Advertisement

ಕೆಸಿಎನ್‌-ಕೆಬಿಸಿ ಮತ್ತೆ ಮುಖಾಮುಖಿ

04:22 PM Nov 15, 2019 | Team Udayavani |

ಮಂಡ್ಯ: ಅನರ್ಹ ಶಾಸಕರಿಗೆ ಸುಪ್ರೀಂಕೋರ್ಟ್‌ ಚುನಾವಣಾ ಅರ್ಹತೆ ಘೋಷಿಸುತ್ತಿದ್ದಂತೆ ಕೆ.ಆರ್‌.ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಮೂರೂ ರಾಜಕೀಯ ಪಕ್ಷಗಳು ಅಭ್ಯರ್ಥಿಗಳನ್ನು ಅಧಿಕೃತವಾಗಿ ಘೋಷಿಸುವ ಮೂಲಕ ಚುನಾವಣಾ ರಣಕಹಳೆ ಮೊಳಗಿಸಿವೆ.

Advertisement

ಚುನಾವಣೆಗೆ ಸ್ಪರ್ಧಿಸಲು ಸುಪ್ರೀಂ ಗ್ರೀನ್‌ ಸಿಗ್ನಲ್‌ ಕೊಟ್ಟ ಬೆನ್ನಲ್ಲೇ ಕೇಸರಿ ಪಾಳಯಕ್ಕೆ ಜಾರಿದ ಕೆ.ಸಿ.ನಾರಾಯಣಗೌಡರು ಬಿಜೆಪಿಯ ಅಧಿಕೃತ ಅಭ್ಯರ್ಥಿಯಾಗಿ ಘೋಷಣೆಯಾದರು. ನಂತರದಲ್ಲಿ ದೇವೇಗೌಡರ ಮಾನಸಪುತ್ರರೆಂದೇ ಗುರುತಿಸಲ್ಪಟ್ಟಿರುವ ಜಿಪಂ ಸದಸ್ಯ ಬಿ.ಎಲ್‌.ದೇವರಾಜು ಅವರನ್ನು ಜೆಡಿಎಸ್‌ ತನ್ನ ಅಭ್ಯರ್ಥಿಯಾಗಿ ಅಖಾಡಕ್ಕಿಳಿಸಿದರೆ, ಸಂಜೆಯ ವೇಳೆಗೆ ಕಾಂಗ್ರೆಸ್‌ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್‌ ಅವರಿಗೆ ಮತ್ತೆ ಟಿಕೆಟ್‌ ನೀಡಿ ಕಣಕ್ಕಿಳಿಸಿದೆ.

ಎರಡು ಚುನಾವಣೆಯಲ್ಲಿ ಸೋಲು: 2012 ಹಾಗೂ 2018ರ ವಿಧಾನಸಭಾ ಚುನಾವಣೆಗಳಲ್ಲಿ ಕೆ.ಆರ್‌.ಪೇಟೆ ಕ್ಷೇತ್ರದಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಡುವೆ ನೇರ ಹಣಾಹಣಿ ಏರ್ಪಟ್ಟಿತ್ತು. ಆ ವೇಳೆ ಕಾಂಗ್ರೆಸ್‌ನಿಂದ ಕೆ.ಬಿ.ಚಂದ್ರಶೇಖರ್‌ ಹಾಗೂ ಜೆಡಿಎಸ್‌ನಿಂದ ಕೆ.ಸಿ.ನಾರಾಯಣಗೌಡರು ಮುಖಾಮುಖೀಯಾಗಿ ಸೆಣಸಾಟ ನಡೆಸಿದ್ದರು. ಈಗ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಇಬ್ಬರೂ ನಾಯಕರ ನಡುವೆ ಮತ್ತೆ ನೇರ ಕದನ ಏರ್ಪಟ್ಟಿದೆ. ಹಿಂದಿನ ಚುನಾವಣೆಗಳಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿದ್ದ ಕೆ.ಸಿ.ನಾರಾಯಣ ಗೌಡರು ಬಿಜೆಪಿ ಅಭ್ಯರ್ಥಿಯಾಗಿ ಅಖಾಡ ದಲ್ಲಿರುವುದು ಈ ಬಾರಿಯ ವಿಶೇಷವಾಗಿದೆ.

