ಪಂಚಕುಲ: ನಾಲ್ಕನೇ ಖೇಲೋ ಇಂಡಿಯಾ ಯೂತ್ ಗೇಮ್ಸ್ ಸೋಮವಾರ ಸುಸಂಪನ್ನಗೊಂಡಿದೆ. ಕ್ರೀಡೆಯಲ್ಲಿ ದೇಶಕ್ಕೇ ಮಾದರಿಯಾಗಿ ರುವ ಹರಿಯಾಣ ಈ ಕೂಟದ ಅಗ್ರಸ್ಥಾನಿಯಾಗಿ ಹೊರಹೊಮ್ಮಿದೆ. ಹರಿಯಾಣಕ್ಕೆ ತೀವ್ರ ಪೈಪೋಟಿ ಯೊಡ್ಡಿದ ಮಹಾರಾಷ್ಟ್ರ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟಿದೆ. ಈ ಕೂಟದ ಇತಿಹಾಸದಲ್ಲೇ ಮೊದಲ ಬಾರಿಗೆ ಕರ್ನಾಟಕ ತೃತೀಯ ಸ್ಥಾನದ ಗೌರವ ಸಂಪಾದಿಸಿದೆ. ನಮ್ಮ ರಾಜ್ಯ ಹರಿಯಾಣ ವನ್ನು ಮೀರಿಸುವುದಕ್ಕೆ ಸಜ್ಜಾಗ ಬೇಕಾದುದು ಮುಂದಿನ ಹಾದಿ.
ಹಾಗೆ ನೋಡಹೋದರೆ, ಹಿಂದಿನ ಮೂರೂ ಆವೃತ್ತಿಗಳಲ್ಲಿ ಕರ್ನಾಟಕದ್ದು ಸ್ಥಿರ ಪ್ರದರ್ಶನ. 4ನೇ ಸ್ಥಾನ ಖಾಯಂ. 2018ರಲ್ಲಿ 16 ಚಿನ್ನ, 2019ರಲ್ಲಿ 29 ಚಿನ್ನ ಗೆದ್ದ ಕರ್ನಾಟಕ 2020ರಲ್ಲಿ ಬಂಗಾರದ ಬೇಟೆಯನ್ನು 32ಕ್ಕೆ ಏರಿಸಿಕೊಂಡಿತು. ಆದರೂ 4ನೇ ಸ್ಥಾನ ಬಿಟ್ಟು ಮೇಲೇಳಲಿಲ್ಲ.
ಈ ಬಾರಿ ಜಯಿಸಿದ್ದು 22 ಸ್ವರ್ಣ ಪದಕ. ಪದಕಗಳ ಸಂಖ್ಯೆ ಕಡಿಮೆ ನಿಜ; ಆದರೆ ಮೊದಲ ಸಲ 3ನೇ ಸ್ಥಾನದ ಗೌರವ ಒಲಿದಿದೆ. ಇದನ್ನೇ ಸ್ಫೂರ್ತಿ ಜಿಗಿಹಲಗೆಯಾಗಿ ಬಳಸಿಕೊಂಡು ಪದಕ ಸಂಖ್ಯೆ ಹೆಚ್ಚಿಸಿಕೊಳ್ಳುವತ್ತ ಶ್ರಮಿಸಬೇಕಿದೆ. ಕಳೆದ ಬಾರಿ 122 ಪದಕಗಳೊಂದಿಗೆ ದಿಲ್ಲಿ ತೃತೀಯ ಸ್ಥಾನದಲ್ಲಿತ್ತು. 2021ರಲ್ಲಿ ಕೂಟ ಆಯೋಜನೆಗೊಂಡಿರಲಿಲ್ಲ.
ಕರ್ನಾಟಕದ ಸಾಧನೆಯನ್ನು ಟಾಪ್-2 ತಂಡ ಗಳಿಗೆ ಹೋಲಿಸಿ ನೋಡೋಣ. ಹರಿಯಾಣ 52 ಚಿನ್ನ, ಮಹಾರಾಷ್ಟ್ರ 45 ಚಿನ್ನ ಗೆದ್ದಿದೆ. ಈ ಗಳಿಕೆ ಯಲ್ಲಿ ಕರ್ನಾಟಕದ್ದು ದ್ವಿತೀಯ ಸ್ಥಾನಿ ಮಹಾ ರಾಷ್ಟ್ರಕ್ಕಿಂತ ಅರ್ಧದಷ್ಟು ಸಾಧನೆ. ಜತೆಗೆ ದಿಲ್ಲಿ ಯದ್ದೂ ಈಬಾರಿ ಕಳಪೆ ಸಾಧನೆ. ಚಿನ್ನದ ಬೇಟೆ 40ರ ಗಡಿ ತಲುಪಿದರಷ್ಟೇ ಅಗ್ರಸ್ಥಾನ ಅಥವಾ ದ್ವಿತೀಯ ಸ್ಥಾನದ ಗೌರವ ಸಾಧ್ಯ ಎನ್ನುವುದನ್ನು ಗುರಿಯಾಗಿಸಿಕೊಳ್ಳಬೇಕಿದೆ.
