Advertisement

ಕೆಜಿಎಫ್ ನೋಡಿ ಸೀರಿಯಲ್‌ ಕಿಲ್ಲರ್‌ ಆದ! ಪೊಲೀಸರೇ ಮುಂದಿನ ಟಾರ್ಗೆಟ್‌ ಎಂದ ದುಷ್ಕರ್ಮಿ

11:18 AM Sep 03, 2022 | Team Udayavani |

ಭೋಪಾಲ್‌: ಸಿನಿಮಾ ನೋಡಿ ಏನೇನೋ ಸ್ಟಂಟ್‌ ಮಾಡುವವರಿದ್ದಾರೆ. ಅದರೆ “ಕೆಜಿಎಫ್-2′ ಸಿನಿಮಾ ನೋಡಿದ ಯುವಕನೊಬ್ಬ ರಾಕಿ ಭಾಯ್‌ ರೀತಿ ಫೇಮಸ್‌ ಆಗಬೇಕೆಂದು ಸೀರಿಯಲ್‌ ಕಿಲ್ಲರ್‌ ಆದ ವಿಚಿತ್ರ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ನಾಲ್ಕು ಕೊಲೆ ಮಾಡಿರುವ ಆತನನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

Advertisement

ಮಧ್ಯಪ್ರದೇಶದ ಸಾಗರದ ಕೆಸ್ಲಿ ನಗರದ ಶಿವಪ್ರಸಾದ್‌ ಧುರ್ವೆ(19) ಬಂಧಿತ. ಮಲಗಿರುವ ಭದ್ರತಾ ಸಿಬ್ಬಂದಿ(ಸೆಕ್ಯುರಿಟಿ ಗಾರ್ಡ್‌)ಯನ್ನೇ ಗುರಿಯಾಗಿಸಿಕೊಂಡು ಆತ ಕೊಲೆ ಮಾಡುತ್ತಿದ್ದ. ಆ.28ರಂದು ಸಾಗರ್‌ ನಗರದ ಫ್ಯಾಕ್ಟರಿಯ ಭದ್ರತಾ ಸಿಬ್ಬಂದಿಯ ತಲೆಗೆ ಸುತ್ತಿಗೆಯಿಂದ ಹೊಡೆದು ಕೊಂದಿದ್ದ. ಮಾರನೇ ದಿನವೇ ಅದೇ ನಗರದಲ್ಲಿ ಕಾಲೇಜೊಂದರ ಭದ್ರತಾ ಸಿಬ್ಬಂದಿಯ ತಲೆಯನ್ನು ಕಲ್ಲಿನಿಂದ ಜಜ್ಜಿ ಕೊಂದಿದ್ದ. ಆ.30ರಂದು ಮನೆಯೊಂದರ ಭದ್ರತಾ ಸಿಬ್ಬಂದಿಯನ್ನು ಹತ್ಯೆ ಮಾಡಿದ್ದ.

ನಂತರ ಅಲ್ಲಿಂದ ಭೋಪಾಲ್‌ಗೆ ಬಂದಿದ್ದ ಶಿವಪ್ರಸಾದ್‌, ಗುರುವಾರ ರಾತ್ರಿ ಮಾರ್ಬಲ್‌ ಅಂಗಡಿಯೊಂದರ ಭದ್ರತಾ ಸಿಬ್ಬಂದಿಯ ತಲೆಯನ್ನು ಮಾರ್ಬೆಲ್‌ನಿಂದಲೇ ಜಜ್ಜಿ ಕೊಂದಿದ್ದಾನೆ.

“ಬಂಧತ ಶಿವಪ್ರಸಾದ್‌ 4 ಕೊಲೆಗಳನ್ನು ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ರಾಕಿ ಭಾಯ್‌ನಂತೆ ಪ್ರಸಿದ್ಧಿ ಪಡೆಯಲು ಈ ರೀತಿ ಮಾಡಿರುವುದಾಗಿ ಹೇಳಿದ್ದಾನೆ. ಜತೆಗೆ, ಪೊಲೀಸರು ನನ್ನ ಮುಂದಿನ ಟಾರ್ಗೆಟ್‌ ಆಗಿದ್ದರು ಎಂದಿದ್ದ’ ಎಂದು ಪೊಲೀಸ್‌ ಅಧಿಕಾರಿ ತರುಣ್‌ ನಾಯಕ್‌ ತಿಳಿಸಿದ್ದಾರೆ. ಮೇ ತಿಂಗಳಲ್ಲಿ ನಿರ್ಮಾಣ ಹಂತದ ಸೇತುವೆ ಕಾಯುತ್ತಿದ್ದ ಭದ್ರತಾ ಸಿಬ್ಬಂದಿಯ ಕೊಲೆಯಾಗಿದ್ದು, ಅದಕ್ಕೂ ಶಿವಪ್ರಸಾದ್‌ಗೂ ಸಂಬಂಧವಿದೆಯೇ ಎನ್ನುವುದರ ಬಗ್ಗೆಯೂ ತನಿಖೆ ನಡೆಯುತ್ತಿದೆ.

ಸಿಕ್ಕಿಬಿದ್ದಿದ್ದು ಹೇಗೆ?
ಈ ಸೀರಿಯಲ್‌ ಕಿಲ್ಲರ್‌ ಮಧ್ಯಪ್ರದೇಶದ ಪೊಲೀಸರಿಗೆ ದೊಡ್ಡ ತಲೆನೋವಾಗಿದ್ದ. ಆತನ ಸುಳಿವು ಕೊಡುವವರಿಗೆ 30,000 ರೂ. ಬಹುಮಾನ ಘೋಷಿಸಲಾಗಿತ್ತು. ಆರೋಪಿಯು ತಾನು ಕೊಲೆ ಮಾಡಿದ್ದ ಓರ್ವ ಭದ್ರತಾ ಸಿಬ್ಬಂದಿಯ ಫೋನನ್ನು ತೆಗೆದುಕೊಂಡು ಸುತ್ತಾಡುತ್ತಿದ್ದ. ಅದನ್ನು ಟ್ರ್ಯಾಕ್‌ ಮಾಡಿ ಪೊಲೀಸರು ಆರೋಪಿಯಿರುವ ಸ್ಥಳ ಪತ್ತೆಹಚ್ಚಿ, ಭೋಪಾಲ್‌ನಲ್ಲಿ ಬಂಧಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next