ಎರಡು ಚುನಾವಣೆಯ ಸೋಲಿನಿಂದ ದೃತಿಗೆಟ್ಟಿರುವ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್‌ ಉಪ ಚುನಾವಣೆಗೆ ಒಲ್ಲದ ಮನಸ್ಸಿನಿಂದಲೇ ಅಖಾಡ ಪ್ರವೇಶಿಸಿದ್ದಾರೆ. ಕಳೆದೆರಡು ವಿಧಾನಸಭಾ ಚುನಾವಣೆಗಳಲ್ಲಿ ನಾರಾಯಣಗೌಡರ ವಿರುದ್ಧ ಹೀನಾಯವಾಗಿ ಪರಾಭವಗೊಂಡಿರುವ ಕೆ.ಬಿ.ಚಂದ್ರಶೇಖರ್‌ ಈ ಬಾರಿ ಹ್ಯಾಟ್ರಿಕ್‌ ಸೋಲಿನಿಂದ ಹೊರಬರಲು ತಂತ್ರಗಾರಿಕೆ ರೂಪಿಸುತ್ತಿದ್ದಾರೆ.

ಚುನಾವಣಾ ರಣತಂತ್ರ: ಶಾಸಕ ಸ್ಥಾನಕ್ಕೆ ನೀಡಿದ ರಾಜೀನಾಮೆಯಿಂದ ಕ್ಷೇತ್ರದಲ್ಲಿ ತಮ್ಮ ವರ್ಚಸ್ಸಿಗೆ ಧಕ್ಕೆಯಾಗದಂತೆ ಎಚ್ಚರ ವಹಿಸಿರುವ ಕೆ.ಸಿ.ನಾರಾಯಣಗೌಡರು ಬಹಳ ಸೂಕ್ಷ್ಮವಾಗಿ ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ದಾರೆ. ಚುನಾವಣಾ ಪೂರ್ವಭಾವಿಯಾಗಿ ಕ್ಷೇತ್ರದಾದ್ಯಂತ ಸಭೆ-ಸಮಾರಂಭಗಳನ್ನು ನಡೆಸಿ ಕ್ಷೇತ್ರದ ಅಭಿವೃದ್ಧಿಗಾಗಿ ರಾಜೀನಾಮೆ ನೀಡುವ ಸನ್ನಿವೇಶ ಸೃಷ್ಟಿಯಾಯಿತು. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರ ನೇತೃತ್ವದಲ್ಲಿ ತಾಲೂಕನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಭರವಸೆಯೊಂದಿಗೆ ಜನರನ್ನು ಮನವೊಲಿಸಿಕೊಳ್ಳುತ್ತಾ ಮತಬೇಟೆಯಲ್ಲಿ ತೊಡಗಿದ್ದಾರೆ.

