ಹುಬ್ಬಳ್ಳಿ: ರಾಜ್ಯದಲ್ಲಿ ಕೋವಿಡ್ 19 ನಿಯಂತ್ರಣ ನಿಟ್ಟಿನಲ್ಲಿ ಸೋಂಕಿತರಿಗೆ ಕೇರಳ ಮಾದರಿಯಲ್ಲಿ ಅಲೋಪಥಿ ಜತೆಗೆ ಆಯುರ್ವೇದ, ಹೋಮಿಯೋಪಥಿ ವೈದ್ಯ ಪದ್ಧತಿಗಳ ಬಳಕೆ ನಿಟ್ಟಿನಲ್ಲೂ ಸರಕಾರ ಮುಂದಾಗಬೇಕೆಂದು ವಿಧಾನ ಪರಿಷತ್ತು ಸದಸ್ಯ ಬಸವರಾಜ ಹೊರಟ್ಟಿ ಸಲಹೆ ನೀಡಿದ್ದಾರೆ.
ಈ ಕುರಿತು ಸಿಎಂಗೆ ಪತ್ರ ಬರೆದಿರುವ ಅವರು, ಕೋವಿಡ್ 19 ಸೋಂಕಿತರಿಗೆ ಕೇರಳದಲ್ಲಿ ಪರ್ಯಾಯವಾಗಿ ಆಯುರ್ವೇದ, ಹೋಮಿಯೋಪಥಿ ಚಿಕಿತ್ಸೆ ಬಳಕೆ ಮಾಡಿದ್ದರಿಂದ ಅಲ್ಲಿ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ ಹೆಚ್ಚಾಗಿದೆ ಎಂದು ತಿಳಿದು ಬಂದಿದೆ.
ರಾಜ್ಯದಲ್ಲಿ ವೈದ್ಯರು-ಸಿಬ್ಬಂದಿ ಉತ್ತಮ ಕಾರ್ಯ ನಿರ್ವಹಿಸುತ್ತಿದ್ದು, ಕೆಲ ವೈದ್ಯರ ಸಲಹೆಯಂತೆ ಪುರಾತನ ಚಿಕಿತ್ಸೆಗಳಾದ ಆಯುರ್ವೇದ-ಹೋಮಿಯೋಪಥಿ ವೈದ್ಯ ಪದ್ಧತಿ ಬಳಕೆಗೆ ಮುಂದಾಗಬೇಕು. ಈ ಬಗ್ಗೆ ಸರಕಾರ ಗಂಭೀರ ಚಿಂತನೆ ನಡೆಸಬೇಕು. ರಾಜ್ಯದಿಂದ ಹೊರಗಿರುವ ಕನ್ನಡಿಗರನ್ನು ರಾಜ್ಯಕ್ಕೆ ಕರೆತರುವ ವ್ಯವಸ್ಥೆ ಮಾಡಬೇಕು. ಅದು ಸಾಧ್ಯವಾಗದೆ ಇದ್ದರೆ ಅವರು ಇದ್ದಲ್ಲಿಯೇ ಸೂಕ್ತ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಬೇಕು. ಹಸಿರು ವಲಯದಿಂದ ಹಸಿರು ವಲಯಕ್ಕೆ ಪ್ರಯಾಣಿಸಿ ಕಾರ್ಯ ನಿರ್ವಹಿಸುವವರಿಗೆ ಅವಕಾಶ ನೀಡಬೇಕು.
ಕೌನ್ಸಿಲ್ಗೆ ಪತ್ರಕ್ಕೆ ಮನವಿ: ಕೋವಿಡ್ 19 ಹಿನ್ನೆಲೆಯಲ್ಲಿ ಅತ್ಯವಶ್ಯಕ ಬಳಕೆಯಾಗುವ ಮಾಸ್ಕ್, ಸ್ಯಾನಿಟೈಸರ್, ಪರೀಕ್ಷಾ ಕಿಟ್, ಹ್ಯಾಂಡ್ಗ್ಲೌಸ್ ಇವುಗಳಿಗೆ ಜಿಎಸ್ಟಿ ವಿಧಿಸಬಾರದು ಎಂದು ಕೇಂದ್ರ ಜಿಎಸ್ಟಿ ಕೌನ್ಸಿಲ್ಗೆ ಪತ್ರ ಬರೆಯಬೇಕು. ಜಿಎಸ್ಟಿ ವಿಧಿಸುವುದರಿಂದ ಆಗುವ ತೊಂದರೆಗಳ ಬಗ್ಗೆ ಕೇಂದ್ರ ಸರಕಾರದ ಗಮನಕ್ಕೆ ತರಬೇಕೆಂದು ಮುಖ್ಯಮಂತ್ರಿಯವರಿಗೆ ಪತ್ರದಲ್ಲಿ ತಿಳಿಸಿದ್ದಾರೆ.
ಲಾಕ್ಡೌನ್ ಅನಿರ್ದಿಷ್ಟಾವಧಿ ಮುಂದುವರಿಸುವ ಬದಲು ಕೆಲ ವಲಯಗಳಿಗೆ ಸಡಿಲ ನಿಯಮಗಳನ್ನು ವಿಸ್ತರಿಸಬೇಕು. ಶಾಲಾ-ಕಾಲೇಜು,ಕೋಚಿಂಗ್ ಕೇಂದ್ರಗಳು, ಚಿತ್ರಮಂದಿರ, ನಾಟಕ, ಸರ್ಕಸ್, ವಸ್ತು ಪ್ರದರ್ಶನ, ಗ್ರಂಥಾಲಯ ಈಜುಕೊಳ, ದೊಡ್ಡ ಕೈಗಾರಿಕೆಗಳು, ಜಾತ್ರೆ, ಧಾರ್ಮಿಕ ಕೇಂದ್ರಗಳಿಗೆ ಲಾಕ್ಡೌನ್ನಿಂದ ವಿನಾಯಿತಿ ಅಗತ್ಯವಿಲ್ಲ. ಆರ್ಥಿಕ ಸ್ಥಿತಿ ಕುಸಿಯುತ್ತಿರುವುದರಿಂದ ಕೆಲವು ಕಾಮಗಾರಿಗಳನ್ನು ವರ್ಷದ ಮಟ್ಟಿಗೆ ಮುಂದೂಡಿ ಅಗತ್ಯವಿರುವ ಕಾಮಗಾರಿಗಳಿಗೆ ಮಾತ್ರ ಹಣ ಬಿಡುಗಡೆ ಮಾಡಬೇಕೆಂದು ಪತ್ರದಲ್ಲಿ ತಿಳಿಸಿದ್ದಾರೆ.