ನರೇಗಲ್ಲ: ಮಳೆ ಬಾರದೆ ಕಂಗಾಲಾದ ರೈತರು, ಸಾರ್ವಜನಿಕರು ಕತ್ತೆಗೆ ವಿಶೇಷ ಪೂಜೆ ಸಲ್ಲಿಸಿ ಮೆರವಣಿಗೆ ಮಾಡಿ ಕರುಣೆ ತೋರೋ ವರುಣದೇವ ಎಂದು ಕೋಚಲಾಪುರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಪ್ರಾರ್ಥಿಸುತ್ತಿದ್ದಾರೆ.
ಹೋಬಳಿ ವ್ಯಾಪ್ತಿಯ ರೈತರು ಕಳೆದ ಐದಾರು ವರ್ಷಗಳಿಂದ ಮಳೆ ಇಲ್ಲದೆ ಸಂಕಷ್ಟ ಪರಿಸ್ಥಿತಿ ಎದುರಿಸುವಂತಾಗಿದೆ. ಪ್ರಸಕ್ತ ಬಾರಿ ಮುಂಗಾರು ಆರಂಭವಾದರೂ ಮಳೆಯಾಗಿಲ್ಲ. ವರುಣನ ಕೃಪೆಗಾಗಿ ಕಪ್ಪೆ, ಕತ್ತೆಗಳ ಮೆರವಣಿಗೆ ಮಾಡುತ್ತಾ ಗುರ್ಜಿ ಹಾಡುತ್ತಿದ್ದಾರೆ.
ಸಮೀಪದ ಕೋಚಲಾಪುರ ಗ್ರಾಮಸ್ಥರು ಮಂಗಳವಾರ ಸಂಜೆ ಕತ್ತೆಗಳ ಮರವಣಿಗೆ ಮಾಡಿ ಮಳೆಗಾಗಿ ಪ್ರಾರ್ಥಿಸಿದರು. ಕತ್ತೆಗಳನ್ನು ಸಿಂಗರಿಸಿ, ವಿಶೇಷ ಪೂಜೆ ಸಲ್ಲಿಸಿದ ನಂತರ ಪ್ರಮುಖ ಬೀದಿಗಳಲ್ಲಿ ವಿಶೇಷ ವಾದ್ಯಗಳೊಂದಿಗೆ ಮೆರವಣಿಗೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರೈತ ರಾಜೇಸಾಹೇಬ ನದಾಫ, ಕತ್ತೆ ಮೆರವಣಿಗೆ ಮಾಡಿದರೆ ಮಳೆಯಾಗಿ ಉತ್ತಮ ಬೆಳೆ ಬರುತ್ತದೆ ಎಂಬ ನಂಬಿಕೆ ಪ್ರಚಲಿತದಲ್ಲಿದೆ. ಕೆಲ ಗ್ರಾಮಗಳಲ್ಲಿ ಮಳೆಗಾಗಿ ದೇವಸ್ಥಾನಗಳಲ್ಲಿ ಭಜನೆ, ಅಭಿಷೇಕ, ಅನ್ನಸಂತರ್ಪಣೆ ನಡೆಸಿ, ಶ್ರದ್ಧಾ ಭಕ್ತಿಯಿಂದ ದೇವರಲ್ಲಿ ಮೊರೆಯಿಡುತ್ತಿದ್ದಾರೆ ಎಂದರು.
ಕೆರೆ, ಹಳ್ಳ, ಕೊಳ್ಳಗಳ ನೀರು ಬತ್ತಿ ಹೋಗಿವೆ. ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿದೆ. ಜನ ಜಾನುವಾರಗಳು ಬದುಕಿಗೆ ಕಷ್ಟವಾಗಿದೆ. ಈಗಾಗಲೇ ಅನೇಕರು ಮಳೆಗಾಗಿ ವಾರ, ಉಪವಾಸ ಮಾಡುತ್ತಿದ್ದಾರೆ. ಮುಂಗಾರು ಮಳೆ ಇಲ್ಲದೆ ಅನ್ನದಾತ ಚಿಂತಾಕ್ರಾಂತನಾಗಿದ್ದಾರೆ ಎಂದರು.
ಪಪಂ ಸದಸ್ಯ ರಾಚಯ್ಯ ಮಾಲಗಿತ್ತಿಮಠ, ಶ್ರೀಕಾಂತ ರಡ್ಡೇರ, ಮಲ್ಲರಡ್ಡೇಪ್ಪ ರಡ್ಡೇರ, ರಜಾಕಸಾಬ್ ಅಬ್ಬಿಗೇರಿ, ಕುಮಾರ ಅಮಾತಿಗೌಡ್ರ, ಶಿವಲಿಂಗಯ್ಯ ಅಮಾತಿಗೌಡ್ರ, ಶರಣಪ್ಪಗೌಡ ಅಯ್ಯನಗೌಡ್ರ, ಬಾಬುಸಾಬ ಮಾಕಿ, ಸಂಗಯ್ಯ ಮಾಲಗಿತ್ತಿಮಠ, ಸುರೇಶ ರಡ್ಡೇರ, ಚಂದ್ರಕಾಂತ ರಡ್ಡೇರ, ಎ.ಎಸ್. ರವಡೂರ ಸೇರಿದಂತೆ ಗ್ರಾಮಸ್ಥರು ಇದ್ದರು.