ಕ್ರೀಡಾ ಶಕ್ತಿ ದೇಶದ ಶಕ್ತಿ
ಕ್ರೀಡಾ ಶಕ್ತಿ ದೇಶದ ಶಕ್ತಿ ಆಗಬೇಕು ಎಂಬ ಪ್ರಧಾನಿ ಮೋದಿ ಅವರ ಆಶಯ ಈಡೇರಬೇಕಾದರೆ ಪ್ರತಿಯೊಂದು ರಾಜ್ಯಕ್ಕೂ ಹರಿಯಾಣ ಮಾದರಿ ಆಗಬೇಕು. ಅಲ್ಲಿನ ಸರಕಾರ, ಶಾಲಾ ಕಾಲೇಜುಗಳು ಕ್ರೀಡೆಗೆ ನೀಡುವ ಪ್ರೋತ್ಸಾಹ, ತರಬೇತಿ ವ್ಯವಸ್ಥೆ, ಮೂಲ ಸೌಕರ್ಯ, ಅಲ್ಲಿನ ಗಲ್ಲಿ ಗಲ್ಲಿಯಲ್ಲೂ ಬೀಸುತ್ತಿರುವ ಕ್ರೀಡಾ ಹವಾ… ಎಲ್ಲವೂ ಸಾಟಿಯಿಲ್ಲದ್ದು.
Related Articles
ಹರಿಯಾಣಕ್ಕೆ ಹೋಲಿಸಿದರೆ ಉಳಿದೆಲ್ಲ ರಾಜ್ಯಗಳು ಕ್ರೀಡಾ ಪೋಷಣೆಯ ವಿಷಯದಲ್ಲಿ ಹಿಂದುಳಿದಿವೆ. ಇದಕ್ಕೆ ಕರ್ನಾಟಕವೂ ಹೊರತಲ್ಲ. ಆದರೆ ಇಲ್ಲಿನ ಆ್ಯತ್ಲೀಟ್ಸ್ ಯಾವ ಕ್ರೀಡೆಯಲ್ಲಿ ಮುಂದಿದ್ದಾರೆ ಎಂಬುದನ್ನು ಗಮನಿಸಿ ಉನ್ನತ ದರ್ಜೆಯ ತರಬೇತಿ ನೀಡುವ ಕೆಲಸ ಆಗಬೇಕಿದೆ. ಈ ಬಾರಿ ಕರ್ನಾಟಕ ಈಜಿನಲ್ಲಿ ಪ್ರಾಬಲ್ಯ ಮೆರೆಯಿತು. 19 ಪದಕಗಳು ಸ್ವಿಮ್ಮಿಂಗ್ನಲ್ಲೇ ಬಂದಿವೆ. ಇನ್ನೊಂದೆರಡು ಕ್ರೀಡೆಗಳಲ್ಲಿ ನಮ್ಮವರು ಹೆಚ್ಚಿನ ಸಾಧನೆ ಪ್ರದರ್ಶಿಸಬೇಕಿದೆ.
ಈ ನಿದರ್ಶನವನ್ನು ಗಮನಿಸಿ… ಈ ಸಲ ಹರಿಯಾಣ-ಮಹಾರಾಷ್ಟ್ರ ಒಂದು ಹಂತದಲ್ಲಿ 41 ಚಿನ್ನ ಗೆದ್ದು ಅಗ್ರಸ್ಥಾನಕ್ಕಾಗಿ ತೀವ್ರ ಪೈಪೋಟಿ ನಡೆಸಿದ್ದವು. ಇಲ್ಲಿ ಹರಿಯಾಣದ ಕೈಹಿಡಿದವರು ಬಾಕ್ಸರ್ಗಳು. ಕೊನೆಯ ದಿನ 20ರಲ್ಲಿ 10 ಬಾಕ್ಸಿಂಗ್ ಚಿನ್ನಗಳನ್ನು ಹರಿಯಾಣವೇ ಬಾಚಿತು. 16 ಬಂಗಾರ ಕುಸ್ತಿಯಲ್ಲೇ ಒಲಿಯಿತು. ಅಗ್ರಸ್ಥಾನಕ್ಕೆ ನೆಗೆಯಲು ಇಷ್ಟೇ ಸಾಕು! ಇಂಥ ಸಾಧನೆ ಕರ್ನಾಟಕಕ್ಕೆ ಮಾದರಿ ಆಗಬೇಕಿದೆ.