Advertisement

ಕೊಡಂಕೂರು, ನಿಟ್ಟೂರು ಬಸ್‌ನಿಲ್ದಾಣದ ದುಃಸ್ಥಿತಿ

03:31 PM Sep 13, 2022 | Team Udayavani |

ಉಡುಪಿ: ನಿಟ್ಟೂರು ರಾಷ್ಟ್ರೀಯ ಹೆದ್ದಾರಿ 66ರ ಬದಿ ಇರುವ ಕೊಡಂಕೂರು, ನಿಟ್ಟೂರಿನ ಎರಡು ಬಸ್‌ ನಿಲ್ದಾಣಗಳು ಪಾಳು ಬಿದ್ದಿದ್ದು, ಸಾರ್ವಜನಿಕ ಬಳಕೆಗೆ ನಿರುಪಯುಕ್ತವಾಗಿದೆ. ರಾ.ಹೆ. ಎರಡೂ ಬದಿಯ ಬಸ್‌ ನಿಲ್ದಾಣ ಕೆಲಸಕ್ಕೆ ಬಾರದ್ದಾಗಿದೆ. ಹೆದ್ದಾರಿ ಇಲಾಖೆ ನಿರ್ಲಕ್ಷ್ಯದಿಂದಾಗಿ ಬಸ್‌ ಪ್ರಯಾಣಿಕರಿಗೆ ವ್ಯವಸ್ಥಿತ ತಂಗುದಾಣ ಇಲ್ಲದ ಪರಿಸ್ಥಿತಿ ನಿರ್ಮಾಣಗೊಂಡಿದ್ದು, ಜಿಲ್ಲಾಡಳಿತ, ನಗರಸಭೆಯೂ ಈ ಬಗ್ಗೆ ಗಂಭೀರವಾಗಿ ಪರಿಗಣಿಸದ ಕಾರಣ ಪ್ರಯಾಣಿಕರಿಗೆ ಆಶ್ರಯ ನೀಡಬೇಕಿದ್ದ ಬಸ್‌ ನಿಲ್ದಾಣ ಅಸ್ತಿತ್ವವೇ ಕಳೆದುಕೊಂಡಿದೆ. ಪ್ರಸ್ತುತ ಬಸ್‌ ನಿಲ್ದಾಣದಿಂದ ಜನರು ದೂರವಾಗಿದ್ದಾರೆ.

Advertisement

ಕೊಡಂಕೂರು, ನಿಟ್ಟೂರು, ಕೊಡವೂರು, ಮಧ್ವನಗರ ಮೊದಲಾದ ಭಾಗಗಳಿಂದ ಸಾವಿರಾರು ಜನರು ಎರಡು ಬದಿಯಲ್ಲಿ ನಿಂತು ಬಸ್‌ನಲ್ಲಿ ಕಾಯುತ್ತಾರೆ. ಮುಖ್ಯವಾಗಿ ಉದ್ಯೋಗಕ್ಕೆ ತೆರಳುವ ಮಹಿಳೆಯರು, ಯುವತಿಯರು, ಕಾಲೇಜು ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚು. ಪ್ರತಿನಿತ್ಯ ಸಂಜೆ, ಬೆಳಗ್ಗೆ ಮಧ್ಯಾಹ್ನ ಅವಧಿಯಲ್ಲಿ ಆಗಮಿಸಿ ಸ್ಥಳೀಯ ಬಸ್‌ಗಳಿಗೆ ಕಾದು ಪ್ರಯಾಣಿಸುತ್ತಾರೆ. ಮಳೆಗಾಲದಲ್ಲಿ ಮಳೆಯಲ್ಲಿ ಜೋರು ಮಳೆ ಬರುವಾಗಲೂ ಸೂರಿಲ್ಲದೆ ಛತ್ರಿ ಹಿಡಿದುಕೊಂಡೆ ಎಲ್ಲರೂ ಬಸ್‌ಗಳಿಗೆ ಕಾಯಬೇಕು. ಬೇಸಗೆಯಲ್ಲಿ ಸುಡು ಬಿಸಿಲಿನಲ್ಲಿ ರಸ್ತೆಯ ಅಂಚಿನಲ್ಲಿ ಬಸ್‌ ಗೆ ಕಾಯುವುದು ಸ್ಥಳೀಯರಿಗೆ ಸಮಸ್ಯೆಯಾಗಿದೆ.

