Advertisement

ಶೀಘ್ರವೇ ಮತ ಸುಧಾರಣೆ : ಕೇಂದ್ರ ಸಚಿವ ರಿಜಿಜು ಸುಳಿವು

02:12 AM Oct 07, 2022 | Team Udayavani |

ಹೊಸದಿಲ್ಲಿ: ಎನ್‌ಆರ್‌ಐಗಳಿಗೆ ಮತದಾನದ ಹಕ್ಕು, ಆನ್‌ಲೈನ್‌ ಮತದಾನ ಸೇರಿದಂತೆ ಪ್ರಮುಖ ಚುನಾವಣೆ ಸುಧಾರಣೆಗಳ ಬಗ್ಗೆ ಕೇಂದ್ರ ಸರಕಾರ ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಕೇಂದ್ರ ಕಾನೂನು ಸಚಿವ ಕಿರಣ್‌ ರಿಜಿಜು ತಿಳಿಸಿದ್ದಾರೆ.

Advertisement

ಚುನಾವಣೆ ಪ್ರಕ್ರಿಯೆ ಮತ್ತು ನಿಯಮಗಳ ಕುರಿತು ಕೇಂದ್ರ ಸರಕಾರಕ್ಕೆ ಭಾರತದ ಚುನಾವಣೆ ಆಯೋಗ ಹಲವು ಶಿಫಾರಸಗಳನ್ನು ಮಾಡಿದೆ.
ಪ್ರಸ್ತುತ ಅಸ್ತಿತ್ವದಲ್ಲಿರುವ ಮಾದರಿ ನೀತಿ ಸಂಹಿ­ತೆಯ ಮಾರ್ಗಸೂಚಿಗಳಿಗೆ ಪೂರಕವಾಗಿ ಮತ್ತಷ್ಟು ಶಿಫಾರಸುಗಳನ್ನು ಚುನಾವಣೆ ಆಯೋಗ ಮಾಡಿದೆ.

ಮಾಹಿತಿ ಅಗತ್ಯ: ರಾಜಕೀಯ ಪಕ್ಷಗಳು ನೀಡುವ “ಸುಳ್ಳು ಆಶ್ವಾಸನೆ’ಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಚುನಾವಣೆಗೆ ಮುನ್ನ ಮತದಾರರಿಗೆ ನೀಡುವಂಥ ಆಶ್ವಾಸನೆಗಳನ್ನು ಈಡೇರಿಸಲು ತಗಲುವ ವೆಚ್ಚದ ವಿವರ ಹಾಗೂ ಅದಕ್ಕಾಗಿ ವಿತ್ತೀಯ ಸಂಪನ್ಮೂಲಗಳ ಕ್ರೋಡೀಕರಣ ಹೇಗೆ ಎಂಬ ಮಾಹಿತಿಯನ್ನು ಎಲ್ಲ ರಾಜಕೀಯ ಪಕ್ಷಗಳೂ ನೀಡುವ ನಿಯಮಗಳನ್ನು ಜಾರಿಗೆ ತರುವ ನಿಟ್ಟಿನಲ್ಲಿ ಚುನಾವಣೆ ಆಯೋಗವು ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಿದೆ.

“ಬದಲಾಗುತ್ತಿರುವ ಸಮಯ ಮತ್ತು ಪರಿಸ್ಥಿತಿಗೆ ತಕ್ಕಂತೆ ಪ್ರಮುಖ ಚುನಾವಣೆ ಸುಧಾರಣೆಗಳನ್ನು ಜಾರಿಗೆ ತರುವ ನಿಟ್ಟಿನಲ್ಲಿ ಈ ಬಗ್ಗೆ ಚರ್ಚೆಗಳ ಅನಂತರ ಅಗತ್ಯ ಕ್ರಮ­ಗಳನ್ನು ತೆಗೆದುಕೊಳ್ಳಲಾಗುವುದು,’ ಎಂದು ಗುರುವಾರ ಕಿರಣ್‌ ರಿಜಿಜು ಅವರು ಟ್ವೀಟ್‌ ಮಾಡಿದ್ದಾರೆ.