Advertisement

ತವರಿನ ಉಡುಗೊರೆ: ಜಿಲ್ಲೆಯಲ್ಲಿ ಕಮಲವನ್ನು ಅರಳಿಸಿ ಯಡಿಯೂರಪ್ಪಅವರಿಗೆ ತವರಿನ ಉಡುಗೊರೆ ನೀಡುವ ಜೊತೆಯಲ್ಲೇ ಕೆ.ಆರ್‌.ಪೇಟೆಗೆ ಮಂತ್ರಿಸ್ಥಾನ ಪಡೆದುಕೊಂಡು ಅಧಿಕಾರ ನಡೆಸುವ ಮಹತ್ವಾಕಾಂಕ್ಷೆಯನ್ನೂ ನಾರಾಯಣಗೌಡರು ಹೊಂದಿದ್ದಾರೆ. ಅದಕ್ಕಾಗಿ ಚುನಾವಣಾ ರಣತಂತ್ರ ರೂಪಿಸುವ ಸಿದ್ಧತೆಯಲ್ಲಿ ತೊಡಗಿದ್ದಾರೆ. ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆ: ಒಂದೆಡೆ ಹ್ಯಾಟ್ರಿಕ್‌ ಸೋಲಿನಿಂದ ಹೊರಬರಲು ಕಾಂಗ್ರೆಸ್‌ ಅಭ್ಯರ್ಥಿ ಕೆ.ಬಿ.ಚಂದ್ರಶೇಖರ್‌ ಹೋರಾಟ ನಡೆಸುತ್ತಿದ್ದರೆ, ಮತ್ತೂಂದೆಡೆ ಬಿಜೆಪಿ ಅಭ್ಯರ್ಥಿಯಾಗಿ ಅಖಾಡದಲ್ಲಿರುವ ಕೆ.ಸಿ.ನಾರಾಯಣಗೌಡ ಸತತ ಮೂರನೇ ಬಾರಿಗೆ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ತಾಲೂಕಿನಲ್ಲಿ ಗೂಂಡಾಗಿರಿ ರಾಜಕಾರಣವನ್ನು ಅಂತ್ಯಗೊಳಿಸಿ ಕ್ಷೇತ್ರದಲ್ಲಿ ಶಾಂತಿ-ನೆಮ್ಮದಿ ನೆಲೆಸಲು ಮತ್ತೂಮ್ಮೆ ತಮ್ಮನ್ನು ಬೆಂಬಲಿಸುವಂತೆ ಹಾಗೂ ಕ್ಷೇತ್ರದ ಅಭಿವೃದ್ಧಿಗೆ ಒತ್ತಾಸೆಯಾಗಿ ನಿಲ್ಲುವಂತೆ ಮತದಾರ ಪ್ರಭುಗಳಲ್ಲಿ ಕೋರುತ್ತಿದ್ದಾರೆ.

ವಿಜಯೇಂದ್ರಗೆ ಸಚಿವ-ಶಾಸಕ ಸಾಥ್‌: ಜೆಡಿಎಸ್‌ ಅಭ್ಯರ್ಥಿ ಬಿ.ಎಲ್‌. ದೇವರಾಜು ಅವರಿಗೆ ದೇವೇಗೌಡರ ಪುತ್ರಿ ಡಾ.ಅನಸೂಯ ಮಂಜುನಾಥ್‌ ಪ್ರಚಾರಕ್ಕೆ ಬರುವ ಸಾಧ್ಯತೆಗಳಿವೆ. ಮುಖ್ಯಮಂತ್ರಿ ಯಡಿಯೂರಪ್ಪತಮ್ಮ ಪುತ್ರ ವಿಜಯೇಂದ್ರ ಅವರನ್ನು ಪ್ರಚಾರಕ್ಕೆ ಕಳುಹಿಸಿ ಹಾಸನ ಶಾಸಕ ಪ್ರೀತಂಗೌಡ ಮತ್ತು ಸಚಿವ ಜೆ.ಸಿ.ಮಾಧುಸ್ವಾಮಿ ಅವರನ್ನು ಜೊತೆಗೆ ಬಿಟ್ಟು ಶತಾಯಗತಾಯ ಕ್ಷೇತ್ರವನ್ನು ಗೆಲ್ಲಲು ಕಾರ್ಯತಂತ್ರ ರೂಪಿಸಿದ್ದಾರೆ.

ಕಾಂಗ್ರೆಸ್‌ ಅಭ್ಯರ್ಥಿ ಕೆ.ಬಿ.ಚಂದ್ರಶೇಖರ್‌ ಸೋಲಿನಿಂದ ಹೊರಬರಲು ಅಳೆದು ಸುರಿದು ಲೆಕ್ಕಾಚಾರ ನಡೆಸಿ ಭಾರೀ ತಾಳ್ಮೆಯಿಂದಲೇ ಸಂಘಟಿತ ಹೋರಾಟಕ್ಕೆ ಇಳಿದಿದ್ದಾರೆ. ಅಸಮಾಧಾನಿತರನ್ನು ಸಮಾಧಾನಪಡಿಸಿ ಒಗ್ಗಟ್ಟಿನಿಂದ ಚುನಾವಣೆ ಎದುರಿಸಲು ಸಜ್ಜಾಗುತ್ತಿದ್ದಾರೆ.

 

-ಮಂಡ್ಯ ಮಂಜುನಾಥ್‌

Advertisement

Udayavani is now on Telegram. Click here to join our channel and stay updated with the latest news.

Next