ಗಿಡಮರಗಳಿಂದ ಆವೃತವಾದ ಬಸ್‌ ನಿಲ್ದಾಣ

ಕೊಡಂಕೂರು ಬಸ್‌ ನಿಲ್ದಾಣ ಸುತ್ತಮುತ್ತ ಗಿಡಗಂಟಿಗಳಿಂದ ಆವೃತವಾಗಿದ್ದು, ಪ್ರಯಾಣಿಕರು ಅಲ್ಲಿಗೆ ತೆರಳಲಾರದಷ್ಟು ಹದಗೆಟ್ಟಿದೆ. ಇದರ ಎದುರಿಗೆ ರಿಕ್ಷಾ ನಿಲ್ದಾಣ ಸಮೀಪವೆ ಇರುವ ನಿಟ್ಟೂರು ಬಸ್‌ನಿಲ್ದಾಣವು ಗಿಡಮರಗಳ ನಡುವೆ ದುಃಸ್ಥಿತಿಯಲ್ಲಿದೆ. ಇವೆರಡೂ ಬಸ್‌ ನಿಲ್ದಾಣ ಅಪರಿಚಿತರ ಅಡ್ಡೆಯಾಗಿದ್ದು, ಹೆಂಚಿನ ಮಾಡಿನಿಂದ ನಿರ್ಮಿಸಿದ ಅತ್ಯಂತ ಹಳೆ ಕಾಲದ ಬಸ್‌ ನಿಲ್ದಾಣವಾಗಿದೆ. ಹೆಂಚುಗಳೆಲ್ಲ ಉದುರಿ ಕೆಳಗೆ ಬೀಳುತ್ತಿವೆ. ಮಳೆಗಾಲದಲ್ಲಿ ನಿರಂತರ ಸೋರುತ್ತದೆ. ಪ್ರಸ್ತುತ ಬಸ್‌ ನಿಲ್ದಾಣ ಅಪರಿಚಿತರ ಅಡ್ಡೆಯಾಗಿ ಪರಿವರ್ತನೆಗೊಂಡಿದೆ. ರಾತ್ರಿವೇಳೆ ಕೆಲವರು ಮದ್ಯಪಾನವನ್ನು ಸೇವಿಸುವುದು ನಡೆಯುತ್ತದೆ. ಸುತ್ತಮುತ್ತ ಮದ್ಯದ ಟೆಟ್ರಾಪ್ಯಾಕ್‌ಗಳು ಬಿದ್ದಿವೆ.

Advertisement

ಮಹಿಳಾ, ಮಕ್ಕಳ ನಿಲಯಗಳಿಗೆ ಸಮಸ್ಯೆ

ಸಂಜೆ ಬಳಿಕ ಮಹಿಳೆಯರು, ಹೆಣ್ಣು ಮಕ್ಕಳು ಈ ಪರಿಸರದಲ್ಲಿ ಓಡಾಡಲು ಆತಂಕ ಪಡುವ ಪರಿಸ್ಥಿತಿ ಇದೆ. ಇಲ್ಲಿನ ಸಮೀಪವೇ ಸಖೀ ಒನ್‌ ಸ್ಟಾಪ್‌ ಸೆಂಟರ್‌, ಸ್ಟೇಟ್‌ ಹೋಂ-ಮಹಿಳಾ ನಿಲಯ, ವಿಚಕ್ಷಣಾಲಯ ಕೇಂದ್ರಗಳಿವೆ. ಈ ಕೇಂದ್ರದಲ್ಲಿ ಮಕ್ಕಳು, ಮಹಿಳೆಯರು ನೆಲೆಸಿದ್ದಾರೆ. ಅಪರಿಚಿತರಿಂದ ಈ ಕೇಂದ್ರಗಳ ಪರಿಸರಕ್ಕೆ ತೊಂದರೆ ಯಾಗುವ ಸಾಧ್ಯತೆ ಇದೆ. ಪಾಳು ಬಿದ್ದ ಬಸ್‌ ನಿಲ್ದಾಣವನ್ನು ವ್ಯವಸ್ಥಿತಗೊಳಿಸಿ ಅಭಿವೃದ್ಧಿಪಡಿಸಬೇಕು. ಅಪರಿಚಿತರ ತಾಣವಾಗುವುದನ್ನು ತಪ್ಪಿಸಲು ಕ್ರಮಕೈಗೊಳ್ಳುವಂತೆ ನಗರಸಭೆ ಆಡಳಿತ ಮುಂದಾಗಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಇಲಾಖೆಯೊಂದಿಗೆ ಚರ್ಚೆ: ಕೊಡಂಕೂರು, ನಿಟ್ಟೂರು ಎರಡು ಬಸ್‌ನಿಲ್ದಾಣಗಳ ದುಃಸ್ಥಿತಿ ಬಗ್ಗೆ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಬಸ್‌ ನಿಲ್ದಾಣದ ಅಭಿವೃದ್ಧಿಗೆ ಈಗಾಗಲೇ ಹೆದ್ದಾರಿ ಇಲಾಖೆ ಅವರೊಂದಿಗೆ ಚರ್ಚಿಸಲಾಗಿದೆ. ಅಲ್ಲದೆ ಬಸ್‌ ನಿಲ್ದಾಣ ನಿರ್ಮಾಣಕ್ಕೆ ಯಾರಾದರೂ ಜಾಹೀರಾತು ಸಂಸ್ಥೆಯವರು ಮುಂದೆ ಬಂದಲ್ಲಿ ಪರಿಶೀಲಿಸಿ ಕ್ರಮ ತೆಗೆದುಕೊಳ್ಳಲಾಗುವುದು. – ಸುಮಿತ್ರಾ ಎಸ್‌. ನಾಯಕ್‌, ಅಧ್ಯಕ್ಷರು, ಉಡುಪಿ ನಗರಸಭೆ

Advertisement

Udayavani is now on Telegram. Click here to join our channel and stay updated with the latest news.

Next