Advertisement

ಕೆಇಎ ಎಡವಟ್ಟು: ಎಂಜಿನಿಯರಿಂಗ್‌ ಸೀಟು ಆಕಾಂಕ್ಷಿಗಳ ಪ್ರವೇಶಕ್ಕೆ ಅಡ್ಡಿ

10:04 PM Nov 29, 2022 | Team Udayavani |

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ನಿರ್ಲಕ್ಷ್ಯದಿಂದ ಸಾವಿರಾರು ಎಂಜಿನಿಯರಿಂಗ್‌ ಸೀಟು ಆಕಾಂಕ್ಷಿಗಳ ಪ್ರವೇಶಕ್ಕೆ ಅಡ್ಡಿಯಾಗಿದೆ. ಇದರ ಬೆನ್ನಲ್ಲೇ ಸೀಟು ವಂಚಿತ ವಿದ್ಯಾರ್ಥಿಗಳು ಮಲ್ಲೇಶ್ವರದ ಕೆಇಎ ಕಚೇರಿ ಮುಂದೆ ನ್ಯಾಯ ಕೊಡಿಸುವಂತೆ ಆಕ್ರೋಶ ಹೊರ ಹಾಕಿದರು.

Advertisement

ಸಿಇಟಿ ಕೌನ್ಸೆಲಿಂಗ್‌ನಲ್ಲಿ ಕೆಲ ವಿದ್ಯಾರ್ಥಿಗಳು ಎಂಜಿನಿಯರಿಂಗ್‌ ಸೀಟು ಆಯ್ಕೆ ಮಾಡಿ ಶುಲ್ಕವನ್ನೂ ಪಾವತಿಸಿದ್ದರು. ನೀಟ್‌ ರ್‍ಯಾಂಕಿಂಗ್‌ನಲ್ಲಿ ವೈದ್ಯಕೀಯ ಸೀಟು ಪ್ರವೇಶಕ್ಕೆ ಅರ್ಹತೆ ಪಡೆದಾಗ ಕೆಇಎ ನಿಯಮದ ಅನುಸಾರವೇ ಎಂಜಿನಿಯರಿಂಗ್‌ ಸೀಟನ್ನು ಕಾಯ್ದಿರಿಸಿದ್ದರು. ಇದರ ಜತೆಗೆ ವೈದ್ಯಕೀಯ ಸೀಟು ಪ್ರವೇಶ ಕೌನ್ಸೆಲಿಂಗ್‌ನಲ್ಲೂ ಪಾಲ್ಗೊಂಡಿದ್ದರು. ಆದರೆ, ವೈದ್ಯಕೀಯ ಸೀಟು ಹಂಚಿಕೆಯಾದ ವಿದ್ಯಾರ್ಥಿಗಳು ಮೊದಲು ಕಾಯ್ದಿರಿಸಿದ್ದ ಎಂಜಿನಿಯರಿಂಗ್‌ ಸೀಟನ್ನು ಕೆಇಎ ತಂತಾನೇ ರದ್ದುಪಡಿಸಿದೆ.

ಕೆಇಎ ಎಡವಟ್ಟಿನಿಂದ ವೈದ್ಯಕೀಯ ಸೀಟು ಪ್ರವೇಶ ಪಡೆಯಲು ದುಬಾರಿ ಶುಲ್ಕ ಪಾವತಿಸಲು ಸಾಧ್ಯವಾಗದೇ ಇರುವ ಸಾವಿರಾರು ವಿದ್ಯಾರ್ಥಿಗಳು ಪುನಃ ಎಂಜಿನಿಯರಿಂಗ್‌ ಸೀಟು ಪಡೆಯಲು ಸಾಧ್ಯವಾಗದೇ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಸಚಿವರಿಗೆ ಮನವಿ
ಆತಂಕಗೊಂಡಿರುವ ವಿದ್ಯಾರ್ಥಿಗಳು ಮಲ್ಲೇಶ್ವರದ ಕೆಇಎ ಕಚೇರಿ ಮುಂದೆ ಜಮಾಯಿಸಿ ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ. ಇದರ ಜತೆಗೆ, ಉನ್ನತ ಶಿಕ್ಷಣ ಸಚಿವ ಡಾ| ಸಿ.ಎನ್‌. ಅಶ್ವತ್ಥ ನಾರಾಯಣ ಅವರಿಗೂ ಪತ್ರ ಬರೆದು ತಮಗೆ ನ್ಯಾಯ ದೊರಕಿಸಿಕೊಡುವಂತೆ ಮನವಿ ಮಾಡಿದ್ದಾರೆ.

ವೈದ್ಯಕೀಯ ಕಾಲೇಜುಗಳೊಂದಿಗೆ ಶಾಮೀಲಾಗಿ ಅವರಿಗೆ ಅನುಕೂಲ ಮಾಡಿಕೊಡಲು ಕೆಇಎ ಈ ರೀತಿ ಮಾಡಿರುವ ಸಾಧ್ಯತೆಗಳಿವೆ. ಕೆಇಎ ನಿರ್ಲಕ್ಷ್ಯದಿಂದ ನಮ್ಮದಲ್ಲದ ತಪ್ಪಿಗೆ ಒಂದು ವರ್ಷ ವ್ಯರ್ಥವಾಗಲಿದೆ. ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ನೊಂದ ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next