮತ್ತು ಧರ್ಮ ಅಧ್ಯಾತ್ಮದ ಮೇಲೆ ನಿಂತಿದೆ. ಆದ್ದರಿಂದ ಬೇರೆ ಬೇರೆ ಸಂಸ್ಕೃತಿಗಳ ಆಕ್ರಮಣಕ್ಕೆ ಒಳಗಾಗಿದ್ದರೂ ಮೂಲ ಸಂಸ್ಕೃತಿಯನ್ನು ಉಳಿಸಿಕೊಂಡಿದೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಡಾ| ಶಾಂತಾರಾಮ ಶೆಟ್ಟಿ ಮಾತನಾಡಿ, ವೈದ್ಯರು, ಶಿಕ್ಷಕರು, ವಕೀಲರು ಮಾಡುವ ಕೆಲಸದಲ್ಲಿ ದೇವರನ್ನು ಕಂಡರೆ ಅದು ಖಂಡಿತ ರಾಮರಾಜ್ಯವಾಗುತ್ತದೆ. ದೇವರಲ್ಲಿ ನಂಬಿಕೆ ಇಟ್ಟವರು ಖಂಡಿತ ತಪ್ಪು ಮಾಡುವುದಿಲ್ಲ ಎಂದರು.

Advertisement

ಸಮಾರಂಭದಲ್ಲಿ ಮೋಹನ್‌ ಅಮೀನ್‌, ಗಣೇಶ್‌ ಬಂಗೇರ, ಪ್ರಸಾದ್‌ರಾಜ್‌ ಕಾಂಚನ್‌, ಆರೂರು ಪ್ರಭಾಕರ ರಾವ್‌, ಶ್ರೀಹರಿನಾರಾಯಣ ಆಸ್ರಣ್ಣ, ಮಹೇಶ್‌ ಮೂರ್ತಿ, ಭಾಸ್ಕರ ಕೆ., ಕಾರ್ಯನಿರ್ವಹಣಾಧಿಕಾರಿ ಅರವಿಂದ ಎ. ಸುತಗುಂಡಿ, ನವೀನ್‌ ಕುಮಾರ್‌, ಸುಜನ್‌ದಾಸ್‌ ಕುಡುಪು, ಜನಾರ್ದನ ಕುಡುಪು, ರವೀಂದ್ರ ನಾಯ್ಕ, ರವಿಪ್ರಸನ್ನ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ವಾಸುದೇವರಾವ್‌ ಕುಡುಪು ಪ್ರಸ್ತಾವನೆಗೈದರು. ಶರತ್‌ ಶೆಟ್ಟಿ ಪಡುಪಳ್ಳಿ ಕಾರ್ಯಕ್ರಮ ನಿರೂಪಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next