ಜನಪ್ರತಿನಿಧಿ ಕಾಯಿದೆಗೆ ಬದಲಾವಣೆ: ಜನ ಪ್ರತಿನಿಧಿ ಕಾಯಿದೆಗೆ ಬದಲಾವಣೆ ಸೇರಿದಂತೆ ಭಾರತೀಯ ಚುನಾವಣೆ ಪ್ರಕ್ರಿಯೆಗೆ ದೊಡ್ಡ ಮಟ್ಟದ ಸುಧಾರಣೆ ತರುವ ನಿಟ್ಟಿನಲ್ಲಿ ಚುನಾವಣೆ ಆಯೋಗ ಕೇಂದ್ರ ಸರಕಾರಕ್ಕೆ ಹಲವು ಶಿಫಾರಸು­ಗಳನ್ನು ಮಾಡಿದೆ. ಈ ಸಂಬಂಧ ಕಳೆದ ವಾರ ಅನೇಕ ಸುತ್ತಿನ ಸಭೆಗಳು ನಡೆದಿವೆ. ಕೇಂದ್ರ ಕಾನೂನು ಸಚಿವಾಲ ಯದ ಅಭಿಪ್ರಾಯದ ಮೇರೆಗೆ ಚುನಾ ವಣೆ ಆಯೋಗ ಕೆಲವು ಬದಲಾ ವಣೆಗಳನ್ನು ಮಾಡಿದೆ ಎಂದು ಮೂಲಗಳು ತಿಳಿಸಿವೆ.

Advertisement

ಪ್ರಸ್ತಾವವಿಲ್ಲ: “ಒಂದು ದೇಶ ಒಂದು ಚುನಾವಣೆ ಬಗ್ಗೆ ಸದ್ಯ ಮಾಡಿರುವ ಶಿಫಾರಸುಗಳಲ್ಲಿ ಯಾವುದೇ ಪ್ರಸ್ತಾವವಿಲ್ಲ. ಈ ಬಗ್ಗೆ ಹೆಚ್ಚಿನ ಚರ್ಚೆ ಅಗತ್ಯವಿದೆ. ಚುನಾವಣೆ ಗುರುತಿನ ಚೀಟಿಯೊಂದಿಗೆ ಆಧಾರ್‌ ಲಿಂಕ್‌ ಮಾಡುವುದು ಸ್ವಯಂ ಪ್ರೇರಿತವಾಗಿದೆ. ಆದರೆ ಇದಕ್ಕೆ ಚುನಾವಣೆ ಆಯೋಗ ಹೆಚ್ಚಿನ ಪ್ರೋತ್ಸಾಹ ನೀಡಲಿದೆ,’ ಎಂದು ಅವರು ತಿಳಿಸಿದರು.
ಸಮಿತಿ ರಚನೆಗೆ ಸಲಹೆ: ರಾಜಕೀಯ ಪಕ್ಷಗಳು ಘೋಷಿಸುವ “ಉಚಿತ ಕೊಡುಗೆ’ಗಳ ಬಗ್ಗೆ ವ್ಯಾಖ್ಯಾನಿಸಲು ನೀತಿ ಆಯೋಗ, ಕಾನೂನು ಆಯೋಗ, ಚುನಾವಣೆ ಆಯೋಗದ ಸದಸ್ಯರನ್ನು ಒಳಗೊಂಡ ಸಮಿತಿ ರಚಿಸಬೇಕಿದೆ,’ ಎಂದು ಅಧಿಕಾರಿಗಳು ಹೇಳಿದರು.

ಇ-ಓಟಿಂಗ್‌ಗೆ ಶಿಫಾರಸು
ಎನ್‌ಆರ್‌ಐಗಳಿಗೆ ಮತದಾನದ ಹಕ್ಕು, ಆನ್‌ಲೈನ್‌ ಮತದಾನದ ಆಯ್ಕೆ, ಚುನಾವಣೆ ಪೂರ್ವ ಸಮೀಕ್ಷೆ ಮತ್ತು ಮತಗಟ್ಟೆ ಸಮೀಕ್ಷೆ ನಡೆಸುವ ಬಗೆಗಿನ ನಿಯಮಗಳಿಗೆ ತಿದ್ದುಪಡಿ ಸೇರಿದಂತೆ ಹಲವು ಶಿಫಾರಸುಗಳನ್ನು ಆಯೋಗ ಮಾಡಿದೆ. “ಚುನಾವಣೆ ಪ್ರಕ್ರಿಯೆಯಲ್ಲಿ ಸುಧಾರಣೆಗಳ ಬಗ್ಗೆ ಸರಕಾರ ನಿಗದಿತ ಅವಧಿಯೊಳಗೆ ತೀರ್ಮಾನ ತೆಗೆದುಕೊಳ್ಳಬೇಕು. 10 ವರ್ಷದ ಅನಂತರ ಈ ಬಗ್ಗೆ ತೀರ್ಮಾನ ತೆಗೆದು ಕೊಂಡರೆ ಫ‌ಲದಾಯಕವಾಗು­ವುದಿಲ್ಲ. ಈ ಬಗ್ಗೆ ಕಾನೂನು ಸಚಿವಾಲಯ 2-3 ತಿಂಗಳಲ್ಲಿ ಅಭಿಪ್ರಾಯ ತಿಳಿಸುವಂತೆ ಸರಕಾರಕ್ಕೆ ಕೋರಲಾಗಿದೆ,’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next