Advertisement

ದೂರ ಮಾಡಿದ್ದಕ್ಕೆ ಕೊಂದೆ: ನನಗೆ ಪಶ್ಚಾತ್ತಾಪವಿಲ್ಲ-ಸಾಹಿಲ್‌

11:54 PM May 30, 2023 | Team Udayavani |

ಹೊಸದಿಲ್ಲಿ: “ನಾನು ಆಕೆಯನ್ನು ಕೊಂದು ಹಾಕಿದ್ದಕ್ಕೆ ಯಾವುದೇ ಪಶ್ಚಾತ್ತಾಪವಿಲ್ಲ. ಏಕೆಂದರೆ ಅವಳು ನನ್ನನ್ನು ದೂರ ಮಾಡಿದ್ದಳು” ಹೀಗೆಂದು ಹೊಸದಿಲ್ಲಿಯಲ್ಲಿ ರವಿವಾರ ಬೆಳಕಿಗೆ ಬಂದ ಬಾಲಕಿಯ ಕೊಲೆ ಮಾಡಿದ ಸಾಹಿಲ್‌ ತಿಳಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಮೃತ ಬಾಲಕಿ ನನ್ನೊಂದಿಗೆ ಮಾತನಾಡಲು ನಿರಾಕರಿಸಿದ್ದಳು. ಆಕೆಯ ಜತೆ ಮಾತನಾಡಲು ಪ್ರಯತ್ನ ಮಾಡಿದಲ್ಲಿ ಕುಟುಂಬ ಸದಸ್ಯರಿಗೆ ಮತ್ತು ಪೊಲೀಸರಿಗೆ ತಿಳಿಸುವುದಾಗಿ ಬೆದರಿಸಿದ್ದಳು. ಆಕೆಯ ಹಳೆಯ ಬಾಯ್‌ ಫ್ರೆಂಡ್‌ ಜತೆಗೆ ಮತ್ತೆ ಸಂಪರ್ಕದಲ್ಲಿದ್ದಳೆಂಬ ಗುಮಾನಿಯೂ ಇತ್ತು. ಇದಕ್ಕಾಗಿ ಆಕೆಯನ್ನು ಕೊಂದೆ ಎಂದು ವಿಚಾರಣೆ ವೇಳೆ ಸಾಹಿಲ್‌ ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಆಕೆಯನ್ನು ಕೊಲ್ಲಲು 15 ದಿನಗಳ ಹಿಂದೆ ಯೋಚಿಸಿದ್ದೆ. ಅದಕ್ಕಾಗಿ ಹರಿದ್ವಾರದಿಂದ ಚಾಕು ಖರೀದಿಸಿದ್ದೆ ಎಂದು ಆತ ತನಿಖೆಯ ವೇಳೆ ಹೇಳಿದ್ದಾನೆ. ಈ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Advertisement

ಮಹಡಿ ಮೇಲೆ ಶವ ಪತ್ತೆ!
ಹೊಸದಿಲ್ಲಿಯ ಮಂಜು ಕಾ ತಿಲ್ಲಾ ನಗರದಲ್ಲಿ ಅಪಾರ್ಟ್‌ ಮೆಂಟ್‌ನ ಫ್ಲ್ಯಾಟ್‌ ಒಂದರ ಮಹಡಿಯಲ್ಲಿ 35 ವರ್ಷದ ಮಹಿಳೆಯೊಬ್ಬರ ಶವ ಮಂಗಳವಾರ ಪತ್ತೆಯಾಗಿದೆ. ಮೃತ ಮಹಿಳೆಯನ್ನ ರಾಣಿ ಎಂದು ಗುರುತಿಸಲಾಗಿದ್ದು, ಆಕೆಯ ಜತೆಗೆ ಫ್ಲ್ಯಾಟ್‌ ಹಂಚಿಕೊಂಡಿದ್ದ ಸ್ವಪ್ನಾ ಎಂಬಾಕೆಯೇ ಗೆಳತಿಯನ್ನು ಹತ್ಯೆಗೈದಿದ್ದಾಳೆ. ಕುಡಿದ ಮತ್ತಿನಲ್ಲಿ ರಾಣಿಯ ತಂದೆ ಕುರಿತು ಸ್ವಪ್ನಾ ಟೀಕೆ ಮಾಡಿದ್ದಾರೆ. ಈ ವೇಳೆ ಇಬ್ಬರ ನಡುವೆ ಗಲಾಟೆ ಏರ್ಪಟ್ಟಿದ್ದು ಬಳಿಕ ಚಾಕುವಿನಿಂದ ರಾಣಿಯನ್ನು ಇರಿದು ಹತ್ಯೆ ಮಾಡಿದ್ದು, ಆಕೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next