ತಿರುವನಂತಪುರಂ: ಕೇರಳದ ಸಿಪಿಐ(ಎಂ)ನ ಮಹಿಳಾ ಘಟಕ ಎಐಡಿಡಬ್ಲ್ಯುಎ(ಆಲ್ ಇಂಡಿಯಾ ಡೆಮಾಕ್ರಟಿಕ್ ವುಮೆನ್ಸ್ ಅಸೋಸಿಯೇಶನ್) ತಿರುವನಂತಪುರಂನಲ್ಲಿ ಆಯೋಜಿಸಿರುವ ಸಮಾವೇಶದ ಪೋಸ್ಟರ್ ನಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಫೋಟೋವನ್ನು ಬಳಸಿದ್ದು, ಈ ಬಗ್ಗೆ ಭಾರತೀಯ ಜನತಾ ಪಕ್ಷ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಇದನ್ನೂ ಓದಿ:ಮಂಗಗಳ ಜತೆ ಸೆಲ್ಫಿ ತೆಗೆಯಲು ಹೋಗಿ 500 ಅಡಿ ಆಳದ ಕಂದಕಕ್ಕೆ ಬಿದ್ದು ಜೀವ ಕಳೆದುಕೊಂಡ ವ್ಯಕ್ತಿ!
ತಿರುವನಂತಪುರದಲ್ಲಿ ಶುಕ್ರವಾರದಿಂದ ಸೋಮವಾರದವರೆಗೆ ಎಐಡಿಡಬ್ಲ್ಯುಎ ಸಮ್ಮೇಳನವನ್ನು ಆಯೋಜಿಸಿದ್ದು, ಈ ಬಗ್ಗೆ ಹಾಕಲಾದ ಬೃಹತ್ ಪೋಸ್ಟರ್ ನಲ್ಲಿ “ಬೆನಜೀರ್ ಭುಟ್ಟೋ ಪಾಕಿಸ್ತಾನದ ಪ್ರಥಮ ಮಹಿಳಾ ಪ್ರಧಾನಿಯಾಗಿದ್ದು, ಈಕೆ ಕೇಂಬ್ರಿಡ್ಜ್ ಯೂನಿರ್ವಸಿಟಿ ಸೇರಿದಂತೆ 9 ಪ್ರತಿಷ್ಠಿತ ಡಾಕ್ಟರೇಟ್ ಪಡೆದಿರುವುದಾಗಿ ಉಲ್ಲೇಖಿಸಿರುವುದಾಗಿ ವರದಿ ವಿವರಿಸಿದೆ.
ಸಿಪಿಐ(ಎಂ) ಮಹಿಳಾ ಘಟಕದ ಪೋಸ್ಟರ್ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್, ಇದೊಂದು ಸಾಮಾನ್ಯ ತರ್ಕವಾಗಿದ್ದು, ಉಗ್ರರಿಂದ ಮತ ಪಡೆದು, ಭಾರತದ ಬೆನ್ನಿಗೆ ಚೂರಿ ಇರಿಯುವ ಕೃತ್ಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Related Articles
ಕೇರಳ ಬಿಜೆಪಿ ವಕ್ತಾರ ಸಂದೀಪ್ ವಾಚಸ್ಪತಿ ವಾಗ್ದಾಳಿ ನಡೆಸಿದ್ದು, ಇದು ಸಿಪಿಐ(ಎಂ)ನ ದೇಶ ವಿರೋಧಿ ಕೆಲಸವಾಗಿದೆ. ಕೇರಳ ರಾಜಧಾನಿಯ ಪ್ರಮುಖ ಸ್ಥಳದಲ್ಲಿ ಭುಟ್ಟೋ ಫೋಟೋ ಹಾಕಲಾದ ಪೋಸ್ಟರ್ ಪ್ರದರ್ಶಿಸಲಾಗಿದೆ. ಆದರೆ ಭುಟ್ಟೋ ಹಾಗೂ ನಿಮಗೂ (ಸಿಪಿಐ(ಎಂ) ಏನು ಸಂಬಂಧ ಎಂದು ಕೇಳಲಾರೆ. ಇವರು ದೀರ್ಘಕಾಲದಿಂದಲೂ ಇಂತಹ ಚಟುವಟಿಕೆಯಲ್ಲೇ ತೊಡಗಿದ್ದಾರೆ. ನಮ್ಮ ದೇಶವನ್ನು ನಾಶ ಮಾಡಬೇಕೆಂದು ಪಣತೊಟ್ಟ ಮಹಿಳೆಯನ್ನು ವೈಭವೀಕರಿಸುವ ಅಗತ್ಯವೇನಿದೆ ಎಂದು ವಾಚಸ್ಪತಿ ಪ್ರಶ್ನಿಸಿದ್ದಾರೆ.
ಸಿಪಿಐ(ಎಂ)ನಂತಹ ಜನರು ನಮ್ಮ ದೇಶದ ಶತ್ರುಗಳಾಗಿದ್ದಾರೆ ಎಂಬುದನ್ನು ನಾವು ಮನಗಾಣಬೇಕಾಗಿದೆ. ನಮ್ಮ ಶತ್ರುಗಳು ಪಾಕಿಸ್ತಾನ ಅಥವಾ ಚೀನಾ ಅಲ್ಲ. ಆದರೆ ನಮ್ಮ ಕಾಮ್ರೇಡ್ಸ್ ಗಳು ಮತ್ತು ನಮ್ಮ ಒಡನಾಡಿಗಳಾಗಿರುವವರ ಬಗ್ಗೆ ಹೆಚ್ಚು ಜಾಗರೂಗರಾಗಿರಬೇಕು ಎಂದು ವಾಚಸ್ಪತಿ ಕಟುವಾಗಿ ಪ್ರತಿಕ್ರಿಯಿಸಿದ್ದಾರೆ.